ಆರ್ಸಿಬಿ vs ಕೆಕೆಆರ್ ನಡುವಿನ ಐಪಿಎಲ್ ಪಂದ್ಯ ನಡೆಯುವುದೇ ಅನುಮಾನ; ಬೆಂಗಳೂರಿನಲ್ಲಿ ಮಳೆಯ ಮುನ್ಸೂಚನೆ
Published May 17, 2025 03:11 PM IST
ಬೆಂಗಳೂರಿನಲ್ಲಿ ಮಳೆ; ಆರ್ಸಿಬಿ vs ಕೆಕೆಆರ್ ನಡುವಿನ ಐಪಿಎಲ್ ಪಂದ್ಯ ನಡೆಯುವುದೇ ಅನುಮಾನ
- ಬೆಂಗಳೂರಿನಲ್ಲಿ ಸಂಜೆ 7 ಗಂಟೆ ವೇಳೆಗೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಐಪಿಎಲ್ 2025ರ ಎರಡನೇ ಹಂತದ ಪಂದ್ಯ ಆರಂಭವಾಗುವ ದಿನವೇ ವರುಣ ಬಾಧಿಸುವ ಸಾಧ್ಯತೆ ದಟ್ಟವಾಗಿದ್ದು, ಆರ್ಸಿಬಿ ಹಾಗೂ ಕೆಕೆಆರ್ ತಂಡಗಳ ಅಭಿಮಾನಿಗಳಿಗೆ ನಿರಾಶೆಯಾಗುವ ಸಾಧ್ಯತೆ ಇದೆ.

ಐಪಿಎಲ್ 2025ರ ಎರಡನೇ ಹಂತದ ಪಂದ್ಯಗಳು ಇಂದಿನಿಂದ ಆರಂಭವಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನ ಸಂಘರ್ಷದಿಂದಾಗಿ ಕೊನೆಯ ಹಂತದ ಪಂದ್ಯಗಳನ್ನು ಮುಂದೂಡಲಾಗಿತ್ತು. ಇದೀಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ (RCB vs KKR) ತಂಡಗಳ ನಡುವಿನ ಪಂದ್ಯದೊಂದಿಗೆ ಪಂದ್ಯಗಳು ಮತ್ತೆ ಆರಂಭವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಇಂದು (ಮೇ 17) ನಡೆಯುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಪ್ರತಿಕೂಲ ಹವಾಮಾನದಿಂದಾಗಿ ಐಪಿಎಲ್ ಪುನರಾರಂಭಕ್ಕೆ ಅಡ್ಡಿಯಾಗಬಹುದು.
ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ನಿತ್ಯ ಮಳೆಯದ್ದೇ ಸುದ್ದಿ. ಉದ್ಯಾನ ನಗರಿಯಲ್ಲೂ ಸ್ವಲ್ಪಮಟ್ಟಿಗೆ ಮಳೆಯಾಗಿದೆ. ಈ ವಾರ ನಗರದಲ್ಲಿ ಮೋಡಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಮಳೆಯಾಗಿದೆ. ಇದು ಶನಿವಾರ ಸಂಜೆಯ ಪಂದ್ಯ ವೇಳೆಯೂ ಮುಂದುವರೆಯುವ ಸಾಧ್ಯತೆಗಳಿವೆ.
ಹವಾಮಾನ ವರದಿ ಪ್ರಕಾರ, ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆರಂಭ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಪಂದ್ಯ ಮುಂದುವರೆಯುವ ಸಮಯದಲ್ಲಿ ಹೆಚ್ಚಾಗಲು ಪ್ರಾರಂಭಿಸುತ್ತವೆ. ಸಂಜೆ 5 ಗಂಟೆ ವೇಳೆಗೆ ಮಳೆಯ ಸಾಧ್ಯತೆ 58 ಶೇಕಡದವರೆಗೆ ತಲುಪಲಿದೆ. ಮಧ್ಯಾಹ್ನಕ್ಕೆ ಹೋಲಿಸಿದರೆ ಸಂಜೆಯಾಗುತ್ತಿದ್ದಂತೆಯೇ ಮಳೆ ಹೆಚ್ಚಾಗಲಿದೆ. ಟಾಸ್ ಪ್ರಕ್ರಿಯೆ ನಡೆಯುವ ಸಂಜೆ 7 ಗಂಟೆ ವೇಳೆಗೆ 71 ಶೇ. ಮಳೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಬೆಂಗಳೂರಿನಲ್ಲಿ ಪಂದ್ಯ ವಿಳಂಬವಾಗುವ ಸಾಧ್ಯತೆ ಹೆಚ್ಚಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮೈದಾನವು ಸುಸಜ್ಜಿತವಾಗಿದ್ದು, ಮೈದಾನದ ನುರಿತ ಸಿಬ್ಬಂದಿ ತವರಿತವಾಗಿ ಮೈದಾನವನ್ನು ಪಂದ್ಯಕ್ಕೆ ಅಣಿಗೊಳಿಸುತ್ತಾರೆ. ದೇಶದ ಅತ್ಯಂತ ಸುಧಾರಿತ ಒಳಚರಂಡಿ ವ್ಯವಸ್ಥೆಯನ್ನು ಹೊಂದಿರುವ ಈ ಮೈದಾನವು, ಮಳೆ ನಿಂತ 20 ನಿಮಿಷಗಳಲ್ಲೇ ಪಂದ್ಯ ಆರಂಭಿಸಲು ಸಿದ್ಧವಾಗುತ್ತದೆ.
ವಿರಾಟ್ ಕೊಹ್ಲಿಗೆ ಗೌರವ ಸಲ್ಲಿಕೆ
ರಾತ್ರಿಯ ನಂತರ ಮಳೆ ಸುಧಾರಿಸಲಿದೆ. ರಾತ್ರಿ 9 ಗಂಟೆಗೆ 49 ಶೇ. ಆ ನಂತರ 34 ಶೇ. ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ದಿನದ ಅಂತ್ಯಕ್ಕೂ ಮುನ್ನ ಪಂದ್ಯ ನಡೆಯಬಹುದು. ಟೆಸ್ಟ್ ಕ್ರಿಕೆಟ್ನಿಂದ ವಿರಾಟ್ ಕೊಹ್ಲಿ ನಿವೃತ್ತಿ ಪಡೆದ ನಂತರ ಇದೇ ಮೊದಲ ಬಾರಿಗೆ ಅವರು ಐಪಿಎಲ್ ಪಂದ್ಯದಲ್ಲಿ ಆಡುತ್ತಿದ್ದಾರೆ. ಹೀಗಾಗಿ ಚಿನ್ನಸ್ವಾಮಿ ಮೈದಾನಕ್ಕೆ ಅಭಿಮಾನಿಗಳು ಬಿಳಿ ಜೆರ್ಸಿ ಹಾಕಿಕೊಂಡು ಬರುವ ಯೋಜನೆ ರೂಪಿಸಿದ್ದಾರೆ. ಹೀಗಾಗಿ ಪಂದ್ಯವು ಸಂಪೂರ್ಣವಾಗಿ ನಡೆದು, ಕೆಕೆಆರ್ ವಿರುದ್ಧ ಆರ್ಸಿಬಿ ತಂಡ ಪಂದ್ಯ ಗೆದ್ದು ವಿರಾಟ್ ಕೊಹ್ಲಿಗೆ ಈ ಗೆಲುವನ್ನು ಅರ್ಪಣೆ ಮಾಡಬೇಕು ಎಂಬುದು ಅಭಿಮಾನಿಗಳ ಯೋಜನೆಯಾಗಿದೆ.