IAS Posting: ಹಿರಿಯ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ವರ್ಗ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
Published Mar 26, 2025 02:30 PM IST
ವರ್ಗಗೊಂಡ ಐಎಎಸ್ ಅಧಿಕಾರಿಗಳಾದ ರಶ್ಮಿ ಮಹೇಶ್ ಹಾಗೂ ಯತೀಶ್.
IAS Posting: ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಸಹಿತ ಕೆಲ ಐಎಎಸ್ ಅಧಿಕಾರಿಗಳನ್ನು ವರ್ಗ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು: ಕರ್ನಾಟಕ ಸರ್ಕಾರವು ಹಿರಿಯ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಸಹಿತ ಕೆಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈವರೆಗೂ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಶ್ಮಿ ಮಹೇಶ್ ಅವರನ್ನು ಪ್ರಾಥಮಿಕ ಹಾಗೂ ಶಾಲಾ ಸಾಕ್ಷರತಾ ಇಲಾಖೆ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇದರೊಟ್ಟಿಗೆ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿಯಾಗಿಯೂ ಹೆಚ್ಚುವರಿ ಕಾರ್ಯಭಾರವನ್ನು ರಶ್ಮಿ ಮಹೇಶ್ ಅವರಿಗೆ ನೀಡಲಾಗಿದೆ. ಈವರೆಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಿತೇಶ್ಕುಮಾರ್ ಸಿಂಗ್ ಅವರನ್ನು ಕರ್ನಾಟಕ ಸರ್ಕಾರವು ಎರಡು ತಿಂಗಳ ಹಿಂದೆಯೇ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದರಿಂದ ಹುದ್ದೆ ಖಾಲಿ ಇತ್ತು.
ಅದೇ ರೀತಿ ಕರ್ನಾಟಕ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಯೋಜನಾ ನಿರ್ದೇಶಕರಾಗಿದ್ದ ಎನ್.ಎಂ.ನಾಗರಾಜ ಅವರನ್ನು ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಉದ್ಯೋಗ ಹಾಗೂ ಕಾರ್ಮಿಕ ಇಲಾಖೆ ಆಯುಕ್ತರಾಗಿರುವ ರಾಗಪ್ರಿಯ ಅವರು ಹೆಚ್ಚುವರಿ ಕಾರ್ಯಭಾರದಲ್ಲಿದ್ದರು.
ಶಿವಮೊಗ್ಗ ಜಿಲ್ಲೆ ಸಾಗರ ಹಿರಿಯ ಉಪವಿಭಾಗಾಧಿಕಾರಿಯಾಗಿದ್ದ ಆರ್.ಯತೀಶ್ ಅವರನ್ನು ಬೆಂಗಳೂರಿನಲ್ಲಿ ಡಿಪಿಎಆರ್ ಇಲಾಖೆಯ ಇ ಗವರ್ನೆನ್ಸ್ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಇದಲ್ಲದೇ ಹಣಕಾಸು ಇಲಾಖೆಯ ಎಚ್ಆರ್ಎಂಎಸ್ ಉಪ ಯೋಜನಾ ನಿರ್ದೇಶರಾಗಿಯೂ ನೇಮಕ ಮಾಡಲಾಗಿದೆ.
ವಿಭಾಗ