logo
ಕನ್ನಡ ಸುದ್ದಿ  /  ಕರ್ನಾಟಕ  /  ಇತರೆಲ್ಲಾ ಭಾಷೆಗಳು ಸೊಸೆಯಾಗಲಿ, ಕನ್ನಡವೇ ಸದಾ ತಾಯಿಯ ಸ್ಥಾನದಲ್ಲಿರಲಿ: ತನಾಶಿ

ಇತರೆಲ್ಲಾ ಭಾಷೆಗಳು ಸೊಸೆಯಾಗಲಿ, ಕನ್ನಡವೇ ಸದಾ ತಾಯಿಯ ಸ್ಥಾನದಲ್ಲಿರಲಿ: ತನಾಶಿ

HT Kannada Desk HT Kannada

Published Jun 22, 2025 05:24 PM IST

google News

ತನಾಶಿ ಅವರಿಗೆ ಡಿವಿಜಿ ಪ್ರಶಸ್ತಿ 2025 ಪ್ರದಾನ

  • ‘ಡಿವಿಜಿ ಬಳಗ ಪ್ರತಿಷ್ಠಾನ‘ದ ವತಿಯಿಂದ ನೀಡುವ ಪ್ರತಿಷ್ಠಿತ ‘ಡಿವಿಜಿ ಪ್ರಶಸ್ತಿ 2025‘  ಖ್ಯಾತ ಸಾಹಿತಿ, ಕವಿ ಟಿ.ಎನ್.ಶಿವಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು. ಈ ವೇಳೆ ಇತರೆಲ್ಲಾ ಭಾಷೆಗಳು ಸೊಸೆಯಾಗಲಿ, ಕನ್ನಡವೇ ಸದಾ ತಾಯಿಯ ಸ್ಥಾನದಲ್ಲಿರಲಿ ಎಂದು ತನಾಶಿ ಹೇಳಿದರು. 
ತನಾಶಿ ಅವರಿಗೆ ಡಿವಿಜಿ ಪ್ರಶಸ್ತಿ 2025 ಪ್ರದಾನ
ತನಾಶಿ ಅವರಿಗೆ ಡಿವಿಜಿ ಪ್ರಶಸ್ತಿ 2025 ಪ್ರದಾನ

ಮೈಸೂರು: ‘ಯಾವುದೇ ಭಾಷೆಯನ್ನು ನಾವು ತಿರಸ್ಕರಿಸಬೇಕಿಲ್ಲ. ಅಥವಾ ಅಗೌರವ ತೋರಿಸಬೇಕಿಲ್ಲ. ಎಲ್ಲ ಭಾಷೆಗಳ ಸತ್ವ ಹೀರಿ ಬೆಳೆದಿದೆ ನಮ್ಮ ತಾಯ್ನುಡಿ. ಇತರ ಭಾಷೆಗಳನ್ನು ಸೊಸೆ ಎಂದುಕೊಳ್ಳೋಣ. ಕನ್ನಡವೇ ಸದಾ ನಮ್ಮ ತಾಯಿಯ ಸ್ಥಾನದಲ್ಲಿರಲಿ' ಎಂದು ಖ್ಯಾತ ಸಾಹಿತಿ, ಕವಿ ಟಿ.ಎನ್.ಶಿವಕುಮಾರ್ (ತನಾಶಿ) ಹೇಳಿದರು.

ನಗರದ ಗಾನಭಾರತಿ ಕಲಾ ಸಮುಚ್ಚಯದ ರಮಾ ಗೋವಿಂದ ಕಲಾವೇದಿಕೆಯಲ್ಲಿ ಭಾನುವಾರ ‘ಡಿವಿಜಿ ಬಳಗ ಪ್ರತಿಷ್ಠಾನ‘ದ ವತಿಯಿಂದ ನೀಡುವ ಪ್ರತಿಷ್ಠಿತ ‘ಡಿವಿಜಿ ಪ್ರಶಸ್ತಿ 2025‘ ಸ್ವೀಕರಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ಸಂವಾದದ ಸೊಗಸು ಕಣ್ಮರೆಯಾಗುತ್ತಿದೆ. ಅನಗತ್ಯವಾದ ಇಂಗ್ಲಿಷ್ ಪದಗಳನ್ನು ಬಳಸುವ ಪ್ರವೃತ್ತಿ ಹೆಚ್ಚಾಗಿದೆ. ನಾವು ಕನ್ನಡಿಗರು, ನಾವೇ ಕನ್ನಡ ಬಳಸದಿದ್ದರೆ ಹೇಗೆ? ಇತರ ಭಾಷೆಗಳಿಗೆ ಗೌರವ, ಮರ್ಯಾದೆ ಕೊಡೋಣ. ಆದರೆ ಕನ್ನಡವನ್ನು ಅಮ್ಮನ ಸ್ಥಾನದಲ್ಲಿ ಉಳಿಸಿಕೊಳ್ಳೋಣ' ಎಂದರು.

ಕನ್ನಡದ ಹಲವು ಮಹತ್ವದ ಕವಿಗಳ ಕೊಡುಗೆ ಮೆಲುಕು ಹಾಕಿದ ಅವರು, ‘ನೀವು ವೇದ, ಪುರಾಣ, ರಾಮಾಯಣ, ಮಹಾಭಾರತ ಓದದಿದ್ದರೂ ಪರವಾಗಿಲ್ಲ. ಆದರೆ ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನು ಮಾತ್ರ ತಪ್ಪದೇ ಓದಿ. ಅದರಲ್ಲಿ ಎಲ್ಲದರ ಸಾರವಿದೆ. ಬದುಕಿನ ಸೂಕ್ಷ್ಮಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಸುತ್ತಲೇ ಕಷ್ಟಗಳನ್ನು ಸಹಿಸುವ ಮನಸ್ಥಿತಿಗೆ ನಮ್ಮನ್ನು ಸಜ್ಜುಗೊಳಿಸುತ್ತದೆ' ಎಂದು ತಿಳಿಸಿದರು.

ನನ್ನ ಮನೆಗೆ ಬೆಂಕಿ ಬಿದ್ದ ನಂತರದ 16 ವರ್ಷ ನಾನು ಏನೂ ಬರೆಯಲಿಲ್ಲ. ಸತತವಾಗಿ ದೇಶ ಸುತ್ತಿದ್ದೇನೆ. ಬದುಕಿನ ಕಷ್ಟಗಳ ಅರಿವು ನನಗಿದೆ. ಎದುರಾಗುವ ಎಲ್ಲರೂ ನನಗೆ ಗುರುಸ್ವರೂಪರೇ. ಎಲ್ಲರಿಂದಲೂ ಏನಾದರೂ ಒಂದು ಕಲಿತಿದ್ದೇನೆ ಎಂದು ನೆನಪಿಸಿಕೊಂಡರು.

ಸಹಿತವಾದದ್ದು ಸಾಹಿತ್ಯ. ಎಲ್ಲವನ್ನೂ ಒಳಗೊಳ್ಳಲು, ಎಲ್ಲರನ್ನೂ ಬೆಸೆಯಲು ಸಾಹಿತ್ಯಕ್ಕೆ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಸಂಗೀತ ವಿದ್ವಾಂಸ ಡಾ ರಾ.ಸ.ನಂದಕುಮಾರ್ ಮಾತನಾಡಿ, 'ಸಂಗೀತಾಭ್ಯಾಸ ಆರಂಭಿಸುವ ಮಕ್ಕಳಿಗೆ ಅನುಕೂಲವಾಗುವಂತೆ ಸ್ವರಬದ್ಧವಾದ ಸಣ್ಣ ಕೃತಿಗಳನ್ನು ರಚಿಸಿಕೊಡಿ. ಸಾಹಿತ್ಯ ಸರಸ್ವತಿ ಸಂಗೀತದಲ್ಲಿ ವಿಸ್ತರಿಸಲಿ. ಸಂಗೀತವು ಸಾಹಿತ್ಯದ ಜೊತೆಗಿದ್ದಾಗ ಹೆಚ್ಚು ಜನರನ್ನು ತಲುಪುತ್ತದೆ' ಎಂದು ಅಭಿಪ್ರಾಯಪಟ್ಟರು.

ಖ್ಯಾತ ವಾಗ್ಮಿ ಜಿ.ಎಸ್.ನಟೇಶ್ ಅವರ ತನಾಶಿ ಅವರ ವಚನಗಳನ್ನು ವಾಚಿಸಿ ಅರ್ಥ ವಿವರಿಸಿದರು. ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಹಾಗೂ ಸರ್ವಜ್ಞನ ವಚನಗಳನ್ನು ವಾಚಿಸಿ ಅರ್ಥ ವಿವರಿಸಿದರು.

ತುಮಕೂರಿನ ಚಿಣ್ಣರಾದ ಆರ್ಯ ಭಟ್, ಗಾರ್ಗಿ ಭಟ್ ಮಂಕುತಿಮ್ಮನ ಕಗ್ಗದ ಕೆಲವು ಕಗ್ಗಗಳ ವಾಚಿಸಿ ಸೊಗಸಾಗಿ ವ್ಯಾಖ್ಯಾನಿಸಿದರು. ಅವರ ಪ್ರಯತ್ನ ಸಭಿಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ತನಾಶಿ ಅವರ ಕೆಲ ರಚನೆಗಳನ್ನು ಖ್ಯಾತ ಗಾಯಕ ಶ್ರೀಹರ್ಷ ಹಾಡಿದರು. ಡಿವಿಜಿ ಬಳಗದ ಸಂಚಾಲಕ ಕನಕರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.

ತನಾಶಿ ಅವರಿಗೆ ಡಿವಿಜಿ ಪ್ರಶಸ್ತಿ 2025 ಪ್ರದಾನ

ಡಿವಿಜಿ ಪ್ರಶಸ್ತಿ ಪುರಸ್ಕೃತರು

'ಡಿವಿಜಿ ಬಳಗ ಪ್ರತಿಷ್ಠಾನ' ಕೊಡುವ 'ಡಿವಿಜಿ ಪ್ರಶಸ್ತಿ'ಗೆ ಕರ್ನಾಟಕದ ಸಾರಸ್ವತ ಲೋಕದಲ್ಲಿ ತನ್ನದೇ ಆದ ಗೌರವವಿದೆ. ಈವರೆಗೆ ಒಟ್ಟು ಹತ್ತು ಪ್ರತಿಭಾನ್ವಿತರಿಗೆ ಡಿವಿಜಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪುರಸ್ಕೃತರ ವಿವರ ಇಂತಿದೆ.

ನಡಹಳ್ಳಿ ರಂಗನಾಥ ಶರ್ಮಾ, ಎಸ್.ಆರ್.ರಾಮಸ್ವಾಮಿ, ಕುಮಾರ ನಿಜಗುಣ ಸ್ವಾಮೀಜಿ, ಅಡ್ಯನಡ್ಕ ನರಸಿಂಹ ಭಟ್, ಡಿ.ಆರ್.ವೆಂಕಟರಮಣ (ದಿವಂಗತ), ಶತಾವಧಾನಿ ಡಾ ರಾ ಗಣೇಶ್, ಗುರುರಾಜ ಕರಜಗಿ, ಕೆ.ಸಿ.ಶಿವಪ್ಪ, ಸತ್ಯೇಶ್ ಎನ್.ಬೆಳ್ಳೂರ್, ಟಿ.ಎನ್.ಶಿವಕುಮಾರ್.

ವಿಭಾಗ

    ಹಂಚಿಕೊಳ್ಳಲು ಲೇಖನಗಳು