ಅಕ್ಷಯ ತೃತೀಯ 2025: ಅಕ್ಷಯ ತದಿಗೆ ದಿನ ದಾನದಿಂದಲೂ ತುಂಬಾ ಶುಭಫಲಗಳಿವೆ; ಕಥೆ, ಮಹತ್ವ ತಿಳಿಯಿರಿ
ಅಕ್ಷಯ ತೃತೀಯದ ಸರಿಯಾದ ಹೆಸರು ಯಾವುದು, ಈ ದಿನ ಯಾವ ದೇವರನ್ನು ಪೂಜೆ ಮಾಡಿದರೆ ಹೆಚ್ಚು ಶುಭಗಳಿವೆ. ಚಿನ್ನ ಖರೀದಿಸಿದಷ್ಟೇ ದಾನದಿಂದಲೂ ಒಳ್ಳೆಯಲಾಗುತ್ತದೆ. ಅಕ್ಷತದಿಗೆ ಮಹತ್ವ ತಿಳಿಯಿರಿ. (ಬರಹ: ಎಚ್ ಸತೀಶ್, ಜ್ಯೋತಿಷಿ)

ಇಂದಿನ ದಿನಗಳಲ್ಲಿ ಅಕ್ಷಯತದಿಗೆ ಎಂಬ ಹೆಸರಾಗಿದೆ. ಆದರೆ ಇದರ ನಿಜವಾದ ಉಚ್ಚಾರಣೆ ಎಂದರೆ ಅಕ್ಷತದಿಗೆ ಅಥವ ಅಕ್ಷತೃತೀಯ. 2025ರಲ್ಲಿ ಏಪ್ರಿಲ್ 30ರ ಬುಧವಾರ ಅಕ್ಷತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ. ಉದಯದಲ್ಲಿ ತದಿಗೆ ಇರುವ ಕಾರಣ ಇದೇ ದಿನ ಈ ಹಬ್ಬವನ್ನು ಆಚರಿಸಬೇಕು. ಕೇವಲ ಚಿನ್ನ ಮತ್ತು ಬೆಳ್ಳಿಯನ್ನು ಕೊಂಡಲ್ಲಿ ಈ ಹಬ್ಬವು ಪೂರ್ಣಗೊಳ್ಳುವುದಿಲ್ಲ. ಇದು ಧರ್ಮ ಮತ್ತು ಕರ್ಮಕ್ಕೆ ಸಂಬಂಧಿಸಿದೆ. ಅಂದರೆ ಮಾಡುವ ಧಾರ್ಮಿಕ ಕೆಲಸ ಕಾರ್ಯಗಳು ಮತ್ತು ತತ್ಸಂಭಿತ ಧಾನಗಳಿಂದ ಶುಭ ಫಲಗಳನ್ನು ಪಡೆಯಲಾಗುತ್ತದೆ. ದಕ್ಷಿಣಭಾರತದಲ್ಲಿ ಈ ಹಬ್ಬವು ಹೆಣ್ಣುಮಕ್ಕಳಿಗೆ ವಿಶೇಷವಾಗಿದೆ.
ಕುಲದೇವರ ಪವಿತ್ರ ಸ್ಥಳಕ್ಕೆ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಿದರೆ, ದೊರೆಯುವ ಶುಭಫಲಗಳು ದುಪ್ಪಟ್ಟಾಗುತ್ತದೆ. ಮನೆಯಲ್ಲಿ ಮಾಡುವ ಪೂಜೆಯೂ ಹೆಚ್ಚು ಫಲಪ್ರದವಾಗಿರುತ್ತದೆ. ಸಾಮಾನ್ಯವಾಗಿ ಕುಬೇರ ಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತದೆ. ಆದರೆ ಈ ದಿನದಂದು ಲಕ್ಷ್ಮಿ ಸಮೇತ ಭಗವಾನ್ ಶ್ರೀ ವಿಷ್ಣುವಿನ ಪೂಜೆಯನ್ನು ಮಾಡಬೇಕು. ಆನಂತರವಷ್ಟೇ ಕುಬೇರನ ಪೂಜೆಯನ್ನು ಮಾಡಬೇಕು. ಈ ದಿನದಂದು ಗೋದಾನ ಮತ್ತು ಅನ್ನದಾನ ಮಾಡುವುದು ವಿಶೇಷವಾಗಿದೆ. ಹೋಮ ಹವನಾದಿಗಳಿಂದ ಅನಂತ ಫಲಗಳು ನಮಗೆ ಲಭಿಸುತ್ತವೆ. ಶ್ರೀ ವಿಷ್ಣುವಿಗೆ ನೀಲಿ ಬಣ್ಣದ ಹೂಗಳಿಂದ ಮತ್ತು ಶ್ರೀ ಮಹಾಲಕ್ಷ್ಮಿಗೆ ಕಮಲದ ಹೂಗಳಿಂದ ಪೂಜೆಯನ್ನು ಸಲ್ಲಿಸಬೇಕು. ಬಿಳಿ ಎಳ್ಳಿನಿಂದ ಮಾಡುವ ಸಿಹಿತಿಂಡಿಯನ್ನು ನೈವೇದ್ಯ ಮಾಡಿ ಹಸಿದವರಿಗೆ ನೀಡುವುದರಿಂದ ಹೆಚ್ಚಿನ ಪುಣ್ಯವು ದೊರೆಯುತ್ತದೆ.
ಈ ದಿನದಂದು ತ್ರೇತಾಯುಗವು ಆರಂಭಿಸಿತೆಂದು ಕೆಲವೊಂದು ಗ್ರಂಥಗಳಿಂದ ತಿಳಿದುಬರುತ್ತದೆ. ಇದೇ ದಿನದಂದು ಮಹಾಪುರುಷನಾದ ಶಕ್ತಿಶಾಲಿ ಪರಶುರಾಮನ ಜಯಂತಿಯೂ ಆಗಿದೆ. ದಶಾವತಾರದಲ್ಲಿ ಪರಶುರಾಮನ ಅವತಾರವು ಒಂದು. ಪುರಾಣ ಪುಣ್ಯ ಕಥೆಗಳ ಅನುಸಾರವಾಗಿ ಜಮದಗ್ನಿ ಮತ್ತು ರೇಣುಕಾ ದೇವಿಯ ಮಗನಾಗಿ ಪರಶುರಾಮನು ಜನಿಸುತ್ತಾನೆ. ಹತ್ತು ಹಲವು ಕಾರಣಗಳಿಂದಾಗಿ ಪರಶುರಾಮನು ಕ್ಷತ್ರಿಯ ಕುಲವನ್ನು ನಾಶ ಮಾಡುವ ಸಂಕಲ್ಪವನ್ನು ತೆಗೆದುಕೊಳ್ಳುತ್ತಾನೆ. ಹಿಂಸೆ ಮಾಡುವುದು ರಕ್ತಹರಿಸುವುದು ತಪ್ಪು ಎಂದು ತಿಳಿದಿದ್ದರೂ ಪರಶುರಾಮನು ಕ್ಷತ್ರಿಯರನ್ನು ಸಂಹರಿಸಲು ಆರಂಭಿಸುತ್ತಾನೆ. ರಾಮಾವತಾರದಲ್ಲಿ ಶ್ರೀರಾಮಚಂದ್ರರನ್ನು ಸಂಧಿಸುವವರೆಗೂ ಪರಶುರಾಮನನ್ನು ಶಾಂತಗೊಳಿಸಲು ಸಾಧ್ಯವಾಗುವುದಿಲ್ಲ. ಪರಶುರಾಮನು ಈಗಿನ ಕೇರಳದಲ್ಲಿ ಜನಿಸಿ ಅಲ್ಲಿಯೇ ನೆಲಸಿದ್ದ ಎಂಬುದಕ್ಕೆ ಪುರಾವೆಗಳು ದೊರೆಯುತ್ತವೆ.
ಸೂರ್ಯದೇವನಿಂದ ಪಾಂಡವರಿಗೆ ದೊರೆತ ಕಾಣಿಕೆಯೇ ಅಕ್ಷಯ ಪಾತ್ರೆ
ಅಕ್ಷಯ ತದಿಗೆಯಂದು ದ್ರೌಪದಿ ದುಶ್ಯಾಸನದಿಂದ ವಸ್ತ್ರಾಪಹರಣಕ್ಕೆ ಒಳಗದದ್ದು ಇದೇ. ಪಂಚ ಪಾಂಡವರು, ಪಿತಾಮಹ ಭೀಷ್ಮರು ಸಹ ಅಸಹಾಯಕರಾಗಿ ದ್ರೌಪತಿಗೆ ಸಹಾಯ ಮಾಡುವಲ್ಲಿ ಸೋಲುತ್ತಾರೆ. ಆಗ ದ್ರೌಪದಿಯ ಆರ್ತನಾದಕ್ಕೆ ಸ್ಪಂದಿಸಿದ ಸ್ವಯಂ ಕೃಷ್ಣನೇ ದ್ರೌಪತಿಗೆ ಪ್ರತ್ಯಕ್ಷವಾಗಿ, ವಸ್ತ್ರವನ್ನು ದಯಪಾಲಿಸಿ ದ್ರೌಪದಿಯ ಮಾನವನ್ನು ಕಾಪಾಡುತ್ತಾನೆ. ಶ್ರೀ ಕೃಷ್ನನ ಆಪ್ತಮಿತ್ರನಾದ ಸುದಾಮನ ಬಡತನವು ಇದೇ ದಿನದಂದು ನಿವಾರಣೆಯಾಯಿತು ಎಂದು ಶಾಸ್ತ್ರ ಗ್ರಂಥಗಳು ಹೇಳುತ್ತವೆ. ಆದ್ದರಿಂದ ಅವಲಕ್ಕಿಯಿಂದ ಮಾಡಿದ ಖ್ಯಾದ್ಯವನ್ನು ಶ್ರೀಕೃಷ್ಣನಿಗೆ ಅರ್ಪಿಸುವ ಪದ್ಧತಿ ಇದೆ. ಇದೇ ದಿನದಂದು ಮಹಾಭಾರತವನ್ನು ರಚಿಸಲು ವ್ಯಾಸರು ಆರಂಭಿಸುತ್ತಾರೆ. ವನವಾಸದಲ್ಲಿದ್ದರೂ ಪಾಂಡವರನ್ನು ಭೇಟಿ ಮಾಡಲು ಋಷಿ ಮುನಿಗಳ ಆದಿಯಾಗಿ ಅನೇಕ ಜನರು ಬರುತ್ತಿರುತ್ತಾರೆ. ಆಗ ಶ್ರೀ ಸೂರ್ಯದೇವನಿಂದ ಪಾಂಡವರಿಗೆ ದೊರೆತ ಕಾಣಿಕೆಯೇ ಅಕ್ಷಯ ಪಾತ್ರೆಯಾಗಿದೆ.
ದ್ರೌಪತಿ ಮತ್ತು ಅಕ್ಷಯ ಪಾತ್ರೆಯ ವಿಚಾರಗಳು ಸಹ ಧರ್ಮದ ಆಚರಣೆ ಮತ್ತು ದಾನದ ಮಹತ್ವವನ್ನು ಸೂಚಿಸುತ್ತದೆ. ಆದ್ದರಿಂದ ಈ ದಿನವು ದಾನ ಧರ್ಮಗಳಿಗೆ ವಿಶೇಷವಾದ ದಿನವಾಗಿದೆ. ಚಿನ್ನ ಬೆಳ್ಳಿಕೊಳ್ಳುವವರು ಒಡವೆಯನ್ನು ಮೊದಲು ಕುಲದೇವರ ಪಾದದಲ್ಲಿ ಇರಿಸಬೇಕು. ಅನಂತರ ಅದನ್ನು ಬಳಸುವುದು ಒಳ್ಳೆಯದು. ಇದೇ ರೀತಿ ಹೊಸ ವ್ಯಾಪಾರ ವ್ಯವಹಾರಗಳನ್ನು ಆರಂಭಿಸಲು ಈ ದಿನವೂ ಒಳ್ಳೆಯದಾಗಿದೆ. ಆದ್ದರಿಂದ ದೇವರಿಗೆ ಪೂಜೆ ಸಲ್ಲಿಸುವುದರ ಜೊತೆಗೆ, ಒಡವೆಗಳನ್ನು ಕೊಳ್ಳುವುದರ ಜೊತೆಗೆ ದಾನವನ್ನು ಮಾಡಬೇಕು. ದಾನವಾಗಿ ಯಾವುದೇ ವಸ್ತುವನ್ನು ನೀಡಬಹುದು. ಒಟ್ಟಾರೆ ಮಾಡುವ ಒಳ್ಳೆಯ ಕೆಲಸಗಳಲ್ಲಿ ಒಳ್ಳೆಯ ಫಲಗಳೇ ಇರುತ್ತವೆ. ಸೂರ್ಯನು ಉದಯಿಸುವ ವೇಳೆಯಲ್ಲಿ ಈ ಪೂಜೆಯಿಂದ ಹೆಚ್ಚಿನ ಫಲಗಳನ್ನು ಪಡೆಯಬಹುದಾಗಿದೆ.
ಬರಹ: ಎಚ್ ಸತೀಶ್, ಜ್ಯೋತಿಷಿ