ಪ್ರತ್ಯಂಗಿರಾ ದೇವಿ ಯಾರು? ಕುಂಬಕೋಣಂ ಅಯ್ಯವಾಡಿ ಪ್ರತ್ಯಂಗಿರಾ ದೇವಸ್ಥಾನದ 5 ವಿಶೇಷ ಅಂಶಗಳು, ಪುರಾಣ ಕಥೆಗಳಲ್ಲಿ ಕಾಳಿಯ ಅವತಾರದ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪ್ರತ್ಯಂಗಿರಾ ದೇವಿ ಯಾರು? ಕುಂಬಕೋಣಂ ಅಯ್ಯವಾಡಿ ಪ್ರತ್ಯಂಗಿರಾ ದೇವಸ್ಥಾನದ 5 ವಿಶೇಷ ಅಂಶಗಳು, ಪುರಾಣ ಕಥೆಗಳಲ್ಲಿ ಕಾಳಿಯ ಅವತಾರದ ವಿವರ

ಪ್ರತ್ಯಂಗಿರಾ ದೇವಿ ಯಾರು? ಕುಂಬಕೋಣಂ ಅಯ್ಯವಾಡಿ ಪ್ರತ್ಯಂಗಿರಾ ದೇವಸ್ಥಾನದ 5 ವಿಶೇಷ ಅಂಶಗಳು, ಪುರಾಣ ಕಥೆಗಳಲ್ಲಿ ಕಾಳಿಯ ಅವತಾರದ ವಿವರ

Ayyavadi Pratyangira Devi Temple: ತಮಿಳುನಾಡಿನ ಕುಂಬಕೋಣಂ ಸಮೀಪದ ಅಯ್ಯವಾಡಿ ಪ್ರತ್ಯಂಗಿರಾ ದೇವಸ್ಥಾನ ಈಗ ಎಲ್ಲರ ಗಮನಸೆಳೆದಿದೆ. ರಾಜಕೀಯ ಮಹತ್ವಾಕಾಂಕ್ಷಿಗಳ ಅಭೀಷ್ಠ ಈಡೇರಿಸುವ ಪ್ರತ್ಯಂಗಿರಾ ದೇವಿ ಯಾರು? ಅಯ್ಯವಾಡಿ ಪ್ರತ್ಯಂಗಿರಾ ದೇವಸ್ಥಾನದ ವಿಶೇಷ 5 ಅಂಶಗಳು ಮತ್ತು ಪುರಾಣ ಕಥೆಗಳಲ್ಲಿ ಕಾಳಿಯ ಅವತಾರದ ವಿವರ ಇಲ್ಲಿದೆ.

ಪ್ರತ್ಯಂಗಿರಾ ದೇವಿ ಯಾರು? ಅಯ್ಯವಾಡಿ ಪ್ರತ್ಯಂಗಿರಾ ದೇವಸ್ಥಾನದ 5 ವಿಶೇಷ ಅಂಶಗಳು.
ಪ್ರತ್ಯಂಗಿರಾ ದೇವಿ ಯಾರು? ಅಯ್ಯವಾಡಿ ಪ್ರತ್ಯಂಗಿರಾ ದೇವಸ್ಥಾನದ 5 ವಿಶೇಷ ಅಂಶಗಳು.

Ayyavadi Pratyangira Devi Temple: ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು (ಜನವರಿ 9) ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಬಕೋಣಂ ಸಮೀಪದ ಅಯ್ಯವಾಡಿ ಶ್ರೀ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ವಿಚಾರ ಎಲ್ಲರ ಗಮನಸೆಳೆದಿದೆ. ಅಯ್ಯವಾಡಿ ಪ್ರತ್ಯಂಗಿರಾ ದೇವಿ ದೇವಸ್ಥಾನಕ್ಕೇ ಅವರು ಯಾಕೆ ಭೇಟಿ ನೀಡಿದರು, ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ ಅವರ ಹರಕೆಯನ್ನು ದೇವಿ ಈಡೇರಿಸುತ್ತಾಳಾ, ದೇವಸ್ಥಾನದ ಐತಿಹ್ಯವೇನು, ದೇವಿಯ ಪೌರಾಣಿಕ ಹಿನ್ನೆಲೆ ಏನು ಎಂಬಿತ್ಯಾದಿ ವಿವರ ಇಲ್ಲಿದೆ.

ಅಯ್ಯವಾಡಿ ಪ್ರತ್ಯಂಗಿರಾ ದೇವಿ ದೇವಸ್ಥಾನ - 5 ಮುಖ್ಯ ಅಂಶಗಳು

1) ಪ್ರತ್ಯಂಗಿರಾ ದೇವಸ್ಥಾನ: ತಮಿಳುನಾಡು ತಂಜಾವೂರು ಜಿಲ್ಲೆಯ ಕುಂಬಕೋಣಂನಿಂದ 6 ದೂರದ ಅಯ್ಯವಾಡಿ ಗ್ರಾಮದಲ್ಲಿರುವ ದೇವಸ್ಥಾನವೇ ಪ್ರತ್ಯಂಗಿರಾ ದೇವಿ ದೇವಸ್ಥಾನ. ಅಂದಾಜು 1000ರಿಂದ 2000 ವರ್ಷದಷ್ಟು ಹಳೆಯ ದೇವಸ್ಥಾನ ಇದಾಗಿದ್ದು, ಪೌರಾಣಿಕ ಮಹತ್ವವನ್ನೂ ಹೊಂದಿದೆ. ಪ್ರತ್ಯಂಗಿರಾ ದೇವಿಯ ವಿಗ್ರಹವನ್ನು ಉತ್ತರ ಮುಖವಾಗಿ ಪ್ರತಿಷ್ಠಾಪಿಸಲಾಗಿದೆ. ಈ ದೇವಸ್ಥಾನದ ವಿಮಾನ ಅಥವಾ ಗೋಪುರವನ್ನು ಉತ್ತರ ಭಾರತೀಯ ಶೈಲಿಯಲ್ಲಿ ರೂಪಿಸಲಾಗಿದೆ.

2) ಪ್ರತ್ಯಂಗಿರಾ ದೇವಾಲಯದ ವಿಶೇಷ: ವೈದಿಕ ವಿಧಿಗಳ ಪ್ರಕಾರ, ಪ್ರತ್ಯಂಗಿರಾ ದೇವಸ್ಥಾನದಲ್ಲಿರುವ ಯಾಗ ಕುಂಡದ ಕೇಂದ್ರಬಿಂದುವಾಗಿ ಪ್ರತ್ಯಂಗಿರಾ ದೇವಿಯ ಸ್ಥಾಪನೆಯಾಗಿದೆ. ಹೋಮ ಕುಂಡದ ಸುತ್ತ ವಿನಾಯಕ, ಮುರುಗ, ಶಾಸ್ತಾ, ಭೈರವ, ಸರಬ, ಸೂಲಿನಿ, ವಾರಾಹಿ, ಸುದರ್ಶನ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ. ನಿಕುಂಬಲ ಯಜ್ಞ ಇದರಲ್ಲಿ ಮಾಡಲಾಗುತ್ತಿದ್ದು, ಈ ಹೋಮಕ್ಕೆ 96 ಬಗೆಯ ನೈವೇದ್ಯಗಳನ್ನು ಸಮರ್ಪಿಸಲಾಗುತ್ತಿದ್ದು, ಹಣ್ಣುಗಳು, ಒಂಬತ್ತು ಬಗೆಯ ಧಾನ್ಯಗಳು, ರೇಷ್ಮೆ ಸೀರೆ, ತುಪ್ಪವನ್ನೂ ಸಮರ್ಪಿಸಲಾಗುತ್ತದೆ. ಹೋಮದ ಕೊನೆಗೆ ದೊಡ್ಡ ಪ್ರಮಾಣದ ಕೆಂಪು ಮೆಣಸು ಸುರಿದು ಪೂರ್ಣಾಹುತಿ ನೀಡುವುದು ವಿಶೇಷ. ಇಚ್ಛಿತ ಕಾರ್ಯಫಲಕ್ಕಾಗಿ ಇದು ಬಹಳ ಶಕ್ತಿಯುತ ಪೂಜೆ ಮತ್ತು ಪ್ರಾರ್ಥನೆ ಎಂದು ಪರಿಗಣಿಸಲ್ಪಟ್ಟಿದೆ. ಯಜ್ಞದ ಕೊನೆಯಲ್ಲಿ ಪ್ರತ್ಯಂಗಿರಾ ದೇವಿ ಮತ್ತು ಸರಬೇಶ್ವರ ದೇವರಿಗೆ ಪವಿತ್ರ ಕಲಶಾಭಿಷೇಕ ನಡೆಯುತ್ತದೆ.

3) ನಿಕುಂಬಲ ಯಜ್ಞ: ಭಕ್ತಾದಿಗಳು ತಾವು ಕಳೆದುಕೊಂಡ ಸ್ಥಾನವನ್ನು ಮರಳಿ ಪಡೆಯಲು, ಶತ್ರುಗಳ ಬಾಧೆ ನಿವಾರಣೆ, ಋಣಭಾರದಿಂದ ಮುಕ್ತಿ, ಉದ್ಯೋಗದಲ್ಲಿ ಬಡ್ತಿ, ಉದ್ಯೋಗಾವಕಾಶ, ವಿವಾಹ ಭಾಗ್ಯ ಮತ್ತು ವ್ಯಾಪಾರದಲ್ಲಿ ಪ್ರಗತಿಗಾಗಿ ನಿಕುಂಬಲ ಯಜ್ಞವನ್ನು ಮಾಡಿಸುತ್ತಾರೆ. ಸಾಡೇಸತಿ-ಶನಿ ಭಗವಂತನ ಪ್ರತಿಕೂಲ ಅಂಶಗಳಿಂದ ಪೀಡಿತರು ಸಹ ಯಜ್ಞದಲ್ಲಿ ಪಾಲ್ಗೊಳ್ಳುತ್ತಾರೆ. ನಿಕುಂಬಲ ಯಜ್ಞವನ್ನು ಪೂರ್ಣಿಮೆಯಂದು ಬೆಳಗ್ಗೆ 8 ರಿಂದ ಅಪರಾಹ್ನ 2 ಗಂಟೆ ಒಳಗೆ ಪೂರ್ಣಗೊಳಿಸುತ್ತಾರೆ.

4) ಆಲದ ಮರ ವಿಶೇಷ: ಪ್ರತ್ಯಂಗಿರಾ ದೇವಾಲಯದ ಆಲದ ಮರದಲ್ಲಿ ಬೋಧಿ, ಮಾವು, ದಾಲ್ಚಿನ್ನಿ ಮತ್ತು ಪುರಸುಗಳಂತಹ ಇತರ ಮರಗಳ ಎಲೆಗಳೂ ಇರುವುದು ವಿಶೇಷ. ನಿಕುಂಬಲ ಯಜ್ಞಕ್ಕೆ ಇವುಗಳನ್ನು ಬಳಸಲಾಗುತ್ತಿದ್ದು, ಹೀಗಾಗಿ ಕೆಂಪು ಮೆಣಸು ಪೂರ್ಣಾಹುತು ನೀಡಿದರೂ ಅದರ ಘಾಟು ಭಕ್ತರಿಗೆ ನಾಟುವುದಿಲ್ಲ ಎಂದು ದಿನಮಲರ್ ವರದಿ ವಿವರಿಸಿದೆ.

5) ಪ್ರತ್ಯಂಗಿರಾ ದೇವಿ ದರ್ಶನ: ಈ ದೇವಸ್ಥಾನವು ಬೆಳಗ್ಗೆ 6 ಗಂಟೆಯಿಂದ 11 ಗಂಟೆ ತನಕ ಮತ್ತು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆ ತನಕ ತೆರೆದಿರುತ್ತದೆ.

ಪ್ರತ್ಯಂಗಿರಾ ದೇವಿ ಯಾರು?

ಪ್ರತ್ಯಂಗಿರಾ ದೇವಿ ಯಾರು ಎಂಬ ಕುತೂಹಲ ಸಹಜ. ಸಿಂಹ ಮುಖ ಮತ್ತು 18 ಕೈಗಳನ್ನು ಹೊಂದಿರುವ ನಗುಮುಖದ ಪ್ರತ್ಯಂಗಿರಾ ದೇವಿಯು ಸರಬೇಶ್ವರ ದೇವರ ಮೂರನೇ ಕಣ್ಣಿನ ಮೂಲ ಅವತಾರವೆತ್ತಿದ ದೇವಿ. ಪ್ರತ್ಯಂಗಿರಾ,ಇವಳನ್ನು ಅಥರ್ವಣ ಭದ್ರಕಾಳಿ, ನರಸಿಂಹಿ, ಸಿಂಹಮುಖಿ, ಮತ್ತು ನಿಕುಂಬಳ ಎಂದು ಕರೆಯಲ್ಪಡುವ ದೇವಿಯು ನರಸಿಂಹ ಅಥವಾ ಶರಭನ ಸ್ತ್ರೀ ಶಕ್ತಿ ಮತ್ತು ಪತ್ನಿ ಎಂದು ಹೇಳಲಾಗುತ್ತಿದೆ. ಕಪ್ಪು ಮೈಬಣ್ಣದ ದೇವಿಯು ತ್ರಿಶೂಲ ಹಿಡಿದಿದ್ದಾಳೆ. ಪಾಶ, ಡಮರುಗಗಳನ್ನು ಹಿಡಿದ ದೇವಿಯು ಲಕ್ಷ್ಮೀ ಮತ್ತು ಸರಸ್ವತಿ ದೇವಿಯ ಒಟ್ಟು ರೂಪವಾಗಿ ಪ್ರತ್ಯಂಗಿರಾದೇವಿಯು ಆರಾಧಿಸಲ್ಪಡುತ್ತಾಳೆ.

ತೇವರಂ ಸ್ತೋತ್ರಗಳಲ್ಲಿ ಉಲ್ಲೇಖವಾಗಿರುವ ಶಿವ ದೇವಾಲಯಗಳಲ್ಲಿ ಇದೂ ಒಂದು. ಸಂತ ಜ್ಞಾನ ಸಂಬಂಧರು ತಮ್ಮ ಕೀರ್ತನೆಗಳಲ್ಲಿ ಈ ದೇವಾಲಯದ ದೇವಿಯನ್ನು ಸ್ತುತಿಸಿದ್ದಾರೆ. ದೇಗುಲದ ಪೀಠಾಧಿಪತಿ ಅಗಸ್ತ್ಯೇಶ್ವರರು ಪೂರ್ವಕ್ಕೆ ಮುಖ ಮಾಡಿದ್ದಾರೆ. ತಾಯಿ ಧರ್ಮ ಸಂವರ್ದಿನಿ ದಕ್ಷಿಣಾಭಿಮುಖವಾಗಿದೆ. ಆಲದ ಮರವು ದೇವಾಲಯದ ಪವಿತ್ರ ಮರವಾಗಿದೆ.

ಪ್ರತ್ಯಂಗಿರಾ ದೇವಿ ಕುರಿತಾದ ದಂತಕಥೆ

ಮಹಾಭಾರತದ ಉಪಕಥೆಯಲ್ಲಿ ಪ್ರತ್ಯಂಗಿರಾ ದೇವಿ: ಈಗ ಪ್ರತ್ಯಂಗಿರಾ ದೇವಿ ದೇವಸ್ಥಾನ ಇರುವಂತಹ ಅಯ್ಯವಾಡಿ ಗ್ರಾಮವನ್ನು ಈ ಹಿಂದೆ ಐವರ್‌ ಪಾಡಿ ಎಂದು ಕರೆಯುತ್ತಿದ್ದರು. ದಂತಕಥೆಗಳ ಪ್ರಕಾರ, ಪಂಚ ಪಾಂಡವರು ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ವನವಾಸದ ವೇಳೆ ಅವರು ತಮ್ಮ ಆಯುಧಗಳನ್ನು ಇಲ್ಲಿ ಮರದ ಪೊಟರೆಯಲ್ಲಿ ಇಟ್ಟುಕೊಂಡಿದ್ದರು. ಆ ಸಂದರ್ಭದಲ್ಲಿ ಕಳೆದು ಹೋದ ತಮ್ಮ ರಾಜ್ಯವನ್ನು ಮತ್ತೆ ಪಡೆಯಲು ಮಹಾ ಪ್ರತ್ಯಂಗಿರಾ ದೇವಿಯನ್ನು ಆರಾಧಿಸಿದರು ಎಂಬ ಐತಿಹ್ಯವಿದೆ.

ಭಕ್ತ ಪ್ರಹ್ಲಾದನ ಕಥೆಯಲ್ಲಿ ಪ್ರತ್ಯಂಗಿರಾ ದೇವಿ: ರಾಕ್ಷಸ ರಾಜ ಹಿರಣ್ಯಕಶಿಪುವನ್ನು ಕೊಲ್ಲುವುದಕ್ಕೆ ಮಹಾವಿಷ್ಣುವು ನರಸಿಂಹ ಅವತಾರ ಎತ್ತಿದ್ದ. ಭಕ್ತ ಪ್ರಹ್ಲಾದನ ಭಕ್ತಿಗೆ ಮಣಿದ ನರಸಿಂಹ ದೇವರು ಹಿರಣ್ಯಕಶಿಪುವಿನ ವಧೆ ಮಾಡಿದರು. ಇದಾಗಿ ನರಸಿಂಹ ದೇವರ ಕೋಪ ತಣಿಯಲಿಲ್ಲ. ಹೀಗಾಗಿ, ಉಗ್ರ ನರಸಿಂಹ ದೇವರ ಕೋಪ ತಣಿಸಲು ಪರಶಿವ ದೇವರು ಸರಬೇಶ್ವರ ದೇವರ ರೂಪತಾಳಿದರು. ಮಹಾಪ್ರತ್ಯಂಗಿರಾ ದೇವಿ ಶಿವನ ಮೂರನೇ ಕಣ್ಣಿನಿಂದ ಅವತರಿಸಿದ್ದು, ಇಬ್ಬರೂ ಅಯ್ಯವಾಡಿ ಪ್ರತ್ಯಂಗಿರಾ ದೇವಾಲಯದಲ್ಲಿ ನೆಲೆಸಿದ್ದಾರೆ.

ರಾಮಾಯಣದ ಕಥೆಯಲ್ಲಿ ಪ್ರತ್ಯಂಗಿರಾ ದೇವಿ: ಕಾಳಿಯ ಅವತಾರವಾಗಿ ಪ್ರತ್ಯಂಗಿರಾ ದೇವಿಯನ್ನು ಕಾಣಲಾಗುತ್ತದೆ. ಇಂದ್ರಜಿತು ನಿಕುಂಬಲ ಯಜ್ಞ ನೆರವೇರಿಸಿದ ಉಪಕಥೆ ರಾಮಾಯಣದಲ್ಲಿ ಇದೆ ಎಂಬ ಉಲ್ಲೇಖವನ್ನು ದಿನಮಲರ್ ವರದಿ ವಿವರಿಸಿದೆ. ಇಂದ್ರಜಿತು ನಿಕುಂಬಲ ಯಜ್ಞ ನೆರವೇರಿಸಿದರೂ, ಶ್ರೀರಾಮನ ವಿರುದ್ಧದ ಯುದ್ಧದಲ್ಲಿ ಎರಡೂ ಕಡೆಯ ಉದ್ದೇಶಗಳನ್ನು ಅರಿತಿದ್ದ ಪ್ರತ್ಯಂಗಿರಾ ದೇವಿಯು ಇಂದ್ರಜಿತುವಿಗೆ ವಿಜಯ ಒದಗಿಸಲಿಲ್ಲ. ಕೆಟ್ಟ ಉದ್ದೇಶಗಳೊಂದಿಗೆ ಯಜ್ಞ ನೆರವೇರಿಸಿದರೆ ಅದರ ಫಲ ಸಿಗುವುದಿಲ್ಲ ಎಂಬ ಅಂಶವನ್ನು ಎತ್ತಿಹಿಡಿಯಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.