Bilvashtakam: ಬಿಲ್ವಪತ್ರೆ ಸಮರ್ಪಿಸುವುದರ ಜೊತೆಗೆ ಬಿಲ್ವಾಷ್ಟಕಂ ಸ್ತೋತ್ರ ಪಠಿಸಿ; ಶಿವನ ಕೃಪೆಗೆ ಪಾತ್ರರಾಗಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bilvashtakam: ಬಿಲ್ವಪತ್ರೆ ಸಮರ್ಪಿಸುವುದರ ಜೊತೆಗೆ ಬಿಲ್ವಾಷ್ಟಕಂ ಸ್ತೋತ್ರ ಪಠಿಸಿ; ಶಿವನ ಕೃಪೆಗೆ ಪಾತ್ರರಾಗಿ

Bilvashtakam: ಬಿಲ್ವಪತ್ರೆ ಸಮರ್ಪಿಸುವುದರ ಜೊತೆಗೆ ಬಿಲ್ವಾಷ್ಟಕಂ ಸ್ತೋತ್ರ ಪಠಿಸಿ; ಶಿವನ ಕೃಪೆಗೆ ಪಾತ್ರರಾಗಿ

Bilvashtakam: ಶಿವನ ಪೂಜೆಯಲ್ಲಿ ಬಿಲ್ವಪತ್ರೆಯನ್ನು ಕಡ್ಡಾಯವಾಗಿ ಅರ್ಪಿಸಲಾಗುತ್ತದೆ. ಒಂದೇ ಒಂದೇ ಬಿಲ್ವಪತ್ರೆಯನ್ನು ಅರ್ಪಿಸಿದರೂ ಶಿವ ಒಲಿಯುತ್ತಾನೆ ಎಂದು ಹೇಳಲಾಗುತ್ತದೆ. ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವಾಗ ಈ ಬಿಲ್ವಾಷ್ಟಕಂ ಸ್ತೋತ್ರವನ್ನು ಪಠಿಸುವುದು ತುಂಬಾ ಒಳ್ಳೆಯದು.

ಬಿಲ್ವಪತ್ರೆ ಸಮರ್ಪಿಸುವುದರ ಜೊತೆಗೆ ಬಿಲ್ವಾಷ್ಟಕಂ ಸ್ತೋತ್ರ ಪಠಿಸಿ
ಬಿಲ್ವಪತ್ರೆ ಸಮರ್ಪಿಸುವುದರ ಜೊತೆಗೆ ಬಿಲ್ವಾಷ್ಟಕಂ ಸ್ತೋತ್ರ ಪಠಿಸಿ (pixabay)

ಹಿಂದಿನ ಕಾಲದಿಂದಲೂ ಭಕ್ತರು ದೇವರುಗಳನ್ನು ಒಲಿಸಿಕೊಳ್ಳಲು ಪೂಜೆಗಳನ್ನು ಮಾಡುತ್ತಿದ್ದರು. ಆಯಾ ದೇವರುಗಳಿಗೆ ಅವರ ಪ್ರೀತಿಯ ವಸ್ತುಗಳನ್ನು ಸಮರ್ಪಿಸಿ, ಸ್ತೋತ್ರಗಳನ್ನು ಪಠಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದರು. ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನನ್ನು ಮೆಚ್ಚಿಸಲು ಒಂದೇ ಒಂದು ಬಿಲ್ವಪತ್ರೆ ಸಾಕು ಎಂದು ಹೇಳಲಾಗುತ್ತದೆ. ಬಿಲ್ವಪತ್ರೆಗೆ ಅಷ್ಟೊಂದು ಮಹತ್ವ ನೀಡಲಾಗಿದೆ. ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನು ಇಟ್ಟು ಬಿಲ್ವಾಷ್ಟಕಂ ಸ್ತೋತ್ರವನ್ನು ಪಠಿಸಿದರೆ ಶಿವನ ಅನುಗ್ರಹ ಸಿಗುತ್ತದೆ. ಶಿವನಿಗೆ ಬಿಲ್ವಪತ್ರೆಯೆಂದರೆ ಅಷ್ಟೊಂದು ಪ್ರಿಯವಾದದ್ದು ಎಂದು ಇದರಿಂದ ತಿಳಿದುಕೊಳ್ಳಬಹುದಾಗಿದೆ. ಕೇವಲ ಬಿಲ್ವಪತ್ರೆಯನ್ನಷ್ಟೇ ಸಮರ್ಪಿಸುವುದರ ಬದಲಿಗೆ ಅದರ ಜೊತೆಗೆ ಬಿಲ್ವಾಷ್ಟಕಂ ಸ್ತೋತ್ರವನ್ನು ಪಠಿಸಿದರೆ ಶಿವನ ಕೃಪಾಶೀರ್ವಾದಕ್ಕೆ ಸುಲಭವಾಗಿ ಪಾತ್ರರಾಗಬಹುದು.

ಬಿಲ್ವಾಷ್ಟಕಂ ಸ್ತೋತ್ರ

ತ್ರಿದಳಂ ತ್ರಿಗುಣಾಕರಂ ತ್ರಿನೇತ್ರಂ ಚ ತ್ರಯಾಯುಧಮ್|

ತ್ರಿಜನ್ಮಪಾಪ ಸಂಹಾರಂ ಏಕಬಿಲ್ವಂ ಶಿವಾರ್ರ್ಪಣಮ ||

ತ್ರಿಸಖೈರ್ಬಿಲ್ವಪತ್ರೈಶ್ಚ ಹ್ಯಚಿದ್ರೈಃ ಕೋಮಲೈಃ ಶುಭೈಃ |

ಶಿವಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವರ್ಪಾಣಮ್||

ಅಖಂಡಬಿಲ್ವಪತ್ರೇಣ ಪೂಜೆತೇ ನಂದಿಕೇಶ್ವರಃ |

ಶುದ್ಧ್ಯಂತಿ ಸರ್ವಪಾಪೇಭ್ಯಃ ಏಕಬಿಲ್ವಂ ಶಿವಾರ್ಪಣಮ್||

ಶಾಲಿಗ್ರಾಮಶಿಲಾಮೇಕಾಂ ಜಾತು ವಿಪ್ರಾಯ ಯೋರ್ಪಯೇತ್|

ಸೋಮಯಜ್ಞಮಹಾಪುಣ್ಯಂ ಏಕಬಿಲ್ವಂ ಶಿವಾರ್ಪಣಮ್ ||

ದಂತಿಕೋಟಿಸಹಸ್ರಾಣಿ ವಾಜಪೇಯಶತಾನಿ ಚ |

ಕೋಟಿಕನ್ಯಾ‌ಮಹಾದಾನಾಂ ಏಕಬಿಲ್ವಂ ಶಿವಾರ್ಪಣಮ್‌||

ಪಾರ್ವತ್ಯಾಃ ಸ್ವೇದಸಂಜಾತಂ ಮಹಾದೇವಸ್ಯ ಚ ಪ್ರಿಯಮ್‌|

ಬಿಲ್ವವೃಕ್ಷಂ ನಮಸ್ಯಾಮೀ ಏಕಬಿಲ್ವಂ ಶಿವಾರ್ಪಣಮ್‌||

ದರ್ಶನಂ ಬಿಲ್ವವೃಕ್ಷಸ್ಯ ಸ್ಪರ್ಶನಂ ಪಾಪನಾಶನಮ್‌ |

ಅಘೋರಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್‌ ||

ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ|

ಅಗ್ರತಃ ಶಿವರೂಪಾಯ ಏಕಬಿಲ್ವಂ ಶಿವಾರ್ಪಣಮ್‌ ||

ಬಿಲ್ವಾಷ್ಟಕಮಿದಂ ಪುಣ್ಯಂ ಯಃ ಪಠೇಚ್ಛಿವಸನ್ನಿಧೌ |

ಸರ್ವಪಾಪವಿನಿರ್ಮುಕ್ತಃ ಶಿವಲೋಕಮವಾಪ್ನುಯಾತ್ ||

ಇತಿ ಬಿಲ್ವಾಷ್ಟಕಮ್ ||

ಇದನ್ನೂ ಓದಿ | ಶನಿ ಸಂಕ್ರಮಣದಿಂದ ರೂಪುಗೊಳ್ಳಲಿದೆ ಶಶ ರಾಜಯೋಗ; 2025ವರೆಗೆ ಈ ಮೂರೂ ರಾಶಿಯವರಿಗೆ ಹೋದಲೆಲ್ಲಾ ಹಿಂಬಾಲಿಸಲಿದೆ ಅದೃಷ್ಟ

ಬಿಲ್ವಾಷ್ಟಕದ ಮಹತ್ವ

ಮಹಾದೇವನು ಅಭಿಷೇಕ ಪ್ರಿಯ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಪರಶಿವನ ಪೂಜೆಗೆ ಒಂದು ಬಿಲ್ವಪತ್ರೆ ಸಾಕು. ಆ ಬಿಲ್ವಪತ್ರೆಯನ್ನು ಭಕ್ತಿ ಶ್ರದ್ಧೆಯಿಂದ ಸಮರ್ಪಿಸಿದರೆ ಅವನು ಪ್ರಸನ್ನನಾಗುತ್ತಾನೆ ಎಂಬ ಮಾತಿದೆ. ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆಯು ಮೂರು ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಅದು ಸತ್ವ, ತಾಮಸ ಮತ್ತು ರಜೋ ಗುಣಗಳಾಗಿವೆ. ಅವು ಶಿವನ ಮೂರು ಕಣ್ಣುಗಳಿದ್ದಂತೆ. ಮೂರು ಜನ್ಮಗಳಲ್ಲಿ ಮಾಡಿದ ಪಾಪಗಳನ್ನು ಹೋಗಲಾಡಿಸುವ ಶಕ್ತಿ ಈ ಬಿಲ್ವಪತ್ರೆಗೆ ಇದೆ ಎಂದು ನಂಬಲಾಗಿದೆ. ಪಾಪಗಳನ್ನು ಕಳೆದುಕೊಳ್ಳುವ ಸಲುವಾಗಿಯೇ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಲಾಗುತ್ತದೆ.

ಬಿಲ್ವಪತ್ರೆಯನ್ನು ಲಕ್ಷ್ಮೀ ದೇವಿಯು ಸೃಷ್ಟಿಸಿದಳು ಎಂದು ಹೇಳಲಾಗುತ್ತದೆ. ಬಿಲ್ವ ಮರವು ಶಿವನಿಗೆ ಬಹಳ ಪ್ರಿಯವಾಗಿದೆ. ಎಲ್ಲಾ ಪಾಪಗಳನ್ನು ಹೋಗಲಾಡಿಸುತ್ತದೆ. ಬಿಲ್ವಪತ್ರೆಯ ಕೆಳಗಿನ ಭಾಗದಲ್ಲಿ ಬ್ರಹ್ಮ ದೇವನು, ಮಧ್ಯ ಭಾಗದಲ್ಲಿ ಮಹಾ ವಿಷ್ಣುವು, ಮೇಲ್ಭಾಗದಲ್ಲಿ ಶಿವನು ನೆಲೆಸಿರುತ್ತಾನೆ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಈ ಬಿಲ್ವಪತ್ರೆಯಿಂದ ಮಹಾದೇವನನ್ನು ಪೂಜಿಸುವುದರ ಮೂಲಕ ಏಕಕಾಲಕ್ಕೆ ಮೂರು ದೇವರನ್ನು ಪೂಜಿಸಿದಂತಾಗುತ್ತದೆ. ಪಾಪಗಳೆಲ್ಲವೂ ನಿವಾರಣೆಯಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ. ಇಷ್ಟಾರ್ಥಗಳು ಈಡೇರುತ್ತವೆ. ಬಿಲ್ವಾಷ್ಟಕಂ ಎಂಟು ಶ್ಲೋಕಗಳನ್ನು ಒಳಗೊಂಡಿದೆ.

ಬಿಲ್ವಾಷ್ಟಕಂ ಶ್ಲೋಕವನ್ನು ಯಾವಾಗ ಪಠಿಸಬೇಕು?

ಬಿಲ್ವಾಷ್ಟಕವು ಶಿವನನ್ನು ಸ್ತುತಿಸುವ ಶ್ಲೋಕವಾಗಿದೆ. ಬಿಲ್ವಾಷ್ಟಕಂ ಹಿಂದೂ ಭಕ್ತಿ ಸ್ತೋತ್ರಗಳಲ್ಲಿ ಒಂದಾಗಿದೆ. ಶಿವನ ಪೂಜೆಯಲ್ಲಿ ಬಿಲ್ವಪತ್ರೆಯನ್ನು ಬಳಸುವುದರಿಂದ ಅವನ ಆಶೀರ್ವಾದ ದೊರೆಯುತ್ತದೆ. ಶಿವಪುರಾಣದಲ್ಲಿಯೂ ಈ ಸ್ತೋತ್ರದ ಉಲ್ಲೇಖವಿದೆ. ಈ ಸ್ತೋತ್ರವನ್ನು ಪ್ರತಿನಿತ್ಯ ಪಠಿಸುವದರಿಂದ ಉತ್ತಮ ಆರೋಗ್ಯ, ಸಂಪತ್ತು ಮತ್ತು ಶಾಂತಿಯು ದೊರೆಯುತ್ತದೆ. ಬಿಲ್ವಾಷ್ಟಕಂ ಸ್ತೋತ್ರವನ್ನು ದಿನದ ಯಾವುದೇ ಸಮಯದಲ್ಲೂ ಪಠಿಸಬಹುದಾಗಿದೆ.

ಶಿವರಾತ್ರಿ ಮತ್ತು ಮಾಸ ಶಿವರಾತ್ರಿ (ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿ ತಿಥಿ) ಸಮಯದಲ್ಲಿ ಈ ಸ್ತೋತ್ರವನ್ನು ಪಠಿಸುವುದು ತುಂಬಾ ಒಳ್ಳೆಯದು. ಬಿಲ್ವಾಷ್ಟಕವನ್ನು ನಿಯಮಿತವಾಗಿ ಪಠಿಸುವುದರಿಂದ ಶಿವನ ಆಶೀರ್ವಾದ ದೊರೆಯುತ್ತದೆ. ಬಿಲ್ವಾಷ್ಟಕಂ ಸ್ತೋತ್ರವನ್ನು ಪ್ರಶಾಂತವಾದ ಸ್ಥಳದಲ್ಲಿ ಕುಳಿತು ಸ್ವಚ್ಛ ಮನಸ್ಸಿನಿಂದ ಪಠಿಸಿ ಶಿವನ ಕೃಪೆಗೆ ಪಾತ್ರರಾಗಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.