ಬಿವೈ ವಿಜಯೇಂದ್ರ ಅವರ ಮುಂದಿನ ದಿನಗಳು ಹೇಗಿವೆ: ರಾಜಕೀಯ ಜೀವನದಲ್ಲಿ ಸದಾ ಹೋರಾಟ, ಆತುರ ಪಡುವುದಿಲ್ಲ
ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುವ ಬಿಜೆಪಿ ನಾಯಕ ಬಿವೈ ವಿಜಯೇಂದ್ರ ಅವರಿಗೆ ರಾಜಕೀಯದಲ್ಲಿ ಸದಾ ಹೋರಾಟಗಳು ಇರುತ್ತವೆ. ಯಾವುದಕ್ಕೂ ಅವರು ಆತುರ ಪಡುವುದಿಲ್ಲ. (ಬರಹ: ಸತೀಶ್ ಎಚ್, ಜ್ಯೋತಿಷಿ)

ನನಗೆ ದೊರೆತ ಶ್ರೀಯುತರ ಜನನದ ವೇಳೆ ಮತ್ತು ದಿನಾಂಕವನ್ನು ಆಧರಿಸಿ ಈ ಕೆಳಕಂಡ ಅಂಶಗಳನ್ನು ಬರೆದಿದ್ದೇನೆ. ಇದರಿಂದ ಯಾರ ಮನಸ್ಸನ್ನೂ ನೋಯಿಸುವ ಅಥವಾ ಇಲ್ಲದ ಭರವಸೆಗಳನ್ನು ಸೃಷ್ಟಿಸುವ ಆಸೆ ನನಗಿಲ್ಲ. ಪ್ರತಿಯೊಬ್ಬರೂ ಕ್ಷೇಮದಿಂದ ಇರಬೇಕೆಂಬುದೇ ನನ್ನ ಆಶಯ. ದೊರೆತ ಮೂಲಗಳ ಪ್ರಕಾರ ಇವರ ಜನ್ಮ ದಿನಾಂಕ 5-11-1975. ಇವರ ಜನನ ಮಧ್ಯಾಹ್ನ 3.54ಕ್ಕೆ ಶಿಕಾರಿಪುರದಲ್ಲಿ ಆಗಿದೆ.
ಇವರ ಜಾತಕದಲ್ಲಿ ಗುರು ಗ್ರಹವು ಸ್ವಕ್ಷೇತ್ರದಲ್ಲಿ ಇದ್ದರೂ ವಕ್ರಿಯಾಗಿದೆ. ಆದರೆ ಬುಧ ಮತ್ತು ಶುಕ್ರ ಗ್ರಹಗಳ ನಡುವೆ ಪರಿವರ್ತನಾ ಯೋಗವಿದೆ. ರಾಜಕೀಯ ಜೀವನಕ್ಕೆ ಮುಖ್ಯವಾದ ರವಿಯು ಬುಧ ಮತ್ತು ರಾಹುಗಳ ನಡುವೆ ಅಷ್ಟಮದಲ್ಲಿ ನೆಲೆಸಿದೆ. ಇದರಿಂದ ಇವರ ರಾಜಕೀಯ ಜೀವನದಲ್ಲಿ ಸದಾ ಹೋರಾಟ ಇರುತ್ತದೆ. ಕೇವಲ ಸ್ವಂತ ಪಕ್ಷದವರು ಮಾತ್ರವಲ್ಲದೆ ಬೇರೆಯವರಿಂದಲೂ ತೊಂದರೆ ಇರುತ್ತದೆ. ಸದಾ ಬದಲಾವಣೆಗಳಿಗೆ ಹೊಂದುಕೊಂಡು ಬಾಳಬೇಕಾಗುತ್ತದೆ. ಆದರೆ ಇವರು ತಮ್ಮ ಮನಸ್ಸಿನ ಮೇಲೆ ಹತೋಟಿ ಸಾಧಿಸುತ್ತಾರೆ. ಗುರು ಮತ್ತು ಶುಕ್ರರ ನಡುವೆ ಪರಸ್ಪರ ದೃಷ್ಟಿ ಇದೆ. ಇದರಿಂದಾಗಿ ಎದುರಾಗುವ ಸಮಸ್ಯೆಗಳಿಂದ ಪಾರಾಗಲು ಸಾಧ್ಯವಾಗುತ್ತದೆ. ಆದರೆ ಇವರನ್ನು ನಂಬಿಸಿ ಮೋಸಮಾಡುವ ಜರನು ಅಧಿಕವಾಗಿರುತ್ತಾರೆ. ಒಂದು ಕ್ಷಣವೂ ನೆಮ್ಮದಿಯಿಂದ ಇರಲು ಸಾಧ್ಯವಾಗದು. ಸಮಯ ಸಾಧಕರ ಬಗ್ಗೆ ಎಚ್ಚರಿಕೆಯಿಂದಲೇ ಇರಬೇಕಾಗುತ್ತದೆ. ಆಡುವ ಮಾತಿನ ಮೇಲೆ ಹತೋಟಿ ಸಾಧಿಸುವುದು ಬಲು ಮುಖ್ಯ. ಇಲ್ಲವಾದರೆ ವಿವಾದಗಳು ಇವರನ್ನು ಹುಡುಕಿಕೊಂಡುಬರುತ್ತವೆ.
ಜನರನ್ನು ಭೇಟಿಮಾಡಿ, ಅವರನ್ನು ಪ್ರೀತಿಯಿಂದ ಮಾತನಾಡಿಸುವುದು ಇವರ ಹೆಗ್ಗಳಿಕೆ. ಈ ವರ್ಷದಲ್ಲಿ ಜುಲೈ 15 ರಿಂದ ಅಕ್ಟೋಬರ್ 4 ರ ವರೆಗು ಹೆಚ್ಚಿನ ತ್ರಾಸದಾಯಕ ದಿನಗಳಾಗಳಿವೆ. ಅದರಲ್ಲಿಯೂ ಜುಲೈ 15 ರಿಂದ ಸೆಪ್ಟಂಬರ್ ತಿಂಗಳ 19 ರ ನಡುವಿನ ಅವಧಿಯಲ್ಲಿ ಸಮಸ್ಯೆಯು ಹೆಚ್ಚಬಹುದು. ಇವರ ವಿರುದ್ಧದ ತೀರ್ಮಾನವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಈ ಅವಧಿಯ ನಂತರ ಇವರಿಗೆ ಕೊಂಚ ನೆಮ್ಮದಿ ದೊರೆಯಬಹುದು. ಇವರು ಸ್ವಂತ ನಿರ್ಧಾರಗಳಿಗೆ ಬದ್ದರಾಗುತ್ತಾರೆ. ಆದರೆ ಸ್ಥಿರವಾದ ಮನಸ್ಸಿರುವುದಿಲ್ಲ. ಅನಗತ್ಯವಾಗಿ ಬೇರೆಯವರ ವಿಚಾರದ ಬಗ್ಗೆ ಗಮನ ನೀಡುತ್ತಾರೆ. ಪಕ್ಷದವರ ಮನಗೆಲ್ಲಲು ದೊಡ್ಡಸಾಹಸ ಮಾಡಬೇಕಾಗುತ್ತದೆ. ಭಗವಾನ್ ವಿಷ್ಣುವಿನ ಆರಾಧನೆಯಿಂದ ಶುಭಫಲಗಳು ದೊರೆಯುತ್ತವೆ.
25ನೇ ವಯಸ್ಸಿನಿಂದ ಇವರ ಜೀವನದಲ್ಲಿ ಬದಲಾವಣೆಗಳು ಉಂಟಾಗಿವೆ. ಸತತ ಪರಿಶ್ರಮದಿಂದ ತಮ್ಮ ಕೆಲಸ ಸಾಧಿಸುತ್ತಾರೆ. ಇವರು 32 ಮತ್ತು 45ನೇ ವಯಸ್ಸಿನಲ್ಲಿ ಆತಂಕದ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಇವರ ಜಾತಕದ ಅನ್ವಯ ಜೀವನದಲ್ಲಿ 12 ವರ್ಷಗಳಿಗೆ ಒಮ್ಮೆ ಬದಲಾವಣೆಗಳು ಉಂಟಾಗುತ್ತವೆ. 12, 24,36 ಮತ್ತು 48ನೇ ವಯಸ್ಸಿನಲ್ಲಿ ಕೆಲವೊಂದು ಬದಲಾವಣೆಗಳನ್ನು ಇವರು ಎದುರಿಸಿದ್ದಾರೆ. ಸಂಚಾರದಿಂದ ಇವರಿಗೆ ನಿರೀಕ್ಷಿತ ಫಲಗಳು ದೊರೆಯುತ್ತವೆ. ಅಂದರೆ ಕ್ಷೇತ್ರ ಪ್ರವಾಸ ಮಾಡಿದಾಗಲೆಲ್ಲ ಇವರಿಗೆ ಒಳ್ಳೆಯದಾಗಿದೆ. ವಿವಾದಗಳಿಂದ ಇವರು ವಿಚಲಿತರಾಗುವುದಿಲ್ಲ. ಬದಲಾಗಿ ವಿವಾದಗಳನ್ನು ಹಾಸ್ಯವಾಗಿ ಪರಿಗಣಿಸುತ್ತಾರೆ. ದುರ್ಗಾಪೂಜೆ ಮಾಡಿದಾಗಲೆಲ್ಲಾ, ಸಾಧುಸಂತರ ಆಶೀರ್ವಾದ ಪಡೆದಾಗಲೆಲ್ಲ ಇವರಿಗೆ ಶುಭವಾಗಿದೆ.
ಮಾತುಕತೆಯ ತಳಹದಿಯ ಮೇಲೆ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ
ಇವರು ಎಲ್ಲೆ ಇದ್ದರೂ ತಮ್ಮ ರಾಜಕೀಯಜೀವನದ ಬಗ್ಗೆ ಯೋಚಿಸುತ್ತಾರೆ. ಇವರು ರೂಪಿಸುವ ಯೋಜನೆಗಳು ಇವರಿಗೆ ವರಪ್ರದವಾಗುತ್ತವೆ. ಆತುರ ಪಡುವುದಿಲ್ಲ. ಯಾರ ಜೊತೆಯಲ್ಲಿಯೂ ಚರ್ಚಿಸುವುದಿಲ್ಲ. ತಮ್ಮ ಮೇಲೆ ತಮಗೆ ಹೆಚ್ಚಿನ ವಿಶ್ವಾಸ ಇರುತ್ತದೆ. ಮಾರ್ಚ್ ತಿಂಗಳ 11ರಿಂದ ಇವರು ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಏಪ್ರಿಲ್ ತಿಂಗಳ 19ರಿಂದ ಪಕ್ಷದ ಹಿರಿಯರ ಜೊತೆಯಲ್ಲಿಯೂ ವಾದವಿವಾದಗಳು ಆರಂಭವಾಗುತ್ತವೆ. ಒಟ್ಟಾರೆ ಪ್ರಸಕ್ತ ಸನ್ನಿವೇಶದಲ್ಲಿ ನೆಮ್ಮದಿ ಇರದ ದಿನಗಳಾಗುತ್ತವೆ. ಇವರ ಮುಂದಿನ ಭವಿಷ್ಯ ಕೇವಲ ಮಾತುಕತೆಯ ತಳಹದಿಯ ಮೇಲೆ ನಿರ್ಧಾರವಾಗಲಿದೆ. ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವ ಮುನ್ನ ಯೋಚಿಸುವುದು ಒಳ್ಳೆಯದು.
ಶ್ರೀ ಸುದರ್ಶನ ಹೋಮ ಮತ್ತು ಚಂಡಿಹೋಮದಿಂದ ನಿರೀಕ್ಷಿತ ಫಲಗಳು ದೊರೆಯುತ್ತವೆ. ಆದಿತ್ಯಹೃದಯ ಮತ್ತು ಇಂದ್ರಾಕ್ಷಿಸ್ತೋತ್ರದ ಪಾರಾಯಣದಿಂದ ವಿರೋಧಿಗಳ ವಿರುದ್ಧ ಜಯಗಳಿಸಬಹುದು.
ಬರಹ: ಸತೀಶ್ ಎಚ್, ಜ್ಯೋತಿಷಿ
(ಗಮನಿಸಿ: ಇದು ಬಿವೈ ವಿಜಯೇಂದ್ರ ಅವರ ಜನ್ಮದಿನಾಂಕ ಮತ್ತು ಸಮಯವನ್ನು ಆಧರಿಸಿ ಮಾಡಿರುವ ಜಾತಕ ವಿಶ್ಲೇಷಣೆ. ಇದು ಸಂಪೂರ್ಣವಾಗಿ ಜ್ಯೋತಿಷ್ಯದ ಲೆಕ್ಕಾಚಾರ ಮತ್ತು ಶಾಸ್ತ್ರ, ಸಂಪ್ರದಾಯವನ್ನು ಆಧರಿಸಿದೆ. ಇಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ. ‘ಎಚ್ಟಿ ಕನ್ನಡ’ ಜಾಲತಾಣದ ಸಿಬ್ಬಂದಿ ಈ ಬರಹವನ್ನು ಬದಲಿಸಿಲ್ಲ)