Champa Shashti 2022: ಸುಬ್ರಹ್ಮಣ್ಯ ಷಷ್ಠಿಯ ದಿನ, ಸಮಯ ಮತ್ತು ಮಹತ್ವ ಏನು; ಇಲ್ಲಿದೆ ವಿವರ
Champa Shashti 2022: ಮಾರ್ಗಶಿರ ಮಾಸದ ಶುಕ್ಲಪಕ್ಷದ ಆರನೇ ದಿನವೇ ಚಂಪಾ ಷಷ್ಠಿ ಅಥವಾ ಸುಬ್ರಹ್ಮಣ್ಯ ಷಷ್ಠಿ. ಈ ಸಲ ಸುಬ್ರಹ್ಮಣ್ಯ ಷಷ್ಠಿ ನ.29ರಂದು ಬಂದಿದೆ. ಈ ದಿನ ವಿಶೇಷ, ಮಹತ್ವ ಮತ್ತು ಇತರೆ ವಿವರ ಇಲ್ಲಿದೆ.
ಸ್ಕಂದ ಷಷ್ಠಿಯ ಆಚರಣೆಯ ಬಳಿಕ ಬರುವ ಷಷ್ಠಿಯೇ ಚಂಪಾ ಷಷ್ಠಿ. ಇದು ಮಾರ್ಗಶಿರ ಮಾಸದ ಶುಕ್ಲಪಕ್ಷದ ಆರನೇ ದಿನ. ಈ ಷಷ್ಠಿಯನ್ನು ಸುಬ್ರಹ್ಮಣ್ಯ ಷಷ್ಠಿ ಎಂದೂ ಹೇಳುತ್ತಾರೆ. ಈ ಸಲ ಸುಬ್ರಹ್ಮಣ್ಯ ಷಷ್ಠಿ ಅಥವಾ ಚಂಪಾ ಷಷ್ಠಿ ನ.29ರಂದು ಬಂದಿದೆ. ರಾಜ್ಯದ ಎಲ್ಲ ಸುಬ್ರಹ್ಮಣ್ಯ ದೇಗುಲಗಳಲ್ಲಿ ಈ ದಿನ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ.
ಚಂಪಾಷಷ್ಠಿ ಅಥವಾ ಸುಬ್ರಹ್ಮಣ್ಯ ಷಷ್ಠಿ ಎಂಬುದು ಸುಬ್ರಹ್ಮಣ್ಯನಿಗೆ ಬಹಳ ಪ್ರಿಯವಾದ ದಿನ. ತಮಿಳುನಾಡು, ಕರ್ನಾಟಕದಲ್ಲಿ ಚಂಪಾ ಷಷ್ಠಿ ಆಚರಣೆ ಹೆಚ್ಚು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಬೆಂಗಳೂರಿನ ಸಮೀಪದ ಘಾಟಿ ಸುಬ್ರಹ್ಮಣ್ಯ, ಬೆಂಗಳೂರಿನ ವಿ.ವಿ. ಪುರಂನ ಸುಬ್ರಹ್ಮಣ್ಯ ದೇವಾಲಯ, ಕಳಸದ ಹತ್ತಿರ ಇರುವ ಹಳುವಳ್ಳಿ, ತರೀಕೆರೆಯ ಸುಬ್ರಹ್ಮಣ್ಯ ದೇವಾಲಯ, ನರಸಿಂಹರಾಜಪುರದ ಸುಬ್ರಹ್ಮಣ್ಯ ದೇವಾಲಯ, ತಮಿಳುನಾಡಿನ ಪಳನಿ ಹೀಗೆ ಈ ಎಲ್ಲ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಸುಬ್ರಹ್ಮಣ್ಯ ಷಷ್ಠಿ ದಿನ ಸುಬ್ರಹ್ಮಣ್ಯನ ರಥೋತ್ಸವ ನಡೆಯುತ್ತದೆ.
ಸುಬ್ರಹ್ಮಣ್ಯ ಷಷ್ಠಿ 2022 ದಿನಾಂಕ, ಸಮಯ, ಮುಹೂರ್ತ
ದೃಕ್ ಪಂಚಾಂಗದ ಪ್ರಕಾರ ಚಂಪಾ ಷಷ್ಠಿ 2022 ದಿನಾಂಕ
ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ದಿನಾಂಕ
ಷಷ್ಠಿ ತಿಥಿ ಆರಂಭ - ನವೆಂಬರ್ 28 ಸೋಮವಾರ ಅಪರಾಹ್ನ 01.35 ಕ್ಕೆ ಪ್ರಾರಂಭ
ಷಷ್ಠಿ ತಿಥಿ ಮುಕ್ತಾಯ - ನವೆಂಬರ್ 29 ಮಂಗಳವಾರ ಪೂರ್ವಾಹ್ನ 11.04ಕ್ಕೆ ಮುಕ್ತಾಯ
ಉದಯತಿಥಿ ಪ್ರಕಾರ ಚಂಪಾ ಷಷ್ಠಿಯ ಉಪವಾಸವನ್ನು ನವೆಂಬರ್ 29 ಮಂಗಳವಾರ ಆಚರಿಸಲಾಗುತ್ತದೆ.
ರವಿ ಮತ್ತು ದ್ವಿಪುಷ್ಕರ ಯೋಗ
ರವಿ ಮತ್ತು ದ್ವಿಪುಷ್ಕರ ಯೋಗದಲ್ಲಿ ಚಂಪಾ ಷಷ್ಠಿ ಈ ವರ್ಷ ಚಂಪಾ ಷಷ್ಟಿಯ ದಿನ ರವಿ ಯೋಗ ಮತ್ತು ದ್ವಿಪುಷ್ಕರ ಯೋಗ ರೂಪುಗೊಂಡಿದೆ.
ನ.29ರಂದು ಧ್ರುವ ಯೋಗವು ಬೆಳಗ್ಗೆಯಿಂದ ಅಪರಾಹ್ನ 02.53 ರ ತನಕ ನವೆಂಬರ್ 30 ರಂದು ಬೆಳಗ್ಗೆ 06.55 ರಿಂದ 08.38 ರವರೆಗೆ ರವಿಯೋಗ.
ನವೆಂಬರ್ 30ರ ಪೂರ್ವಾಹ್ನ 11.04 ರಿಂದ ಮರುದಿನ ಬೆಳಗ್ಗೆ 06.55 ರವರೆಗೆ ದ್ವಿಪುಷ್ಕರ ಯೋಗ
ಪೂಜಾ ವಿಧಾನ ಅಥವಾ ಕ್ರಮ
ಸುಬ್ರಹ್ಮಣ್ಯ ಷಷ್ಠಿ ವ್ರತಾಚರಣೆ ಮಾಡುವವರು ಮುಂಜಾನೆ ಎದ್ದು, ಪವಿತ್ರ ಸ್ನಾನವನ್ನು ಮಾಡುವುದು ವಾಡಿಕೆ. ಬಳಿಕ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ ಇಡೀ ದಿನ ಉಪವಾಸ ಮತ್ತು ಪೂಜಿಸುವ ಸಂಕಲ್ಪ ಮಾಡುತ್ತಾರೆ. ದಕ್ಷಿಣಾಭಿಮುಖವಾಗಿ, ಕಾರ್ತಿಕೇಯನನ್ನು ಪೂಜಿಸಲಾಗುತ್ತದೆ. ತುಪ್ಪ, ಮೊಸರು ಮತ್ತು ನೀರಿನ ಅರ್ಘ್ಯ ಮತ್ತು ಕೊನೆಯದಾಗಿ ತಾಜಾ ಮತ್ತು ಪರಿಮಳಯುಕ್ತ ಹೂವುಗಳೊಂದಿಗೆ ವಿಶೇಷವಾದ ಚಂಪಾವನ್ನು ಸುಬ್ರಹ್ಮಣ್ಯನಿಗೆ ಅರ್ಪಿಸಲಾಗುತ್ತದೆ. ಕಾರ್ತಿಕೇಯನ ಆಶೀರ್ವಾದವನ್ನು ಪಡೆಯಲು ರಾತ್ರಿಯಲ್ಲಿ ನೆಲದ ಮೇಲೆ ಮಲಗುವುದು ರೂಢಿಗತ ಸಂಪ್ರದಾಯ. ಈ ದಿನ ಉಪವಾಸ ಮತ್ತು ಪೂಜೆಯಿಂದ ಪಾಪಗಳು ನಿವಾರಣೆಯಾಗುತ್ತದೆ, ತೊಂದರೆಗಳು ದೂರವಾಗುತ್ತವೆ, ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ನಂಬಿಕೆ.