ಪತಿ-ಪತ್ನಿ ಸಂಬಂಧ ಬೆಸೆಯುವ ಅಪರೂಪದ ಹಬ್ಬ ಜ್ಯೋತಿರ್ಭೀಮೇಶ್ವರ ವ್ರತ; ದಿನಾಂಕ, ಪೂಜಾ ವಿಧಾನದ ಮಾಹಿತಿ ಇಲ್ಲಿದೆ -Bheemana Amavasya
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪತಿ-ಪತ್ನಿ ಸಂಬಂಧ ಬೆಸೆಯುವ ಅಪರೂಪದ ಹಬ್ಬ ಜ್ಯೋತಿರ್ಭೀಮೇಶ್ವರ ವ್ರತ; ದಿನಾಂಕ, ಪೂಜಾ ವಿಧಾನದ ಮಾಹಿತಿ ಇಲ್ಲಿದೆ -Bheemana Amavasya

ಪತಿ-ಪತ್ನಿ ಸಂಬಂಧ ಬೆಸೆಯುವ ಅಪರೂಪದ ಹಬ್ಬ ಜ್ಯೋತಿರ್ಭೀಮೇಶ್ವರ ವ್ರತ; ದಿನಾಂಕ, ಪೂಜಾ ವಿಧಾನದ ಮಾಹಿತಿ ಇಲ್ಲಿದೆ -Bheemana Amavasya

ಈಶ್ವರನ ಕೃಪೆಯಿಂದ ಪತಿಗೆ ಪತ್ನಿಯು ಮರುಜೀವ ಕೊಟ್ಟ ಅಪರೂಪದ ಸಂದರ್ಭವನ್ನು ನೆನಪಿಸಿಕೊಳ್ಳುವ ಜ್ಯೋತಿರ್ಭೀಮೇಶ್ವರ ವ್ರತವು ಆಷಾಢ ಮಾಡದಲ್ಲಿ ಬರುವ ಮುಖ್ಯ ಹಬ್ಬ ಎನಿಸಿದೆ. ಇದನ್ನು ಭೀಮನ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ವ್ರತಾಚರಣೆಯ ವಿವರ, ಪೂಜಾ ವಿಧಾನ, ಕಥೆ ಸೇರಿ ಹಬ್ಬದ ಆಚರಣೆಯ ಸಮಗ್ರ ವಿವರ ಇಲ್ಲಿದೆ. (ಬರಹ: ಸತೀಶ್ ಎಚ್.)

ಜ್ಯೋತಿರ್ಭೀಮೇಶ್ವರ ವ್ರತ, ಭೀಮನ ಅಮಾವಾಸ್ಯೆಯ ಆಚರಣ ವಿಧಾನ, ಕಥೆ, ಸಮಗ್ರ ಮಾಹಿತಿ
ಜ್ಯೋತಿರ್ಭೀಮೇಶ್ವರ ವ್ರತ, ಭೀಮನ ಅಮಾವಾಸ್ಯೆಯ ಆಚರಣ ವಿಧಾನ, ಕಥೆ, ಸಮಗ್ರ ಮಾಹಿತಿ

ಪ್ರತಿ ಸಂವತ್ಸರದಲ್ಲಿಯೂ ಆಷಾಢ ಮಾಸದ ಅಮಾವಾಸ್ಯೆಯಂದು ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸಬೇಕು. ಈ ವರ್ಷ ಜ್ಯೋತಿರ್ಭೀಮೇಶ್ವರ ವ್ರತವು ಆಗಸ್ಟ್‌ 4 ರಂದು ಬರುತ್ತದೆ. ಈ ವ್ರತವನ್ನು ಜ್ಯೋತಿರ್ಭಿಮೇಶ್ವರ ವ್ರತ, ಜ್ಯೋತಿ ಸ್ತಂಭ ವ್ರತ ಮತ್ತು ಪತಿ ಸಂಜೀವಿನಿ ವ್ರತ ಎನ್ನುವ ಹೆಸರುಗಳಿಂದಲೂ ಕರೆಯಲಾಗುತ್ತದೆ. ದೀಪಸ್ತಂಭ ಎಂದರೆ ದೀಪದಕಂಬ ಎಂಬ ಅರ್ಥಬರುತ್ತದೆ. ಜ್ಯೋತಿರ್ಭೀಮೇಶ್ವರ ಎಂದರೆ ಉತ್ತಮ ಆರೋಗ್ಯ ನೀಡಿ ಜೀವನ ಬೆಳಗಿಸುವುದು ಎಂಬ ಅರ್ಥ ಬರುತ್ತದೆ. ಪತಿ ಸಂಜೀವಿನಿ ಎಂದರೆ ಪ್ರಾಣಾಪಾಯದಲ್ಲಿ ಇರುವ ಪತಿಗೆ ಮತ್ತೆ ಜೀವ ಬರುವುದು ಎಂಬ ಅರ್ಥಬರುತ್ತದೆ. ಈ ಹಬ್ಬಕ್ಕೆ ಭೀಮನ ಅಮಾವಾಸ್ಯೆ ಎನ್ನುವ ಹೆಸರೂ ಇದೆ.

ಈ ವ್ರತವನ್ನು ಗೃಹಿಣಿಯರು ಹೆಚ್ಚು ಆಸ್ಥೆಯಿಂದ ಆಚರಿಸುತ್ತಾರೆ. ಇದರ ಆಚರಣೆಯಿಂದ ಪತಿಗೆ ಒದಗಬಹುದಾದ ಅಪಮೃತ್ಯು ಅಥವಾ ಎದುರಾಗುವ ಯಾವುದೇ ಅಪಾಯ ದೂರವಾಗುತ್ತದೆ ನಂಬಿಕೆ ಇದೆ. ವಿವಾಹಕ್ಕೂ ಮುಂಚೆಯೇ ಈ ವ್ರತವನ್ನು ಮಾಡಬಹುದಾಗಿದೆ. ಕೆಲ ಕುಟುಂಬಗಳು ವಿವಾಹದ ನಂತರ ಸತತವಾಗಿ ಒಂಬತ್ತು ವರ್ಷಗಳವರೆಗೂ ಈ ವ್ರತವನ್ನು ಆಚರಿಸಬೇಕು ಎನ್ನುವ ನಂಬಿಕೆ ಹೊಂದಿವೆ.

ಜ್ಯೋತಿರ್ಭೀಮೇಶ್ವರ ವ್ರತಾಚರಣೆ ವಿಧಾನ

ಹಿತ್ತಾಳೆಯಿಂದ ಮಾಡಿದ ಎರಡು ದೀಪಗಳನ್ನು ಶುಚಿಗೊಳಿಸಬೇಕು. ಅರಿಷಿಣದ ಕೊಂಬನ್ನು ಅರಿಷಿಣದ ನೀರಿನಿಂದ ಒದ್ದೆ ಮಾಡಿದ ದಾರ ಬಳಸಿ ದೀಪಗಳಿಗೆ ಕಟ್ಟಬೇಕು. ಈ ದೀಪಗಳಿಗೆ ಉಮಾ ಮಹೇಶ್ವರರನ್ನು ಆವಾಹನೆ ಮಾಡಬೇಕು. ಒಂಬತ್ತು ಗಂಟಿನಿಂದ ಕೂಡಿದ ದಾರವನ್ನು ಪೂಜಿಸಬೇಕು. ವಯಸ್ಸಿನ ಮಿತಿ ಇಲ್ಲದೆ ಎಲ್ಲಾ ಹೆಣ್ಣುಮಕ್ಕಳೂ ಪೂಜೆ ಮಾಡಿ ದಾರವನ್ನು ಕೈಯಲ್ಲಿ ಧರಿಸಬೇಕು.

ಸಾಮಾನ್ಯವಾಗಿ ಪೂಜೆ ಆರಂಭಿಸುವ ಮೊದಲೇ ದೀಪವನ್ನು ಹಚ್ಚಿರುತ್ತೇವೆ. ದೀಪವನ್ನು ಅಂಟಿಸುವ ವೇಳೆ ಮಂತ್ರಗಳನ್ನು ಪಠಿಸಬೇಕು. ಈ ವ್ರತದ ಸಂಕಲ್ಪವನ್ನು ಮಾಡುವ ವೇಳೆ, 'ಇಹ ಜನ್ಮನಿ ಜನ್ಮಾಂತರ ಸಕಲ ಸೌಭಾಗ್ಯ ಸಿದ್ಧ್ಯರ್ಥೇ ಭೀಮೇಶ್ವರ ಅಮಾವಾಸ್ಯೆ ಪ್ರಯುಕ್ತೇನ ಶ್ರೀ ಉಮಾ ಮಹೇಶ್ವರ ದೇವತಾ ಪ್ರೀತ್ರರ್ಥಂ' ಎಂದು ಹೇಳಬೇಕು.

ಆನಂತರ ಕಳಶ ಪೂಜೆ ಮಂಟಪ ಪೂಜೆಯನ್ನು ನೆರವೇರಿಸಬೇಕು. ಶ್ರೀವಿಘ್ನೇಶ್ವರನ ಪೂಜೆಯನ್ನು ಮಾಡಬೇಕು. ಪಂಚಾಮೃತ ಸ್ನಾನದ ನಂತರ ಎಂದಿನಂತೆ ಧೂಪ, ದೀಪವನ್ನು ಮಾಡಬೇಕು. ಶ್ರೀಗಣಪತಿಗೆ ಇಷ್ಟವಾದ ಬಾಳೆಹಣ್ಣು, ಚಿಗಳಿ, ಮೋದಕಗಳನ್ನು ನೈವೇದ್ಯ ಮಾಡಿ ಆನಂತರ ಉತ್ತರ ನೀರಾಜನ ಅಥವಾ ಮಹಾ ಮಂಗಳಾರತಿಯನ್ನು ಮಾಡಿ ಆನಂತರ ಉಮಾಮಹೇಶ್ವರರನ್ನು ಪ್ರತಿಷ್ಠಾಪಿಸಬೇಕು.

ಜ್ಯೋತಿರ್ಭೀಮೇಶ್ವರ ವ್ರತದ ನೈವೇದ್ಯ

ಇದರಲ್ಲಿ ವಿಶೇಷವಾಗಿ ಗ್ರಂಥಿ ಪೂಜೆ ಬರುತ್ತದೆ. ಆನಂತರ ಬೇರೆ ವ್ರತಗಳಂತೆ ಮುಂದುವರೆಯುತ್ತದೆ. ನೀವೇದನೆಗಾಗಿ ಅನ್ನ, ಪಾಯಸ, ಚಿತ್ರಾನ್ನ, ಹೋಳಿಗೆ, ಕಡಲೆಬೇಳೆ, ಹೆಸರುಬೇಳೆ, ಬಾಳೆಹಣ್ಣು ಮತ್ತು ನಾರಿಕೇಳ (ತೆಂಗಿನಕಾಯಿ) ಫಲವನ್ನು ತೆಗೆದುಕೊಳ್ಳಬೇಕು. ಪೂಜೆಯು ಮುಗಿದ ನಂತರ ಉಪಾಯನ ದಾನವನ್ನು ನೀಡಬೇಕು. ಇದಾದ ನಂತರ ಪೂಜಿಸಿದ ಗ್ರಂಥಿ ಅಂದರೆ ದಾರವನ್ನು ದೇವರ ಪ್ರಸಾದದ ಹೂವಿನ ಜೊತೆಯಲ್ಲಿ ಬಲಗೈಯಲ್ಲಿ ಧರಿಸಬೇಕು. ಇದನ್ನು ದೋರ ಬಂಧನ ಎಂದು ಕರೆಯುತ್ತೇವೆ. ಈ ದಾರದಲ್ಲಿ 9 ಎಳೆ ಮತ್ತು 9 ಗಂಟುಗಳು ಇರುತ್ತವೆ. ಇದಾದ ನಂತರ ಪುನಃ ಪೂಜೆ ಮತ್ತು ಫಲ ಸಮರ್ಪಣೆ ಬರುತ್ತದೆ. ಅಲ್ಲಿಗೆ ವ್ರತವು ಮುಕ್ತಾಯವಾಗುತ್ತದೆ. ಈ ಪೂಜೆಯ ಅಂತ್ಯದಲ್ಲಿ ತುಪ್ಪದಿಂದ ಕರಿದ ಕಡುಬುಗಳನ್ನು ದಾನ ನೀಡುವುದು ವಾಡಿಕೆ.

ಜ್ಯೋತಿರ್ಭೀಮೇಶ್ವರ ವ್ರತದ ಕಥೆ

ಈ ವ್ರತಕ್ಕೆ ಪತಿ ಸಂಜೀವಿನಿ ವ್ರತ ಎಂಬ ಹೆಸರು ಬರಲು ಒಂದು ಕಥೆ ಇದೆ. ಪೂರ್ವಕಾಲದಲ್ಲಿ ಸೌರಾಷ್ಟ್ರ ಎಂಬ ದೇಶದಲ್ಲಿ ವಜ್ರಬಾಹು ಎಂಬ ರಾಜನಿರುತ್ತಾನೆ. ಅವನ ಮಗ ಜಯಶೇಖರನು ಚಿಕ್ಕವಯಸ್ಸಿನಲ್ಲಿ ಅಸು ನಿಗುತ್ತಾನೆ. ಆಗ ರಾಜನು ಮೃತ ಶರೀರಕ್ಕೆ ಕನ್ಯೆ ಬೇಕೆಂದು ಡಂಗೂರ ಹೊಡೆಸುತ್ತಾನೆ. ವಿವಾಹ ಆದವರಿಗೆ ಅರ್ಧ ರಾಜ್ಯವನ್ನು ಕೊಡುವೆನೆಂದು ಘೋಷಿಸುತ್ತಾನೆ. ಆಗ ಮಾಧವ ಶರ್ಮ ಎಂಬಾತನು ತನ್ನ ಮಗಳನ್ನು ವಿವಾಹಕ್ಕೆ ಒಪ್ಪಿಸುತ್ತಾನೆ. ಉರಿಯುತ್ತಿದ್ದ ಚಿತೆಯು ಮಳೆಯ ಕಾರಣ ಆರಿ ಹೋಗುತ್ತದೆ. ಪತಿಯನ್ನು ಬದುಕಿಸಿಕೊಳ್ಳುವ ಸಲುವಾಗಿ ಆಕೆ ಪರಮೇಶ್ವರನನ್ನು ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಆಗ ಪ್ರತ್ಯಕ್ಷನಾದ ಪರಶಿವನು ಈ ವ್ರತದ ಬಗ್ಗೆ ತಿಳಿಸುತ್ತಾನೆ. ಆಗ ಆಕೆಯು ಈ ಪೂಜೆಯನ್ನು ಮಾಡಿ ಪತಿಯನ್ನು ಬದುಕಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾಳೆ. ಈ ಕಾರಣದಿಂದಲೇ ಇದು ಪತಿಸಂಜೀವಿನಿ ವ್ರತ ಎಂದು ಆಚರಿಸಲ್ಪಡುತ್ತದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.