ದೀಪಾವಳಿ 2024: ದೀಪ ತರಂಗಗಳು ಎಂದರೇನು, ಇದು ನಮ್ಮ ಮನಸ್ಸಿನ ಮೇಲೆ ಹೇಗೆಲ್ಲಾ ಸಕಾರಾತ್ಮಕ ಪರಿಣಾಮ ಬೀರುತ್ತೆ?
ದೀಪಾವಳಿಯನ್ನ ಬೆಳಕಿನ ಹಬ್ಬ ಎಂದೇ ಕರೆಯುತ್ತಾರೆ. ಇದು ಬೆಳಕು ಪಸರಿಸುವ ಹಬ್ಬ. ದೀಪದ ಬೆಳಕಿನಿಂದ ಸುತ್ತಲೂ ಹರಡಿರುವ ಕತ್ತಲೆಯನ್ನು ಮಾಯವಾಗಿಸುವ ಆಚರಣೆ ದೀಪಾವಳಿ. ದೀಪದ ಬೆಳಕಿನ ಅಲೆಗಳನ್ನು ದೀಪ ತರಂಗ ಎಂದೂ ಕರೆಯುತ್ತಾರೆ. ಈ ದೀಪ ತರಂಗಗಳು ಮನೆಯಲ್ಲಿ ಹಾಗೂ ನಮ್ಮ ಮನಸ್ಸಿನ ಮೇಲೆ ಹೇಗೆಲ್ಲಾ ಸಕಾರಾತ್ಮಕ ಪರಿಣಾಮ ಬೀರುತ್ತದೆ ನೋಡಿ.

ಕತ್ತಲೆ ಮನಸ್ಸಿಗೆ ಹಿಂಸೆ ನೀಡುತ್ತದೆ, ಭಯ ಹುಟ್ಟಿಸುತ್ತದೆ. ಕತ್ತಲೆಯನ್ನು ಇಷ್ಟಪಡುವವರು ಬಹುಶಃ ಕಡಿಮಯೇ ಎನ್ನಬಹುದು. ಆದರೆ ಈ ಕತ್ತಲೆಯೆಂಬ ಅಜ್ಞಾನವನ್ನು ಕ್ಷಣ ಮಾತ್ರದಲ್ಲಿ ದೂರಾಗಿಸುವ ಶಕ್ತಿ ಇರುವುದು ಬೆಳಕಿಗೆ ಮಾತ್ರ. ಕತ್ತಲೆಯನ್ನು ಹೊಡೆದೋಡಿಸಿ ಬೆಳಕು ಹರಡಬೇಕು ಎಂದರೆ ದೀಪ ಬೆಳಗಬೇಕು. ದೀಪವು ಜ್ಞಾನದ ಸಂಕೇತವೂ ಹೌದು. ಮನೆಯಲ್ಲಿ ಬೆಳಗುವ ಒಂದೇ ಒಂದು ದೀಪವು ಸುತ್ತಲಿನ ಕತ್ತಲನ್ನು ದೂರ ಮಾಡುತ್ತದೆ.
ದೇವರ ಕೋಣೆಯಲ್ಲಿ ಬೆಳಗುವ ಒಂದು ದೀಪವು ಮನಸ್ಸಿನಲ್ಲಿ ಆಧಾತ್ಮಿಕ ಭಾವವನ್ನು ಹುಟ್ಟುವುದು ಹಾಕುವುದು ಮಾತ್ರವಲ್ಲ, ಇದು ನಮ್ಮೊಳಗಿನ ಭಯ, ಆತಂಕ ದೂರಾಗಿಸಿ ನಮ್ಮ ಮನಸ್ಸಿನಲ್ಲಿ ಧೈರ್ಯ, ಛಲ ಹುಟ್ಟಿಸುತ್ತದೆ. ಅಜ್ಞಾನವನ್ನ ಕಳೆಯುವ ದೀಪದ ಅಲೆಯು ನಮ್ಮ ಸುತ್ತಲೂ ಧನಾತ್ಮಕ ಅಂಶವನ್ನು ಸೃಷ್ಟಿಸುತ್ತದೆ. ಕತ್ತಲೆ ನೋಡಿ ಭಯಪಟ್ಟ ಮನಸ್ಸಿಗೆ ಬೆಳಕು ಸಾಂತ್ವನ ನೀಡುತ್ತದೆ. ಹೀಗೆ ಒಂದು ದೀಪವು ಮನುಷ್ಯನ ಬದುಕಿಗೆ ಹಲವು ರೀತಿಯಲ್ಲಿ ಬೆಳಕಿನ ಅಲೆ ಅಥವಾ ತರಂಗವನ್ನು ಹರಡುವಂತೆ ಮಾಡುತ್ತದೆ.
ಬೆಳಕೆಂದರೆ ಕೇವಲ ದೀಪದಿಂದ ಹೊರ ಹೊಮ್ಮುವ ಕಿರಣಗಳಷ್ಟೇ ಅಲ್ಲ, ಇದು ಜಗತ್ತನ್ನೇ ಬದಲಿಸುವ ಶಕ್ತಿ ಇರುವಂಥದ್ದು. ಇಂತಹ ದೀಪಗಳಿಂದ ಹೊರ ಹೊಮ್ಮುವ ಅಲೆಯು ನಮ್ಮ ಸುತ್ತಲೂ ಒಂದು ವೈಬ್ ಸೃಷ್ಟಿಸುತ್ತದೆ. ದೀಪಗಳಿಂದ ಹೊರ ಹೊಮ್ಮುವ ಅಲೆಗಳನ್ನು ದೀಪ ತರಂಗಗಳು ಎಂದು ಕರೆಯುತ್ತಾರೆ. ಈ ತರಂಗಗಳು ನಮ್ಮ ಕಣ್ಣಿಗೆ ಗೋಚರವಾಗಿಯೂ ಗೋಚರವಾಗದಂತೆ ನಮ್ಮ ಸುತ್ತಲೂ ಹರಡಿರುತ್ತದೆ. ದೀಪ ತರಂಗಗಳೆಂದರೆ ಧನಾತ್ಮಕ ಅಂಶ. ಅಂದರೆ ನಮ್ಮ ಸುತ್ತಲೂ ಹರಡಿರುವ ಬೆಳಕಿನ ಪ್ರಭೆಯನ್ನೇ ದೀಪ ತರಂಗ ಎನ್ನಬಹುದು. ಈ ದೀಪ ತರಂಗಗಳು ಮನಸ್ಸಿನ ಮೇಲೆ ಹೇಗೆಲ್ಲಾ ಸಕಾರಾತ್ಮಕ ಪರಿಣಾಮಗಳು ಬೀರುತ್ತವೆ ನೋಡಿ.
ಧನಾತ್ಮಕ ಅಂಶ ಹರಡುತ್ತದೆ
ಮನೆಯಲ್ಲಿ ಅಥವಾ ದೇವರಕೋಣೆಯಲ್ಲಿ ದೀಪ ಹಚ್ಚಿದಾಗ ಮನೆಯೊಳಗೆ ಒಂದು ರೀತಿಯ ಧನಾತ್ಮಕ ಅಂಶ ಹರಡುತ್ತದೆ. ಮನೆಯಲ್ಲಿನ ನಕಾರಾತ್ಮಕ ಅಂಶಗಳು ದೂರಾಗುತ್ತವೆ. ಕತ್ತಲೆಯು ದೂರಾಗುತ್ತದೆ. ಮನೆಯೊಳಗೆ ಆವರಿಸಿರುವ ಕತ್ತಲೆ ಎಂಬ ಕೆಟ್ಟ ಶಕ್ತಿಯು ದೂರಾಗುತ್ತದೆ. ಬೆಳಕು ಇರುವವರೆಗೂ ಸುತ್ತಲೂ ಸಕಾರಾತ್ಮಕ ಅಂಶಗಳೇ ಇರುತ್ತವೆ.
ಮನಸ್ಸಿಗೆ ನೆಮ್ಮದಿ ಸಿಗುತ್ತದೆ
ದೀಪ ಬೆಳಗಿದಾಗ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಸಿಗುತ್ತದೆ. ಮನಸ್ಸಿಗೆ ಆವರಿಸಿದ ಕತ್ತಲು, ಮಬ್ಬು ದೂರಾಗಿ ಬೆಳಕಿನ ಜ್ವಾಲೆ ಮನದಲ್ಲಿ ಪಸರಿಸುತ್ತದೆ. ಮನದಲ್ಲಿನ ಆತಂಕ, ಭಯದ ಛಾಯೆಯು ದೀಪವು ನಿಧಾನಕ್ಕೆ ಉರಿದು ಪ್ರಜ್ವಲಿಸುದಂತೆ ತಾನಾಗಿಯೇ ಹಿಂದೆ ಸರಿಯುತ್ತದೆ. ಮನಸ್ಸಿಗೆ ಒಂದು ರೀತಿಯ ಸಾಮಾಧಾನ, ನೆಮ್ಮದಿ ಸಿಗುತ್ತದೆ.
ಒತ್ತಡ ನಿವಾರಣೆ
ಕತ್ತಲೆಯು ಮನಸ್ಸಿನಲ್ಲಿ ಆತಂಕದ ಜೊತೆಗೆ ಒತ್ತಡವನ್ನು ಹುಟ್ಟು ಹಾಕುತ್ತದೆ. ಆದರೆ ಒಮ್ಮೆ ಬೆಳಕು ಮೂಡಿತು ಎಂದರೆ ಒತ್ತಡವು ನಿಧಾನಕ್ಕೆ ಮಂಜಿ ಕರಗುತ್ತದೆ.
ರಿಲ್ಯಾಕ್ಸ್ ಭಾವನೆ
ಕತ್ತಲೆಯಲ್ಲಿ ಇದ್ದಾಗ ಮನೆಯಲ್ಲಿ ಅಥವಾ ಮನಸ್ಸಿನಲ್ಲಿ ಒಂದು ರೀತಿ ಗೊಂದಲ, ಎಲ್ಲೂ ಸಿಕ್ಕಿ ಹಾಕಿಕೊಂಡತೆ ಅನುಭವ ಆಗುವುದು ಸಹಜ. ಆದರೆ ಒಮ್ಮೆ ಬೆಳಕು ಹರಡಿದರೆ ಮನಸ್ಸಿನಲ್ಲಿರುವ ಎಲ್ಲಾ ದುಗುಡ, ಭಾರವು ತಾನಾಗಿಯೇ ಹೊರಟು ಹೋಗಿ ರಿಲ್ಯಾಕ್ಸ್ ಭಾವನೆ ಮೂಡುತ್ತದೆ.
ವಿಶೇಷ ಶಕ್ತಿ
ದೀಪ ತರಂಗಗಳು ಕೋಣೆ ಅಥವಾ ಮನೆಯನ್ನು ಆವರಿಸಿದಂತೆ ವಿಶೇಷವಾದ ಶಕ್ತಿಯೊಂದು ಮನಸ್ಸಿನಲ್ಲಿ ಆವರಿಸಿದಂತೆ ಭಾವನೆ ಮೂಡುವುದು ಸುಳ್ಳಲ್ಲ. ಈ ವಿಶೇಷ ಶಕ್ತಿಯು ನಮ್ಮಲ್ಲಿ ನಮಗೆ ಅರಿವಾಗದಂತೆ ಆವರಿಸುವ ಭಾವವಾಗಿರುತ್ತದೆ.
ಆಧ್ಯಾತ್ಮ ಭಾವ
ಬೆಳಕು ಎಂದರೆ ಆಧ್ಯಾತ್ಮ, ದೀಪ ಬೆಳಗಿದಾಗ ನಮ್ಮಲ್ಲಿ ಆಧಾತ್ಮ ಭಾವ ವೃದ್ಧಿಯಾಗುತ್ತದೆ. ದೀಪದ ತರಂಗಗಳು ನಮ್ಮ ಸುತ್ತಲೂ ದೈವಿಕ ಭಾವನೆಯನ್ನು ಹುಟ್ಟು ಹಾಕುತ್ತವೆ.