ಗುರು-ರಾಹುವಿನ ಪರಸ್ಪರ ದೃಷ್ಟಿ: ಅಡ್ಡಿ ಆತಂಕ ಇರಲ್ಲ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇರುವ ಪ್ರಯೋಜನಗಳು
ಗುರು ಮತ್ತು ರಾಹು ಪರಸ್ಪರ ದೃಷ್ಟಿಗೆ ರಾಶಿಗಳು ಸಾಕ್ಷಿಯಾಗಲಿದೆ. ಈ 2 ಗ್ರಹಗಳು ಪರಸ್ಪರ ದೃಷ್ಟಿ ಯಾಗ ನಡೆಯುತ್ತವೆ ಮತ್ತು ಇದರಿಂದ ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಏನೆಲ್ಲಾ ಪ್ರಯೋಜಗಳಿವೆ ಎಂಬುದನ್ನು ತಿಳಿಯಿರಿ.

ಗುರು ಗ್ರಹವು 2025ರ ಮೇ 14 ರಂದು ವೃಷಭ ರಾಶಿಯಿಂದ ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ರಾಹುವು 2025 ರ ಮೇ 18 ರ ಭಾನುವಾರದಂದು ಮೀನ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಅವಧಿಯಲ್ಲಿ ಗುರು ಮತ್ತು ರಾಹುಗ್ರಹಗಳ ನಡುವೆ ಪರಸ್ಪರ ದೃಷ್ಟಿ ಇರಲಿದೆ. 2025ರ ಅಕ್ಟೋಬರ್ 18 ರವರೆಗೆ ಈ ದೃಷ್ಟಿಯು ಮುಂದುವರೆಯುತ್ತದೆ. ಈ ಅವಧಿಯಲ್ಲಿ ಪ್ರತಿಯೊಂದು ರಾಶಿಯೂ ವಿಶಿಷ್ಟವಾದ ಫಲಗಳನ್ನು ಪಡೆಯುತ್ತವೆ. ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಇರುವ ಫಲಾಫಲಗಳನ್ನು ಇಲ್ಲಿ ನೀಡಲಾಗಿದೆ.
ಸಿಂಹ ರಾಶಿ
ಪುರುಷರಾಗಲಿ ಅಥವಾ ಸ್ತ್ರೀಯರಾಗಲಿ ಮೊದಲ ಆದ್ಯತೆಯನ್ನು ಮುಖ ಸೌಂದರ್ಯಕ್ಕೆ ನೀಡುತ್ತಾರೆ. ಸಭೆ ಸಮಾರಂಭಗಳಲ್ಲಿ ನಿಮಗೆ ವಿಶೇಷವಾದ ಪ್ರಾತಿನಿಧ್ಯ ದೊರೆಯುತ್ತದೆ. ನಿಮ್ಮ ಮಾತು ಮತ್ತು ನಡವಳಿಕೆಯಿಂದ ಎಲ್ಲರನ್ನು ಆಕರ್ಷಿಸುವಿರಿ. ಯಾವುದೇ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಸ್ವಾಭಿಮಾನದ ಜೀವನ ನಡೆಸುವಿರಿ. ಉಸಿರಿಗೆ ಸಂಬಂಧಿಸಿದ ತೊಂದರೆ ಉಂಟಾಗುತ್ತದೆ. ನಿಮ್ಮ ಪಾಲಿನ ಕೆಲಸ ಕಾರ್ಯಗಳು ಪ್ರಾಮಾಣಿಕತೆಯಿಂದ ಪೂರೈಸುವಿರಿ. ದಾಂಪತ್ಯ ಜೀವನ ಸುಖ ಶಾಂತಿಯಿಂದ ಕೂಡಿರುತ್ತದೆ. ಬೇಗನೆ ಕೋಪ ಬರುತ್ತದೆ. ಕೋಪಗೊಂಡಾಗ ಜನರಿಂದ ದೂರವಿದ್ದು ಏಕಾಂಗಿಯಾಗಿ ಇರುವಿರಿ. ನಿಮ್ಮಿಂದ ಬೇರೆಯವರಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳುವಿರಿ. ಯಾವುದೇ ವಿಚಾರಕ್ಕೆ ಬೇರೆಯವರನ್ನು ಆಶ್ರಯಿಸುವುದಿಲ್ಲ. ಬೇರೆಯವರ ಪ್ರಭಾವ ಅಥವಾ ಒತ್ತಡಕ್ಕೆ ಮಣಿಯುವುದಿಲ್ಲ. ಸುಲಭವಾಗಿ ದೊರೆಯುವ ಅವಕಾಶಗಳನ್ನು ನಯವಾಗಿ ತಿರಸ್ಕರಿಸುವಿರಿ. ನಿಮ್ಮ ಪ್ರತಿಭೆಯ ಬಗ್ಗೆ ಅಪಾರ ವಿಶ್ವಾಸ ಇರುತ್ತದೆ.
ಕನ್ಯಾ ರಾಶಿ
ಮಾತಿನಲ್ಲಿ ಶಾಂತಿಯನ್ನು ಭೋದಿಸುವಿರಿ ಆದರೆ ಬೇಗನೆ ಕೋಪಗೊಳ್ಳುವಿರಿ. ನಿಮ್ಮಲ್ಲಿ ಸಂಕೋಚದ ಪ್ರಕೃತಿ ಇರುತ್ತದೆ. ಆದರೆ ಎಲ್ಲರೊಂದಿಗೆ ಸ್ನೇಹ ಪ್ರೀತಿಯಿಂದ ಬಾಳುವಿರಿ. ಮನೆತನದ ಹಿರಿಮೆಯನ್ನು ಸಾರಲು ಕಾರ್ಯಕ್ರಮಗಳನ್ನು ಆಯೋಜಿಸುವಿರಿ. ನಿಮ್ಮಲ್ಲಿರುವ ಜಾಣ್ಮೆಯನ್ನು ಎಲ್ಲರೂ ಮೆಚ್ಚುತ್ತಾರೆ. ಬೇರೆಯವರು ಸುಲಭವಾಗಿ ನಿಮ್ಮ ಪ್ರಭಾವಕ್ಕೆ ಒಳಗಾಗುತ್ತಾರೆ. ಉದ್ಯೋಗದಲ್ಲಿ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳಿಗೆ ನೆಚ್ಚಿನ ವ್ಯಕ್ತಿಯಾಗುವಿರಿ. ಸಮಾಜದ ಸಂಘ ಸಂಸ್ಥೆಗಳ ನಿರ್ವಹಣೆಯನ್ನು ಒಪ್ಪಿಕೊಳ್ಳುವಿರಿ. ಮಕ್ಕಳಿಗೆ ಪೂರ್ಣ ಸ್ವಾತಂತ್ರ್ಯ ನೀಡುವಿರಿ. ನಿಷ್ಠೆಯಿಂದ ನಿಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುವಿರಿ. ಬಾಳ ಸಂಗಾತಿಯೊಂದಿಗೆ ಸಂತೋಷದಿಂದ ಬಾಳುವಿರಿ. ಮೂತ್ರಕ್ಕೆ ಸಂಬಂಧಪಟ್ಟ ದೋಷವಿರುತ್ತದೆ. ಸಮಯ ವ್ಯರ್ಥ ಮಾಡದೆ ಯಾವುದಾದರೂ ಒಂದು ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಮಾಡುವ ತಪ್ಪನ್ನು ಒಪ್ಪಿಕೊಳ್ಳುವಿರಿ. ನಿಮ್ಮದಲ್ಲದ ವಿಚಾರಗಳಲ್ಲಿ ವಾದ ವಿವಾದದಲ್ಲಿ ತೊಡಗುವಿರಿ. ಕುಟುಂಬದಲ್ಲಿನ ವಿಚಾರಗಳಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರವನ್ನು ಎಲ್ಲರು ಒಪ್ಪುತ್ತಾರೆ. ಒಮ್ಮೆ ತೆಗೆದುಕೊಳ್ಳುವ ನಿರ್ಧಾರಗಳಿಗೆ ಬದ್ಧರಾಗಿರಲು ಪ್ರಯತ್ನಿಸಿ.
ತುಲಾ ರಾಶಿ
ನಿಮ್ಮ ಸುತ್ತಮುತ್ತ ಸದಾ ಸ್ನೇಹಿತರ ಗುಂಪು ಇರುತ್ತದೆ. ನಿಮ್ಮಲ್ಲಿ ಸಂಕೋಚದ ಮನೋಭಾವನೆ ಇರುತ್ತದೆ. ಜೀವನದಲ್ಲಿ ಯಾವುದೇ ಅಡ್ಡಿ ಆತಂಕಗಳು ಎದುರಾಗುವುದಿಲ್ಲ. ಸುಲಭವಾಗಿ ಬೇರೆಯವರ ತೀರ್ಮಾನಗಳನ್ನು ಒಪ್ಪಿಕೊಳ್ಳುವುದಿಲ್ಲ. ಕುಟುಂಬದಲ್ಲಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ. ಸ್ವಾಭಿಮಾನದಿಂದ ಕೆಲಸ ಕಾರ್ಯಗಳಲ್ಲಿ ನಿರ್ತರಾಗುವಿರಿ. ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಮನರಂಜನ ಕಾರ್ಯಕ್ರಮಗಳನ್ನು ಆಯೋಜಿಸುವಿರಿ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಕಷ್ಟದಲ್ಲಿ ಇದ್ದವರ ಬಗ್ಗೆ ಅನುಕಂಪ ತೋರುವಿರಿ. ಆತುರದ ನಿರ್ಧಾರಗಳಿಗೆ ಮನಸೋಲುವಿರಿ. ಬೇರೆಯವರ ವಾದ ವಿವಾದಗಳಿಂದ ದೂರ ಉಳಿಯುವಿರಿ. ಬಾಯಿ ಅಥವಾ ಗಂಟೆಲಿಗೆ ಸಂಬಂಧಪಟ್ಟ ದೋಷವು ನಿಮಗಿರುತ್ತದೆ. ಗಂಟಲಲ್ಲಿ ಊತಾ ಕಂಡು ಬರಬಹುದು. ಗುರು ಹಿರಿಯರ ಸಲಹೆ ಸೂಚನೆಯಿಂದ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ನಿಮ್ಮ ಮನಸ್ಸಿನಲ್ಲಿ ಆಸುರಕ್ಷಿತ ಭಾವನೆ ಇರುತ್ತದೆ. ಜಗಳಕ್ಕೆ ಆಸ್ಪದ ನೀಡುವುದಿಲ್ಲ. ಶಾಂತಿ ಸಂಧಾನಗಳಿಂದ ಎದುರಾಗುವ ತೊಂದರೆಯನ್ನು ಬಗೆಹರಿಸುವಿರಿ.
ವೃಶ್ಚಿಕ ರಾಶಿ
ನಿಮ್ಮಲ್ಲಿ ಕರುಣೆಯ ಮನೋಭಾವನೆ ಇರುತ್ತದೆ. ಅತಿಯಾದ ಕೋಪವು ಇರುತ್ತದೆ. ಹಠದಿಂದ ಆರಂಭಿಸಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಬೇರೆಯವರ ಮನಸ್ಸನ್ನು ಅರ್ಥಮಾಡಿಕೊಳ್ಳುವುದಿಲ್ಲ. ಬೇರೆಯವರ ಸಲಹೆ ಸೂಚನೆಯನ್ನು ಪಾಲಿಸುವುದಿಲ್ಲ. ನಿಮ್ಮ ಮನದ ಭಾವನೆಗಳನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಏಕಾಂಗಿತನವನ್ನು ಇಷ್ಟಪಡುವಿರಿ. ಹಣ ಕಾಸಿನ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಸುಖ ಸಂತೃಪ್ತಿಯ ಜೀವನವನ್ನು ನಡೆಸುವಿರಿ. ಬೇರೆಯವರನ್ನು ನಿಮ್ಮ ಪ್ರಭಾವಕ್ಕೆ ಮಣಿಯುವಂತೆ ಮಾಡುವಿರಿ. ದಾಂಪತ್ಯ ಜೀವನದಲ್ಲಿ ಸುಖ ಸಂತೋಷಗಳು ನೆಲೆಸಿರುತ್ತವೆ. ಕುಟುಂಬದ ಒಳಿತಿಗಾಗಿ ಯಾವುದೇ ತ್ಯಾಗವನ್ನು ಮಾಡಬಲ್ಲಿರಿ. ಸಮಯ ಸಂದರ್ಭಕ್ಕೆ ತಕ್ಕಂತೆ ವರ್ತಿಸುವಿರಿ. ಉಷ್ಣದ ತೊಂದರೆ ನಿಮಗಿರುತ್ತದೆ. ಆಹಾರ ಸೇವನೆಯ ಬಗ್ಗೆ ಎಚ್ಚರಿಕೆ ವಹಿಸಿ. ಆತ್ಮೀಯರಿಗೆ ಸಹಾಯ ಹಸ್ತ ನೀಡುವಿರಿ. ನಿಮ್ಮ ಮನಸ್ಸಿಗೆ ಸರಿ ಎನಿಸುವ ಕೆಲಸಗಳನ್ನು ಆರಂಭಿಸುವಿರಿ. ಆತ್ಮೀಯರನ್ನು ಅನುಮಾನದ ದೃಷ್ಟಿಯಿಂದ ಕಾಣುವಿರಿ. ಗೃಹಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).