ಗುರು-ರಾಹುವಿನ ಪರಸ್ಪರ ದೃಷ್ಟಿ: ಹಣಕ್ಕೆ ಕೊರತೆ ಇರಲ್ಲ; ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಇರುವ ಫಲಾಫಲಗಳು
ಗುರು ಮತ್ತು ರಾಹು ಪರಸ್ಪರ ದೃಷ್ಟಿಗೆ ರಾಶಿಗಳು ಸಾಕ್ಷಿಯಾಗಲಿದೆ. ಈ 2 ಗ್ರಹಗಳು ಪರಸ್ಪರ ದೃಷ್ಟಿ ಯಾಗ ನಡೆಯುತ್ತವೆ ಮತ್ತು ಇದರಿಂದ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಏನೆಲ್ಲಾ ಪ್ರಯೋಜಗಳಿವೆ ಎಂಬುದನ್ನು ತಿಳಿಯಿರಿ.

ಗುರು ಗ್ರಹವು 2025ರ ಮೇ 14 ರಂದು ವೃಷಭ ರಾಶಿಯಿಂದ ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ರಾಹುವು 2025 ರ ಮೇ 18 ರ ಭಾನುವಾರದಂದು ಮೀನ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಅವಧಿಯಲ್ಲಿ ಗುರು ಮತ್ತು ರಾಹುಗ್ರಹಗಳ ನಡುವೆ ಪರಸ್ಪರ ದೃಷ್ಟಿ ಇರಲಿದೆ. 2025ರ ಅಕ್ಟೋಬರ್ 18 ರವರೆಗೆ ಈ ದೃಷ್ಟಿಯು ಮುಂದುವರೆಯುತ್ತದೆ. ಈ ಅವಧಿಯಲ್ಲಿ ಪ್ರತಿಯೊಂದು ರಾಶಿಯೂ ವಿಶಿಷ್ಟವಾದ ಫಲಗಳನ್ನು ಪಡೆಯುತ್ತವೆ. ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಇರುವ ಫಲಾಫಲಗಳನ್ನು ಇಲ್ಲಿ ನೀಡಲಾಗಿದೆ.
ಧನು ರಾಶಿ
ಸದಾ ಸಂತೋಷ ಹಂಚುವ ನಿಮ್ಮ ವ್ಯಕ್ತಿತ್ವ ಎಲ್ಲರ ಮೆಚ್ಚುಗೆ ಗಳಿಸುತ್ತದೆ. ಬರವಣಿಗೆಯಲ್ಲಿ ಆಸಕ್ತಿ ಮೂಡುತ್ತದೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುವಿರಿ. ದೀರ್ಘಕಾಲದ ಪ್ರಯಾಣವನ್ನು ಮಾಡುವಿರಿ. ಶೀಘ್ರವಾಗಿ ಕೋಪಗೊಳ್ಳುವಿರಿ. ಆದರೆ ಬಹುಕಾಲ ನಿಲ್ಲುವುದಿಲ್ಲ. ಪ್ರಾಮಾಣಿಕತೆಯಿಂದ ನಿಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುವಿರಿ. ಸ್ವಂತ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುವಿರಿ. ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಸೋಲಿನಲ್ಲಿಯೂ ಗೆಲುವನ್ನು ಕಾಣುವ ಬುದ್ಧಿವಂತಿಕೆ ಇರುತ್ತದೆ. ಬೇರೆಯವರ ಮಾತನ್ನು ಅಥವಾ ತೀರ್ಮಾನವನ್ನು ಒಪ್ಪುವುದಿಲ್ಲ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ವಯಸ್ಸಿನ ಅಂತರವಿಲ್ಲದೆ ಎಲ್ಲರನ್ನೂ ಗೌರವಿಸುವಿರಿ. ಅಜೀರ್ಣದ ತೊಂದರೆ ನಿಮ್ಮನ್ನು ಬಾಧಿಸುತ್ತದೆ. ಆದಾಯದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ನಿಮ್ಮ ನೆಚ್ಚಿನ ಕೆಲಸ ಕಾರ್ಯಗಳು ಸುಲಭವಾಗಿ ಈಡೇರಲಿವೆ. ದೊಡ್ಡ ದೊಡ್ಡ ಕೆಲಸ ಕಾರ್ಯಗಳನ್ನು ಬೇಜವಾಬ್ದಾರಿಯಿಂದ ಮಾಡುವಿರಿ. ಇದರಿಂದ ಪೂರ್ಣ ಪ್ರಮಾಣದ ಯಶಸ್ಸು ದೊರೆಯುವುದಿಲ್ಲ.
ಮಕರ ರಾಶಿ
ಆದಾಯದಲ್ಲಿ ಮಧ್ಯಮ ಗತಿಯ ಪ್ರಗತಿ ಕಂಡು ಬರುತ್ತದೆ. ಆದರೆ ಹಣಕಾಸಿನ ಕೊರತೆ ಇರುವುದಿಲ್ಲ. ಅತಿಯಾದ ಶ್ರೀಮಂತಿಕೆ ಇಷ್ಟಪಡದೆ ಸರಳವಾದ ಜೀವನ ನಡೆಸುವಿರಿ. ಅಸಾಧಾರಣ ಕೋಪವಿದ್ದರೂ ಮೃದುವಾದ ಮನಸ್ಸಿರುತ್ತದೆ. ಬೇರೆಯವರನ್ನು ಸುಲಭವಾಗಿ ನಂಬುವಿರಿ. ವಿರೋಧಿಗಳ ಜೊತೆಗೂ ಸ್ನೇಹವನ್ನು ಬೆಳೆಸುವಿರಿ. ಆತ್ಮವಿಶ್ವಾಸದ ಕೊರತೆ ಕಂಡು ಬರುತ್ತದೆ. ಪ್ರಾಮಾಣಿಕತೆಗೆ ಉತ್ತಮ ಉದಾಹರಣೆ ಆಗುವಿರಿ. ಉದ್ಯೋಗದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಇದ್ದರೂ ನಿರೀಕ್ಷಿಸಿದ ಸ್ಥಾನಮಾನ ದೊರೆಯುವುದಿಲ್ಲ. ನಿಮ್ಮನ್ನು ನಂಬಿದವರಿಗೆ ಮೋಸ ಮಾಡುವುದಿಲ್ಲ. ಶೀತದ ತೊಂದರೆ ಇರಲಿದೆ. ಅವಿವಾಹಿತರಿಗೆ ಸ್ನೇಹಿತರ ಸಹಾಯದಿಂದ ವಿವಾಹ ನಿಷ್ಕರ್ಷೆಯಾಗುತ್ತದೆ. ಪ್ರತಿಯೊಂದು ವಿಚಾರದಲ್ಲಿಯೂ ಆತುರದ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಅಧಿಕಾರಪ್ರಿಯರು. ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ಮನಸ್ಸು ಒಳ್ಳೆಯದಾದರೂ ಮಾತಿನಿಂದ ತೊಂದರೆಗೆ ಒಳಗಾಗುವಿರಿ. ಗಂಭೀರವಾದ ಪರಿಸ್ಥಿತಿಯಲ್ಲಿಯಲ್ಲಿಯೂ ಪರಿಪಕ್ವ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಕುಟುಂಬದ ಜವಾಬ್ದಾರಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಬೇರೆಯವರ ಹಣಕಾಸಿನ ವಿಚಾರದಲ್ಲಿ ಪಾಲ್ಗೊಳ್ಳುವಿರಿ.
ಕುಂಭ ರಾಶಿ
ನಿಮ್ಮ ರೀತಿ ನೀತಿಗಳ ಬಗ್ಗೆ ಬೇರೆಯವರಿಗೆ ಕುತೂಹಲವಿರುತ್ತದೆ. ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಜನ ಬಲು ವಿರಳ. ನಿಮ್ಮ ಯಶಸ್ಸನ್ನು ಕಂಡು ಅಸೂಯೆ ಪಡುವ ಜನರು ಹೆಚ್ಚುತ್ತಾರೆ. ಸ್ವಂತ ಕೆಲಸ ಕಾರ್ಯಗಳು ಪೂರ್ಣಗೊಳ್ಳುವವರೆಗೂ ಅದರ ಬಗ್ಗೆ ಬೇರೆಯವರೊಂದಿಗೆ ಚರ್ಚಿಸಬೇಡಿ. ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳು ದೊರೆಯಲಿವೆ. ಮಾನಸಿಕ ಒತ್ತಡವಿರುತ್ತದೆ. ನಿಮ್ಮದಲ್ಲದ ವಿಚಾರಗಳಿಗೆ ಮಹತ್ವ ನೀಡುವುದಿಲ್ಲ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸುಲಭವಾಗಿ ಎದುರಿಸುವಿರಿ. ಸೊಗಸಾದ ಮಾತಿನಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ನಾಚಿಕೆ ಸ್ವಭಾವವಿರುತ್ತದೆ. ಬೇರೆಯವರೊಂದಿಗೆ ಸುಲಭವಾಗಿ ಹೊಂದಿಕೊಂಡು ಬಾಳುವುದಿಲ್ಲ. ಆವಿಷ್ಕಾರ ಮನೋಭಾವನೆ ಕಂಡುಬರುತ್ತದೆ. ಹೊಸ ರೀತಿಯ ಜೀವನ ಮತ್ತು ಜನರನ್ನು ಎದುರು ನೋಡುವಿರಿ. ಕುಟುಂಬದ ಮತ್ತು ಉದ್ಯೋಗದ ಮೇಲೆ ನಿಯಂತ್ರಣ ಸಾಧಿಸುವಿರಿ. ಎಲ್ಲರನ್ನೂ ಒಂದೇ ಭಾವನೆಯಿಂದ ಕಾಣುವಿರಿ. ನಿಮ್ಮ ಮನಸ್ಸನ್ನು ಬದಲಿಸುವುದು ಸುಲಭದ ಮಾತಲ್ಲ.
ಮೀನ ರಾಶಿ
ಮೃದುವಾದ ಮಾತಿನಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ವಿಶೇಷ ಸ್ಥಾನ ಲಭಿಸುತ್ತದೆ. ನಿಮ್ಮಲ್ಲಿ ಜನಾಕರ್ಷಕ ಗುಣವಿರುತ್ತದೆ. ದಂಪತಿ ನಡುವೆ ಉನ್ನತ ಮಟ್ಟದ ಪ್ರೀತಿ ವಿಶ್ವಾಸ ಇರಲಿದೆ. ನಿಮ್ಮ ಮನಸ್ಸಿನ ಆಸೆ ಆಕಾಂಕ್ಷಿಗಳು ಆತ್ಮೀಯರ ಸಹಾಯದಿಂದ ಈಡೇರಲಿದೆ. ಯಾವುದಾದರೂ ಒಂದು ಚಿಂತೆ ನಿಮಗಿರುತ್ತದೆ. ಉತ್ತಮ ಆದಾಯವಿದ್ದರೂ ಸರಿ ಸಮಾನವಾದ ಖರ್ಚು ವೆಚ್ಚಗಳಿರುತ್ತವೆ. ಸಮಾಜದಲ್ಲಿ ಉನ್ನತ ಗೌರವ ಲಭಿಸುತ್ತದೆ. ಸಂಗೀತ ನಾಟ್ಯದಲ್ಲಿ ಉತ್ತಮ ಅಭಿರುಚಿ ಬೆಳೆಯುತ್ತದೆ. ಸ್ವಾರ್ಥದ ಮನೋಭಾವನೆ ಇರುವುದಿಲ್ಲ. ಆತ್ಮೀಯರ ಒಳಿತಿಗಾಗಿ ಶ್ರಮಪಡುವಿರಿ. ಎಲ್ಲರೊಂದಿಗೆ ಮನಬಿಚ್ಚಿ ಮಾತನಾಡುವುದಿಲ್ಲ. ವಾದ ವಿವಾದದ ಸನ್ನಿವೇಶಗಳಲ್ಲಿ ಮೌನವಹಿಸುವಿರಿ. ಬೇರೆಯವರಿಗೆ ಮಾರ್ಗದರ್ಶನ ಮಾಡುವುದಿಲ್ಲ. ಹೊಸ ವಿಚಾರವನ್ನು ಕಲಿಯುವ ಅಥವಾ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವಿರಿ. ಬೇರೆಯವರಿಂದ ಹಣ ಪಡೆಯುವುದಾಗಲಿ ಅಥವಾ ನೀಡುವುದರಲ್ಲಿ ತೊಂದರೆ ಎದುರಾಗುತ್ತದೆ. ಕೈಕಾಲುಗಳಲ್ಲಿ ಅಸಾಧಾರಣ ನೋವಿರುತ್ತದೆ. ದೈಹಿಕ ವ್ಯಾಯಾಮದಿಂದ ಉತ್ತಮ ಆರೋಗ್ಯ ಗಳಿಸುವಿರಿ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).