ಮೇ 18 ರಂದು ಸಿಂಹ ರಾಶಿಗೆ ಕೇತು ಪ್ರವೇಶ; ಹಣದ ಸಮಸ್ಯೆಯಿಂದ ಪರಾಗುತ್ತೀರಿ, ಮೇಷ ಸೇರಿ 4 ರಾಶಿಯವರ ಶುಭ ಫಲಿತಾಂಶಗಳಿವು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೇ 18 ರಂದು ಸಿಂಹ ರಾಶಿಗೆ ಕೇತು ಪ್ರವೇಶ; ಹಣದ ಸಮಸ್ಯೆಯಿಂದ ಪರಾಗುತ್ತೀರಿ, ಮೇಷ ಸೇರಿ 4 ರಾಶಿಯವರ ಶುಭ ಫಲಿತಾಂಶಗಳಿವು

ಮೇ 18 ರಂದು ಸಿಂಹ ರಾಶಿಗೆ ಕೇತು ಪ್ರವೇಶ; ಹಣದ ಸಮಸ್ಯೆಯಿಂದ ಪರಾಗುತ್ತೀರಿ, ಮೇಷ ಸೇರಿ 4 ರಾಶಿಯವರ ಶುಭ ಫಲಿತಾಂಶಗಳಿವು

ಕೇತು 2025 ರ ಮೇ 18ರ ಭಾನುವಾರದಂದು ಕನ್ಯಾ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಇದು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಫಲಾಫಲಗಳು ಹೀಗಿವೆ. (ಬರಹ: ಹೆಚ್ ಸತೀಶ್, ಜ್ಯೋತಿಷಿ)

ಮೇ 18 ರಂದು ಸಿಂಹ ರಾಶಿಗೆ ಕೇತು ಪ್ರವೇಶದಿಂದ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಇರುವ ಶುಭಫಲಗಳು ಇಲ್ಲಿವೆ
ಮೇ 18 ರಂದು ಸಿಂಹ ರಾಶಿಗೆ ಕೇತು ಪ್ರವೇಶದಿಂದ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಇರುವ ಶುಭಫಲಗಳು ಇಲ್ಲಿವೆ

ಪ್ರತಿಯೊಂದು ಗ್ರಹಗಳು ಪ್ರದಕ್ಷಿಣೆಯ ಮಾರ್ಗದಲ್ಲಿ ಚಲಿಸುತ್ತವೆ. ಆದರೆ ರಾಹು ಮತ್ತು ಕೇತುಗಳು ಅಪ್ರದಕ್ಷಿಣೆಯ ಮಾರ್ಗದಲ್ಲಿ ಸಂಚರಿಸುತ್ತದೆ. ರಾಹು ಮತ್ತು ಕೇತುಗಳನ್ನು ಛಾಯಾಗ್ರಹಗಳೆಂದು ಕರೆಯುತ್ತೇವೆ. ಕೇತುವು ತಾನಿರುವ ಕ್ಷೇತ್ರ ಮಾತ್ರವಲ್ಲದೆ ತಾನು ದೃಷ್ಟಿಸುವ ಭಾವಗಳಿಗೆ ಸಹ ತೊಂದರೆ ನೀಡುವ ಸಾಧ್ಯತೆಗಳಿರುತ್ತವೆ. ಕೇತುವು 2025 ರ ಮೇ ತಿಂಗಳ 18 ಭಾನುವಾರದಂದು ಕನ್ಯಾ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. 2026 ರ ನವಂಬರ್ ತಿಂಗಳ 25 ಬುಧವಾರದಂದು ಕೇತುವು ಸಿಂಹರಾಶಿಯಿಂದ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಗೋಚಾರದಲ್ಲಿನ ಯಾವುದೇ ಗ್ರಹಗಳ ಫಲಾಫಲಗಳು ಜನ್ಮಕುಂಡಲಿಯಲ್ಲಿನ ದಶಾಭುಕ್ತಿಗಳನ್ನು ಅವಲಂಭಿಸುತ್ತದೆ. ಕೇತುವಿಗೆ ಶುಭಗ್ರಹಗಳ ಸಂಯೋಗ ಅಥವಾ ದೃಷ್ಟಿ ಇದ್ದಲ್ಲಿ ಉಂಟಾಗುವ ಸಮಸ್ಯೆಗಳ ಪ್ರಮಾಣವು ಕಡಿಮೆ ಆಗುತ್ತದೆ. ಆದರೆ ಕೇತುವಿನಿಂದ ಉಂಟಾಗುವ ಸಮಸ್ಯೆಗಳು ಕ್ಷಣಮಾತ್ರ. ಉತ್ತಮ ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು ಶ್ರೀ ಗಣಪತಿಗೆ ಪೂಜೆಯನ್ನು ಸಲ್ಲಿಸಿದಲ್ಲಿ ಶುಭಫಲಗಳು ದೊರೆಯುತ್ತವೆ. ಇದರೊಂದಿಗೆ ನವನಾಗ ಸ್ತೋತ್ರದ ಪಠಣೆಯು ಮುಖ್ಯವಾಗುತ್ತದೆ.

ಕೇತುವಿನ ಅಧಿದೇವತೆ ಶ್ರೀ ಮಹಾಗಣಪತಿ. ಗಣಪತಿಗೆ ನಿರ್ವಿಘ್ನ ಗಣಪತಿ ಎಂಬ ಹೆಸರಿದೆ. ಅಂದರೆ ಕೇತುವಿನಿಂದ ಆರಂಭಿಸುವ ನಮ್ಮ ಕೆಲಸ ಕಾರ್ಯಗಳಲ್ಲಿ ಕೇವಲ ಅಡ್ಡಿ ಆತಂಕಗಳು ಉಂಟಾಗುತ್ತವೆ. ಆದ್ದರಿಂದ ನಾವು ಆತ್ಮಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಉತ್ತಮ ಪೂರ್ವಯೋಜನೆಯಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸಬಹುದು. ಮುಖ್ಯವಾಗಿ ಕೇತುವು ಭ್ರಮೆಯನ್ನು ಉಂಟು ಮಾಡುತ್ತಾನೆ. ಆದರಿಂದ ಸುತ್ತಮುತ್ತಲಿನ ಜನ ಮತ್ತು ಕೆಲಸ ಕಾರ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ಆತುರದಿಂದ ತೊಂದರೆ ಎದುರಾಗುತ್ತದೆ. ಪ್ರಸಕ್ತ ಸನ್ನಿವೇಶದಲ್ಲಿ ಕೇತುವಿನ ಸಂಚಾರದಿಂದ ಪ್ರತಿಯೊಂದು ರಾಶಿಗಳು ವಿಭಿನ್ನ ಫಲಗಳನ್ನು ಪಡೆಯುತ್ತವೆ. ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ತಿಳಿಯಿರಿ.

ಮೇಷ ರಾಶಿ

ಮಕ್ಕಳ ಬಗ್ಗೆ ಹೆಚ್ಚಿನ ನಿರೀಕ್ಷೆ ಇರುತ್ತದೆ. ಆದರೆ ಮಕ್ಕಳಿಗೆ ಸಂಬಂಧಿಸಿದೆ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆಯಲಿವೆ. ಗಂಟಲಿಗೆ ಸಂಬಂಧಪಟ್ಟ ದೋಷವಿರುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಉತ್ತಮ ಒಡನಾಟ ಬೆಳೆಸಿಕೊಳ್ಳುವುದು ಒಳ್ಳೆಯದು. ನಿಮ್ಮಲ್ಲಿರುವ ಬುದ್ಧಿ ಶಕ್ತಿಯನ್ನು ಸಮರ್ಥಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿ. ಆತುರದಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಸಣ್ಣ ಪುಟ್ಟ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಕಾಣಲಿದೆ. ಎಲ್ಲರನ್ನೂ ಸುಲಭವಾಗಿ ನಂಬುವಿರಿ. ಇದರಿಂದ ಕೆಲವೊಂದು ವಿಚಾರಗಳಲ್ಲಿ ನಿರಾಸೆ ಎದುರಿಸುವ ಸಾಧ್ಯತೆಗಳಿವೆ. ಮನದಲ್ಲಿರುವ ವಿಚಾರಗಳನ್ನು ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ. ಒಳ್ಳೆಯದು ಅಥವಾ ಕೆಟ್ಟದ್ದನ್ನು ಅರ್ಥಮಾಡಿಕೊಳ್ಳಲು ವಿಫಲರಾಗುವಿರಿ. ಉದ್ಯೋಗದಲ್ಲಿ ಸಣ್ಣಪುಟ್ಟ ಬದಲಾವಣೆಗಳು ಕಂಡುಬರುತ್ತವೆ. ಕುಟುಂಬದ ಹಿರಿತನವನ್ನು ಒಪ್ಪಿಕೊಳ್ಳುವುದಿಲ್ಲ. ತಾನಾಗಿಯೇ ದೊರೆಯುವ ಉನ್ನತ ಅಧಿಕಾರದ ಅವಕಾಶಗಳನ್ನು ತಿರಸ್ಕರಿಸುವಿರಿ. ವಿಶ್ವಾಸದಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿದು ಒಳ್ಳೆಯದು.

ಪರಿಹಾರ: ಒಂಬತ್ತು ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಸಹಾಯ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ವೃಷಭ ರಾಶಿ

ನಿಮಗೆ ಇಷ್ಟವೆನಿಸುವ ಕೆಲಸ ಕಾರ್ಯಗಳನ್ನು ಆಯ್ಕೆ ಮಾಡುವಿರಿ. ಮುಖ ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವಿರಿ. ಕುಟುಂಬಲ್ಲಿ ಗಂಭೀರದ ವಾತಾವರಣ ಇರುತ್ತದೆ. ನಿಮ್ಮ ಅತಿ ಮುಖ್ಯವಾದ ಕೆಲಸ ಕಾರ್ಯದ ನಡುವೆಯೂ ಬೇರೆಯವರಿಗೆ ಸಹಾಯ ಮಾಡುವಿರಿ. ತಾಯಿಯವರ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಕಷ್ಟದ ಸಮಯದಲ್ಲಿಯೂ ಕೆಲಸ ಕಾರ್ಯಗಳನ್ನು ನಿರ್ವಹಿಸಬಲ್ಲಿರೆಂಬ ಮನೋಭಾವನೆ ಇರುತ್ತದೆ. ಕುಟುಂಬದ ಉನ್ನತಿಗಾಗಿ ಹೆಚ್ಚಿನ ಪ್ರಯತ್ನ ಮಾಡುವಿರಿ. ಸಮಯದ ಅಭಾವದಿಂದ ಸ್ವಂತ ಕೆಲಸ ಕಾರ್ಯಗಳು ಅಪೂರ್ಣಗೊಳ್ಳುತ್ತದೆ. ಅನಾವಶ್ಯಕವಾಗಿ ಸೋದರ ಸೋದರಿಯ ನಡುವೆ ಮನಸ್ತಾಪ ಇರುತ್ತದೆ. ಕಷ್ಟ ನಷ್ಟಗಳಿಗೆ ಬೆದರುವುದಿಲ್ಲ. ಜೀವನದಲ್ಲಿ ಕ್ರಮೇಣವಾಗಿ ಪ್ರಗತಿಯನ್ನು ಕಾಣುವಿರಿ. ಧೈರ್ಯ ಸಾಹಸದ ಗುಣವಿರುತ್ತದೆ. ಏಕಾಗ್ರತೆಯಿಂದ ವಿದ್ಯಾರ್ಥಿಗಳು ಕಷ್ಟಪಟ್ಟು ಕಲಿಕೆಯಲ್ಲಿ ತೊಡಗುವರು. ನಿಮ್ಮ ಪ್ರಯತ್ನಕ್ಕೆ ತಕ್ಕಂತಹ ಫಲಿತಾಂಶಗಳು ದೊರೆಯುತ್ತವೆ. ಹಣಕಾಸಿನ ಕೊರತೆಯಿಂದ ಪಾರಾಗುವಿರಿ. ಅನಿರೀಕ್ಷಿತ ಬದಲಾವಣೆಗಳು ಯಶಸ್ಸನ್ನು ನೀಡುತ್ತದೆ.

ಪರಿಹಾರ: ಕುಟುಂಬದ ಹಿರಿಯರಿಗೆ ಮತ್ತು ಗುರುಗಳಿಗೆ ಸಹಾಯವನ್ನು ಮಾಡಿದಲ್ಲಿ ಹೆಚ್ಚಿನ ಶುಭಫಲಗಳು ದೊರೆಯಲಿವೆ.

ಮಿಥುನ ರಾಶಿ

ಹಣಕಾಸಿನ ತೊಂದರೆ ಇರುವುದಿಲ್ಲ. ಆದರೆ ಆತುರದಿಂದ ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗಲಿವೆ. ಕೌಟುಂಬಿಕ ಜೀವನದಲ್ಲಿ ಸುಖ ಸಂತೋಷ ಮನೆ ಮಾಡುತ್ತದೆ. ನಿಮ್ಮ ಆಡು ಮಾತಿಗೆ ಎಲ್ಲರೂ ಮನಸೋಲುತ್ತಾರೆ. ನಿಮ್ಮಲ್ಲಿರುವ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವ ಜನರಿರುತ್ತಾರೆ ಎಚ್ಚರಿಕೆ ಇರಲಿ. ಯಾವುದೇ ಕೆಲಸ ಕಾರ್ಯಗಳಾದರೂ ಆರಂಭದಲ್ಲಿ ಹಿನ್ನಡೆ ಉಂಟಾಗುತ್ತದೆ. ಹಠದಿಂದ ಕಾರ್ಯ ಸಾಧಿಸುವಿರಿ. ಸೋದರ ಅಥವಾ ಸೋದರಿಯ ಜೊತೆಯಲ್ಲಿ ಕೌಟುಂಬಿಕ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಆರೋಗ್ಯದಲ್ಲಿ ಸಮಸ್ಯೆ ಇರಲಿದೆ. ದೈಹಿಕ ದೌರ್ಬಲ್ಯ ಉಂಟಾಗುತ್ತದೆ. ಮನದಲ್ಲಿ ಅನಾವಶ್ಯಕ ವಿಚಾರಗಳ ಬಗ್ಗೆ ಚಿಂತೆ ಇರುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳು ನಿಮ್ಮ ಮೇಲೆ ಒತ್ತಡವನ್ನು ಹೇರುತ್ತಾರೆ. ವದಂತಿಗಳನ್ನು ನಂಬಿದರೆ, ಸಮಾಜದಲ್ಲಿನ ನಿಮ್ಮ ಕೀರ್ತಿ ಪ್ರತಿಷ್ಠೆಗೆ ಕುಂದು ಬರುತ್ತದೆ. ಹಠದ ಗುಣ ಕಡಿಮೆ ಆದಷ್ಟು ಒಳ್ಳೆಯದು.

ಪರಿಹಾರ: ಪ್ರಯಾಣದ ವೇಳೆಯಲ್ಲಿ ಯಾವುದೇ ಪದಾರ್ಥವನ್ನು ಕಳೆದುಕೊಳ್ಳಬೇಡಿ. ನಿಮ್ಮ ತಂದೆ ಅಥವಾ ತಾಯಿ ನೀಡಿರುವ ನಿಮ್ಮ ಇಷ್ಟವಾದ ವಸ್ತುವನ್ನು ಬೇರೆಯವರಿಗೆ ನೀಡಬೇಡಿರಿ. ಇದರಿಂದ ಶುಭದಿನಗಳು ನಿಮ್ಮದಾಗಲಿದೆ.

ಕಟಕ ರಾಶಿ

ಕುಟುಂಬದ ನಿರ್ವಹಣೆಗೆ ಹಣದ ಕೊರತೆ ತಲೆದೋರಲಿದೆ. ನಿಮ್ಮ ತಪ್ಪಾದ ನಿರ್ಧಾರದಿಂದ ತೊಂದರೆ ಎದುರಾಗಲಿದೆ. ಮಾನಸಿಕ ಒತ್ತಡದಿಂದ ಬಳಲುವಿರಿ. ಆರೋಗ್ಯದ ಸಮಸ್ಯೆಯು ಕಾಡಲಿದೆ. ಮಕ್ಕಳ ವಿಚಾರದಲ್ಲಿನ ನಿಮ್ಮ ನಿರೀಕ್ಷೆ ಸುಳ್ಳಾಗುತ್ತದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿಯ ಕೊರತೆ ಕಂಡು ಬರಲಿದೆ. ಆತುರದಿಂದ ನಿಮ್ಮ ಉದ್ಯೋಗದಲ್ಲಿ ಹಿನ್ನಡೆ ಸಂಭವಿಸುತ್ತೀರಿ. ಆತ್ಮೀಯರ ಮಧ್ಯ ಪ್ರವೇಶದಿಂದ ನ್ಯಾಯಯುತ ಸ್ಥಾನಮಾನ ದೊರೆಯುತ್ತದೆ. ಸಂಯಮದಿಂದ ವರ್ತಿಸಿದರೆ ಯಾವುದೇ ತೊಂದರೆ ಎದುರಾಗುವುದಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಬುದ್ಧಿ ಚಾತುರ್ಯದಿಂದ ಲಾಭಗಳಿಸುವಿರಿ. ಆತುರ ಪಡೆದ ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಅವಕಾಶಗಳು ಕಡಿಮೆಯಾಗಲಿವೆ. ಸೋಲುವ ಸಮಯದಲ್ಲಿಯೂ ಪ್ರಯತ್ನವನ್ನು ಬಿಡುವುದಿಲ್ಲ. ಯೋಚಿಸದೆ ಮಾತನಾಡುವ ಕಾರಣ ಆತ್ಮೀಯರೊಂದಿಗೆ ಮನಸ್ತಾಪ ಉಂಟಾಗುತ್ತದೆ. ಗಂಟಲು ಅಥವಾ ಮೂಗಿನ ಸಂಬಂಧ ಪಟ್ಟ ತೊಂದರೆ ಇರುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ನಿರ್ದಿಷ್ಟ ಮಟ್ಟದ ಲಾಭ ದೊರೆಯಲಿದೆ. ಮನದಲ್ಲಿ ಅಂಜಿಕಯ ಸ್ವಭಾವ ಕಂಡು ಬರಲಿದೆ.

ಪರಿಹಾರ: ಮಕ್ಕಳ ಮನದ ಆಸೆಯನ್ನು ಪೂರ್ಣಗೊಳಿಸಿದರೆ ಜೀವನದಲ್ಲಿ ಸುಲಭವಾಗಿ ಯಶಸ್ಸು ದೊರೆಯುತ್ತದೆ.

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.