ಸಿಂಹ ರಾಶಿಗೆ ಕೇತು ಪ್ರವೇಶ: ಮನದ ಆಸೆ ಈಡೇರುತ್ತೆ, ಕನ್ಯಾ, ತುಲಾ ಸೇರಿ 4 ರಾಶಿಯವರಿಗೆ ಇಷ್ಟೊಂದು ಶುಭಫಲಗಳಿವೆ
ಕೇತು 2025 ರ ಮೇ 18ರ ಭಾನುವಾರದಂದು ಕನ್ಯಾ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಇದು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಫಲಾಫಲಗಳು ಹೀಗಿವೆ.

ಪ್ರತಿಯೊಂದು ಗ್ರಹಗಳು ಪ್ರದಕ್ಷಿಣೆಯ ಮಾರ್ಗದಲ್ಲಿ ಚಲಿಸುತ್ತವೆ. ಆದರೆ ರಾಹು ಮತ್ತು ಕೇತುಗಳು ಅಪ್ರದಕ್ಷಿಣೆಯ ಮಾರ್ಗದಲ್ಲಿ ಸಂಚರಿಸುತ್ತದೆ. ರಾಹು ಮತ್ತು ಕೇತುಗಳನ್ನು ಛಾಯಾಗ್ರಹಗಳೆಂದು ಕರೆಯುತ್ತೇವೆ. ಕೇತುವು ತಾನಿರುವ ಕ್ಷೇತ್ರ ಮಾತ್ರವಲ್ಲದೆ ತಾನು ದೃಷ್ಟಿಸುವ ಭಾವಗಳಿಗೆ ಸಹ ತೊಂದರೆ ನೀಡುವ ಸಾಧ್ಯತೆಗಳಿರುತ್ತವೆ. ಕೇತುವು 2025 ರ ಮೇ ತಿಂಗಳ 18 ಭಾನುವಾರದಂದು ಕನ್ಯಾ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. 2026 ರ ನವಂಬರ್ ತಿಂಗಳ 25 ಬುಧವಾರದಂದು ಕೇತುವು ಸಿಂಹರಾಶಿಯಿಂದ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಗೋಚಾರದಲ್ಲಿನ ಯಾವುದೇ ಗ್ರಹಗಳ ಫಲಾಫಲಗಳು ಜನ್ಮಕುಂಡಲಿಯಲ್ಲಿನ ದಶಾಭುಕ್ತಿಗಳನ್ನು ಅವಲಂಭಿಸುತ್ತದೆ. ಕೇತುವಿಗೆ ಶುಭಗ್ರಹಗಳ ಸಂಯೋಗ ಅಥವಾ ದೃಷ್ಟಿ ಇದ್ದಲ್ಲಿ ಉಂಟಾಗುವ ಸಮಸ್ಯೆಗಳ ಪ್ರಮಾಣವು ಕಡಿಮೆ ಆಗುತ್ತದೆ. ಆದರೆ ಕೇತುವಿನಿಂದ ಉಂಟಾಗುವ ಸಮಸ್ಯೆಗಳು ಕ್ಷಣಮಾತ್ರ. ಉತ್ತಮ ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು ಶ್ರೀ ಗಣಪತಿಗೆ ಪೂಜೆಯನ್ನು ಸಲ್ಲಿಸಿದಲ್ಲಿ ಶುಭಫಲಗಳು ದೊರೆಯುತ್ತವೆ. ಇದರೊಂದಿಗೆ ನವನಾಗ ಸ್ತೋತ್ರದ ಪಠಣೆಯು ಮುಖ್ಯವಾಗುತ್ತದೆ.
ಕೇತುವಿನ ಅಧಿದೇವತೆ ಶ್ರೀ ಮಹಾಗಣಪತಿ. ಗಣಪತಿಗೆ ನಿರ್ವಿಘ್ನ ಗಣಪತಿ ಎಂಬ ಹೆಸರಿದೆ. ಅಂದರೆ ಕೇತುವಿನಿಂದ ಆರಂಭಿಸುವ ನಮ್ಮ ಕೆಲಸ ಕಾರ್ಯಗಳಲ್ಲಿ ಕೇವಲ ಅಡ್ಡಿ ಆತಂಕಗಳು ಉಂಟಾಗುತ್ತವೆ. ಆದ್ದರಿಂದ ನಾವು ಆತ್ಮಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಉತ್ತಮ ಪೂರ್ವಯೋಜನೆಯಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸಬಹುದು. ಮುಖ್ಯವಾಗಿ ಕೇತುವು ಭ್ರಮೆಯನ್ನು ಉಂಟು ಮಾಡುತ್ತಾನೆ. ಆದರಿಂದ ಸುತ್ತಮುತ್ತಲಿನ ಜನ ಮತ್ತು ಕೆಲಸ ಕಾರ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ಆತುರದಿಂದ ತೊಂದರೆ ಎದುರಾಗುತ್ತದೆ. ಪ್ರಸಕ್ತ ಸನ್ನಿವೇಶದಲ್ಲಿ ಕೇತುವಿನ ಸಂಚಾರದಿಂದ ಪ್ರತಿಯೊಂದು ರಾಶಿಗಳು ವಿಭಿನ್ನ ಫಲಗಳನ್ನು ಪಡೆಯುತ್ತವೆ. ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ತಿಳಿಯಿರಿ.
ಸಿಂಹ ರಾಶಿ
ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಕುಟುಂಬದಲ್ಲಿ ಪ್ರೀತಿ ವಿಶ್ವಾಸವು ಕಂಡು ಬರುತ್ತದೆ. ತಪ್ಪು ಮಾಡಿದವರನ್ನು ಶಿಕ್ಷಿಸದೆ ಸರಿದಾರಿಗೆ ತರಲು ಪ್ರಯತ್ನಿಸುವಿರಿ. ಉದ್ಯೋಗದಲ್ಲಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಆತ್ಮವಿಶ್ವಾಸದ ಕೊರತೆ ನಿಮ್ಮನ್ನು ಕಾಡುತ್ತದೆ. ಬೇರೆಯವರ ಮಾರ್ಗದರ್ಶನವನ್ನು ಒಪ್ಪುವುದಿಲ್ಲ. ಮನೆತನದ ಹಿರಿಯರಿಂದ ಆರ್ಥಿಕ ಸಹಾಯ ದೊರೆಯುತ್ತದೆ. ಮನದಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ. ಇದರಿಂದಾಗಿ ಹಣಕಾಸಿನ ಬಗ್ಗೆ ಹೆಚ್ಚಿನ ಆಸೆ ಅಥವಾ ಆಸಕ್ತಿ ಇರುವುದಿಲ್ಲ. ಕೆಲಸ ಕಾರ್ಯಗಳಲ್ಲಿ ತಡವಾಗಿ ನಿರೀಕ್ಷಿಸಿದ ಯಶಸ್ಸು ದೊರೆಯುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ವಾದ ವಿವಾದಗಳು ಉಂಟಾಗುತ್ತವೆ. ಧೈರ್ಯಕ್ಕೆ ಕೊರತೆ ಇರುವುದಿಲ್ಲ. ಇದರಿಂದಾಗಿ ಜೀವನದಲ್ಲಿ ಸೋಲುವುದಿಲ್ಲ
ಪರಿಹಾರ: ಕಪ್ಪು ಮತ್ತು ಬಿಳಿ ಮಿಶ್ರ ಬಣ್ಣದ ನಾಯಿಗೆ ಆಹಾರ ನೀಡಿದರೆ ಜೀವನದ ಸಮಸ್ಯೆಗಳು ಮರೆಯಾಗುತ್ತವೆ.
ಕನ್ಯಾ ರಾಶಿ
ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಇರುತ್ತದೆ. ನಿರೀಕ್ಷಿಸಿದಂತೆ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಕಣ್ಣಿಗೆ ಸಂಬಂಧಿಸಿದ ತೊಂದರೆಯೂ ನಿಮ್ಮನ್ನು ಕಾಡುತ್ತದೆ. ತಪ್ಪಿಲ್ಲದೆ ಹೋದರೂ ಮಾಡುವ ಕೆಲಸ ಕಾರ್ಯಗಳು ದಾರಿತಪ್ಪುತ್ತವೆ. ಅನಾವಶ್ಯಕವಾಗಿ ತೆಗೆದುಕೊಳ್ಳುವ ತೀರ್ಮಾನಗಳನ್ನು ಬದಲಿಸುವಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಖರ್ಚು ವೆಚ್ಚಗಳ ಮೇಲೆ ಹಿಡಿತ ಸಾಧಿಸಲು ವಿಫಲರಾಗುವಿರಿ. ದೂರದ ಊರಿಗೆ ಪ್ರಯಾಣ ಬೆಳೆಸುವ ಆಸೆ ಈಡೇರುವುದಿಲ್ಲ. ಕುಟುಂಬದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಅವಲಂಬಿಸಬೇಕಾಗುತ್ತದೆ. ಆದರೆ ಉತ್ತಮ ಒಡನಾಟ ಕಂಡು ಬರುವುದಿಲ್ಲ. ದಾಂಪತ್ಯ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಬಹುಕಾಲ ನಿಲ್ಲುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಹಣವನ್ನು ವಿನಿಯೋಗಿಸಬೇಡಿ. ಗೃಹಿಣಿಯರ ಆರೋಗ್ಯದಲ್ಲಿ ತೊಂದರೆ ಕಾಣಲಿದೆ. ಆತ್ಮವಿಶ್ವಾಸವನ್ನು ಬೆಳೆಸಿಕೊಂಡಲ್ಲಿ ಜೀವನ ಸಮಸ್ಯೆಗಳು ದೂರವಾಗುತ್ತವೆ.
ಪರಿಹಾರ: ಕಾರ್ಮಿಕ ಕೇಂದ್ರಕ್ಕೆ ಕಪ್ಪು ಬಿಳಿ ಮಿಶ್ರಿತ ಬಣ್ಣದ ನೆಲಹಾಸನ್ನು ನೀಡುವುದರಿಂದ ಸಮಸ್ಯೆಗಳು ಕಡಿಮೆಯಾಗುತ್ತವೆ.
ತುಲಾ ರಾಶಿ
ನಿಮ್ಮ ಸ್ವಂತ ಕೆಲಸ ಕಾರ್ಯಗಳಲ್ಲಿ ಭಾಗಶಃ ಯಶಸ್ಸನ್ನು ಗಳಿಸುವುದು ಸಾಧ್ಯವಾಗುತ್ತದೆ. ಮಕ್ಕಳ ವಿಚಾರದಲ್ಲಿ ಯಾವುದೇ ತೊಂದರೆ ಎದುರಾಗದು. ಮಕ್ಕಳಿಂದ ಶುಭ ಸುದ್ದಿ ಒಂದು ಬರಲಿದೆ. ಅನಿರೀಕ್ಷಿತ ಧನ ಲಾಭವಿರುತ್ತದೆ. ಹಣ ಗಳಿಕೆಯಲ್ಲಿ ನಿಮ್ಮ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗುವುದಿಲ್ಲ. ಹಿರಿಯ ಸೋದರ ಅಥವಾ ಸೋದರಿಗೆ ಉಷ್ಣದ ತೊಂದರೆ ಇರುತ್ತದೆ. ಕುಟುಂಬದ ಹಿರಿಯರ ಹಣಕಾಸಿನ ವ್ಯವಹಾರವು ನಿಧಾನಗತಿಯಲ್ಲಿ ಸಾಗುತ್ತದೆ. ವಿದ್ಯಾರ್ಥಿಗಳಿಗೆ ಶುಭವರ್ತಮಾನವೊಂದು ಬರಲಿದೆ. ವಿದ್ಯೆಗೆ ಮೀರಿದ ಬುದ್ಧಿ ಇರುತ್ತದೆ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳು ತೊಡಗುವಿರಿ. ನಿಮ್ಮ ಮನದ ವಿಚಾರಗಳನ್ನು ಬೇರೆಯವರಿಗೆ ತಿಳಿಸುವುದಿಲ್ಲ. ರಹಸ್ಯವಾಗಿ ಹಣ ಸಂಪಾದಿಸುವ ಯೋಜನೆಯನ್ನು ರೂಪಿಸುವಿರಿ. ದಾಂಪತ್ಯ ಜೀವನದಲ್ಲಿ ಕ್ಷಣಕಾಲ ಮನಸ್ತಾಪದ ಪರಿಸ್ಥಿತಿ ಎದುರಾಗುತ್ತದೆ. ಉದ್ಯೋಗದಲ್ಲಿ ಆತ್ಮೀಯರ ನೆರವಿನಿಂದ ಯಶಸ್ಸನ್ನು ಸಾಧಿಸುವಿರಿ.
ಪರಿಹಾರ: ಗೋಸೇವೆ ಅಥವಾ ಗೋಪೂಜೆಯಿಂದ ಹೆಚ್ಚಿನ ಯಶಸ್ಸನ್ನು ಗಳಿಸುವಿರಿ.
ವೃಶ್ಚಿಕ ರಾಶಿ
ಆತ್ಮಸ್ಥೈರ್ಯವು ಆತಂಕದ ಪರಿಸ್ಥಿತಿಯಲ್ಲಿಯೂ ನಿಮ್ಮನ್ನು ಕಾಪಾಡುತ್ತದೆ. ನಿಮ್ಮಲ್ಲಿ ಧೈರ್ಯ ಸಾಹಸದ ಗುಣವಿರುತ್ತದೆ. ಆತ್ಮೀಯ ಬಂದು ಒಬ್ಬರು ಬೇರೆಯವರ ಮಾತನ್ನು ನಂಬಿ ನಿಮ್ಮಿಂದ ದೂರವಾಗುತ್ತಾರೆ. ಅಪಜಯದ ನಡುವೆಯೂ ಉತ್ಸಾಹದಿಂದ ನಿಮ್ಮ ಕೆಲಸ ಕಾರ್ಯಗಳನ್ನು ಮುಂದುವರಿಸುವಿರಿ. ಕೆಲಸ ಕಾರ್ಯಗಳಲ್ಲಿ ನಿಧಾನ ಗತಿಯ ಪ್ರಗತಿ ಕಂಡು ಬರುತ್ತದೆ. ನಿಮ್ಮ ಮನದ ಆಸೆಗಳು ಈಡೇರಲಿವೆ. ಒಮ್ಮೆ ಆರಂಭಿಸಿದ ಕೆಲಸ ಕಾರ್ಯಗಳನ್ನು ಅಪೂರ್ಣಗೊಳಿಸುವುದಿಲ್ಲ. ಅಧಿಕಾರಿಗಳಾಗಿದ್ದಲ್ಲಿ ಸಹೋದ್ಯೋಗಿಗಳ ಜೊತೆ ಅಸಹನೆಯಿಂದ ವರ್ತಿಸುವಿರಿ. ಎಲ್ಲರೊಡನೆ ಸಮಾನ ಭಾವನೆ ಬೆಳೆಸಿಕೊಳ್ಳುವುದು ಒಳ್ಳೆಯದು. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಆರಂಭದಲ್ಲಿ ವಿವಾದವನ್ನು ಎದುರಿಸುವಿರಿ. ಹಠದ ಗುಣದಿಂದಾಗಿ ಕೆಲವೊಂದು ಅವಕಾಶಗಳನ್ನು ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳು ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಸಾಕು ಪ್ರಾಣಿಗಳಿಂದ ತೊಂದರೆ ಆಗಬಹುದು ಎಚ್ಚರಿಕೆಯಿಂದ ವರ್ತಿಸಿ. ಜನ್ಮಸ್ಥಳಕ್ಕೆ ಭೇಟಿ ನೀಡುವ ಆಸೆ ಈಡೇರಲಿದೆ .
ಪರಿಹಾರ: ಬೆಳ್ಳಿ ಲೋಟದಲ್ಲಿ ಜೇನುತುಪ್ಪವನ್ನು ಈಶಾನ್ಯ ದಿಕ್ಕಿನಲ್ಲಿ ಸಂಗ್ರಹಿಸಿ ಇಡಿ ಇದರಿಂದ ವಿರೋಧಿಗಳ ಸಂಖ್ಯೆ ಕಡಿಮೆಯಾಗುತ್ತದೆ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).