ಸಿಂಹ ರಾಶಿಯಲ್ಲಿ ಕೇತು ಸಂಚಾರ: ಆದಾಯವಿದ್ದರೂ ಹಣ ಉಳಿಸುವುದು ಕಷ್ಟ, ಧನು, ಮಕರ ಸೇರಿ 4 ರಾಶಿಯವರ ಫಲಾಫಲಗಳು
ಕೇತು 2025 ರ ಮೇ 18ರ ಭಾನುವಾರದಂದು ಕನ್ಯಾ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಇದು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಫಲಾಫಲಗಳು ಹೀಗಿವೆ.

ಪ್ರತಿಯೊಂದು ಗ್ರಹಗಳು ಪ್ರದಕ್ಷಿಣೆಯ ಮಾರ್ಗದಲ್ಲಿ ಚಲಿಸುತ್ತವೆ. ಆದರೆ ರಾಹು ಮತ್ತು ಕೇತುಗಳು ಅಪ್ರದಕ್ಷಿಣೆಯ ಮಾರ್ಗದಲ್ಲಿ ಸಂಚರಿಸುತ್ತದೆ. ರಾಹು ಮತ್ತು ಕೇತುಗಳನ್ನು ಛಾಯಾಗ್ರಹಗಳೆಂದು ಕರೆಯುತ್ತೇವೆ. ಕೇತುವು ತಾನಿರುವ ಕ್ಷೇತ್ರ ಮಾತ್ರವಲ್ಲದೆ ತಾನು ದೃಷ್ಟಿಸುವ ಭಾವಗಳಿಗೆ ಸಹ ತೊಂದರೆ ನೀಡುವ ಸಾಧ್ಯತೆಗಳಿರುತ್ತವೆ. ಕೇತುವು 2025 ರ ಮೇ ತಿಂಗಳ 18 ಭಾನುವಾರದಂದು ಕನ್ಯಾ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. 2026 ರ ನವಂಬರ್ ತಿಂಗಳ 25 ಬುಧವಾರದಂದು ಕೇತುವು ಸಿಂಹರಾಶಿಯಿಂದ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಗೋಚಾರದಲ್ಲಿನ ಯಾವುದೇ ಗ್ರಹಗಳ ಫಲಾಫಲಗಳು ಜನ್ಮಕುಂಡಲಿಯಲ್ಲಿನ ದಶಾಭುಕ್ತಿಗಳನ್ನು ಅವಲಂಭಿಸುತ್ತದೆ. ಕೇತುವಿಗೆ ಶುಭಗ್ರಹಗಳ ಸಂಯೋಗ ಅಥವಾ ದೃಷ್ಟಿ ಇದ್ದಲ್ಲಿ ಉಂಟಾಗುವ ಸಮಸ್ಯೆಗಳ ಪ್ರಮಾಣವು ಕಡಿಮೆ ಆಗುತ್ತದೆ. ಆದರೆ ಕೇತುವಿನಿಂದ ಉಂಟಾಗುವ ಸಮಸ್ಯೆಗಳು ಕ್ಷಣಮಾತ್ರ. ಉತ್ತಮ ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು ಶ್ರೀ ಗಣಪತಿಗೆ ಪೂಜೆಯನ್ನು ಸಲ್ಲಿಸಿದಲ್ಲಿ ಶುಭಫಲಗಳು ದೊರೆಯುತ್ತವೆ. ಇದರೊಂದಿಗೆ ನವನಾಗ ಸ್ತೋತ್ರದ ಪಠಣೆಯು ಮುಖ್ಯವಾಗುತ್ತದೆ.
ಕೇತುವಿನ ಅಧಿದೇವತೆ ಶ್ರೀ ಮಹಾಗಣಪತಿ. ಗಣಪತಿಗೆ ನಿರ್ವಿಘ್ನ ಗಣಪತಿ ಎಂಬ ಹೆಸರಿದೆ. ಅಂದರೆ ಕೇತುವಿನಿಂದ ಆರಂಭಿಸುವ ನಮ್ಮ ಕೆಲಸ ಕಾರ್ಯಗಳಲ್ಲಿ ಕೇವಲ ಅಡ್ಡಿ ಆತಂಕಗಳು ಉಂಟಾಗುತ್ತವೆ. ಆದ್ದರಿಂದ ನಾವು ಆತ್ಮಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಉತ್ತಮ ಪೂರ್ವಯೋಜನೆಯಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸಬಹುದು. ಮುಖ್ಯವಾಗಿ ಕೇತುವು ಭ್ರಮೆಯನ್ನು ಉಂಟು ಮಾಡುತ್ತಾನೆ. ಆದರಿಂದ ಸುತ್ತಮುತ್ತಲಿನ ಜನ ಮತ್ತು ಕೆಲಸ ಕಾರ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ಆತುರದಿಂದ ತೊಂದರೆ ಎದುರಾಗುತ್ತದೆ. ಪ್ರಸಕ್ತ ಸನ್ನಿವೇಶದಲ್ಲಿ ಕೇತುವಿನ ಸಂಚಾರದಿಂದ ಪ್ರತಿಯೊಂದು ರಾಶಿಗಳು ವಿಭಿನ್ನ ಫಲಗಳನ್ನು ಪಡೆಯುತ್ತವೆ. ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ತಿಳಿಯಿರಿ.
ಧನು ರಾಶಿ
ಕೆಲಸದ ವಿಚಾರವಾಗಿ ಆರಂಭದಲ್ಲಿ ಕಷ್ಟ ಎನಿಸಿದರೂ ಕ್ರಮೇಣವಾಗಿ ಪರಿಸ್ಥಿತಿಗೆ ಹೊಂದಿಕೊಳ್ಳುವಿರಿ. ಬದಲಾಗದ ತೀರ್ಮಾನಗಳಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಎಲ್ಲರನ್ನು ಸುಲಭವಾಗಿ ನಂಬುವಿರಿ. ಇದರಿಂದಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ನಿಮ್ಮಲ್ಲಿನ ಆತ್ಮವಿಶ್ವಾಸ ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಚರ್ಮದ ದೋಷವಿರುತ್ತದೆ. ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಬುದ್ಧಿವಂತಿಕೆಯಿಂದ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಸ್ವಾರ್ಥ ಬುದ್ಧಿಯು ಇರುತ್ತದೆ. ಮಾತಿನ ಮೇಲೆ ನಿಯಂತ್ರಣವಿರುತ್ತದೆ. ಪ್ರಾಯೋಗಿಕ ಕೆಲಸ ಕಾರ್ಯದಲ್ಲಿ ನಂಬಿಕೆ ಇರುತ್ತದೆ. ವಾಹನ ಅಪಘಾತವಾಗುವ ಸಾಧ್ಯತೆಗಳಿವೆ. ಮಕ್ಕಳ ಜೀವನದಲ್ಲಿ ಅಹಿತಕರ ಘಟನೆ ನಡೆಯಲಿದೆ. ಮಕ್ಕಳೊಂದಿಗೆ ಉತ್ತಮ ಸಂಬಂಧ ಇರುವುದಿಲ್ಲ. ಮನೆತನದ ಆಸ್ತಿಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಅರಿವಿದ್ದರೂ ಅನಿವಾರ್ಯವಾಗಿ ತಪ್ಪಾದ ಕೆಲಸ ಕಾರ್ಯಗಳು ಮಾಡಬೇಕಾಗುತ್ತದೆ.
ಪರಿಹಾರ: ಹೆಣ್ಣು ಮಕ್ಕಳು ತಲೆಯಲ್ಲಿ ಚಿನ್ನದ ಒಡವೆಯನ್ನು ಧರಿಸಿದರೆ ಕುಟುಂಬದವರೆಲ್ಲರಿಗೂ ಶುಭ ಉಂಟಾಗುತ್ತದೆ.
ಮಕರ ರಾಶಿ
ಹೆಚ್ಚಿನ ಪರಿಶ್ರಮದಿಂದ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಉಂಟಾಗುತ್ತದೆ. ಅನಿವಾರ್ಯವಾಗಿ ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಅನಿರೀಕ್ಷಿತ ಧನ ಲಾಭವಿದೆ. ಲಾಭವಿಲ್ಲದ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಉದ್ಯೋಗದಲ್ಲಿ ದಿಢೀರನೇ ಹಲವು ಬದಲಾವಣೆಗಳು ಉಂಟಾಗಲಿವೆ. ಆದಾಯದ ಬಗ್ಗೆ ತೃಪ್ತಿ ಇರುವುದಿಲ್ಲ. ಮೊದಲು ನಿಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ಮಹತ್ವ ನೀಡುವಿರಿ. ಬೇರೆಯವರಿಗೆ ಸಹಾಯ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಕಷ್ಟ ನಷ್ಟಗಳಿಗೆ ಬೆದರದ ಕಾರಣ ಮಾನಸಿಕ ನೆಮ್ಮದಿ ಇರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದು ಒಳ್ಳೆಯದು. ಹೊಸ ವಾಹನ ಕೊಳ್ಳುವ ಯೋಜನೆ ಮುಂದೂಡಲ್ಪಡುತ್ತದೆ. ಆತುರದಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ಅಸಂಬದ್ಧ ಮಾತುಕತೆಯಿಂದ ಜನರ ವಿರೋಧವನ್ನು ಎದುರಿಸುವಿರಿ. ಕುಟುಂಬದ ವಿವಾದಗಳು ದೂರವಾಗಲಿವೆ. ಬೇರೆಯವರಿಗೆ ಬುದ್ಧಿವಾದ ಹೇಳುವಲ್ಲಿ ಸಮಯ ಕಳೆಯುವಿರಿ.
ಪರಿಹಾರ: ಧಾರ್ಮಿಕ ಕೇಂದ್ರಗಳಿಗೆ ಪೂಜಾ ದ್ರವ್ಯಗಳನ್ನು ನೀಡುವುದರಿಂದ ಶುಭ ಫಲಗಳನ್ನು ಪಡೆಯಬಹುದು.
ಕುಂಭ ರಾಶಿ
ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಅಡಚಣೆಗಳು ಎದುರಾಗಲಿವೆ. ಬುದ್ಧಿವಂತಿಕೆಯಿಂದ ದೊಡ್ಡ ದೊಡ್ಡ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಪಡೆಯುವಿರಿ. ದಂಪತಿ ನಡುವೆ ಅನಾವಶ್ಯಕವಾದ ವಾದ ವಿವಾದಗಳಿರುತ್ತವೆ. ಕಾರ್ಮಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ತೋರುವುದಿಲ್ಲ. ಬೇರೆಯವರಿಗೆ ಸಹಾಯ ಮಾಡುವ ಮನಸ್ಸು ಉಂಟಾಗುವುದಿಲ್ಲ. ನಿಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ಬೇರೆಯವರ ಸಹಾಯ ಸಹಕಾರವನ್ನು ಪಡೆಯುವಿರಿ. ಉತ್ತಮ ಆದಾಯವಿದ್ದರೂ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಕೆಲಸ ಕಾರ್ಯಗಳಿಗೆ ಹೆಚ್ಚಿನ ಬಂಡವಾಳವನ್ನು ಹೂಡುವಿರಿ. ಸಣ್ಣ ಪುಟ್ಟ ಕೆಲಸ ಕಾರ್ಯಗಳು ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇದೆ. ಸ್ತ್ರೀಯರಿಗೆ ಆರೋಗ್ಯದ ಸಮಸ್ಯೆ ಎದುರಾಗುತ್ತದೆ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಆದಾಯದ ಕೊರತೆ ಕಂಡುಬರುತ್ತದೆ. ನಿಮ್ಮ ಮನಸ್ಸಿನ ಆಸೆ ಆಕಾಂಕ್ಷೆಗಳನ್ನು ಬೇರೆಯವರಿಗೆ ತಿಳಿಸುವುದಿಲ್ಲ.
ಪರಿಹಾರ: ಅಶಕ್ತರಿಗೆ ಎಳನೀರನ್ನು ನೀಡಿ. ಬೆಳಗಿನ ವೇಳೆ ತೆಂಗಿನ ಮರಕ್ಕೆ ನೀರನ್ನು ಹಾಕಿದಲ್ಲಿ ಶುಭಫಲಗಳು ಹೆಚ್ಚುತ್ತವೆ.
ಮೀನ ರಾಶಿ
ಬಾಳ ಸಂಗಾತಿಗೆ ಅಶಾಂತಿ ಇರುತ್ತದೆ. ಸ್ತ್ರೀಯರ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ. ಹೊಟ್ಟೆಗೆ ಸಂಬಂಧಿಸಿದ ದೋಷವು ನಿಮ್ಮನ್ನು ಕಾಡಲಿದೆ. ಸಣ್ಣ ಪುಟ್ಟ ವಿಚಾರಗಳಿಗೂ ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ಬೇರೆಯವರಿಗೆ ತಿಳಿಸದೆ ನಿಮ್ಮ ಕೆಲಸ ಕಾರ್ಯಗಳನ್ನು ಸಾಧಿಸುವಿರಿ. ಇದರಿಂದಾಗಿ ಕುಟುಂಬದಲ್ಲಿ ಅಶಾಂತಿ ನೆಲೆಸುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ನಿಧಾನ ಗತಿಯ ಪ್ರಗತಿ ಕಂಡುಬರುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಏಕಸ್ವಾಮ್ಯತೆ ಗಳಿಸುವಿರಿ. ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ಸ್ತ್ರೀಯರ ವಿಚಾರದಲ್ಲಿ ಖರ್ಚು ವೆಚ್ಚಗಳು ಅಧಿಕವಾಗಿರುತ್ತವೆ. ಆತಂಕದ ಪರಿಸ್ಥಿತಿಯಲ್ಲಿಯು ಧೈರ್ಯ ಕಳೆದುಕೊಳ್ಳುವುದಿಲ್ಲ. ನಿಮ್ಮ ಒಳ್ಳೆಯತನದಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಸಮಾಜದ ಗಣ್ಯ ವ್ಯಕ್ತಿಯ ಸಹಾಯ ದೊರೆಯುತ್ತದೆ. ಉತ್ತಮ ಆದಾಯವಿದ್ದರೂ ಹಣವನ್ನು ಉಳಿಸಲು ವಿಫಲರಾಗುವಿರಿ. ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ .
ಪರಿಹಾರ: ಮನೆ ಮುಂದೆ ಇರುವ ಹೂ ಗಿಡಗಳಿಗೆ ನೀರನ್ನು ಹಾಕಿ ಕೆಲಸ ಕಾರ್ಯಗಳನ್ನು ಆರಂಭಿಸಿದರೆ ಉತ್ತಮ ಯಶಸ್ಸು ದೊರೆಯುತ್ತದೆ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).