Horoscope Today: ಬಿಡುವಿಲ್ಲದ ಕೆಲಸಗಳಿಂದ ಮಾನಸಿಕ ಒತ್ತಡ, ಅನಾವಶ್ಯಕ ಖರ್ಚು; ಮೇಷದಿಂದ ಕಟಕ ರಾಶಿವರೆಗಿನ ದಿನಭವಿಷ್ಯ
30 ಏಪ್ರಿಲ್ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (30th April 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (30th April 2024 Daily Horoscope).
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ಮಂಗಳವಾರ
ತಿಥಿ: ಸಪ್ತಮಿ ರಾತ್ರಿ 2.35 ರವರೆಗೂ ಇರುತ್ತದೆ, ಅನಂತರ ಅಷ್ಟಮಿ ಆರಂಭವಾಗುತ್ತದೆ.
ನಕ್ಷತ್ರ: ಉತ್ತರಾಷಾಢ ನಕ್ಷತ್ರವು ರಾತ್ರಿ 1.23 ರವರೆಗೂ ಇರುತ್ತದೆ. ಅನಂತರ ಶ್ರವಣ ನಕ್ಷತ್ರವು ಆರಂಭವಾಗುತ್ತದೆ.
ಸೂರ್ಯೋದಯ: ಬೆಳಿಗ್ಗೆ 5.59
ಸೂರ್ಯಾಸ್ತ: ಸಂಜೆ 6.34
ರಾಹುಕಾಲ: ಮಧ್ಯಾಹ್ನ 3.28 ರಿಂದ ಸಂಜೆ 5.02
ಮೇಷ
ಕೆಲಸ ಕಾರ್ಯಗಳು ನಿರಂತರವಾಗಿ ನಡೆಯಲಿವೆ. ಬಿಡುವಿಲ್ಲದ ಕಾರಣ ಮಾನಸಿಕ ಒತ್ತಡ ಹೆಚ್ಚುತ್ತದೆ. ಕುಟುಂಬದಲ್ಲಿ ಇರುವ ಅಸಹಕಾರದ ಭಾವನೆ ಕ್ರಮೇಣ ಮರೆಯಾಗುತ್ತದೆ. ಉದ್ಯೋಗದಲ್ಲಿ ನಿಮ್ಮ ಮನದಾಳದಂತೆ ಬದಲಾವಣೆಗಳು ಉಂಟಾಗಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ಸುಲಭವಾಗಿ ನಿರೀಕ್ಷಿತ ಗುರಿ ತಲುಪುವಿರಿ. ವಿದ್ಯಾರ್ಥಿಗಳು ಸಹಪಾಠಿಗಳ ಒಡಗೂಡಿ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾರೆ. ಕುಟುಂಬ ಸದಸ್ಯರಲ್ಲಿ ಹಣಕಾಸಿನ ಸಂಬಂಧಿತ ಭಿನ್ನಾಭಿಪ್ರಾಯ ಇರುತ್ತದೆ. ಕುಟುಂಬದ ಹಿರಿಯರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಸಗಟು ವ್ಯಾಪಾರದಲ್ಲಿ ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ಆತುರದಿಂದ ಪ್ರಮುಖ ಕೆಲಸವೊಂದು ಅಪೂರ್ಣಗೊಳ್ಳಲಿದೆ.
ಪರಿಹಾರ: ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ
ವೃಷಭ
ಕೌಟುಂಬಿಕ ವಿಚಾರದಲ್ಲಿ ಎಲ್ಲರ ಮನಸ್ಸನ್ನು ಅರಿತು ಮುಂದುವರೆಯಬೇಕಾಗುತ್ತದೆ. ಪರಿಸ್ಥಿತಿಗೆ ಅನುಗುಣವಾಗಿ ವರ್ತಿಸುವ ಕಾರಣ ವಿವಾದಗಳು ಇರುವುದಿಲ್ಲ. ಉದ್ಯೋಗದಲ್ಲಿ ಇದ್ದ ಆತಂಕದ ಕ್ಷಣಗಳು ಕೊನೆಯಾಗಲಿವೆ. ಆತ್ಮವಿಶ್ವಾಸದಿಂದ ಹೊಸ ವ್ಯಾಪಾರವನ್ನು ಆರಂಭಿಸುವಿರಿ. ಲಾಭ ನಷ್ಟವನ್ನು ಪರಿಗಣಿಸುವುದಿಲ್ಲ. ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನದ ಅವಕಾಶ ದೊರೆಯುತ್ತದೆ. ದೊರೆವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವರು. ಆದಾಯದ ವಿಚಾರದಲ್ಲಿ ಅದೃಷ್ಟವಿದೆ. ಆದರೆ ಅನಾವಶ್ಯಕ ಖರ್ಚು ವೆಚ್ಚಗಳನ್ನು ನಿಯಂತ್ರಿಸಿ. ಹಠದ ಗುಣಕ್ಕೆ ಬೇಸರಗೊಂಡು ಆತ್ಮೀಯರೊಬ್ಬರು ದೂರವಾಗಲಿದ್ದಾರೆ. ಮಕ್ಕಳ ಸಹಾಯ ಸಹಕಾರ ದೊರೆಯುತ್ತದೆ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 8
ಅದೃಷ್ಟದ ದಿಕ್ಕು: ನೈರುತ್ಯ
ಅದೃಷ್ಟದ ಬಣ್ಣ : ಕೆಂಪು ಬಣ್ಣ
ಮಿಥುನ
ಆತಂಕದ ಪರಿಸ್ಥಿತಿ ಎದುರಾದರೂ ಧೈರ್ಯದಿಂದ ವರ್ತಿಸುವಿರಿ. ಉದ್ಯೋಗದಲ್ಲಿ ಆಂತರಿಕ ಬದಲಾವಣೆಗಳು ಕಂಡುಬರಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ಆದಾಯಕ್ಕೆ ತೊಂದರೆ ಇರುವುದಿಲ್ಲ. ವಿದ್ಯಾರ್ಥಿಗಳು ಕೋಪವನ್ನು ನಿಯಂತ್ರಿಸಿಕೊಂಡಲ್ಲಿ ಯಶಸ್ಸು ಗಳಿಸುತ್ತಾರೆ. ಹಿರಿಯರ ಅನುಭವದಿಂದ ಹೊಸ ಪಾಠ ಕಲಿಯುವಿರಿ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಆತಂಕಕ್ಕೆ ಒಳಗಾಗುವಿರಿ. ಸ್ನೇಹ ಪ್ರೀತಿಯನ್ನು ಹಂಚಿಕೊಳ್ಳುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ವಿದೇಶದಲ್ಲಿ ಅಧ್ಯಯನ ಮುಂದುವರೆಸುವ ಆಶಯ ಇರಲಿದೆ. ಸಕಾರಾತ್ಮಕ ಮನೋಭಾವದಿಂದ ಎಲ್ಲರ ಮನ ಗೆಲ್ಲುವಿರಿ. ತೆಗೆದುಕೊಳ್ಳುವ ತೀರ್ಮಾನವನ್ನು ಬದಲಿಸಿ ಗಲಿಬಿಲಿಗೊಳ್ಳುವಿರಿ.
ಪರಿಹಾರ: ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ: 11
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ
ಕಟಕ
ದಿನನಿತ್ಯದ ಜೀವನದಲ್ಲಿ ಆಶಾದಾಯಕ ಬದಲಾವಣೆಗಳು ಉಂಟಾಗಲಿವೆ. ಉದ್ಯೋಗದಲ್ಲಿ ನಿಮ್ಮ ಆದೇಶವನ್ನು ಒಪ್ಪಿ ನಡೆದುಕೊಳ್ಳುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ದೊರೆಯುತ್ತದೆ. ವಿದ್ಯಾರ್ಥಿಗಳು ಅಭ್ಯಾಸಕ್ಕೆ ಹೆಚ್ಚಿನ ಸಮಯವನ್ನು ನೀಡುತ್ತಾರೆ. ಬಂಧು ಬಳಗದ ಕೇಂದ್ರಬಿಂದುವಾಗುವಿರಿ. ಮನದಲ್ಲಿರುವ ನೋವನ್ನು ಮರೆಮಾಚಿ ಸಂತಸವನ್ನು ಹಂಚುವಿರಿ. ಮಾಡುವ ತಪ್ಪಿಗೆ ಪಶ್ಚಾತಾಪ ಪಡುವಿರಿ. ನಿಷ್ಕಲ್ಮಶ ಮನಸ್ಸಿನ ಕಾರಣ ಎಲ್ಲರ ಪ್ರೀತಿ ಮತ್ತು ಹೊಗಳಿಕೆಗೆ ಪಾತ್ರರಾಗುವಿರಿ. ಅನಾವಶ್ಯಕವಾಗಿ ಸಮಯವನ್ನು ವ್ಯರ್ಥ ಮಾಡಬೇಡಿ. ದೂರದ ಸಂಬಂಧಿಯೊಬ್ಬರ ಸಹಾಯದಿಂದ ವಿವಾಹ ನಿಶ್ಚಯವಾಗಬಹುದು. ಪಾಲುದಾರಿಕೆ ವ್ಯಾಪಾರದಲ್ಲಿ ಮಧ್ಯಮಗತಿಯ ಲಾಭ ಇರುತ್ತದೆ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ದೀಪದೆಣ್ಣೆ ನೀಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ: 6
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಹಳದಿ ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).