ವಿದ್ಯೆಗೆ ತಕ್ಕಂತ ಉದ್ಯೋಗ ದೊರೆಯಲಿದೆ, ಹುಟ್ಟೂರಿನಲ್ಲಿರುವ ಮನೆಯನ್ನು ನವೀಕರಣಗೊಳಿಸುವಿರಿ: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿ ಫಲ
ಜುಲೈ 6ರ ದಿನ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (6th July 2024 Daily Horoscope).
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಆಷಾಢ ಮಾಸ-ಶುಕ್ಲಪಕ್ಷ-ಶನಿವಾರ
ತಿಥಿ : ಪಾಡ್ಯ ರಾತ್ರಿ 03.43 ರವರೆಗೂ ಇದ್ದು ನಂತರ ಬಿದಿಗೆ ಆರಂಭವಾಗುತ್ತದೆ.
ನಕ್ಷತ್ರ: ಪುನರ್ವಸು ನಕ್ಷತ್ರವು ರಾತ್ರಿ 04.55 ರವರೆಗೆ ಇದ್ದು ನಂತರ ಪುಷ್ಯ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆಳಗ್ಗೆ 05.58
ಸೂರ್ಯಾಸ್ತ: ಸಂಜೆ 06.49
ರಾಹುಕಾಲ: ಬೆಳಗ್ಗೆ 09.16 ರಿಂದ 10.52
ರಾಶಿಫಲ
ಸಿಂಹ
ಹಟದ ಬುದ್ಧಿಯಿದ್ದರೂ ತಪ್ಪು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಹುಟ್ಟೂರಿನಲ್ಲಿ ಇರುವ ಮನೆಯನ್ನು ನವೀಕರಣಗೊಳಿಸುವಿರಿ. ನಿಮ್ಮಲ್ಲಿ ವಿಶೇಷವಾದ ಪ್ರತಿಭೆ ಇರುತ್ತದೆ. ನಿಮ್ಮಲ್ಲಿರುವ ಪಾಂಡಿತ್ಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಸ್ವಂತ ಜಮೀನನ್ನು ಕೊಳ್ಳುವ ಆಸೆ ಈಡೇರುತ್ತದೆ. ಸಾಕು ಪ್ರಾಣಿಗಳ ಬಗ್ಗೆ ವಿಶೇಷವಾದ ಅನುಕಂಪ ತೋರುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆಯುವಿರಿ. ನಿಮ್ಮ ಮಾತಿನಲ್ಲಿ ಜನರನ್ನು ಆಕರ್ಷಿಸುವ ಬಲವಿರುತ್ತದೆ. ದುಬಾರಿ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ನಿಮ್ಮ ವಿದ್ಯಾ ಬುದ್ಧಿಗೆ ತಕ್ಕನಾದ ಉದ್ಯೋಗ ಲಭಿಸುತ್ತದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅತಿಯಾದ ಆಸೆ ಇರುವುದಿಲ್ಲ. ವೈರಾಗ್ಯ ಭಾವನೆ ಮೂಡುತ್ತದೆ. ಆಪತ್ಕಾಲದಲ್ಲಿ ಅಪರಿಚಿತರ ಸಹಾಯ ದೊರೆಯುತ್ತದೆ. ವಾಹನ ಅಥವಾ ಇನ್ನಾವುದೇ ಲೋಹದಿಂದ ತೊಂದರೆ ಉಂಟಾಗುವ ಸಾಧ್ಯತೆಗಳಿವೆ.
ಪರಿಹಾರ : ಹಣೆಗೆ ತಿಲಕವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ : ಬೂದು
ಕನ್ಯಾ
ಅಡ್ಡಿ ಆತಂಕಗಳಿಲ್ಲದೆ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಕುಟುಂಬದ ಮುಖ್ಯ ವ್ಯವಹಾರಗಳನ್ನು ತಂದೆಯವರು ನಿರ್ವಹಿಸುತ್ತಾರೆ. ಶಾಂತಿ ನೆಮ್ಮದಿಯಿಂದ ಎಲ್ಲರೊಳಗೆ ಸಂತೋಷದಿಂದ ಬಾಳುವಿರಿ. ಆತ್ಮೀಯರ ಸಹಾಯ ಸಹಕಾರ ದೊರೆಯುತ್ತದೆ. ಬೇರೆಯವರ ವ್ಯಾಪಾರ ವ್ಯವಹಾರದಲ್ಲಿ ಪಾಲುಗಾರಿಕೆ ದೊರೆಯುತ್ತದೆ. ಗೃಹಿಣಿಯರಿಗೆ ಮನಸ್ಸಿಗೆ ಶಾಂತಿ ಇರುವುದಿಲ್ಲ. ಆರಂಭದಲ್ಲಿ ಕಷ್ಟ ಎದುರಾದರು ಕ್ರಮೇಣವಾಗಿ ಸರಿದಾರಿಗೆ ಬರಲಿದೆ. ಸೋದರಿಯ ಕುಟುಂಬದಲ್ಲಿನ ಬೇಸರವು ನಿಮ್ಮ ಮಧ್ಯಸ್ಥಿಕೆಯಿಂದ ದೂರವಾಗುತ್ತದೆ. ದಂಪತಿಗಳ ನಡುವೆ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ವಿರುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ. ಉತ್ತಮ ಆದಾಯ ವಿರುತ್ತದೆ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೇಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ : ಆಕಾಶ ನೀಲಿ
ತುಲಾ
ಕೊಂಚವೂ ಶ್ರಮ ಪಡದೆ ಮನದ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವಿರಿ. ಬುದ್ಧಿವಂತಿಕೆಯ ಮಾತುಕತೆ ವಿವಾದಗಳಿಂದ ದೂರ ಮಾಡುತ್ತದೆ. ಮಕ್ಕಳ ಆಟ ಪಾಠಗಳು ಕುಟುಂಬದಲ್ಲಿ ಉಲ್ಲಾಸವನ್ನು ಉಂಟುಮಾಡುತ್ತದೆ. ಬಂಧು ಬಳಗದವರ ವಿಶ್ವಾಸ ಗಳಿಸುವಿರಿ. ನಿಮ್ಮ ತಂದೆಯವರು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಜೀವನವನ್ನು ರೂಪಿಸುತ್ತದೆ. ನಿಮಗೆ ಭೂವ್ಯಹಾರದಲ್ಲಿ ಉತ್ತಮ ಆದಾಯ ದೊರೆಕುತ್ತದೆ. ಆದಾಯದ ಬಗ್ಗೆ ಅತಿಯಾದ ಆಸೆ ಇರುವುದಿಲ್ಲ. ಸಾಮಾನ್ಯವಾಗಿ ನಿಮಗೆ ಪ್ರತಿಯೊಂದು ವಿಚಾರದಲ್ಲಿಯೂ ಉತ್ತಮ ಜ್ಞಾನ ವಿರುತ್ತದೆ. ನಿಮ್ಮ ನುಡಿಗಳು ಕೇಳುಗಳಿಗೆ ಹಿತವೆನಿಸುವ ಕಾರಣ ಜನರ ಮಧ್ಯೆ ಬಾಳುವಿರಿ.
ಪರಿಹಾರ : ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು: ಈಶಾನ್ಯ
ಅದೃಷ್ಟದ ಬಣ್ಣ: ಕೆಂಪು
ವೃಶ್ಚಿಕ
ತಂದೆಯಲ್ಲಿರುವ ಪರೋಪಕಾರದ ಗುಣ ನಿಮಗೂ ಬರುತ್ತದೆ. ಸಮಾಜದಲ್ಲಿ ಉನ್ನತ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ದೊರೆಯುತ್ತವೆ. ವಾದವಿವಾದಗಳಲ್ಲಿ ಜಯ ಗಳಿಸುವಿರಿ. ಹಣಕಾಸಿನ ಕೊರತೆ ಇರುವುದಿಲ್ಲ. ಹೊಸ ವಾಹನ ಕೊಳ್ಳುವ ಸೂಚನೆ ಇದೆ. ಸದಾಕಾಲ ಸಮಾಜದ ಗಣ್ಯವ್ಯಕ್ತಿಗಳ ಒಡನಾಟ ಇರುತ್ತದೆ. ಕುಟುಂಬದ ಬಗ್ಗೆ ಸಮಯ ಹೊಂದಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ದಂಪತಿಗಳ ನಡುವೆ ಪರಸ್ಪರ ಬೇಸರವಿರುತ್ತದೆ. ಆಪತ್ತಿಗೆ ಸಿಲುಕಿದವರಿಗೆ ಸಹಾಯ ಮಾಡುವ ಬದಲು ಬುದ್ಧಿವಾದ ಹೇಳುವಿರಿ. ಇದರಿಂದ ಅಪಹಾಸ್ಯಕ್ಕೆ ಗುರಿಯಾಗಬಹುದು. ಪ್ರಾಚೀನ ಕಾಲದ ವಿಚಾರಗಳ ಬಗ್ಗೆ ಅಧ್ಯಯನ ನಡೆಸುವಿರಿ. ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವಿರಿ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 6
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಎಲೆ ಹಸಿರು
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
