ಯುಗಾದಿ ಆರೋಗ್ಯ ಭವಿಷ್ಯ: ವೃಶ್ಚಿಕ ರಾಶಿಯವರು ಅತಿಯಾದ ಕೋಪ ತಪ್ಪಿಸಿದರೆ ಒಳ್ಳೆಯದು, ತುಲಾ ರಾಶಿಯವರಿಗೆ ಎದೆ ನೋವು ವಾಸಿಯಾಗುತ್ತೆ
Ugadi Health Horoscope: ಯುಗಾದಿ ಆರೋಗ್ಯ ವರ್ಷ ಭವಿಷ್ಯ 2025. ವೃಶ್ಚಿಕ ರಾಶಿಯವರು ಅತಿಯಾದ ಕೋಪ ತಪ್ಪಿಸಿದರೆ ಒಳ್ಳೆಯದು, ತುಲಾ ರಾಶಿಯವರಿಗೆ ಎದೆ ನೋವು ವಾಸಿಯಾಗುತ್ತೆ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಯುಗಾದಿ ಆರೋಗ್ಯ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ತಮ್ಮ ಆರೋಗ್ಯ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವವರು ಇದ್ದಾರೆ. ಶ್ರೀ ವಿಶ್ವಾವಸು ಸಂವತ್ಸರದ ಸಿಂಹದಿಂದ ವೃಶ್ಚಿಕದವರಿಗೆ ನಾಲ್ಕು ರಾಶಿಯವರ ಆರೋಗ್ಯ ವರ್ಷ ಭವಿಷ್ಯ ಇಲ್ಲಿದೆ.
ಸಿಂಹ ರಾಶಿ
ಶೀತ ವಾಯುದೋಷವು ಸದಾಕಾಲ ಇರುತ್ತದೆ. ಯೋಗ ಮತ್ತು ಪ್ರಾಣಾಯಾಮದಿಂದ ಉತ್ತಮ ಆರೋಗ್ಯ ಗಳಿಸಬಹುದು. ಕಿವಿಗೆ ಸಂಬಂಧಿಸಿದ ತೊಂದರೆ ನಿಮಗಿರುತ್ತದೆ. ಕಣ್ಣಿನ ದೃಷ್ಟಿಯು ಮಂದವಾಗುವ ಸಾಧ್ಯತೆ ಇದೆ. ಮುಖ್ಯವಾಗಿ ಮೊಣಕಾಲುಗಳಲ್ಲಿ ಶಕ್ತಿಯು ಕಡಿಮೆಯಾಗುತ್ತದೆ. ಹೃದಯಕ್ಕೆ ಸಂಬಂಧಪಟ್ಟ ದೋಷ ಇರುವವರು ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಾಣುತ್ತಾರೆ. ಹೆಣ್ಣು ಮಕ್ಕಳ ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ. ಗರ್ಭಿಣಿಯರು ಉತ್ತಮ ಆರೋಗ್ಯ ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಮೂಗಿನಲ್ಲಿ ದುರ್ಮಾಂಸ ಬೆಳೆಯುವ ಸಾಧ್ಯತೆ ಇದೆ. ಆದರೆ ಉತ್ತಮ ಚಿಕಿತ್ಸೆಯಿಂದ ಶೀಘ್ರಗತಿಯಲ್ಲಿ ಗುಣ ಕಾಣುವಿರಿ. ಮಕ್ಕಳಿಗೆ ತಲೆಸುತ್ತುವ ತೊಂದರೆ ಇರುತ್ತದೆ.
ಕನ್ಯಾ ರಾಶಿ
ಮೇ ತಿಂಗಳವರೆಗೂ ಆರೋಗ್ಯದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆನಂತರದ ದಿನಗಳಲ್ಲಿ ಮೂತ್ರದ ಸೋಂಕಿನಿಂದ ತೊಂದರೆ ಅನುಭವಿಸುವಿರಿ. ದೇಹದ ಉಷ್ಣತೆಯು ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಅತಿಯಾದ ತಲೆನೋವು ನಿಮ್ಮನ್ನು ಕಾಡುತ್ತದೆ. ಲಿವರ್ ತೊಂದರೆ ಇರುವವರು ಎಚ್ಚರಿಕೆವಹಿಸುವ ಅಗತ್ಯತೆ ಇದೆ. ಆತ್ಮವಿಶ್ವಾಸವನ್ನು ಬೆಳೆಸಿಕೊಂಡರೆ ತೊಂದರೆಯಿಂದ ದೂರ ಉಳಿಯಬಹುದು. ಕೈಕಾಲುಗಳಿಗೆ ಲೋಹದ ವಸ್ತುಗಳು ತಗಲುವ ಕಾರಣ ಸೋಂಕು ಉಂಟಾಗುತ್ತದೆ. ಯಾವುದೇ ರೀತಿಯ ಆರೋಗ್ಯದ ತೊಂದರೆಯು ಬಹುಕಾಲ ನಿಲ್ಲುವುದಿಲ್ಲ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಇರುವುದು ಒಳ್ಳೆಯದು. ಪ್ರಯಾಣಕ್ಕೆ ಸಂಬಂಧಿಸಿದ ಉದ್ಯೋಗವಿದ್ದಲ್ಲಿ ಬೆನ್ನು ನೋವು ಸದಾ ಕಾಡುತ್ತದೆ. ಗೃಹಿಣಿಯರಿಗೆ ಅರೆ ತಲೆಶೂಲೆ ಇರುತ್ತದೆ.
ತುಲಾ ರಾಶಿ
ದೇಹದಲ್ಲಿ ಅತಿಯಾಗಿ ನೀರು ಸೇರುವ ಸಾಧ್ಯತೆಗಳಿವೆ. ಇದರಿಂದ ಕೈಕಾಲುಗಳಲ್ಲಿ ಊತ ಉಂಟಾಗುತ್ತದೆ. ಎದೆ ನೋವು ಕಾಣಿಸಿಕೊಂಡರು ಶೀಘ್ರಗತಿಯಲ್ಲಿ ಚೇತರಿಸಿಕೊಳ್ಳುತ್ತಾರೆ. ಆದರೆ ಉತ್ತಮ ಚಿಕಿತ್ಸೆ ಮತ್ತು ಎಚ್ಚರಿಕೆಯ ಅಗತ್ಯತೆ ಇದೆ. ಸರಿ ಇಲ್ಲದ ಸೌಂದರ್ಯ ಸಾಧನಗಳ ಬಳಕೆಯಿಂದ ಹೆಣ್ಣು ಮಕ್ಕಳಿಗೆ ಚರ್ಮದ ಸಮಸ್ಯೆ ಉಂಟಾಗಲಿದೆ. ಕಫವು ಹೆಚ್ಚಾಗಿ ಉಸಿರಾಟದ ತೊಂದರೆ ಉಂಟಾಗುತ್ತದೆ. ಇದರಿಂದಾಗಿ ಸಾಧ್ಯವಾದಷ್ಟು ಶೀತಕಾರಿ ಆಹಾರ ಪದಾರ್ಥವನ್ನು ಸೇವಿಸುವುದು ಕಡಿಮೆ ಮಾಡುವುದು ಒಳ್ಳೆಯದು. ಹರ್ನಿಯಾದಂತಹ ತೊಂದರೆ ಇರುತ್ತದೆ. ಪುಟ್ಟ ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ. ಶುಭ್ರವಾದ ಗಾಳಿಯ ಸೇವನೆಯಿಂದ ಉತ್ತಮ ಆರೋಗ್ಯ ಗಳಿಸಬಹುದು.
ವೃಶ್ಚಿಕ ರಾಶಿ
ಮಿತಿಮೀರಿದ ಕೋಪವಿರುತ್ತದೆ. ಇದರಿಂದ ರಕ್ತದ ಒತ್ತಡದಲ್ಲಿ ಏರಿಳಿತ ಕಂಡುಬರುತ್ತದೆ. ಸಣ್ಣ ಪುಟ್ಟ ವಿಚಾರಗಳಿಗೂ ಯೋಚಿಸುವ ಕಾರಣ ಅಸಾಧ್ಯವಾದ ತಲೆನೋವು ನಿಮ್ಮನ್ನು ಕಾಡುತ್ತದೆ. ಕೈಗಳ ಶಕ್ತಿಯು ಕುಂದುತ್ತದೆ. ಹೃದಯಬೇನೆ ಇದ್ದವರು ಎಚ್ಚರಿಕೆ ವಹಿಸಬೇಕು. ವಯೋವೃದ್ದರಿಗೆ ಸ್ಥಿರವಾದ ಆರೋಗ್ಯ ಇರುವುದಿಲ್ಲ. ರಸಗ್ರಂಥಿಗಳ ಸ್ರವಿಕೆಯಲ್ಲಿ ತೊಂದರೆ ಕಂಡುಬರುತ್ತದೆ. ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ರಕ್ತಕ್ಕೆ ಸಂಬಂಧಿಸಿದ ದೋಷ ಇರುತ್ತದೆ. ಕರುಳಿನಲ್ಲಿ ತೊಂದರೆ ಕಾಣಲಿದೆ. ಆತ್ಮಸ್ಥೈರ್ಯ ಇರುವ ಕಾರಣ ಉತ್ತಮ ಆರೋಗ್ಯ ಮರುಕಳಿಸುತ್ತದೆ. ಮಾನಸಿಕ ಒತ್ತಡ ಇರುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
