ಪೂರ್ವಾಭಾದ್ರ ನಕ್ಷತ್ರ ವರ್ಷ ಭವಿಷ್ಯ 2025: ಹಣಕಾಸಿನ ವಿಚಾರದಲ್ಲಿ ಕೊರತೆ ಇದ್ದರೂ ಯೋಚಿಸಲ್ಲ, ಆದಾಯದ ಮೂಲಗಳು ಹೆಚ್ಚುತ್ತವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪೂರ್ವಾಭಾದ್ರ ನಕ್ಷತ್ರ ವರ್ಷ ಭವಿಷ್ಯ 2025: ಹಣಕಾಸಿನ ವಿಚಾರದಲ್ಲಿ ಕೊರತೆ ಇದ್ದರೂ ಯೋಚಿಸಲ್ಲ, ಆದಾಯದ ಮೂಲಗಳು ಹೆಚ್ಚುತ್ತವೆ

ಪೂರ್ವಾಭಾದ್ರ ನಕ್ಷತ್ರ ವರ್ಷ ಭವಿಷ್ಯ 2025: ಹಣಕಾಸಿನ ವಿಚಾರದಲ್ಲಿ ಕೊರತೆ ಇದ್ದರೂ ಯೋಚಿಸಲ್ಲ, ಆದಾಯದ ಮೂಲಗಳು ಹೆಚ್ಚುತ್ತವೆ

Purvabhadra Nakshatra Bhavishya: ಪೂರ್ವಾಭಾದ್ರ ನಕ್ಷತ್ರದವರ ವರ್ಷ ಭವಿಷ್ಯ 2025. ಹಣಕಾಸಿನ ವಿಚಾರದಲ್ಲಿ ಕೊರತೆ ಇದ್ದರೂ ಯೋಚಿಸಲ್ಲ, ಆದಾಯದ ಮೂಲಗಳು ಹೆಚ್ಚುತ್ತವೆ. (ಬರಹ: ಎಚ್‌.ಸತೀಶ್, ಜ್ಯೋತಿಷಿ)

ಶ್ರೀ ವಿಶ್ವಾವಸು ಸಂವತ್ಸರ ಪೂರ್ವಾಭಾದ್ರ ನಕ್ಷತ್ರ ಭವಿಷ್ಯ
ಶ್ರೀ ವಿಶ್ವಾವಸು ಸಂವತ್ಸರ ಪೂರ್ವಾಭಾದ್ರ ನಕ್ಷತ್ರ ಭವಿಷ್ಯ

ಪೂರ್ವಾಭಾದ್ರ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ 25ನೇಯದಾದ ಪೂರ್ವಾಭಾದ್ರ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸು ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.

ಪೂರ್ವಾಭಾದ್ರ ನಕ್ಷತ್ರದವರ ಭವಿಷ್ಯ ಮತ್ತು ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತೆ

ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಪೂರ್ವಾಭಾದ್ರ ನಕ್ಷತ್ರದ 1, 2, 3 ಪಾದಗಳು ಕುಂಭರಾಶಿಯಲ್ಲಿಯೂ 4 ನೆಯ ಪಾದವು ಮೀನ ರಾಶಿಯಲ್ಲಿಯೂ ಇರಲಿವೆ. ಇದಲ್ಲದೆ ನಿಮ್ಮ ಹೆಸರು ಸೆ, ಸೊ, ದ ಮತ್ತು ದಿ ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಪೂರ್ವಾಭಾದ್ರ ನಕ್ಷತ್ರವಾಗುತ್ತದೆ.

ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಪೂರ್ವಾಭಾದ್ರ ನಕ್ಷತ್ರದವರ ಭವಿಷ್ಯ

ನಿಮ್ಮಿಂದಾಗದ ಕೆಲಸ ಕಾಯದ ಬಗ್ಗೆ ಆಸಕ್ತಿ ತೋರುವುದಿಲ್ಲ. ಎರಡಕ್ಕಿಂತಲೂ ಹೆಚ್ಚಿನ ಆದಾಯ ನಿಮಗಿರುತ್ತದೆ. ಕುಟುಂಬದ ಸದಸ್ಯರಿಂದಲೂ ಯಾವುದೇ ರೀತಿಯ ಸಹಾಯವನ್ನು ನಿರೀಕ್ಷಿಸುವುದಿಲ್ಲ. ಚಿಕ್ಕವಯಸ್ಸಿನೊಂದಿಗೆ ಕುಟುಂಬದ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಕೊರತೆ ಇದ್ದರೂ ಯೋಚಿಸುವುದಿಲ್ಲ. ಎಲ್ಲರೊಂದಿಗೆ ಹೊಂದಿಕೊಂಡು ಬಾಳುವಿರಿ. ದೊಡ್ಡ ಜನಗಳ ಸ್ನೇಹ ಮತ್ತು ಒಡನಾಟಕ್ಕೆ ಸದಾ ಪ್ರಯತ್ನಿಸುವಿರಿ. ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರುತ್ತದೆ. ಕಷ್ಟದ ಸಮಯದಲ್ಲಿಯೂ ಗುಟ್ಟಾಗಿ ಹಣವನ್ನು ಸಂಪಾದಿಸುವಿರಿ. ಆತ್ಮತೃಪ್ತಿಗಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಬೇರೆಯವರನ್ನು ಮೆಚ್ಚಿಸುವ ಆಸೆಯಾಗಲಿ ಗುರಿಯಾಗಲಿ ಇರುವುದಿಲ್ಲ. ಮಕ್ಕಳು ನಿಮ್ಮ ಮನಸ್ಸಿಗೆ ಸಂತೋಷವಾಗುವಂತೆ ಬೆಳೆಯುತ್ತಾರೆ. ನಿಮ್ಮ ಕರ್ತವ್ಯವನ್ನು ಪೂರ್ಣಗೊಳಿಸುವಲ್ಲಿ ಸಂತಸ ಕಾಣುವಿರಿ. ಸೋಲಿನ ಹಾದಿಯಲ್ಲಿದ್ದಾಗ ಸಹನೆ ಕಳೆದುಕೊಳ್ಳುವಿರಿ.

ಪೂರ್ವಾಭಾದ್ರ ನಕ್ಷತ್ರದ 1ನೇ ಪಾದ ಅಥವಾ ಹೆಸರು ಸೆ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಕಷ್ಟಪಟ್ಟು ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ಮಕ್ಕಳನ್ನು ಎಲ್ಲರು ಮೆಚ್ಚುವಂತೆ ಬೆಳೆಸುವಿರಿ. ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಎದುರಾಗುವುದಿಲ್ಲ. ಜೀವನ ನಿರ್ವಹಣೆಯಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ತಮ್ಮಲ್ಲಿರುವ ಕಷ್ಟ ನಷ್ಟಗಳನ್ನು ಬೇರೆ ಯಾರಿಗೂ ತಿಳಿಸುವುದಿಲ್ಲ. ಆದರೆ ತಮ್ಮ ಯಶಸ್ಸು ಮತ್ತು ಸಂತೋಷವನ್ನು ಎಲ್ಲರಿಗೂ ಹಂಚಿಕೊಳ್ಳುತ್ತಾರೆ. ಹೊಸ ಕೆಲಸವನ್ನು ಆರಂಭಿಸುವ ವೇಳೆ ಹೆಚ್ಚಿನ ಎಚ್ಚರಿಕೆ ವಹಿಸುತ್ತಾರೆ. ಅಳುಕಿನ ಸ್ವಭಾವವಿರುವುದಿಲ್ಲ. ಇವರನ್ನು ನಂಬಿದವರಿಗೆ ಯಾವುದೇ ತೊಂದರೆ ಎದುರಾಗದು. ಆದರೆ ಇವರಿಗೆ ಬೇರೆಯವರಲ್ಲಿ ವಿಶ್ವಾಸ ಮೂಡುವುದಿಲ್ಲ. ಹಣಕಾಸಿನ ವ್ಯವಹಾರದಲ್ಲಿ ಹೆಚ್ಚಿನ ಜ್ಞಾನ ದೊರೆಯುತ್ತದೆ. ಬೇರೆಯವರ ಅಧೀನದಲ್ಲಿ ಕೆಲಸ ಮಾಡುವ ಹಂಬಲವಿರುವುದಿಲ್ಲ. ಸ್ವಂತ ಉದ್ದಿಮೆ ಅಥವಾ ವ್ಯಾಪಾರದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಬೇರೆಯವರಿಂದ ಯಾವುದೇ ಸಹಾಯ ನಿರೀಕ್ಷಿಸುವುದಿಲ್ಲ. ಅದೇ ರೀತಿಯಲ್ಲಿ ಬೇರೆಯವರಿಗೆ ಸಹಾಯ ಮಾಡುವ ಮನಸ್ಸು ಉಂಟಾಗುವುದಿಲ್ಲ.

ಪೂರ್ವಾಭಾದ್ರ ನಕ್ಷತ್ರದ 2ನೇ ಪಾದ ಅಥವಾ ಹೆಸರು ಸೊ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವಿರಿ. ಆತಂಕದ ಪರಿಸ್ಥಿತಿಯಲ್ಲಿ ನಿಮ್ಮ ಸಹಾಯಕ್ಕೆ ಆತ್ಮೀಯರ ದಂಡೇ ಬರುತ್ತದೆ. ಉದ್ಯೋಗದಲ್ಲಿ ಯಾವುದೇ ಆತಂಕವಿರುವುದಿಲ್ಲ. ಉತ್ತಮ ಅವಕಾಶ ದೊರೆಯುವ ಕಾರಣ ಉದ್ಯೋಗವನ್ನು ಬದಲಿಸಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ದೈಹಿಕ ವ್ಯಾಯಾಮಕ್ಕೆ ಒತ್ತು ನೀಡುವಿರಿ. ನಿಮ್ಮ ತಪ್ಪಿನಿಂದಾಗಿ ಕುಟುಂಬದ ಸದಸ್ಯರು ತೊಂದರೆಗೆ ಒಳಗಾಗುತ್ತಾರೆ. ಅನಾವಶ್ಯಕವಾಗಿ ಬೇರೆಯವರ ವಿಚಾರಗಳಲ್ಲಿ ತಲೆ ಹಾಕುವುದಿಲ್ಲ. ನಿಮಗಿಷ್ಟವಾಗುವಂತಹ ಪದಾರ್ಥಗಳನ್ನು ಕೊಳ್ಳುವಿರಿ. ಬೇರೆಯವರ ಮಾತನ್ನು ಆಲಿಸುವುದಿಲ್ಲ. ಒಳ್ಳೆಯದು ಕೆಟ್ಟದ್ದು ಎಂದು ಅರಿತುಕೊಳ್ಳುವ ಭಾವನೆ ಇರುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ. ಮಕ್ಕಳ ಜೀವನದಲ್ಲಿ ಉತ್ತಮ ಬದಲಾವಣೆಗಳು ಉಂಟಾಗಲಿವೆ.

ಪೂರ್ವಾಭಾದ್ರ ನಕ್ಷತ್ರದ 3ನೇ ಪಾದ ಅಥವಾ ಹೆಸರು ದ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಉತ್ತಮ ವಿದ್ಯಾಭ್ಯಾಸವಿರುತ್ತದೆ. ಉನ್ನತ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಉಂಟಾಗುತ್ತದೆ. ಚಿಕ್ಕವಯಸ್ಸಿನಲ್ಲಿ ನಾಯಕತ್ವದ ಗುಣವಿರುತ್ತದೆ. ತಮ್ಮ ಸಹಪಾಠಿಗಳಿಗೆ ಕಲಿಕೆಯ ವಿಚಾರದಲ್ಲಿ ಸಹಾಯ ಮಾಡುತ್ತಾರೆ. ವಿದ್ಯೆಗಿಂತಲೂ ಹೆಚ್ಚಿನ ಬುದ್ಧಿಶಕ್ತಿ ಇರುತ್ತದೆ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆಗಳು ಉಂಟಾಗಲಿವೆ. ಯಾವುದೇ ವಿಚಾರದಲ್ಲಿಯೂ ಧೃಡವಾದ ನಿಲುವು ತೆಗೆದುಕೊಳ್ಳುವುದಿಲ್ಲ. ಸಮಯ ಸಂದರ್ಭಕ್ಕೆ ಹೊಂದಿಕೊಂಡು ಜೀವನ ನಡೆಸುವರು. ಇವರ ಮನಸ್ಸಿನಲ್ಲಿ ವಿಚಾರಗಳು ದೊಡ್ಡ ಮಟ್ಟದಲ್ಲಿ ಇರುತ್ತವೆ. ಆದಾಯಕ್ಕೆ ತಕ್ಕಂತಹ ಖರ್ಚು ವೆಚ್ಚಗಳು ಇರುತ್ತವೆ. ಆಧುನಿಕತೆಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ವಿದೇಶಕ್ಕೆ ಹೋಗುವ ಸಾಧ್ಯತೆಗಳಿವೆ. ಸ್ವತಂತ್ರವಾಗಿ ನಿರ್ವಹಿಸುವ ಕೆಲಸ ಕಾರ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತವೆ. ರಾಜಕೀಯದಲ್ಲಿ ಆಸಕ್ತಿ ಇರುತ್ತದೆ. ನಿಮ್ಮ ತಪ್ಪಿಗೆ ಬೇರೆಯವರನ್ನು ಹೊಣೆ ಮಾಡುವಿರಿ. ಆತ್ಮವಿಶ್ವಾಸದ ಕೊರತೆ ಸದಾ ಕಾಡುತ್ತದೆ. ಹಣಕಾಸಿನ ಬಗ್ಗೆ ಹೆಚ್ಚಿನ ಆಸೆ ಮತ್ತು ನಿರೀಕ್ಷೆ ಇರುತ್ತದೆ.

ಪೂರ್ವಾಭಾದ್ರ ನಕ್ಷತ್ರದ 4ನೇ ಪಾದ ಅಥವಾ ಹೆಸರು ದಿ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಏಕಾಂಗಿಯಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಹೊಸ ರೀತಿಯ ಜೀವನ ಶೈಲಿಯಲ್ಲಿ ಆಸಕ್ತಿ ಉಂಟಾಗುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸ್ನೇಹವನ್ನು ಬೆಳೆಸುವಿರಿ. ಜೀವನದಲ್ಲಿ ನಿಮಗಿಂತ ಮೇಲ್ಮಟ್ಟದಲ್ಲಿರುವ ವ್ಯಕ್ತಿಗಳ ಜೊತೆ ಗೆಳೆತನ ಬೆಳೆಸುವಿರಿ. ನಿಮ್ಮದೇ ತಪ್ಪಿನಿಂದಾಗಿ ತೊಂದರೆಗೆ ಸಿಲುಕುವಿರಿ. ಕುಟುಂಬದಲ್ಲಿನ ಹಿರಿಯ ವ್ಯಕ್ತಿಗಳಿಗೆ ಅನಾರೋಗ್ಯದ ತೊಂದರೆ ಇರುತ್ತದೆ. ಮಧ್ಯವಯಸ್ಸಿನ ವ್ಯಕ್ತಿಗಳು ಸುಖ ಶಾಂತಿಯ ಜೀವನ ಸಾಗಿಸುತ್ತಾರೆ. ತಂದೆ ತಾಯಿಯರ ಬಗ್ಗೆ ಗೌರವ ಪ್ರೀತಿ ಇರುತ್ತದೆ. ಬಂಧು ಬಳಗದಲ್ಲಿ ನಿಮಗೆ ವಿಶೇಷವಾದಂತಹ ಪ್ರಾತಿನಿಧ್ಯ ಲಭಿಸುತ್ತದೆ. ಹಣಕಾಸಿನ ವಿಚಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳುವಿರಿ. ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ವಿವಾದವನ್ನು ಸೃಷ್ಟಿಸುತ್ತದೆ. ಕುಟುಂಬದಲ್ಲಿ ನಿಮ್ಮದೇ ಮಾತಿಗೆ ಪೂರ್ಣ ಒಪ್ಪಿಗೆ ದೊರೆಯುತ್ತದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ.

ಬರಹ: ಎಚ್‌. ಸತೀಶ್, ಜ್ಯೋತಿಷಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.