ವೇದವ್ಯಾಸ ಜಯಂತಿ ರಾಷ್ಟ್ರಗುರು ಜಯಂತಿಯಾಗಲಿ; ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಪ್ರತಿಪಾದನೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೇದವ್ಯಾಸ ಜಯಂತಿ ರಾಷ್ಟ್ರಗುರು ಜಯಂತಿಯಾಗಲಿ; ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಪ್ರತಿಪಾದನೆ

ವೇದವ್ಯಾಸ ಜಯಂತಿ ರಾಷ್ಟ್ರಗುರು ಜಯಂತಿಯಾಗಲಿ; ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಪ್ರತಿಪಾದನೆ

Vedavyasa Jayanti: ವೇದವ್ಯಾಸ ಜಯಂತಿ ಅಂಗವಾಗಿ ಇಂದು ಬೆಂಗಳೂರಿನ ಗಿರಿನಗರದ ಶ್ರೀ ಭಾಗವತ ಆಶ್ರಮದಲ್ಲಿ ಮೇ 20, ಸೋಮವಾರದಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ವೇದವ್ಯಾಸರ ಬಗ್ಗೆ ಬರೆದಿರುವ ಲೇಖನ ಇಲ್ಲಿದೆ.

ವೇದವ್ಯಾಸ ಜಯಂತಿ 2024
ವೇದವ್ಯಾಸ ಜಯಂತಿ 2024

ಮಹಾಭಾರತವನ್ನು ಬರೆದ, ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ ವೇದವ್ಯಾಸ ಜಯಂತಿಯನ್ನು ವರ್ಷದಲ್ಲಿ ಹಲವಾರು ದಿನಾಂಕಗಳಲ್ಲಿ ಆಚರಿಸಲಾಗುತ್ತದೆ, ವೇದವ್ಯಾಸರು ಧರ್ಮ ಪ್ರಚಾರಕ್ಕಾಗಿ ಹಲವಾರು ಬಾರಿ ಕಾಣಿಸಿಕೊಂಡರು ಎಂದು ನಂಬಲಾಗಿದೆ. ಆದ್ದರಿಂದ ವೇದವ್ಯಾಸ ಜಯಂತಿ ಆಚರಿಸುವ ದಿನಾಂಕಗಳು ಪ್ರದೇಶದಿಂದ ಪ್ರದೇಶಕ್ಕೆ ಮತ್ತು ಸಮುದಾಯದಿಂದ ಸಮುದಾಯಕ್ಕೆ ಭಿನ್ನವಾಗಿರುತ್ತವೆ. ಈ ಬಾರಿ ಮೇ 20(ಸೋಮವಾರ) ವೇದವ್ಯಾಸ ಜಯಂತಿಯನ್ನು ಆಚರಿಸಲಾಗುತ್ತಿದೆ.

ವೇದವ್ಯಾಸರು ವೈಶಾಖ ಶುದ್ಧ ದ್ವಾದಶಿಯಂದು ಯಮುನಾ ದ್ವೀಪದಲ್ಲಿ ಪ್ರಾದುರ್ಭವಿಸಿದರು. ಅದರಿಂದಲೇ ಅವರಿಗೆ ‘ದ್ವೈಪಾಯನ’ ಎಂದು ಹೆಸರು ಪ್ರಾಪ್ತವಾಯಿತು. ಋಷಿಗಳ ಆಹಾರವೆನಿಸಿದ ಬೋರೇ ಹಣ್ಣು (ಬದರಿ) ಗಳನ್ನು ನೀಡುವ ಮರಗಳ ಪ್ರದೇಶವನ್ನೇ ಆಶ್ರಮರೂಪದಲ್ಲಿ ಸ್ವೀಕರಿಸಿದ್ದರಿಂದ ‘ಬಾದರಾಯಣ’ ಎಂದು ಪ್ರಖ್ಯಾತರಾದರು. ವೇದವನ್ನು ‘ವಿಕರ್ಷಣ (ವಿಭಾಗ) ಮಾಡಿದ್ದರಿಂದ ನೀಲಮೇಘ ಶ್ಯಾಮರಾದ ವ್ಯಾಸರಿಗೆ ‘ಕೃಷ್ಣ ಎಂಬ ಹೆಸರು ಬಂದಿದೆ.

ವೇದವ್ಯಾಸ ಜಯಂತಿಯಂದು ವಿಶೇಷ ಕಾರ್ಯಕ್ರಮ

ವೇದವ್ಯಾಸರ ಜಯಂತಿ ನಿಮಿತ್ತ ಉಡುಪಿ ಶ್ರೀ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅವರು ಬೆಂಗಳೂರಿನ ಗಿರಿನಗರದ ಶ್ರೀ ಭಾಗವತ ಆಶ್ರಮದಲ್ಲಿ ಮೇ 20, ಸೋಮವಾರದಂದು ದಿನಪೂರ್ಣ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ವೇದವ್ಯಾಸ ಹೋಮ, ಸಂಸ್ಥಾನ ಪೂಜೆ, ವೇದಾಧ್ಯಯನ ಮಾಡಿದ ಪಂಡಿತರಾದ ಉತ್ತರಾದಿ ಮಠದ ಉಪನ್ಯಾಸಕ ಶ್ರೀ ಸತ್ಯಬೋಧಾಚಾರ್ಯ ಹೊನ್ನಾಳಿ, ಈರೋಡು ಗುರುಕುಲದ ದಾಮೋದರ ಆಚಾರ್ಯ ಮತ್ತು ಬೆಂಗಳೂರಿನ ಪೇಜಾವರ ವಿದ್ಯಾಪೀಠದ ಉಪನ್ಯಾಸಕ ಮಧ್ವೇಶ ನಡಿಲ್ಲಾಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ವಿಶೇಷ ಅಭಿನಂದನಾ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಈ ಸಂದರ್ಭದಲ್ಲಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅವರು ವೇದವ್ಯಾಸರಿಗೆ ಪರಿಮಳ ಭರಿತ ಅಕ್ಷರ ಪುಷ್ಪಮಾಲೆ ಸಮರ್ಪಣೆ ಮಾಡಿದ್ದಾರೆ. ಅವರೇ ಬರೆದ ವಿಶೇಷ ಲೇಖನ, ನಮ್ಮ ಓದುಗರಿಗೆ.

ವೇದವಿದ್ಯೆಯು ಯಾರಿಗೆ ಎಟುಕಲಾರದೋ ಅಂಥವರಿಗೂ ಜ್ಞಾನದಲ್ಲಿ, ಮೋಕ್ಷದಲ್ಲಿ ಅರ್ಹತೆ ಇರುವುದರಿಂದ ಅವರ ಜ್ಞಾನಕ್ಕಾಗಿ ಮಹಾಭಾರತ-ಭಾಗವತಾದಿ ಸಾತ್ತ್ವಿಕ ಪುರಾಣಗಳನ್ನು ರಚಿಸಿದರು. ಜ್ಞಾನಯೋಗ್ಯರಾರೂ ಜ್ಞಾನವಂಚಿತರಾಗಬಾರದೆಂಬ ಕಳಕಳಿಯಿಂದ ಅಪೂರ್ವ ಜ್ಞಾನಕಾರ್ಯವನ್ನು ಸಾಧಿಸಿದರು. ಅವರೇ ಭಗವಾನ್ ಶ್ರೀ ವೇದವ್ಯಾಸರು. ಜಯತಿ ಪರಾಶರಸೂನುಃ ಸತ್ಯವತೀ ಹೃದಯನಂದನೋ ವ್ಯಾಸಃ ಯಸ್ಯಾಸ್ಯಕಮಲಗಲಿತಂ ವಾಙ್ಮಯಮಮೃತಂ ಜಗತ್ ಪಿಬತಿ ॥ (ಎಂದಿದೆ ಹರಿವಂಶ)

ವೇದಗಳನ್ನು 4 ಭಾಗಗಳಾಗಿ ವಿಭಜಿಸಿದ ವೇದವ್ಯಾಸರು

ವೇದವ್ಯಾಸ ಶಬ್ದದ ಅವಯವಗಳನ್ನು ವಿಶ್ಲೇಷಿಸಿದಾಗ, ವೇದವ್ಯಾಸ - ವೇದಾನ್ ವ್ಯಸತೀತಿ ವೇದವ್ಯಾಸಃ.... .ವೇದಗಳನ್ನು ವಿಭಾಗ ಮಾಡಿದವರು ಎಂದರ್ಥ. ಮೂಲ ವೇದವೊಂದೇ ಮೊದಲಿತ್ತು. ತ್ರೇತಾಯುಗದಲ್ಲಿ ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವಣ ವೇದ ಎಂಬುದಾಗಿ ನಾಲ್ಕು ವಿಭಾಗಗಳನ್ನು ಹೊಂದಿತು. ಆ ವಿಭಕ್ತ ವೇದಗಳೂ ದ್ವಾಪರಯುಗದಲ್ಲಿ ಬುದ್ಧಿಹ್ರಾಸಾದಿಗಳಿಂದ ಬುದ್ಧಿಗೆ ಗ್ರಹಣ ಮಾಡಲು ಅಶಕ್ಯವಾದಾಗ ವೇದಜ್ಞಾನದ ರಕ್ಷಣೆಗಾಗಿ ಬ್ರಹ್ಮಾದಿಗಳು ಪ್ರಾರ್ಥಿಸಿದಾಗ ಭಗವಾನ್ ನಾರಾಯಣನು ಪರಾಶರರಿಂದ ಸತ್ಯವತಿಯಲ್ಲಿ ವ್ಯಾಸರೂಪದಿಂದ ಪ್ರಕಟನಾದ.

ವ್ಯಾಸರು ಋಗ್ವೇದವನ್ನು ಪುನಃ 24 ಶಾಖೆಗಳಲ್ಲಿ ವಿಭಾಗ ಮಾಡಿದರು. ವಿಭಕ್ತ ಈ ವೇದಗಳಿಗೆ ತಮ್ಮ ಶಿಷ್ಯರಾದ ಪೈಲರನ್ನು ಪ್ರಸಾರಕ್ಕಾಗಿ ನಿಯೋಜಿಸಿದರು. ಯಜುರ್ವೇದವನ್ನು 101 ಶಾಖೆಗಳಲ್ಲಿ ವಿಭಾಗ ಮಾಡಿದರು. ಆ ವಿಭಕ್ತ ಶುಕ್ಲ ಯಜುರ್ವೇದಕ್ಕೆ ಸೂರ್ಯನನ್ನು, ಕೃಷ್ಣ ಯಜುರ್ವೇದಕ್ಕೆ ವೈಶಂಪಾಯನರನ್ನು ಪ್ರಸಾರಕ್ಕಾಗಿ ನಿಯೋಜಿಸಿದರು. ಆ ಶುಕ್ಲ ಯಜುರ್ವೇದವನ್ನೇ ಸೂರ್ಯನಾರಾಯಣನ ಉಪಾಸನೆಯಿಂದ ಯಾಜ್ಞವಲ್ಕ್ಯರು ಪಡೆದರು. ಸಾಮವೇದವನ್ನು 1000 ಶಾಖೆಗಳಲ್ಲಿ ವಿಭಾಗ ಮಾಡಿ, ಆ ವಿಭಕ್ತ ವೇದದ ಪ್ರಸಾರಕ್ಕಾಗಿ ಜೈಮಿನಿ ಮುನಿಯನ್ನು ನಿಯೋಜಿಸಿದರು. 12 ಶಾಖೆಗಳಲ್ಲಿ ವಿಭಾಗಗಳನ್ನು ಹೊಂದಿರುವ ಅಥರ್ವಣವೇದದ ಪ್ರಸಾರಕ್ಕಾಗಿ ಸುಮಂತುವನ್ನು ಭಗವಾನ್ ವೇದವ್ಯಾಸರು ನಿಯೋಜಿಸಿದರು. ವೈವಸ್ವತ ಮನ್ವಂತರದ 28ನೇ ದ್ವಾಪರಯುಗದಲ್ಲಿ ಅವತರಿಸಿ ಈ ವೇದ ವಿಭಾಗ ಕಾರ್ಯವನ್ನು ವ್ಯಾಸರು ಮಾಡಿದರು. ಬ್ರಹ್ಮದೇವರ ಸದನವೆನಿಸಿದ ಮೇರುಪರ್ವತದಲ್ಲಿ ವಿರಾಜಮಾನರಾಗಿ ಬ್ರಹ್ಮಾದಿ ದೇವತೆಗಳಿಗೆ ವಿಭಕ್ತ ವೇದಗಳನ್ನು ಉಪದೇಶಿಸಿದರು. ಅವುಗಳ ಅರ್ಥ ನಿರ್ಣಯಕ್ಕಾಗಿ ಯುಕ್ತಿ ಪ್ರಧಾನವಾದ ಬ್ರಹ್ಮಸೂತ್ರವನ್ನು ರಚಿಸಿದರು.

ಅನುಸರಣೀಯ ಜ್ಞಾನಪ್ರಸಾರದ ವ್ಯವಸ್ಥೆ

ಮಹಾಭಾರತವನ್ನು ರಚಿಸಿ ಮನುಷ್ಯಲೋಕದಲ್ಲಿ ಅದರ ಪ್ರಸಾರಕ್ಕಾಗಿ ವೈಶಂಪಾಯನರನ್ನು ನಿಯೋಜಿಸಿದರು. ಮನುಷ್ಯ-ಗಂಧರ್ವಾದಿ ವರ್ಗದಲ್ಲೂ ಅದರ ಪ್ರಸಾರಕ್ಕಾಗಿ ತನ್ನ ಪುತ್ರನಾದ ಶುಕರನ್ನು ನೇಮಿಸಿದರು. ನಾರದರಿಗೆ ಮಹಾಭಾರತಾದಿಗಳ ಪಾಠ ಹೇಳಿ ದೇವಲೋಕದಲ್ಲಿ ಅವುಗಳ ಪ್ರಸಾರಕ್ಕಾಗಿ ನಿಯೋಜಿಸಿದರು. ರೋಮಹರ್ಷಣ ಎಂಬ ಸೂತ ಸಮುದಾಯದವರನ್ನು ಸೃಜಿಸಿ ಮಹಾಭಾರತ-ರಾಮಾಯಣ-ಭಾಗವತಾದಿಗಳ ಪ್ರಸಾರಕ್ಕಾಗಿ ಅವರನ್ನು ನಿಯೋಜಿಸಿದರು.

ಸನತ್ಕುಮಾರ ಮೊದಲಾದವರನ್ನು ಯೋಗಶಾಸ್ತ್ರದ ಪ್ರವರ್ತಕರನ್ನಾಗಿ ನಿಯೋಜಿಸಿ, ಕರ್ಮಯೋಗಶಾಸ್ತ್ರದ ಪ್ರವರ್ತಕರನ್ನಾಗಿ ಭೃಗು ಮೊದಲಾದ ಋಷಿಗಳನ್ನು ನಿಯೋಜಿಸಿದರು. ಕರ್ಮಕಾಂಡದ ಅರ್ಥಗಳನ್ನು ನಿರ್ಣಯ ಮಾಡುವುದಕ್ಕೆ ಅನುಕೂಲವಾದ ನ್ಯಾಯಪ್ರಧಾನ ಕರ್ಮ ಮೀಮಾಂಸಾ ಶಾಸ್ತ್ರವನ್ನು ತಮ್ಮ ಶಿಷ್ಯನಾದ ಜೈಮಿನಿಯಿಂದ ಮಾಡಿಸಿದರು. ದೇವತಾಕಾಂಡದ ಅರ್ಥನಿರ್ಣಯಕ್ಕೆ ಅನುಕೂಲವಾಗುವ ದೇವಮೀಮಾಂಸಾ ಶಾಸ್ತ್ರದ ಆದಿ-ಅಂತ್ಯ ಭಾಗಗಳನ್ನು ತಾನು ರಚಿಸಿ ಉಳಿದ ಭಾಗಗಳನ್ನು ಶೇಷ-ಪೈಲರಿಂದ ಮಾಡಿಸಿದರು.

ಪಶುಪತಿ ಪ್ರಣೀತವಾದ ಪಾಶುಪತಶಾಸ್ತ್ರವನ್ನು ಆಧರಿಸಿ ಶಿವಪಾರಮ್ಯಪರವಾದ ಶೈವ ಪುರಾಣಗಳನ್ನು ವೇದವ್ಯಾಸರು ರಚಿಸಿದರು. ಪಂಚರಾತ್ರಾಗಮವನ್ನು ಆಧರಿಸಿ ವಿಷ್ಣುಪಾರಮ್ಯಪರವಾದ ಸಾತ್ವಿಕ ಪುರಾಣಗಳನ್ನು ತತ್ತ್ವಜ್ಞಾನಕ್ಕಾಗಿ ರಚಿಸಿದರು. ವೇದದಲ್ಲಿ ಮೇಲ್ನೋಟಕ್ಕೆ ಕಾಣುವ ಅರ್ಥಗಳನ್ನು ಆಧರಿಸಿ ಇನ್ನಿತರ ಪುರಾಣ ಸಮುದಾಯವನ್ನು ರಚಿಸಿದರು. ಇವರ ವ್ಯಾಪಕವಾದ ಸುವ್ಯವಸ್ಥಿತ ಜ್ಞಾನಪ್ರಸಾರಕಾರ್ಯದಿಂದ ಗೌತಮರ ಶಾಪದಿಂದ ಜ್ಞಾನಸಂಪತ್ತನ್ನು ಕಳೆದುಕೊಂಡ ದ್ವಿಜರೂ ಕೂಡ ಜ್ಞಾನವನ್ನು ಪಡೆದು ಕೃತಕೃತ್ಯರಾದರು.

ಕುರುವಂಶ ತಂತುವರ್ಧನರು

ಕುರುವಂಶವು ಶಂತನು ಚಕ್ರವರ್ತಿಯ ಪುತ್ರರಾದ ಚಿತ್ರಾಂಗದ-ವಿಚಿತ್ರವೀರ್ಯರ ನಿಧನದಿಂದ ವಿನಾಶದಂಚಿಗೆ ಬಂದಾಗ ತಾಯಿಯಾದ ಸತ್ಯವತಿಯ ಕೋರಿಕೆಯಂತೆ ವಿಚಿತ್ರವೀರ್ಯನ ಮಡದಿಯಂದಿರಾದ ಅಂಬಿಕಾ-ಅಂಬಾಲಿಕೆಯರಲ್ಲಿ ಯಥಾಕ್ರಮ ಧೃತರಾಷ್ಟ್ರ - ಪಾಂಡುರಾಜರನ್ನು ಸೃಜಿಸಿ ಕುರುಕುಲ ಸಂತಾನವನ್ನು ಪುನರುಜ್ಜೀವನಗೊಳಿಸಿ ಕುರುಕುಲ ಸಂತಾನ ವರ್ಧನರೆನಿಸಿದರು.

ವೀಕ್ಷಕ ವಿವರಣೆಯ ಪರಿಕಲ್ಪನೆ ನೀಡಿದವರು

ಮಹಾಭಾರತ ಯುದ್ಧದ ಸಮಗ್ರ ವಾರ್ತೆಯನ್ನು ಸುವ್ಯವಸ್ಥಿತವಾಗಿ ತಮ್ಮ ಶಿಷ್ಯನಾದ ಸಂಜಯನ ಮುಖದಿಂದ ಧೃತರಾಷ್ಟ್ರನಿಗೆ ತಲುಪಿಸುವ ಸಲುವಾಗಿ ಸಂಜಯನಿಗೆ ದಿವ್ಯದೃಷ್ಟಿಯನ್ನು ದಯಪಾಲಿಸಿ ಯುದ್ಧವಾರ್ತಾ ವಾಹನಾಗಿ ಆತನನ್ನು ನಿಯೋಜಿಸಿದರು. ಹೀಗಾಗಿ ಪ್ರಪ್ರಥಮವಾಗಿ ವೀಕ್ಷಕ ವಿವರಣೆಯ ಒಂದು ಪರಿಕಲ್ಪನೆಯನ್ನು ನೀಡಿದವರು ಭಗವಾನ್ ವೇದವ್ಯಾಸರು.

ಐತಿಹಾಸಿಕ ಗ್ರಂಥರಚನೆ ಮಾಡಿದ ಮೊದಲ ಮುನಿ

ಐತಿಹಾಸಿಕ ಘಟನಾವಳಿ ನಡೆದ ನಂತರ ಅದರ ಬಗ್ಗೆ ಬೆಳಕನ್ನು ಚೆಲ್ಲಬಲ್ಲ ಗ್ರಂಥವನ್ನು ರಚಿಸಿದ ಮಹನೀಯರು ಸಿಗುತ್ತಾರೆ. ಆದರೆ ವ್ಯಾಸರು ಐತಿಹಾಸಿಕ ಪುರುಷರಾದ ಧೃತರಾಷ್ಟ್ರ - ಪಾಂಡು ಮೊದಲಾದವರು ಜನಿಸುವುದಕ್ಕಿಂತ ಮೊದಲೇ ಅವರ ಪುತ್ರರ ಚರಿತ್ರೆಯನ್ನು ದಿವ್ಯಜ್ಞಾನಚಕ್ಷುಸ್ಸಿನಿಂದ ಮೊದಲೇ ನೋಡಿ ಅದರ ಬಗ್ಗೆ ಐತಿಹಾಸಿಕ ಗ್ರಂಥವೆನಿಸಿದ ಮಹಾಭಾರತವನ್ನು ರಚಿಸಿದರು. ಹೀಗಾಗಿ ವ್ಯಾಸರು ಸರ್ವಜ್ಞನಾದ ಭಗವಾನ್ ನಾರಾಯಣ ಸ್ವರೂಪರು. ಈ ದೃಷ್ಟಿಯಿಂದಲೇ ಮಹಾಭಾರತವು ‘ಕೋ ಹ್ಯನ್ಯಃ ಪುಂಡರೀಕ್ಷಾನ್ಮಹಾಭಾರತಕೃದ್ ಭವೇತ್’ ಎಂದು ಉದ್ಗರಿಸಿದೆ.

ಐತಿಹಾಸಿಕ ಗ್ರಂಥಕರ್ತನೇ ಐತಿಹಾಸಿಕ ಪುರುಷರ ನಿರ್ಮಾಣ ಕರ್ತ ಭಗವಾನ್ ವೇದವ್ಯಾಸರು ಸದಸತ್ಪಾತ್ರರ ಚಾರಿತ್ರ್ಯವನ್ನು ಮಹಾಭಾರತದಲ್ಲಿ ತೋರಿಸುವ ಮೂಲಕ ಮಾನವೀಯ ಜೀವನ ಮೌಲ್ಯ ಹಾಗೂ ಅಧ್ಯಾತ್ಮ ಸಾಧನ ಸಾರವೇನೆಂಬುದನ್ನು ತೋರಿದರು. ಇದಕ್ಕಾಗಿ ವ್ಯಾಸರಿಗೆ ಸದಸತ್ಪಾತ್ರರ ಚಿತ್ರಣ ಅನಿವಾರ್ಯವಾಗಿತ್ತು. ಅದಕ್ಕಾಗಿಯೇ ಕೌರವ-ಪಾಂಡವರ ಜನಕರಾದ ಧೃತರಾಷ್ಟ್ರ - ಪಾಂಡುರಾಜರನ್ನು ತಾವೇ ಸೃಜಿಸಿ ಕೌರವ-ಪಾಂಡವ ರೂಪ ಸದಸತ್ಪಾತ್ರಗಳನ್ನು ತಾವೇ ಸಂಪಾದಿಸಿಕೊಂಡರು.

ಮಾದರಿಯ ಗ್ರಂಥಪ್ರಸಾರದ ವೈಖರಿ

ಒಂದು ಗ್ರಂಥವನ್ನು ರಚಿಸಿ ಮುದ್ರಣ, ಜಾಹೀರಾತಿನ ಮೂಲಕ ಅದನ್ನು ಪ್ರಸಿದ್ಧಗೊಳಿಸಲು ಸಾಧ್ಯವಿಲ್ಲ. ಗ್ರಂಥದ ವ್ಯಾಖ್ಯಾನಕಾರರನ್ನು ನಿಯೋಜಿಸಿ ಅವರಿಂದ ಸುವ್ಯವಸ್ಥಿತ ಪ್ರಸಾರ ಮಾಡಿಸಿದಾಗ ಮಾತ್ರ ಗ್ರಂಥವು ಪ್ರಸಿದ್ಧಿ ಪಡೆಯಬಲ್ಲುದು ಎಂಬುದನ್ನು ವ್ಯಾಸರು ಮಾದರಿರೂಪದಲ್ಲಿ ತೋರಿಸಿದ್ದಾರೆ.

ಲೋಕವನ್ನು ರಕ್ಷಿಸಿದ ಅಮಿತ ತೇಜಸ್ವಿ

ಮಹಾಭಾರತ ಯುದ್ಧದಲ್ಲಿ ಭೀಮಸೇನನಿಗೆ ಸೋತು ಅಶ್ವತ್ಥಾಮಾಚಾರ್ಯರು ಬ್ರಹ್ಮಶಿರೋಸ್ತ್ರ ಪ್ರಯೋಗಿಸಿದಾಗ ಅದರ ಉಪಶಮನಕ್ಕಾಗಿ ಪರಮಾತ್ಮನಿಂದ ಪ್ರೇರಿತನಾದ ಅರ್ಜುನನು ಪ್ರತಿ ಬ್ರಹ್ಮಶಿರೋಸ್ತ್ರ ಪ್ರಯೋಗಿಸಿದಾಗ ಎರಡೂ ಅಸ್ತ್ರಗಳ ಸಂಘರ್ಷದಿಂದ ನಿರಪರಾಧಿಯಾದ ಸಮಗ್ರ ಜಗತ್ತೇ ವಿನಾಶದಂಚಿನಲ್ಲಿ ಸಿಲುಕಿತು. ಆಗ ಭಗವಾನ್ ವೇದವ್ಯಾಸರು ಎರಡೂ ಅಸ್ತ್ರಗಳನ್ನು ಮಧ್ಯದಲ್ಲಿ ನಿಂತು ನಿರೋಧಿಸುತ್ತಾರೆ. ಜಗತ್ತನ್ನು ವಿನಾಶದಿಂದ ರಕ್ಷಿಸುತ್ತಾರೆ. ವೇದವ್ಯಾಸರು ಈ ಎರಡೂ ಅಸ್ತ್ರಗಳನ್ನು ತಡೆಹಿಡಿಯಬೇಕಾದರೆ, ಅವರಲ್ಲಿ ಅಪಾರವಾದ ತೇಜಸ್ಸು (ಶಕ್ತಿ) ಇಲ್ಲದಿದ್ದರೆ ಸಾಧ್ಯವೇ? ಹೀಗಾಗಿ ವ್ಯಾಸರು ಯಃ ಕಶ್ಚನ ಋಷಿಯಲ್ಲ. ಅಮಿತ ತೇಜಸ್ಸನ್ನು ಪಡೆದ ಭಗವಂತನ ರೂಪ. ಈ ದೃಷ್ಟಿಯಿಂದಲೇ ಅವರ ಶಿಷ್ಯರಾದ ವೈಶಂಪಾಯನರು ವೇದವ್ಯಾಸರನ್ನು ಕುರಿತು ‘‘ವ್ಯಾಸಾಯ ಅಮಿತತೇಜಸೇ ಎಂದು ಉದ್ಗರಿಸಿದ್ದಾರೆ.

ಕೀಟ ಸಾಮ್ರಾಟ ಆಯಿತು

ವೇದವ್ಯಾಸರು ಒಮ್ಮೆ ಮಾರ್ಗದಲ್ಲಿ ಸಾಗುತ್ತಿದ್ದಾಗ ಅವರ ದೃಷ್ಟಿಗೆ ಒಂದು ಕೀಟವು ಗೋಚರವಾಯಿತು. ಅದು ಬಂಡಿಯ ಶಬ್ದವನ್ನು ಕೇಳಿ ತನ್ನ ಶರೀರವನ್ನು ಬಂಡಿಯ ಚಕ್ರದಿಂದ ರಕ್ಷಿಸಿಕೊಳ್ಳಲು ಧಾವಿಸುತ್ತಿತ್ತು. ವ್ಯಾಸರು ಪ್ರಶ್ನಿಸಿದಾಗ ಅದು ತನ್ನ ಈ ಉದ್ದೇಶವನ್ನು ಸ್ಪಷ್ಟಪಡಿಸಿತು. ಆಗ ವ್ಯಾಸರು ಈ ಕ್ಷುದ್ರ ಕೀಟ ದೇಹದಲ್ಲಿ ನಿನಗೇಕೆ ದುರಭಿಮಾನ? ನಾನು ನಿನಗೆ ರಾಜದೇಹವನ್ನು ನೀಡುತ್ತೇನೆಂದು ಔದಾರ್ಯವನ್ನು ತೋರಿದರು. ಆದರೆ ಆ ಕೀಟವು ತನ್ನ ದೇಹವನ್ನು ಬಿಡಲು ಬಯಸಲಿಲ್ಲ. ಆಗ ಆ ಕೀಟ ದೇಹದಲ್ಲೇ ಅದನ್ನು ರಾಜನನ್ನಾಗಿ ಮಾಡಿದರು. ಎಲ್ಲಾ ಸಾಮಂತರಾಜರು ಅದಕ್ಕೆ ತಲೆಬಾಗಿ ಕಪ್ಪ-ಕಾಣಿಕೆಗಳನ್ನು ಅರ್ಪಿಸಿ ಗೌರವಿಸುವಂತೆ ಪ್ರಭಾವ ಬೀರಿದರು. ಈ ವಿಷಯದ ಬಗ್ಗೆ ಸಂತ ವಾದಿರಾಜರು ‘ಕ್ರಿಮಿಯಿಂದ ರಾಜ್ಯವಾಳಿಸಿದೆ’ ಎಂದು ಉದ್ಗರಿಸಿದ್ದಾರೆ.

ಪರಲೋಕಕ್ಕೆ ಹೋದವರನ್ನು ತೋರಿದ ಘನಮಹಿಮರು

ಹಿಮಾಲಯದಲ್ಲಿ ತಪಸ್ಸನ್ನು ಆಚರಿಸುತ್ತಿರುವ ಧೃತರಾಷ್ಟ್ರ-ಗಾಂಧಾರಿಯ ಆಶ್ರಮಕ್ಕೆ ಒಮ್ಮೆ ವ್ಯಾಸರು ಅನುಗ್ರಹಿಸಲು ಆಗಮಿಸಿದರು. ವರವನ್ನು ಕೇಳಿಕೊಳ್ಳಲು ಅವರಿಗೆ ವ್ಯಾಸರು ಸೂಚಿಸಿದರು. ಆಗ ಧೃತರಾಷ್ಟ್ರ-ಗಾಂಧಾರಿ ದಂಪತಿ ಯುದ್ಧದಲ್ಲಿ ಹೋರಾಡಿ ವೀರಸ್ವರ್ಗವನ್ನು ಹೊಂದಿದ ಯೋಧರನ್ನು ಕಾಣಬೇಕೆಂದು ಬಯಸಿದಾಗ ವ್ಯಾಸರು ತನ್ನ ಪ್ರಭಾವದಿಂದ ಸ್ವರ್ಗವನ್ನು ಹೊಂದಿದ ಎಲ್ಲಾ ವೀರಯೋಧರನ್ನು ಕರೆತಂದು ತೋರಿಸುತ್ತಾರೆ.

ಈ ಕಥೆಯನ್ನು ವ್ಯಾಸ ಶಿಷ್ಯರಾದ ವೈಶಂಪಾಯನರು ಪರೀಕ್ಷಿತನ ಸುತನಾದ ಜನಮೇಜಯನಿಗೆ ಹೇಳಿದಾಗ, ಆತ ತನ್ನ ತಂದೆ ಭಾಗವತವನ್ನು ಕೇಳಿ ವೈಕುಂಠವನ್ನು ಸೇರಿದ್ದಾನೆ. ಆತನನ್ನೂ ತಂದು ಎನಗೆ ತೋರಿಸಿರಿ ಎಂದು ಅಲ್ಲೇ ಇದ್ದ ವ್ಯಾಸರನ್ನು ಪ್ರಾರ್ಥಿಸಿದ. ಆಗ ವ್ಯಾಸರು ವೈಕುಂಠದಿಂದ ಪರೀಕ್ಷಿತನನ್ನು ತಂದು ತೋರಿಸಿ ತನ್ನ ಸಾಮರ್ಥ್ಯ ಹಾಗೂ ಅದನ್ನು ನಿರೂಪಿಸುವ ಮಹಾಭಾರತ ಗ್ರಂಥದಲ್ಲಿ ದೃಢ ವಿಶ್ವಾಸವನ್ನು ಮೂಡಿಸಿದರು.

ಮುಂದೆ ಆಗಬಹುದಾದ ಕೌರವ-ಪಾಂಡವರ ಕಲಹದಿಂದ ತನ್ನ ತಾಯಿ ಸತ್ಯವತಿ ಮನಃ ಕ್ಷೋಭೆಯನ್ನು ಹೊಂದಬಾರದು. ಅಂತಿಮಕಾಲದಲ್ಲಿ ಮನಃಶಾಂತಿಯಿಂದಲೇ ಅವಳು ಕಾಲಕಳೆದು ಧ್ಯಾನಮಾಡಿ ಕೃತಾರ್ಥಳಾಗಬೇಕೆಂಬ ಬಯಕೆಯಿಂದ ವ್ಯಾಸರು ತನ್ನ ತಾಯಿಯನ್ನು ಹಸ್ತಿನಾಪುರದಿಂದ ತನ್ನ ಆಶ್ರಮಕ್ಕೆ ಕರೆದುಕೊಂಡು ಹೋದರು. ಅಲ್ಲಿ ಅಂತಿಮವಾಗಿ ಮನಃಶಾಂತಿಕರವಾದ ಧ್ಯಾನಮಾರ್ಗವನ್ನು ಉಪದೇಶಿಸಿ ನಿಜಧ್ಯಾನದಿಂದ ಆಕೆ ಮನೋ ನೆಮ್ಮದಿಯಿಂದ ಸದ್ಗತಿಯನ್ನು ಹೊಂದುವ ವ್ಯವಸ್ಥೆ ಮಾಡಿದರು. ಹೀಗಾಗಿ ಸತ್ಯವತಿಯ ಹೃದಯಕ್ಕೆ ಅಂತಿಮಕಾಲದಲ್ಲಿ ಆನಂದವನ್ನು ನೀಡಿದರು. ಅವರ ಮುಖಕಮಲದಿಂದ ಹರಿದು ಬಂದ ವಾಗಮೃತವನ್ನೇ (ಮಹಾಭಾರತಾದಿ ಆಕರಗ್ರಂಥಗಳನ್ನು) ಆಶ್ರಯಿಸಿ ಕವಿಗಳು, ಧರ್ಮ ಶಾಸ್ತ್ರಕಾರರು ಹಾಗೂ ಅರ್ಥಶಾಸ್ತ್ರಕಾರು ಮುಂತಾದ ವಿವಿಧ ಕ್ಷೇತ್ರದ ವಿದ್ವಾಂಸರು ತಮ್ಮ ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಪ್ರಸಿದ್ಧಿಯನ್ನು ಪಡೆದು ಕೃತಕೃತ್ಯರಾದರು.

ಭಾರತ ಚಿರಋಣಿಯಾಗಿದೆ

ಭಾರತ ದೇಶವನ್ನು ಗೌರವದ ‘ಜಗದ್ಗುರು’ ಸ್ಥಾನಕ್ಕೆ ಏರಿಸಿದವರು ಮಹಾಭಾರತ ಕೃತಿ ರಚಿಸಿದ ಭಗವಾನ್ ವೇದವ್ಯಾಸರು. ಹೀಗಾಗಿ ಭಾರತದೇಶವು ಭಗವಾನ್ ವೇದವ್ಯಾಸರಿಗೆ ಎಂದಿಗೂ ಚಿರಋಣಿಯಾಗಿದೆ. ಆದರೆ ಅಂತಹ ದೊಡ್ಡ ಕೊಡುಗೆಯನ್ನು ನೀಡಿದ ವೇದವ್ಯಾಸರ ಜಯಂತಿಯ ಆಚರಣೆಯನ್ನು ನಮ್ಮ ಉಭಯ ಸರಕಾರಗಳು ನಡೆಸುವುದಿಲ್ಲ. ಅವರ ಹೆಸರಿನಲ್ಲೇ ಒಂದೇ ಒಂದು ವಿಶ್ವವಿದ್ಯಾನಿಲಯವೂ ಇಲ್ಲ. ಇದು ನಮ್ಮ ಭಾರತ ದೇಶವನ್ನೂ ಹಾಗೂ ರಾಷ್ಟ್ರಗುರು ವೇದವ್ಯಾಸರನ್ನೂ ನಾವೇ ಅಪಮಾನಿಸಿದಂತಾಗಿದೆ.

ರಾಷ್ಟ್ರಗುರು ಜಯಂತಿಯಾಗಲಿ

ಇನ್ನಾದರೂ ಎಚ್ಚೆತ್ತು ಸರ್ಕಾರವು ‘ವೇದವ್ಯಾಸರ ಜಯಂತಿ’ ಯನ್ನು ‘ರಾಷ್ಟ್ರಗುರು ಜಯಂತಿ’ ರೂಪದಲ್ಲಿ ಆಚರಿಸುವ ವಿವೇಕದ ಮಾರ್ಗವನ್ನು ತುಳಿದರೆ ಅದು ದೇಶಕ್ಕೆ ಸಂದ ಗೌರವವೆನಿಸುತ್ತದೆ.

ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ

ಉಡುಪಿ ಭಂಡಾರಕೇರಿ ಮಠ,

ಭಾಗವತ ಆಶ್ರಮ, ಗಿರಿನಗರ, ಬೆಂಗಳೂರು

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.