ರಾಮಾಯಣ: ಸಂತಾನ ಪ್ರಾಪ್ತಿಗಾಗಿ ದಶರಥನಿಂದ ಅಶ್ವಮೇಧ ಯಾಗಕ್ಕೆ ಸಿದ್ಧತೆ; ವಶಿಷ್ಠರ ಸಮೇತ ಎಲ್ಲರ ಸಹಮತ ಸಿಕ್ಕಿತೇ?
Ramayana Story: ಮಹರ್ಷಿ ವಾಲ್ಮೀಕಿ ಬರೆದಿರುವ ರಾಮಾಯಣ ಹಿಂದೂಗಳಿಗೆ ಪವಿತ್ರ ಗ್ರಂಥಗಳಲ್ಲಿ ಒಂದಾಗಿದ್ದು, ಇದರಲ್ಲಿನ ಮನುಷ್ಯನ ಜೀವನಕ್ಕೆ ಸಂಬಂಸಿದ ಕಥೆಗಳಿವೆ. ರಾಮಾಯಣದ ಮುಂದುವರಿದ ಭಾಗದಲ್ಲಿ ಸಂತಾನ ಪ್ರಾಪ್ತಿಗಾಗಿ ದಶರಥನು ಅಶ್ವಮೇಧ ಯಾಗವನ್ನು ಮಾಡುವ ಬಗ್ಗೆ ಇಲ್ಲಿ ನೀಡಲಾಗಿದೆ. (ಬರಹ: ಎಚ್ ಸತೀಶ್, ಜ್ಯೋತಿಷಿ)

Ramayana Story: ದಶರಥನ ಅಡಳಿತದಲ್ಲಿ ಜನಜೀವನ ಸುಖಮಯವಾಗಿತ್ತು. ನ್ಯಾಯದ ಪಕ್ಷಪಾತಿಯಾದ ದಶರಥನ ರಾಜ್ಯಾಡಳಿತವು ಧರ್ಮದ ತಳಹದಿಯ ಮೇಲೆ ನಿಂತಿತ್ತು. ಹಿಂದಿನ ರಾಜ ಮಹಾರಾಜರನ್ನು ಹೋಲಿಸಿದರೆ ದಶರಥನು ಆಡಳಿತದಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾನೆ. ಇವನ ಆಸ್ಥಾನದಲ್ಲಿ ಅನೇಕ ಮುನಿವರ್ಯರು ಇರುತ್ತಾರೆ. ತನ್ನ ಪ್ರಜೆಗಳಿಗೆ ಅನುಕೂಲವಾಗುವಂತಹ ಯಾಗಗಳನ್ನು ಮಾಡುವುದು, ಕೆರೆಭಾವಿಗಳನ್ನು ತೋಡುವುದು ಇವನಿಗೆ ಹವ್ಯಾಸವಾಗಿತ್ತು. ತನ್ನ ಧೈರ್ಯ ಸಾಹಸಗಳಿಂದ ಶತ್ರುಗಳು ಭಯದಿಂದಲೇ ಇರುವಂತೆ ಮಾಡಿದ್ದನು. ರಾಜನೇ ತನ್ನ ಪರಮ ಗುರು ಎಂದು ತಿಳಿದ ಅಯೋಧ್ಯೆಯ ಜನರು ಸಹ ಸತ್ಯಸಂಧರಾಗಿ ಬಾಳುತ್ತಿರುತ್ತಾರೆ.
ವಶಿಷ್ಠರು ಮತ್ತು ವಾಮದೇವರು ದಶರಥನ ಆಸ್ಥಾನದ ಪುರೋಹಿತರಾಗಿರುತ್ತಾರೆ. ಅಲ್ಲದೆ ಕಾಶ್ಯಪ, ಗೌತಮ, ಮಾರ್ಕಂಡಯ್ಯರಂತಹ ಬ್ರಹ್ಮರ್ಷಿಗಳು ದಶರಥನು ಮಾಡುವ ಯಜ್ಞಗಳಿಗೆ ಋತ್ವೀಕರಾಗಿರುತ್ತಾರೆ. ಈ ರೀತಿಯಲ್ಲಿ ಪ್ರತಿಯೊಂದು ವಿಚಾರದಲ್ಲಿಯೂ ವಿದ್ಯಾವಂತದ ಸಲಹೆಯಂತೆ ದಶರಥನು ನಡೆದುಕೊಳ್ಳುತ್ತಿರುತ್ತಾನೆ.
ಇಂತಹ ನಿಷ್ಠಾವಂತ ರಾಜನಿಗೂ ಮನದಲ್ಲಿ ಒಂದು ಯೋಚನೆ ಇರುತ್ತದೆ. ಆದರೆ ಸಂತಾನಪ್ರಪ್ತಿ ಇಲ್ಲದೇ ಇರುವುದು ದೊಡ್ಡ ಚಿಂತೆ ಆಗಿತ್ತು. ದೇವರ ಅನುಗ್ರಹವನ್ನು ಸಂಪಾದಿಸಿ ಸಂತಾನವನ್ನು ಪಡೆಯುವ ಬಗ್ಗೆ ಒಮ್ಮೆ ಯೋಚಿಸುತ್ತಾನೆ. ಆಗ ಆ ಸ್ಥಾನದ ಹಿರಿಯ ವಿದ್ವಾಂಸರು ಎಲ್ಲರನ್ನು ಒಗ್ಗೂಡಿಸಿ ಮಕ್ಕಳನ್ನು ಪಡೆಯುವ ಸಲುವಾಗಿ ಅಶ್ವಮೇಧ ಯಾಗವನ್ನು ಮಾಡಬೇಕೆಂದಿದ್ದೇನೆ, ಇದರ ಬಗ್ಗೆ ನಿಮ್ಮ ಸಲಹೆ ಮತ್ತು ಸಹಕಾರ ನನಗೆ ಬಲು ಅಗತ್ಯ ಎಂದು ತಿಳಿಸುತ್ತಾನೆ. ಈ ವಿಚಾರಕ್ಕೆ ವಶಿಷ್ಠರ ಸಮೇತ ಎಲ್ಲರ ಸಹಮತವು ದೊರೆಯುತ್ತದೆ.
ಅಶ್ವಮೇಧ ಯಾಗದ ಕುದುರೆಗೆ ಪೂಜಿ ಮಾಡಿ ದೇಶದಾದ್ಯಂತ ಸಂಚರಿಸಲು ಬಿಡುವ ಪ್ರಸಂಗ
ಎಲ್ಲರ ಸಲಹೆಯಂತೆ ಚೈತ್ರ ಮಾಸದ ಹುಣ್ಣಿಮೆಯೆಂದು ಯಾಗವನ್ನು ಆರಂಭ ಮಾಡುತ್ತಾರೆ. ದಶರಥನು ಅಶ್ವಮೇಧ ಯಾಗದ ಕುದುರೆಯನ್ನು ಪೂಜಿಸಿ, ದೇಶ ದೇಶಾಂತರಗಳಲ್ಲಿ ಸಂಚರಿಸಲು ಬಿಡುತ್ತಾನೆ. ಅನೇಕ ರಾಜರುಗಳು ಯುದ್ಧವನ್ನು ಸಹ ಮಾಡದೆ ಸಾಮಂತ ರಾಜರಾಗಲು ಒಪ್ಪಿಕೊಳ್ಳುತ್ತಾರೆ.
ಸ್ವತ: ದಶರಥನೇ ಅಂಗ ದೇಶಕ್ಕೆ ತೆರಳುತ್ತಾನೆ. ಕಾರಣ ಅಂಗ ದೇಶದಲ್ಲಿ ಮಹಾಮಹಿಮನಾದ ಋಷ್ಯಶೃಂಗನಿರುತ್ತಾನೆ. ಅಂಗ ದೇಶದ ರಾಜನಲ್ಲಿ ದಶರಥನು ಮಹಾರಾಜನೇ ನೀನು ಸತ್ಯಸಂದನೆಂದು ಧರ್ಮ ಪಾಲಕನೆಂದು ನನಗೆ ತಿಳಿದಿದೆ. ಆದರೆ ದುರಾದೃಷ್ಟವಶಾತ್ ನನಗೆ ಸಂತಾನ ಭಾಗ್ಯವಿಲ್ಲ. ಆದ್ದರಿಂದ ಉತ್ತಮಪುತ್ರನನ್ನು ಪಡೆಯಲು ಯಜ್ಞವನ್ನು ಆಚರಿಸಲು ನಿರ್ಧರಿಸಿದ್ದೇನೆ. ಈ ಕಾರಣದಿಂದ ದಯಮಾಡಿ ಋಷ್ಯಶೃಂಗನನ್ನುನನ್ನ ಯಜ್ಞದ ಒಂದು ಭಾಗವಾಗಿ ಭಾಗವಹಿಸಲು ಅವಕಾಶ ಮಾಡಿಕೊಡಿ ಎಂದು ಕೇಳುತ್ತಾನೆ.
ದಶರಥನ ಮಾತನ್ನು ಕೇಳಿದ ಆತನು ಋಷ್ಯಷೃಂಗನನ್ನು ದಶರಥನಜೊತೆಯಲ್ಲಿ ಕಳುಹಿಸಲು ನಿರ್ಧರಿಸುತ್ತಾನೆ. ಋಷ್ಯಶೃಂಗನ ಆಗಮನದಿಂದ ಕೇವಲ ರಾಜ ಸಂಕುಲವಲ್ಲದೆ ಅಯೋಧ್ಯೆಯ ಸಕಲ ಪ್ರಜೆಗಳು ಸಂತಸ ಪಡುತ್ತಾರೆ. ಋಷ್ಯಶೃಂಗನ ಆದೇಶದಂತೆ ದಶರಥನು ಸರಯೂ ನದಿಯ ಉತ್ತರ ತೀರದಲ್ಲಿ ಯಜ್ಞ ಭೂಮಿಯನ್ನು ನಿರ್ಮಿಸುತ್ತಾನೆ. ಆಸ್ಥಾನದಲ್ಲಿರುವ ಎಲ್ಲರೂ ಸಂತಾನ ಭಾಗ್ಯ ಲಭಿಸುವಂತೆ ಹಾರೈಸುತ್ತಾರೆ. ಮಹರ್ಷಿ ವಶಿಷ್ಟರಿಗೆ ನಮಸ್ಕರಿಸಿ ಈ ಯಾಗದ ನೇತೃತ್ವವನ್ನು ವಹಿಸಿಕೊಳ್ಳುವಂತೆ ದಶರಥನು ಕೇಳಿಕೊಳ್ಳುತ್ತಾನೆ. ಆಗ ವಶಿಷ್ಠರು ಯಾವುದೇ ತೊಂದರೆಯಾಗದಂತೆ ಸ್ವತ: ತಾನೇ ಯಜ್ಞವನ್ನು ನಿರ್ವಹಿಸುವುದಾಗಿ ತಿಳಿಸುತ್ತಾರೆ.
ವಶಿಷ್ಠರ ಆದೇಶದಂತೆ ಸುಮಂತ್ರನು ರಾಜ ಮಹಾರಾಜರನ್ನು ಯಜ್ಞಕ್ಕೆ ಆಹ್ವಾನಿಸುತ್ತಾನೆ. ದಶರಥನ ಸಂಬಂಧಿಯಾದ ಜನಕ ಮಹಾರಾಜನನ್ನು ಮತ್ತು ಮತ್ತು ಆಪ್ತಮಿತ್ರನಾದ ಕಾಶಿ ಮಹಾರಾಜನನ್ನು ವಿಶೇಷವಾಗಿ ಆಹ್ವಾನಿಸುತ್ತಾನೆ. ಕೊನೆಗೆ ದಶರಥನು ವಶಿಷ್ಠರ ಆದೇಶದಂತೆ ಶುಭಗಳಿಗೆಯನ್ನು ಅನುಸರಿಸಿ ಯಾಗವನ್ನು ಆಚರಿಸಲು ಯಜ್ಞಮಂಟಪಕ್ಕೆ ತೆರಳುತ್ತಾನೆ. ಆರಂಭದಲ್ಲಿ ನಿರ್ಧರಿಸಿದಂತೆ ಸರಯೂ ನದಿಯ ಉತ್ತರದಲ್ಲಿ ಋಷ್ಯಶೃಂಗನ ನೇತೃತ್ವದಲ್ಲಿ ಅಶ್ವಮೇಧ ಯಾಗವನ್ನು ಆರಂಭಿಸುತ್ತಾನೆ. ಇಂದ್ರನ ಸಹಿತ ದೇವಾನುದೇವತೆಗಳಿಗೆ ಹವಿಸ್ಸನ್ನು ನೀಡಲು ತೀರ್ಮಾನಿಸಲಾಗುತ್ತದೆ. ಇದರಿಂದ ಸಂತೋಷಗೊಂಡ ದೇವಾನು ದೇವಾತೆಗಳು ಪುಷ್ಪ ವೃಷ್ಠಿಯನ್ನು ಸುರಿಸುತ್ತಾರೆ.