ಎಚ್ ಡಿ ಕುಮಾರಸ್ವಾಮಿ ಅವರ ಮುಂದಿನ ದಿನಗಳು ಹೇಗಿವೆ: ಸಹಾಯ ಪಡೆದವರಿಂದಲೇ ತೊಂದರೆ, ಆರೋಗ್ಯದ ಬಗ್ಗೆ ಗಮನ ಕೊಡಬೇಕು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಎಚ್ ಡಿ ಕುಮಾರಸ್ವಾಮಿ ಅವರ ಮುಂದಿನ ದಿನಗಳು ಹೇಗಿವೆ: ಸಹಾಯ ಪಡೆದವರಿಂದಲೇ ತೊಂದರೆ, ಆರೋಗ್ಯದ ಬಗ್ಗೆ ಗಮನ ಕೊಡಬೇಕು

ಎಚ್ ಡಿ ಕುಮಾರಸ್ವಾಮಿ ಅವರ ಮುಂದಿನ ದಿನಗಳು ಹೇಗಿವೆ: ಸಹಾಯ ಪಡೆದವರಿಂದಲೇ ತೊಂದರೆ, ಆರೋಗ್ಯದ ಬಗ್ಗೆ ಗಮನ ಕೊಡಬೇಕು

ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸಹಾಯ ಪಡೆದವರೇ ತೊಂದರೆ ಕೊಡುತ್ತಾರೆ. ಇವರ ಬಹು ನಿರೀಕ್ಷಿತ ಕನಸೊಂದು ನನಸಾಗಲಿದೆ. ಆರೋಗ್ಯದಲ್ಲಿ ಏರಿಳಿತದ ಸಾಧ್ಯತೆ ಇದೆ. (ಬರಹ: ಸತೀಶ್ ಎಚ್, ಜ್ಯೋತಿಷಿ)

ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿಯವರ ಯುಗಾದಿ ಭವಿಷ್ಯ
ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿಯವರ ಯುಗಾದಿ ಭವಿಷ್ಯ

ನನಗೆ ದೊರೆತ ಶ್ರೀಯುತರ ಜನನದ ವೇಳೆ ಮತ್ತು ದಿನಾಂಕವನ್ನು ಆಧರಿಸಿ ಈ ಕೆಳಕಂಡ ಅಂಶಗಳನ್ನು ಬರೆದಿದ್ದೇನೆ. ಇದರಿಂದ ಯಾರ ಮನಸ್ಸನ್ನೂ ನೋಯಿಸುವ ಅಥವಾ ಇಲ್ಲದ ಭರವಸೆಗಳನ್ನು ಸೃಷ್ಟಿಸುವ ಆಸೆ ನನಗಿಲ್ಲ. ಪ್ರತಿಯೊಬ್ಬರೂ ಕ್ಷೇಮದಿಂದ ಇರಬೇಕೆಂಬುದೇ ನನ್ನ ಆಶಯ. ದೊರೆತ ಮೂಲಗಳ ಪ್ರಕಾರ ಇವರ ಜನ್ಮ ದಿನಾಂಕ 16-12-1959. ಜನನದ ಸಮಯ ಸಂಜೆ 06.08. ಹಾಸನದಲ್ಲಿ ಜನನ.

ಇವರ ಜಾತಕದಲ್ಲಿ ಕುಜ ಮತ್ತು ಶ್ರುಕ್ರರು ಸದೃಢರಾಗಿದ್ದಾರೆ. ದ್ವಿತೀಯ ಭಾಗದ ಅಧಿಪತಿ ಚಂದ್ರನು ಲಗ್ನದಲ್ಲಿದೆ. ಲಗ್ನವು ಮಿಥುನವಾಗಿದೆ. ಮಾತಿನ ಮೇಲೆ ಹತೋಟಿ ಸಾಧಿಸುತ್ತಾರೆ. ಒಂದೇ ರೀತಿಯ ಕೆಲಸ ಕಾರ್ಯಗಳನ್ನು ಇವರು ಇಷ್ಟ ಪಡುವುದಿಲ್ಲ. ಇವರಿಗೆ ಸ್ಥಿರವಾದ ಮನಸ್ಸಿರುವುದಿಲ್ಲ. ಕ್ಷಣಮಾತ್ರದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸುತ್ತಾರೆ. ಇವರಿಗೆ ಕೋಪ ಬರುವುದು ಬಲು ಕಡಿಮೆ. ಆದರೆ ಕೋಪಗೊಂಡಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವರ ನೇರ ನಿಷ್ಠುರದ ನಡೆ ನುಡಿ ವಿವಾದಕ್ಕೆ ಕಾರಣವಾಗುತ್ತದೆ. ಮೊದಲ ಪ್ರಾಮುಖ್ಯತೆ ಸ್ವಂತ ಕೆಲಸಗಳಿಗೆ ನೀಡುವಿರಿ. ಸಮಯ ಸಂದರ್ಭಕ್ಕೆ ಅನುಸಾರವಾಗಿ ಮಾತನಾಡುವ ಇವರು ಸುಲಭವಾಗಿ ಸೋಲುವುದಿಲ್ಲ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪೂಜೆಯಿಂದ ಇವರ ಕಷ್ಟನಷ್ಟಗಳು ದೂರವಾಗುತ್ತವೆ. ಗುರು ಹಿರಿಯರನ್ನು ವಿಶೇಷವಾಗಿ ಗೌರವಿಸುತ್ತಾರೆ.

ಇವರ ಸಹನೆಗೆ ಮೆಚ್ಚಲೆ ಬೇಕು. ಇವರ ದಶಾಭುಕ್ತಿಯ ಪ್ರಕಾರ 27-9-2018 ರಿಂದ ಜೀವನದಲ್ಲಿ ಎಲ್ಲಾ ರೀತಿಯ ತೊಂದರೆಯನ್ನು ಅನುಭವಿಸಿದ್ದಾರೆ. ಈ ಅವಧಿಯಲ್ಲಿ ಕೇವಲ ರಾಜಕೀಯ ಮಾತ್ರವಲ್ಲದೆ ಕುಟುಂಬದಲ್ಲಿಯೂ ಇವರಿಂದ ಸಹಾಯ ಪಡೆದವರಿಂದಲೇ ತೊಂದರೆ ಉಂಟಾಗಿದೆ. ಇವರಿಗೆ ಒಂದೇ ರೀತಿಯ ಕೆಲಸ ಕಾರ್ಯಗಳು ಇಷ್ಟವಾಗುವುದಿಲ್ಲ. ಸದಾ ಬದಲಾವಣೆಗಳನ್ನು ಎದುರುನೋಡುತ್ತಾರೆ. 27-9-2025 ರಿಂದ ಇವರ ಜೀವನದಲ್ಲಿ ಹೊಸ ಅಧ್ಯಾಯವೇ ಆರಂಭವಾಗುತ್ತದೆ. ಜೀವನದಲ್ಲಿ ಅನೇಕ ಬದಲಾವಣೆಗಳು ಉಂಟಾಗಲಿವೆ.

ಕುಮಾರಸ್ವಾಮಿಯವರ ಬಹುನಿರೀಕ್ಷಿತ ಕನಸೊಂದು ನನಸಾಗಲಿದೆ

ಹೊಂದುಕೊಂಡು ಬಾಳುವ ಗುಣವನ್ನು ಬೆಳೆಸಿಕೊಳ್ಳಬೇಕು. ಇವರಿಗೆ ಮತ್ತು ಇವರ ಮಕ್ಕಳಿಗೆ ಅನುಕೂಲ ವಾತಾವರಣ ಉಂಟಾಗುತ್ತದೆ. ಆತ್ಮೀಯರ ಶ್ರೇಯಸ್ಸಿಗಾಗಿ ಶ್ರಮಿಸುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಿಸುತ್ತಾರೆ. ಇವರ ಪಕ್ಷದವರಿಂದಲೇ ಇವರು ವಿರೋಧವನ್ನು ಎದುರಿಸಬೇಕಾಗುತ್ತದೆ. ರಾಜಕೀಯ ವಲಯದಲ್ಲಿ ಇವರ ನಂಬಿಕಸ್ತರಿಂದ ತೊಂದರೆ ಎದುರಾಗುತ್ತದೆ. ವಿಷ್ಣುವಿಗೆ ಸಂಬಧಿಸಿದ ಪೂಜೆ ಅಥವಾ ಹರಕೆಯನ್ನು ಮರೆತಿರುವುದರಿಂದ ತೊಂದರೆಗೆ ಸಿಲುಕಿದ್ದಾರೆ. ಇವರ ಬಹುನಿರೀಕ್ಷಿತ ಕನಸೊಂದು ನನಸಾಗಲಿದೆ. ಆರೋಗ್ಯದಲ್ಲಿ ಏರಿಳಿತ ಕಾಣಲಿದೆ.

ಕುಟುಂಬದಲ್ಲಿ ಒಮ್ಮತವು ಮರೆಯಾಗುತ್ತದೆ. ಆತುರದಲ್ಲಿ ಮಾತನಾಡುವುದನ್ನು ಕಡಿಮೆ ಮಾಡುವುದು ಒಳ್ಳೆಯದು. ತಂದೆ ಮಕ್ಕಳ ನಿರ್ಧಾರಗಳು ಭಿನ್ನವಾಗಿರುತ್ತವೆ. ಬಂಧು ಬಳಗದವರ ಜೊತೆ ಕಲಹ ಇರುತ್ತದೆ. ಮನದಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ. ಇವರ ಮಗನಿಗೆ ಹೆಚ್ಚಿನ ಪರಿಶ್ರಮದಿಂದ ರಾಜಕೀಯದಲ್ಲಿ ಯಶಸ್ಸು ದೊರೆಯುತ್ತದೆ. ತಂದೆಯ ಸಂಬಂಧಿಕರ ಜೊತೆಯಲ್ಲಿ ಕಲಹ ಉಂಟಾಗುತ್ತದೆ. ಇವರಿಂದ ಸಹಾಯ ಪಡೆದವರೇ ಇವರ ಶತೃಗಳಾಗುತ್ತಾರೆ. ಇನ್ನು ಮುಂದೆಯೂ ಏಕಾಂಗಿಯಾಗಿ ಹೋರಾಡಬೇಕಾಗುತ್ತದೆ. ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ಶ್ರೀ ದತ್ತಾತ್ರೇಯರ ಪೂಜೆಯಿಂದ ಶುಭವಾಗುತ್ತದೆ.

ಮುಂದೆ ನಡೆಯಬಹುದಾದ ವಿಚಾರಗಳನ್ನು ಸುಲಭವಾಗಿ ಊಹಿಸಬಲ್ಲರು. ಆದ್ದರಿಂದ ಮುಂದಿನ ದಿನಗಳಲ್ಲಿ ಇವರ ಮಾತಿಗೆ ತೀರ್ಮಾನಗಳಿಗೆ ವಿಶೇಷವಾದ ಅರ್ಥ ಬರಲಿದೆ. ಕುಟುಂಬದಲ್ಲಿ ಬೇರೆಯವರ ಕಾರಣದಿಂದ ಬೇಸರದ ಸನ್ನಿವೇಶ ಎದುರಾಗುತ್ತದೆ. ರಾಜಕೀಯನ್ನು ನೆಚ್ಚಿಕೊಂಡು ಇವರು ಜೀವನ ನಡೆಸುವುದಿಲ್ಲ. ಕೇವಲ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ರಾಜಕೀಯರಂಗದಲ್ಲಿರುತ್ತಾರೆ. ಹಿರಿಯರ ಮತ್ತು ಕಿರಿಯರ ನಡುವಿನ ಜಗಳ ಬಿಡಿಸುವುದು ಇವರ ಜವಾಬ್ದಾರಿ ಆಗುತ್ತದೆ. ದುಡುಕಿನ ಮಾತು ಬಿಟ್ಟಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯ ಜೀವನದಲ್ಲಿ ಅದ್ಭುತ ಯಶಸ್ಸು ದೊರೆಯುವುದರಲ್ಲಿ ಸಂಶಯವಿಲ್ಲ. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು.

ಬರಹ: ಸತೀಶ್ ಎಚ್, ಜ್ಯೋತಿಷಿ

(ಗಮನಿಸಿ: ಇದು ಎಚ್ ಡಿ ಕುಮಾರಸ್ವಾಮಿ ಅವರ ಜನ್ಮದಿನಾಂಕ ಮತ್ತು ಸಮಯವನ್ನು ಆಧರಿಸಿ ಮಾಡಿರುವ ಜಾತಕ ವಿಶ್ಲೇಷಣೆ. ಇದು ಸಂಪೂರ್ಣವಾಗಿ ಜ್ಯೋತಿಷ್ಯದ ಲೆಕ್ಕಾಚಾರ ಮತ್ತು ಶಾಸ್ತ್ರ, ಸಂಪ್ರದಾಯವನ್ನು ಆಧರಿಸಿದೆ. ಇಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ. ‘ಎಚ್‌ಟಿ ಕನ್ನಡ’ ಜಾಲತಾಣದ ಸಿಬ್ಬಂದಿ ಈ ಬರಹವನ್ನು ಬದಲಿಸಿಲ್ಲ)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.