ಪ್ರಯಾಗ್‌ರಾಜ್‌ನಲ್ಲಿ ಇಂದಿನಿಂದ ಮಹಾಕುಂಭ ಮೇಳ ಆರಂಭ: ವಿಶ್ವದ ಅತಿ ದೊಡ್ಡ ಆಧ್ಯಾತ್ಮಿಕ ಸಭೆಯ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರಗಳಿವು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪ್ರಯಾಗ್‌ರಾಜ್‌ನಲ್ಲಿ ಇಂದಿನಿಂದ ಮಹಾಕುಂಭ ಮೇಳ ಆರಂಭ: ವಿಶ್ವದ ಅತಿ ದೊಡ್ಡ ಆಧ್ಯಾತ್ಮಿಕ ಸಭೆಯ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರಗಳಿವು

ಪ್ರಯಾಗ್‌ರಾಜ್‌ನಲ್ಲಿ ಇಂದಿನಿಂದ ಮಹಾಕುಂಭ ಮೇಳ ಆರಂಭ: ವಿಶ್ವದ ಅತಿ ದೊಡ್ಡ ಆಧ್ಯಾತ್ಮಿಕ ಸಭೆಯ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರಗಳಿವು

Mahakumbh Mela 2025: ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ಇಂದಿನಿಂದ ಆರಂಭವಾಗಿದೆ. ಗುರುವು ಕುಂಭ ರಾಶಿಗೆ ಚಲಿಸಿದಾಗ ಮತ್ತು ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಶುಭ ಮಹೂರ್ತದಲ್ಲಿ ಕುಂಭ ಮೇಳವನ್ನು ಆಚರಿಸಲಾಗುತ್ತದೆ. ಈ ಈ ಆಧ್ಯಾತ್ಮಿಕ ಸಭೆಯ ಬಗ್ಗೆ ತಿಳಿದುಕೊಳ್ಳಬೇಕಾದ ಆಸಕ್ತಿಕರ ವಿಚಾರಗಳಿವು

ಪ್ರಯಾಗ್‌ರಾಜ್‌ನಲ್ಲಿ ಇಂದಿನಿಂದ (ಜ 13) ಆರಂಭವಾಗಿರುವ ಮಹಾಕುಂಭಮೇಳದಲ್ಲಿ ಭಾಗವಹಿಸಿರುವ ಭಕ್ತ ಸಮೂಹ
ಪ್ರಯಾಗ್‌ರಾಜ್‌ನಲ್ಲಿ ಇಂದಿನಿಂದ (ಜ 13) ಆರಂಭವಾಗಿರುವ ಮಹಾಕುಂಭಮೇಳದಲ್ಲಿ ಭಾಗವಹಿಸಿರುವ ಭಕ್ತ ಸಮೂಹ (PC: @MIB_India)

ಮಹಾಕುಂಭಮೇಳವು ವಿಶ್ವದಲ್ಲೇ ಅತಿ ದೊಡ್ಡ ಆಧ್ಯಾತ್ಮಿಕ ಸಭೆಯಾಗಿದೆ. ಇಂದಿನಿಂದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಕುಂಭಮೇಳದಲ್ಲಿ 4 ವಿಧಗಳಿವೆ. ಮಾಘ ಕುಂಭಮೇಳ ಪ್ರತಿ ವರ್ಷ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿದೆ. 4 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. 6 ವರ್ಷಗಳಿಗೆ ಅರ್ಧ ಕುಂಭ ಮೇಳ, ಪೂರ್ಣ ಕುಂಭ ಮೇಳ 12 ವರ್ಷಗಳಿಗೊಮ್ಮೆ ಹಾಗೂ ಮಹಾಕುಂಭ ಮೇಳ 144 ವರ್ಷಗಳ ನಂತರ ಅಂದರೆ 12 ಪೂರ್ಣ ಕುಂಭಮೇಳಗಳ ನಂತರ ಬರುತ್ತದೆ.

ಕುಂಭಮೇಳದ ಬಗ್ಗೆ ತಿಳಿದುಕೊಳ್ಳಬೇಕಾದ ಆಸಕ್ತಿಕರ ವಿಚಾರಗಳು ಹೀಗಿವೆ

  • ಮಹಾಕುಂಭ ಮೇಳವು ವಿಶ್ವದಲ್ಲೇ ಅತಿ ಹೆಚ್ಚು ಜನರು ಸೇರುವ ಅತಿದೊಡ್ಡ ಆಧ್ಯಾತ್ಮಿಕ ಸಭೆ ಎನಿಸಿಕೊಂಡಿದೆ. ಈ ಜಾತ್ರೆಯಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಜನರು ಸೇರುತ್ತಾರೆ. ಭಾರತದ ಭಕ್ತರು ಮಾತ್ರವಲ್ಲದೆ ವಿದೇಶದಿಂದಲೂ ಕೂಡಾ ಆಗಮಿಸಿ ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತಿ ನದಿಗಳ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದು ಹೋಗುತ್ತಾರೆ.
  • ಕುಂಭಮೇಳಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಿಂದೂ ಧರ್ಮಗ್ರಂಥಗಳಲ್ಲಿ ಇದರ ಉಲ್ಲೇಖವಿದೆ. ಇದು ಸಮುದ್ರ ಮಂಥನದ ಸಮಯದಲ್ಲಿ ಅಮರತ್ವದ ಅಮೃತದ ಹನಿಗಳು ಪ್ರಯಾಗ್‌ರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಬಿದ್ದಿದ್ದರಿಂದ ವಿವಿದ ಕುಂಭಮೇಳಗಳನ್ನು ಈ ಸ್ಥಳದಲ್ಲಿ ನಡೆಸಲಾಗುತ್ತದೆ.

ಇದನ್ನೂ ಓದಿ: ನದಿಯಲ್ಲಿ ಡ್ರೋಣ್‌, ಎಐ ಕ್ಯಾಮರಾಗಳ ಕಣ್ಗಾವಲಿನಲ್ಲಿ ಮಹಾಕುಂಭ ಮೇಳ ಶುರು, 45 ಕೋಟಿ ಭಕ್ತರು ಭಾಗಿಯಾಗಿರುವ ನಿರೀಕ್ಷೆ

  • ಮಹಾಕುಂಭ ಮೇಳದ ಸಮಯದಲ್ಲಿ ಮೂವರು ಪವಿತ್ರ ನದಿಗಳು ಸೇರುವ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಪಾಪಗಳು ನಿವಾರಣೆಯಾಗಿ ಮೋಕ್ಷಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ನಂಬಿಕೆ ಮನೆ ಮಾಡಿದೆ.
  • ಮಹಾ ಕುಂಭಮೇಳದ ಸಮಯವನ್ನು ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಗುರುವು ಕುಂಭ ರಾಶಿಗೆ ಚಲಿಸಿದಾಗ ಮತ್ತು ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಶುಭ ಮಹೂರ್ತದಲ್ಲಿ ಕುಂಭ ಮೇಳವನ್ನು ಆಚರಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಸಮಯವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
  • ಈ ಮೇಳವು ನಾಗಾ ಸಾಧುಗಳು, ಅಘೋರಿಗಳು, ಸಂತರು, ವೈಷ್ಣವರು, ಶೈವರು ಸೇರಿದಂತೆ ವೈವಿಧ್ಯಮಯ ಆಧ್ಯಾತ್ಮಿಕ ಆಚರಣೆಗಳು ಮತ್ತು ಪಂಥಗಳನ್ನು ಒಟ್ಟುಗೂಡಿಸುತ್ತದೆ.
  • ಕುಂಭಮೇಳ ನಡೆಯುವ ಸಮಯದಲ್ಲಿ ಪ್ರಯಾಗ್‌ರಾಜ್‌ ತಾತ್ಕಾಲಿಕ ವಿಸ್ತಾರವಾದ ಮಹಾನಗರವಾಗಿ ರೂಪಾಂತರಗೊಳ್ಳುತ್ತದೆ. ಇಲ್ಲಿ ಕೋಟ್ಯಂತರ ಭಕ್ತರು ಭಾಗವಹಿಸಲಿದ್ದು ವೈದ್ಯಕೀಯ ಸೇವೆಗಳು ಮತ್ತು ಭದ್ರತೆ ಸೇರಿದಂತೆ ರಾಜ್ಯ ಸರ್ಕಾರವು ಮೂಲಭೂತ ಸೌಕರ್ಯಗಳನ್ನು ನೀಡುತ್ತದೆ.

ಇದನ್ನೂ ಓದಿ: ಶನಿ ದೋಷವನ್ನು ನಿವಾರಿಸಲು ಶನಿ ತ್ರಯೋದಶಿ ಪೂಜೆ ಮತ್ತು ವ್ರತಾಚರಣೆ ನಡೆಸುವುದು ಹೇಗೆ, ಇಲ್ಲಿದೆ ವಿವರ

  • ಧಾರ್ಮಿಕ ಮಹತ್ವವನ್ನೂ ಮೀರಿ, ಮಹಾ ಕುಂಭಮೇಳವು ಒಂದು ಸಾಂಸ್ಕೃತಿಕ ಆಚರಣೆಯಾಗಿದೆ. ಕುಂಭಮೇಳದ ಸಮಯದಲ್ಲಿ ಭಕ್ತರು ವರ್ಣರಂಜಿತ ಮೆರವಣಿಗೆಗಳು, ಸಾಂಪ್ರದಾಯಿಕ ಸಂಗೀತ, ನೃತ್ಯ ಪ್ರದರ್ಶನಗಳು ಮತ್ತು ಆಧ್ಯಾತ್ಮಿಕ ಪ್ರವಚನಗಳಿಗೆ ಸಾಕ್ಷಿಯಾಗಬಹುದು, ಇದು ಸಮಗ್ರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಅನುಭವವನ್ನು ನೀಡುತ್ತದೆ.
  • ಇತ್ತೀಚಿನ ವರ್ಷಗಳಲ್ಲಿ, ಕುಂಭಮೇಳವು ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ನಿಷೇಧ ಮತ್ತು ಸುಸ್ಥಿರ ಪ್ರವಾಸೋದ್ಯಮದ ಪ್ರಚಾರದಂತಹ ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಂಡಿದೆ. ಈ ವರ್ಷದ ಕುಂಭಮೇಳದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
  • ಕುಂಭಮೇಳವನ್ನು ಯುನೆಸ್ಕೋದ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಮನ್ನಣೆಯು ಅದರ ಜಾಗತಿಕ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಎತ್ತಿ ತೋರಿಸುತ್ತದೆ.
  • ಮಹಾ ಕುಂಭಮೇಳದಲ್ಲಿ ಹಿಂದೂ ಭಕ್ತರು ಮಾತ್ರವಲ್ಲದೆ ವಿವಿಧ ಧರ್ಮಗಳ ಭಕ್ತರು ಭಾಗವಹಿಸುತ್ತಾರೆ. ವಿದೇಶಿ ಪ್ರವಾಸಿಗರು ಮತ್ತು ಆಧ್ಯಾತ್ಮದ ಬಗ್ಗೆ ಆಸಕ್ತಿ ಇರುವವರು ಮಹಾಕುಂಭಮೇಳದಂಥ ಪವಿತ್ರ ಕಾರ್ಯಕ್ರಮದ ವಿಶಿಷ್ಟ ಶಕ್ತಿಯನ್ನು ಅನುಭವಿಸಲು ಬರುತ್ತಾರೆ.

ಸಾಧ್ಯವಾದರೆ ನೀವು ಮಹಾಕುಂಭಮೇಳಕ್ಕೆ ಹೋಗಿ ಬನ್ನಿ

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.