Garuda Purana: ಜೀವ ಬಿಟ್ಟ ದೇಹ ಇಲ್ಲೇ ಇರುತ್ತೆ, ಆದರೆ ಆತ್ಮಕ್ಕೆ ಏನಾಗುತ್ತೆ? -ಗರುಡ ಪುರಾಣ ಕೊಡುವ ಉತ್ತರ ಇದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Garuda Purana: ಜೀವ ಬಿಟ್ಟ ದೇಹ ಇಲ್ಲೇ ಇರುತ್ತೆ, ಆದರೆ ಆತ್ಮಕ್ಕೆ ಏನಾಗುತ್ತೆ? -ಗರುಡ ಪುರಾಣ ಕೊಡುವ ಉತ್ತರ ಇದು

Garuda Purana: ಜೀವ ಬಿಟ್ಟ ದೇಹ ಇಲ್ಲೇ ಇರುತ್ತೆ, ಆದರೆ ಆತ್ಮಕ್ಕೆ ಏನಾಗುತ್ತೆ? -ಗರುಡ ಪುರಾಣ ಕೊಡುವ ಉತ್ತರ ಇದು

ಸತ್ತ ನಂತರ ನಾವು ಏನಾಗುತ್ತೇವೆ, ಮುಂದಿನ ಜನ್ಮ ಎನ್ನುವುದು ನಿಜವೇ, ಸ್ವರ್ಗ-ನರಕದ ಪರಿಕಲ್ಪನೆಯಲ್ಲಿ ಎಷ್ಟು ಸತ್ಯವಿದೆ ಹೀಗೆ ಸಾವಿನ ನಂತರದ ಬಗ್ಗೆ ನಮ್ಮಲ್ಲಿ ಸಾಕಷ್ಟು ಪ್ರಶ್ನೆಗಳಿರುವುದು ಸಹಜ. ಇದಕ್ಕೆಲ್ಲಾ ಉತ್ತರ ಗರುಡ ಪುರಾಣದಲ್ಲಿದೆ. ಹಾಗಾದ್ರೆ ಸತ್ತ ನಂತರ ನಾವು ಏನಾಗುತ್ತೇವೆ ತಿಳಿಯಲು ಮುಂದೆ ಓದಿ.

ಗರುಡ ಪುರಾಣ
ಗರುಡ ಪುರಾಣ

ಸಾವು ಬಹುಶಃ ಬದುಕಿಗಿಂತ ನಮ್ಮನ್ನು ಹೆಚ್ಚು ಕಾಡುವುದು ಸಾವು ಇರಬಹುದು. ಸಾವು ಎಂದರೆ ನೋವು. ಸಾವು ಎಂದರೆ ಅಂತ್ಯ. ನಾವೆಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು ನಿಜ. ಆದ್ರೆ, ಸತ್ತ ನಂತರ ಏನಾಗುತ್ತದೆ ಎಂಬ ಪ್ರಶ್ನೆಯ ಎಲ್ಲರನ್ನೂ ಕಾಡುವುದು ಸಹಜ. ಜೀವನದಲ್ಲಿ ಒಂದಲ್ಲ ಒಂದು ದಿನ ಪ್ರತಿಯೊಬ್ಬರನ್ನೂ ಕಾಡುವ ಪ್ರಶ್ನೆ ಎಂದರೆ ಸತ್ತ ನಂತರ ನಾನು ಏನಾಗುತ್ತೇನೆ ಎಂಬುದು. ಇದಕ್ಕೆ ಉತ್ತರ ಹುಡುಕುವುದು ಅಸಾಧ್ಯ ಎಂದು ಕೆಲವರು ಹೇಳಬಹುದು. ಆದರೆ ಗರುಡ ಪುರಾಣದಲ್ಲಿ ಇದಕ್ಕೆ ಉತ್ತರವಿದೆ. ಗರುಡ ಪುರಾಣವು ನಾವು ಸಾವಿನ ನಂತರ ಏನಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಲಾಗಿದೆ. ಭೂಮಿಯ ಮೇಲೆ ನಮ್ಮ ನಡವಳಿಕೆ ಹೇಗಿತ್ತು ಎಂಬುದು ಸತ್ತ ನಂತರ ನಾವು ಏನಾಗುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ ಎಂದು ಗರುಡ ಪುರಾಣ ವಿವರಿಸುತ್ತದೆ.

ಗರುಡ ಪುರಾಣವು ಭಗವಾನ್‌ ವಿಷ್ಣುವಿನ ಭಕ್ತಿ ಹಾಗೂ ಜ್ಞಾನವನ್ನು ಆಧರಿಸಿದ ಗ್ರಂಥವಾಗಿದ್ದು, ಹಿಂದೂಗಳು ಗರುಡ ಪುರಾಣವನ್ನು ಬಹಳ ವಿಶೇಷವಾಗಿ ಗೌರವಿಸುತ್ತಾರೆ.

ಈ ಪುಸ್ತಕವು ಸಾವು ಹಾಗೂ ಸಾವಿನ ನಂತರ ಬಗ್ಗೆ ಮಾತನಾಡುತ್ತದೆ. ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ಭೂಮಿಯ ಮೇಲೆ ಮಾಡುವ ವಿವಿಧ ಕಾರ್ಯಗಳಿಗೆ ಅವನು ಸತ್ತ ನಂತರ ವಿವಿಧ ಶಿಕ್ಷೆಗಳನ್ನು ಅನುಭವಿಸುತ್ತಾನೆ. ಮೊದಲೇ ಇಂತಹ ತಪ್ಪಿಗೆ ಇಂತಹ ಶಿಕ್ಷೆ ಎಂಬುದು ನಿಗದಿಯಾಗಿರುತ್ತದೆ.

ನಾವು ಬದುಕಿದ್ದಾಗ ಮಾಡಿದ ಕಾರ್ಯಗಳ ಆಧಾರದ ಮೇಲೆ ವ್ಯಕ್ತಿಯ ಆತ್ಮವು ಮುಂದೆ ಹೇಗೆ ಹುಟ್ಟುತ್ತದೆ ಹಾಗೂ ಯಾವ ಕಾರ್ಯಗಳಿಂದ ವ್ಯಕ್ತಿಯ ನರಕದ ಶಿಕ್ಷೆಯನ್ನು ಅನುಭವಿಸುತ್ತಾನೆ ಎಂಬುದನ್ನು ವಿವರಿಸಲಾಗಿದೆ.

ಹಾಗಾದರೆ ವ್ಯಕ್ತಿಯೊಬ್ಬ ಸತ್ತ ನಂತರ ಏನಾಗುತ್ತಾನೆ ಎಂಬುದನ್ನು ನೋಡೋಣ.

ಆತ್ಮದಲ್ಲಿ ಈ ಭಾವನೆಗಳು ಜೀವಂತವಾಗಿರುತ್ತವೆ

ಗರುಡ ಪುರಾಣದ ಪ್ರಕಾರ ಜಗತ್ತಿನಲ್ಲಿ 84 ಲಕ್ಷ ವಿವಿಧ ಜಾತಿ ಜೀವಿಗಳಿವೆ ಅಂದರೆ ಆತ್ಮಗಳಿವೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ಪಕ್ಷಿಗಳು, ಮರಗಳು ಹಾಗೂ ಮನುಷ್ಯ ಹೀಗೆ ಜೀವಂತಿಕೆ ಇರುವ ಎಲ್ಲವೂ ಸೇರಿವೆ. ಗರುಡ ಪುರಾಣದ ಪ್ರಕಾರ ವ್ಯಕ್ತಿಯ ಮರಣದ ಆತ್ಮವು ದೇಹವನ್ನು ತೊರೆದಾಗ ಹಸಿವು, ಬಾಯಾರಿಕೆ, ಕೋಪ, ದ್ವೇಷ ಹಾಗೂ ಕಾಮದಂತಹ ಭಾವನೆಗಳು ಅದರಲ್ಲಿ ಉಳಿದು ಹೋಗುತ್ತದೆ.

ಯಮರಾಜನ ಭೇಟಿ

ವ್ಯಕ್ತಿಯ ಮರಣದ ನಂತರ ಮಾನವನ ಆತ್ಮವು ಸಾವಿನ ದೇವರು ಎಂದು ಕರೆಯುವ ಯಮರಾಜನ ಬಳಿಗೆ ಹೋಗುತ್ತದೆ ಎಂದು ಗರುಡ ಪುರಾಣದಲ್ಲಿ ಬರೆಯಲಾಗಿದೆ. ಆತ್ಮವು ಯಮಲೋಕ ತಲುಪಿದ ಮೇಲೆ, ಅಲ್ಲಿ ಯಮರಾಜನು ಭೂಮಿಯ ಮೇಲೆ ಆ ವ್ಯಕ್ತಿಯು ಮಾಡಿದ ಪಾಪ ಕರ್ಮಗಳ ಆಧಾರದ ಮೇಲೆ ವ್ಯಕ್ತಿಯನ್ನು ನಿರ್ಣಯಿಸುತ್ತಾನೆ. ಕೆಟ್ಟ ಕೆಲಸಗಳನ್ನು ಮಾಡಿದ ವ್ಯಕ್ತಿಯ ಆತ್ಮವು ನರಕಯಾತನೆಗಳನ್ನು ಅನುಭವಿಸಬೇಕಾಗುತ್ತದೆ. ನಂತರ, ವ್ಯಕ್ತಿಯ ಕಾರ್ಯಗಳ ಆಧಾರದ ಮೇಲೆ, ಆತ್ಮವು ತನ್ನ ಮುಂದಿನ ಜನ್ಮವನ್ನು ಯಾವ ಜೀವನದಲ್ಲಿ ತೆಗೆದುಕೊಳ್ಳುತ್ತದೆ ಎಂದು ನಿರ್ಧರಿಸಲಾಗುತ್ತದೆ.

ಪ್ರೇತ ಜೀವನ ಸಿಗುವುದು ಯಾವಾಗ

ಮೊದಲೇ ಹೇಳಿದಂತೆ ವ್ಯಕ್ತಿಯ ಮುಂದಿನ ಜನ್ಮ ನಿಂತಿರುವುದು ಹಿಂದಿನ ಜನ್ಮದಲ್ಲಿ ಮಾಡಿದ ಪಾಪಕರ್ಮಗಳ ಮೇಲೆ. ಕೆಟ್ಟ ಕರ್ಮಗಳನ್ನು ಮಾಡುವ ವ್ಯಕ್ತಿಯ ಆತ್ಮವು ಮರಣದ ಜಗತ್ತಿನಲ್ಲಿ ಅಂದರೆ ಭೂಮಿಯ ಮೇಲೆ ಮತ್ತೆ ಮತ್ತೆ ಯಾವುದೋ ಒಂದು ರೂಪದಲ್ಲಿ ಜನ್ಮ ತಳೆಯುತ್ತಲೇ ಇರುತ್ತದೆ ಮತ್ತು ಅಲೆದಾಡುತ್ತಲೇ ಇರುತ್ತದೆ.

ಸಹಜ ಕಾರಣಗಳಿಂದ ಸಾವನ್ನಪ್ಪದೇ ಅಪಘಾತ, ಕೊಲೆ ಅಥವಾ ಆತ್ಮಹತ್ಯೆಯಂತಹ ಸಂದರ್ಭಗಳಲ್ಲಿ ಮನುಷ್ಯ ಸತ್ತರೆ ಅಂತಹ ವ್ಯಕ್ತಿಯ ಆತ್ಮವು ಪ್ರೇತಲೋಕವನ್ನು ಸೇರುತ್ತದೆ ಎಂದು ವಿಷ್ಣು ಪುರಾಣ ವಿವರಿಸಿದೆ.

ಸಾವಿನ ನಂತರ ಗರುಡ ಪುರಾಣವನ್ನು ಏಕೆ ಓದಲಾಗುತ್ತದೆ?

ನಂಬಿಕೆಗಳ ಪ್ರಕಾರ ಸತ್ತವರ ಆತ್ಮಕ್ಕೆ ಶಾಂತಿಗಾಗಿ ಗರುಡ ಪುರಾಣವನ್ನು ಪಠಿಸಲಾಗುತ್ತದೆ. ಮನೆಯಲ್ಲಿ ಯಾರಾದರೂ ಸತ್ತರೆ ಅವರು ಸತ್ತ 12 ರಿಂದ 13 ದಿನಗಳವರೆಗೆ ಗರುಡ ಪುರಾಣ ಪಠಿಸುವ ನಿಬಂಧನೆ ಇದೆ. ಮನೆಯಲ್ಲಿ ಯಾರಾದರೂ ಸತ್ತಾಗ ಜೀವಂತ ಇರುವವರು ಕುಗ್ಗುತ್ತಾರೆ, ಮಾನಸಿಕವಾಗಿ ಸಂಕಟ ಅನುಭವಿಸುತ್ತಿರುತ್ತಾರೆ. ಆದರೆ ಗರುಡ ಪುರಾಣ ಓದುವುದರಿಂದ ಸಾವಿನ ದುರಂತವನ್ನು ಸಹಿಸಿಕೊಳ್ಳುವ ಶಕ್ತಿ ಬರುತ್ತದೆ. ಗರುಡ ಪುರಾಣದ ಸಾರವೆಂದರೆ, ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಯಾವುದೇ ಸಂದರ್ಭದಲ್ಲೂ ಒಳ್ಳೆಯ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಬಾರದು.

ಗರುಡ ಪುರಾಣ ಪಠಿಸುವುದರಿಂದಾಗುವ ಪ್ರಯೋಜನಗಳು

ಧಾರ್ಮಿಕ ನಂಬಿಕೆಗಳ ಪ್ರಕಾರ ಒಬ್ಬ ವ್ಯಕ್ತಿಯ ಸತ್ತ ನಂತರ ಆ ವ್ಯಕ್ತಿಯ ಆತ್ಮವು 13 ರಿಂದ 14 ದಿನಗಳ ಕಾಲ ಅದೇ ಮನೆಯಲ್ಲಿದ್ದು ಗರುಡ ಪುರಾಣವನ್ನು ಕೇಳುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಸತ್ತ ವ್ಯಕ್ತಿಗೆ ಮೋಕ್ಷ ನೀಡುವ ಸಲುವಾಗಿ ಗರುಡ ಪುರಾಣ ಪಠಿಸಲಾಗುತ್ತದೆ.

ಸಾವಿನ ನಂತರ ಏನಾಗುತ್ತದೆ?

ಇದು ಹಲವರನ್ನು ಕಾಡುವ ಪ್ರಶ್ನೆ. ಗರುಡ ಪುರಾಣದ ಪ್ರಕಾರ ವ್ಯಕ್ತಿಯು ಸತ್ತ ನಂತರ ಮೊದಲು ತಾನು ಜೀವಂತ ಇರುವಾಗ ಮಾಡಿದ ತಮ್ಮ ಕೆಟ್ಟ ಹಾಗೂ ಒಳ್ಳೆಯ ಕಾರ್ಯಗಳಿಗೆ ಫಲವನ್ನು ಪಡೆಯುತ್ತಾನೆ. ಎರಡನೇ ಹಂತದಲ್ಲಿ ತಮ್ಮ ಕರ್ಮಕ್ಕೆ ಅನುಗುಣವಾಗಿ 84 ಲಕ್ಷ ಜೀವ ಸಂತತಿಗಳಲ್ಲಿ ಯಾವುದಾದರೂ ಒಂದರಲ್ಲಿ ಮರುಜನ್ಮ ಪಡೆಯುತ್ತಾನೆ. ಮೂರನೇ ಹಂತದಲ್ಲಿ ಅವನು ತನ್ನ ಕಾರ್ಯಗಳ ಪ್ರಕಾರ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾನೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.