ಪರಮಾತ್ಮನ ಸನ್ನಿಧಾನಕ್ಕಾಗಿ ಮಾಡುವ ಭಕ್ತಿಸೇವೆಯಲ್ಲಿ ಸರಿಯಾದ ರೀತಿ ಯಾವುದು; ಭಗವದ್ಗೀತೆಯ ಈ ಶ್ಲೋಕದ ತಾತ್ಪರ್ಯ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪರಮಾತ್ಮನ ಸನ್ನಿಧಾನಕ್ಕಾಗಿ ಮಾಡುವ ಭಕ್ತಿಸೇವೆಯಲ್ಲಿ ಸರಿಯಾದ ರೀತಿ ಯಾವುದು; ಭಗವದ್ಗೀತೆಯ ಈ ಶ್ಲೋಕದ ತಾತ್ಪರ್ಯ ಹೀಗಿದೆ

ಪರಮಾತ್ಮನ ಸನ್ನಿಧಾನಕ್ಕಾಗಿ ಮಾಡುವ ಭಕ್ತಿಸೇವೆಯಲ್ಲಿ ಸರಿಯಾದ ರೀತಿ ಯಾವುದು; ಭಗವದ್ಗೀತೆಯ ಈ ಶ್ಲೋಕದ ತಾತ್ಪರ್ಯ ಹೀಗಿದೆ

ಪರಮಾತ್ಮನ ಬಳಿಗೆ ಹೋಗಲು ಮಾಡುವ ಭಕ್ತಿಸೇವೆಯಲ್ಲಿ ಸರಿಯಾದ ರೀತಿ ಯಾವುದು? ಭಗವದ್ಗೀತೆ ಅಧ್ಯಾಯ 12, ಭಕ್ತಿಸೇವೆ, ಶ್ಲೋಕ 1 ರಲ್ಲಿ ಭಕ್ತಿಸೇವೆಯ ಬಗ್ಗೆ ಗೊಂದಲವನ್ನ ಶ್ರೀಕೃಷ್ಣನಿಗೆ ಅರ್ಜುನ ಹೀಗೆ ಪ್ರಶ್ನಿಸುತ್ತಾನೆ.

ಭಗವದ್ಗೀತೆ
ಭಗವದ್ಗೀತೆ

ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 1
ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ |
ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ || 1||

ಅರ್ಥ: ಅರ್ಜುನನು ಪ್ರಶ್ನಿಸಿದನು – ಸದಾ ನಿನ್ನ ಭಕ್ತಿಸೇವೆಯಲ್ಲಿ ಉಚಿತವಾದ ರೀತಿಯಲ್ಲಿ ನಿರತರಾದವರು, ಅವ್ಯಕ್ತವಾದ ನಿರಾಕಾರ ಬ್ರಹ್ಮನನ್ನು ಪೂಜಿಸುವವರು – ಇವರಿಬ್ಬರಲ್ಲಿ ಯಾರು ಹೆಚ್ಚು ಪರಿಪೂರ್ಣರಂದು ಭಾವಿಸಬೆಕು?

ಭಾವಾರ್ಥ: ಕೃಷ್ಣನು ಈಗ ಸಾಕಾರ ರೂಪ, ನಿರಾಕಾರ ರೂಪ ಮತ್ತು ವಿಶ್ವರೂಪ ಈ ಮೂರನ್ನೂ ಮತ್ತು ಎಲ್ಲ ಬಗೆಗಳ ಭಕ್ತರನ್ನೂ ಯೋಗಿಗಳನ್ನೂ ವರ್ಣಿಸಿದ್ದಾನೆ. ಸಾಮಾನ್ಯವಾಗಿ ಆಧ್ಯಾತ್ಮಿಕವಾದಿಗಳನ್ನು ಎರಡು ವರ್ಗಗಳನ್ನಾಗಿ ವಿಂಗಡಿಸಬಹುದು. ಒಂದು ವರ್ಗ ನಿರಾಕಾರವಾದಿಗಳದು, ಮತ್ತೊಂದು ಸಾಕಾರವಾದಿಗಳದು. ಸಾಕಾರವಾದಿಯಾದ ಭಕ್ತನು ತನ್ನ ಎಲ್ಲ ಶಕ್ತಿಯನ್ನು ಬಳಸಿ ಪರಮ ಪ್ರಭುವಿನ ಸೇವೆಯಲ್ಲಿ ತೊಡಗುತ್ತಾನೆ. ನಿರಾಕಾರವಾದಿಯು ನೇರವಾಗಿ ಕೃಷ್ಣನ ಸೇವೆಯಲ್ಲಿ ತೊಡಗುವುದಿಲ್ಲ, ಅವ್ಯಕ್ತವಾದ ನಿರಾಕಾರ ಬ್ರಹ್ಮನ ಧ್ಯಾನದಲ್ಲಿ ನಿರತನಾಗುತ್ತಾನೆ. ಪರಿಪೂರ್ಣ ಸತ್ಯದ ಸಾಕ್ಷಾತ್ಕಾರದ ವಿವಿಧ ಪ್ರಕ್ರಿಯೆಗಳಲ್ಲಿ ಭಕ್ತಿಸೇವೆ ಅಥವಾ ಭಕ್ತಿಯೋಗವೇ ಅತ್ಯುನ್ನತವಾದದ್ದು ಎಂದು ಈ ಅಧ್ಯಾಯದಲ್ಲಿ ಕಾಣುತ್ತೇವೆ.

ದೇವೋತ್ತಮ ಪರಮ ಪುರುಷನ ಸಹವಾಸ ಬೇಕೆಂಬ ಬಯಕೆ ಇದ್ದಲ್ಲಿ ಅಂತಹ ಮನುಷ್ಯನು ಭಕ್ತಿಸೇವೆಯನ್ನು ಕೈಗೊಳ್ಳಲೇಬೇಕು. ಭಕ್ತಿ ಸೇವೆಯಲ್ಲಿ ಪರಮ ಪ್ರಭುವನ್ನು ನೇರವಾಗಿ ಪೂಜಿಸುವವರಿಗೆ ಸಾಕಾರವಾದಿಗಳು ಎಂದು ಹೆಸರು. ನಿರಾಕಾರ ಬ್ರಹ್ಮನ್‌ನ ಧ್ಯಾನದಲ್ಲಿ ತೊಡಗುವವರಿಗೆ ನಿರಾಕಾರವಾದಿಗಳು ಎಂದು ಹೆಸರು. ಇಲ್ಲಿ ಅರ್ಜುನನು ಯಾವ ನಿಲುವು ಉತ್ತಮ ಎಂದು ಪ್ರಶ್ನಿಸುತ್ತಿದ್ದಾನೆ. ಪರಿಪೂರ್ಣ ಸತ್ಯದ ಸಾಕ್ಷಾತ್ಕಾರಕ್ಕೆ ಬೇರೆ ಬೇರೆ ಮಾರ್ಗಗಳುಂಟು. ಈ ಅಧ್ಯಾಯದಲ್ಲಿ ಕೃಷ್ಣನು ಇವುಗಳಲ್ಲಿ ಅತ್ಯುನ್ನತವಾದದ್ದು ಭಕ್ತಿಯೋಗ ಅಥವಾ ತನ್ನ ಭಕ್ತಿಸೇವೆ ಎಂದು ಸೂಚಿಸುತ್ತಾನೆ. ಅದು ಅತ್ಯಂತ ನೇರವಾದದ್ದು ಮತ್ತು ಭಗವಂತನೊಡನೆ ಸಹವಾಸವನ್ನು ಪಡೆಯಲು ಅದೇ ಅತ್ಯಂತ ಸುಲಭವಾದದ್ದು.

ಭಗವದ್ಗೀತೆಯ ಎರಡನೆಯ ಅಧ್ಯಾಯದಲ್ಲಿ ಪರಮ ಪ್ರಭುವು ಜೀವಿಯು ಭೌತಿಕ ದೇಹವಲ್ಲ ಎಂದು ವಿವರಿಸಿದ್ದಾನೆ; ಅವನೊಂದು ಅಲೌಕಿಕ ಕಿಡಿ. ಪರಿಪೂರ್ಣ ಸತ್ಯವು ಅಲೌಕಿಕ ಸಮಗ್ರತೆ. ಏಳನೆಯ ಅಧ್ಯಾಯದಲ್ಲಿ ಜೀವಿಯು ಪರಮ ಸಮಗ್ರತೆಯ ಭಾಗ ಎನ್ನುವುದನ್ನು ಹೇಳಿ ಅರ್ಜುನನು ತನ್ನ ಗಮನವನ್ನು ಸಂಪೂರ್ಣವಾಗಿ ಸಮಗ್ರತೆಗೇ ಬದಲಿಸಬೇಕೆಂದು ಪ್ರಭುವು ಸೂಚಿಸಿದ. ತನ್ನ ದೇಹವನ್ನು ಬಿಡುವ ಕಾಲದಲ್ಲಿ ಯಾರು ಕೃಷ್ಣನನ್ನು ಕುರಿತು ಯೋಚಿಸುತ್ತಾರೋ ಅಂತಹವರನ್ನು ಕೂಡಲೇ ಆಧ್ಯಾತ್ಮಿಕ ಗಗನಕ್ಕೆ, ಕೃಷ್ಣನ ನಿವಾಸಕ್ಕೆ ಕಳುಹಿಸಲಾಗುವುದು ಎಂದೂ ಎಂಟನೆಯ ಅಧ್ಯಾಯದಲ್ಲಿ ಹೇಳಲಾಯಿತು. ಆರನೆಯ ಅಧ್ಯಾಯದ ಕಡೆಯಲ್ಲಿ ಪ್ರಭುವು, ಎಲ್ಲ ಯೋಗಿಗಳಲ್ಲಿ ಯಾರು ಸದಾ ತನ್ನಲ್ಲಿಯೇ ಕೃಷ್ಣನನ್ನು ಕುರಿತು ಚಿಂತಿಸುವನೋ ಅವನು ಅತ್ಯಂತ ಪರಿಪೂರ್ಣನೆಂದು ಸ್ಪಷ್ಟವಾಗಿ ಹೇಳಿದ್ದಾನೆ. ಹೀಗೆ ಒಟ್ಟಿನಲ್ಲಿ ಪ್ರತಿಯೊಂದು ಅಧ್ಯಾಯದಲ್ಲಿಯೂ ತೀರ್ಮಾನವೆಂದರೆ, ಮನುಷ್ಯನು ಕೃಷ್ಣನ ಸಾಕಾರ ರೂಪದಲ್ಲಿ ಅನುರಕ್ತನಾಗಬೇಕು, ಅದೇ ಅತ್ಯುನ್ನತ ಆಧ್ಯಾತ್ಮಿಕ ಸಾಕ್ಷಾತ್ಕಾರ ಎಂದು.

ಆದರೂ ಕೃಷ್ಣನ ಸಾಕಾರ ರೂಪದಲ್ಲಿ ಅನುರಕ್ತರಾಗಿಲ್ಲದವರು ಇದ್ದಾರೆ. ಅವರು ಎಷ್ಟರಮಟ್ಟಿಗೆ ಬೇರೆಯಾಗಿದ್ದಾರೆಂದರೆ ಭಗವದ್ಗೀತೆಯ ವ್ಯಾಖ್ಯಾನಗಳನ್ನು ಸಿದ್ಧಗೊಳಿಸುವಾಗ ಸಹ ಅವರು ಜನರ ಮನಸ್ಸನ್ನು ಕೃಷ್ಣನಿಂದ ಬೇರೆಡೆಗೆ ತಿರುಗಿಸಿ ಭಕ್ತಿಯನ್ನೆಲ್ಲ ನಿರಾಕಾರ ಬ್ರಹ್ಮಜ್ಯೋತಿಗೆ ಬದಲಾಯಿಸಲು ಅಪೇಕ್ಷಿಸುತ್ತಾರೆ. ಪರಿಪೂರ್ಣ ಸತ್ಯವು ಇಂದ್ರಿಯಗಳಿಗೆ ಎಟುಕುವುದಿಲ್ಲ, ಅದು ಅವ್ಯಕ್ತ; ಆದ್ದರಿಂದ ಇವರು ಪರಿಪೂರ್ಣ ಸತ್ಯದ ನಿರಾಕಾರ ರೂಪವನ್ನೇ ಧ್ಯಾನಿಸಲು ಬಯಸುತ್ತಾರೆ.

ಯೋಗಿಗಳಲ್ಲಿ ಎರಡು ವರ್ಗಗಳು, ಯಾವ ಪ್ರಕ್ರಿಯೆಯು ಹೆಚ್ಚು ಸುಲಭವಾದದ್ದು ಮತ್ತು ಎರಡು ವರ್ಗಗಳಲ್ಲಿ ಯಾವುದು ಅತ್ಯಂತ ಪರಿಪೂರ್ಣವಾದದ್ದು ಎನ್ನುವ ಪ್ರಶ್ನೆಯನ್ನು ತೀರ್ಮಾನಿಸಲು ಅರ್ಜುನನು ಪ್ರಯತ್ನಿಸುತ್ತಿದ್ದಾನೆ. ಎಂದರೆ, ಆತನು ಕೃಷ್ಣನ ಸಾಕಾರರೂಪದಲ್ಲಿ ಪ್ರೀತಿಯಿರುವವನಾದ್ದರಿಂದ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಿದ್ದಾನೆ. ಆತನಿಗೆ ನಿರಾಕಾರ ಬ್ರಹ್ಮನಲ್ಲಿ ಆಸಕ್ತಿಯಿಲ್ಲ. ತನ್ನ ಸ್ಥಿತಿಯು ಭದ್ರವಾದುದೇ ಎಂದು ತಿಳಿದುಕೊಳ್ಳಲು ಅವನು ಬಯಸುತ್ತಾನೆ. ಈ ಐಹಿಕ ಜಗತ್ತಿನಲ್ಲಾಗಲೀ ಪರಮ ಪ್ರಭುವಿನ ಅಲೌಕಿಕ ಜಗತ್ತಿನಲ್ಲಾಗಲೀ ನಿರಾಕಾರ ಅಭಿವ್ಯಕ್ತಿಯು ಚಿಂತನೆಗೆ ಒಂದು ಸಮಸ್ಯೆ.

ವಾಸ್ತವವಾಗಿ ಪರಿಪೂರ್ಣ ಸತ್ಯದ ನಿರಾಕಾರ ರೂಪವನ್ನು ಪರಿಪೂರ್ಣವಾಗಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದುದರಿಂದ ಅರ್ಜುನನು, "ಹೀಗೆ ಕಾಲವನ್ನು ವ್ಯರ್ಥಮಾಡಿ ಏನು ಪ್ರಯೋಜನ?" ಎಂದು ಕೇಳಲು ಬಯಸುತ್ತಾನೆ. ಕೃಷ್ಣನ ಸಾಕಾರ ರೂಪವನ್ನು ಪ್ರೀತಿಸುವುದರಿಂದ ಇತರ ರೂಪಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿತ್ತು ಮತ್ತು ಅವನ ಮನಸ್ಸಿಗೆ ಯಾವ ಬಗೆಯ ಪ್ರಕ್ಷುಬ್ದತೆಯೂ ಇರುತ್ತಿರಲಿಲ್ಲ. ಆದುದರಿಂದ ಕೃಷ್ಣನ ಸಾಕಾರ ರೂಪವನ್ನು ಪ್ರೀತಿಸುವುದೇ ಅತ್ಯುತ್ತಮ ಎಂದು ಹನ್ನೊಂದನೆಯ ಅಧ್ಯಾಯದಲ್ಲಿ ಆತನು ಅನುಭವಿಸಿ ಕಂಡುಕೊಂಡನು. ಅರ್ಜುನನು ಕೃಷ್ಣನಿಗೆ ಕೇಳುವ ಈ ಮುಖ್ಯವಾದ ಪ್ರಶ್ನೆಯಿಂದ ಪರಿಪೂರ್ಣ ಸತ್ಯದ ನಿರಾಕಾರ ಮತ್ತು ಸಾಕಾರ ಪರಿಕಲ್ಪನೆಗಳ ನಡುವಣ ವ್ಯತ್ಯಾಸವು ಸ್ಪಷ್ಟವಾಗುವುದು.

(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)

HT Kannada Desk

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.