ಭಕ್ತಿಯೋಗದಿಂದ ಇಂದ್ರೀಯಗಳ ಶುದ್ಧೀಕರಣ ಮಾಡುವುದೇ ಪರಮಾತ್ಮನನ್ನು ಕಾಣಲು ಇರುವ ಸುಲಭದ ದಾರಿ: ಗೀತೆಯ ಅರ್ಥ ತಿಳಿಯಿರಿ
ಶ್ರೀಕೃಷ್ಣನಲ್ಲಿ ಅಧ್ಯಾತ್ಮಿಕ ಪ್ರೀತಿಯನ್ನು ಬೆಳೆಸಿಕೊಳ್ಳದವರು ಭಕ್ತಿ ಮಾರ್ಗದ ಹಾದಿಯನ್ನು ಆರಿಸಿಕೊಳ್ಳುವುದರಿಂದ ಅವನಲ್ಲಿಗೆ ಸುಲಭವಾಗಿ ಹೋಗಬಹುದು. ಭಗವದ್ಗೀತೆಯ ಅರ್ಥವನ್ನು ಇಲ್ಲಿ ನೀಡಲಾಗಿದೆ.

ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 8
ಮಯ್ಯೇವ ಮನ ಆಧತ್ಸ್ವ ಮಯಿ ಬುದ್ದಿಂ ನಿವೇಶಯ |
ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ || 8 ||
ಅರ್ಥ: ದೇವೋತ್ತಮ ಪರಮ ಪುರುಷನಾದ ನನ್ನಲ್ಲಿ ಮನಸ್ಸನ್ನು ನಿಲ್ಲಿಸು, ನಿನ್ನ ಬುದ್ದಿಯನ್ನು ಸಂಪೂರ್ಣವಾಗಿ ನನ್ನಲ್ಲಿ ತೊಡಗಿಸು, ಸಾಕು. ನಿಸ್ಸಂದೇಹವಾಗಿಯೂ ಇದರಿಂದ ನೀನು ಯಾವಾಗಲೂ ನನ್ನಲ್ಲಿ ವಾಸಿಸುವೆ.
ಭಾವಾರ್ಥ: ಪರಮ ಪ್ರಭು ಕೃಷ್ಣನ ಸೇವೆಯಲ್ಲಿ ನಿರತನಾದವನು ಪರಮ ಪ್ರಭುವಿನೊಡನೆ ನೇರವಾದ ಸಂಬಂಧದಲ್ಲಿ ಬಾಳುತ್ತಾನೆ. ಆದುದರಿಂದ ಪ್ರಾರಂಭದಿಂದಲೇ ಅವನದು ಅಲೌಕಿಕ ಸ್ಥಿತಿ ಎನ್ನುವುದರಲ್ಲಿ ಸಂಶಯವಿಲ್ಲ. ಭಕ್ತನಾದವನು ಐಹಿಕ ಮಟ್ಟದಲ್ಲಿ ಬದುಕುವುದಿಲ್ಲ – ಆತನು ಕೃಷ್ಣನಲ್ಲಿ ಬದುಕುತ್ತಾನೆ. ಭಗವಂತನ ಪಾವನನಾಮವೂ ಭಗವಂತನೂ ಬೇರೆ ಬೇರೆಯಲ್ಲ. ಆದುದರಿಂದ ಭಕ್ತನು ಹರೇ ಕೃಷ್ಣ ಸಂಕೀರ್ತನೆ ಮಾಡುವಾಗ ಕೃಷ್ಣನೂ ಅವನ ಅಂತರಂಗ ಶಕ್ತಿಯೂ ಭಕ್ತನ ನಾಲಿಗೆಯಲ್ಲಿ ಕುಣಿಯುತ್ತಿರುತ್ತಾರೆ. ಅವನು ಕೃಷ್ಣನಿಗೆ ನೈವೇದ್ಯ ಮಾಡಿದಾಗ ಕೃಷ್ಣನು ಆ ತಿಂಡಿತಿನಸುಗಳನ್ನು ನೇರವಾಗಿ ಸ್ವೀಕರಿಸುತ್ತಾನೆ; ಭಕ್ತನು ಪ್ರಸಾದವನ್ನು ತಿಂದಾಗ ಕೃಷ್ಣಪ್ರಜ್ಞೆ ಹೊಂದುತ್ತಾನೆ. ಭಗವದ್ಗೀತೆ ಮತ್ತು ಇತರ ವೇದಸಾಹಿತ್ಯದಲ್ಲಿ ಈ ಪ್ರಕ್ರಿಯೆಯನ್ನು ಸಲಹೆ ಮಾಡಲಾಗಿದೆ. ಹೀಗಿದ್ದರೂ, ಇಂತಹ ಸೇವೆಯಲ್ಲಿ ನಿರತನಾಗದವನು ಈ ಪ್ರಕ್ರಿಯೆ ಹೇಗೆ ಕೆಲಸಮಾಡುತ್ತದೆ ಎಂದು ಅರ್ಥಮಾಡಿಕೊಳ್ಳಲಾರ.
ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 9
ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಮ್ |
ಅಭ್ಯಾಸಯೋಗೇನ ತತೋ ಮಾಮಿಚ್ಛಾಪ್ತುಂ ಧನಞ್ಚಯ || 9 ||
ಅರ್ಥ: ಅರ್ಜುನಾ, ಧನಂಜಯಾ, ನಿಶ್ಚಲವಾಗಿ ನನ್ನಲ್ಲಿ ನಿನ್ನ ಮನಸ್ಸನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ ಭಕ್ತಿಯೋಗದ ನಿಯಂತ್ರಕ ತತ್ವಗಳನ್ನು ಅನುಸರಿಸಲು ಪ್ರಯತ್ನಿಸು. ಹೀಗೆ ನನ್ನನ್ನು ಸೇರುವ ಬಯಕೆಯನ್ನು ಬೆಳೆಸಿಕೋ.
ಭಾವಾರ್ಥ: ಈ ಶ್ಲೋಕದಲ್ಲಿ ಭಕ್ತಿಯೋಗದ ಎರಡು ಬೇರೆ ಬೇರೆ ಪ್ರಕ್ರಿಯೆಗಳನ್ನು ಸೂಚಿಸಿದೆ. ಮೊದಲನೆಯದು ದೇವೋತ್ತಮ ಪರಮ ಪುರುಷನಾದ ಕೃಷ್ಣನಲ್ಲಿ ಅಧ್ಯಾತ್ಮಿಕ ಪ್ರೀತಿಯಿಂದ ವಾಸ್ತವವಾಗಿ ಆಸಕ್ತಿಯನ್ನು ಬೆಳೆಸಿಕೊಂಡಿರುವವನಿಗೆ ಅನ್ವಯಿಸುತ್ತದೆ. ಮತ್ತೊಂದು, ಪರಮ ಪುರುಷನಲ್ಲಿ ಆಧ್ಯಾತ್ಮಿಕ ಪ್ರೀತಿಯಿಂದ ಆಸಕ್ತಿಯನ್ನು ಬೆಳೆಸಿಕೊಳ್ಳದಿರುವವನಿಗೆ ಸೂಚಿಸುವ ಪ್ರಕ್ರಿಯೆ. ಕೃಷ್ಣಾನುರಾಗದ ಘಟ್ಟಕ್ಕೆ ಕಡೆಗೆ ಏರಲು ಮನುಷ್ಯನು ಅನುಸರಿಸಬಹುದಾದ, ಈ ಎರಡನೆಯ ವರ್ಗದ ಜನರಿಗಾಗಿ ನಿಗದಿತವಾದ ಬೇರೆ ಬೇರೆ ವಿಧಿ, ನಿಯಮಗಳಿವೆ.
ಭಕ್ತಿಯೋಗ ಎಂದರೆ ಇಂದ್ರಿಯಗಳನ್ನು ಶುದ್ದಿಗೊಳಿಸುವುದು. ಈಗ ಐಹಿಕ ಅಸ್ತಿತ್ವದಲ್ಲಿ ಇಂದ್ರಿಯಗಳು ತಮ್ಮ ಸುಖದಲ್ಲಿ ಮಗ್ನವಾಗಿ ಸದಾ ಮಲಿನವಾಗಿರುತ್ತವೆ. ಭಕ್ತಿಯೋಗದ ಅಭ್ಯಾಸದಿಂದ ಈ ಇಂದ್ರಿಯಗಳು ಪರಿಶುದ್ಧವಾಗುತ್ತವೆ. ಈ ಪರಿಶುದ್ಧ ಸ್ಥಿತಿಯಲ್ಲಿ ಅವು ನೇರವಾಗಿ ಪರಮ ಪ್ರಭುವಿನ ಸಂಪರ್ಕವನ್ನು ಪಡೆಯುತ್ತವೆ. ಈ ಐಹಿಕ ಅಸ್ತಿತ್ವದಲ್ಲಿ, ನಾನು ಯಾರೋ ಯಜಮಾನನಿಗಾಗಿ ಸೇವೆಸಲ್ಲಿಸುತ್ತಿರಬಹುದು. ಆದರೆ ನಾನು ನನ್ನ ಯಜಮಾನನ ಸೇವೆಯನ್ನು ಪ್ರೀತಿಯಿಂದ ಒಂದಿಷ್ಟು ದುಡ್ಡಿಗಾಗಿ ಮಾಡುತ್ತೇನೆ. ಯಜಮಾನನಿಗೂ ನನ್ನ ವಿಷಯದಲ್ಲಿ ಪ್ರೀತಿ ಇಲ್ಲ; ನನ್ನನ್ನು ದುಡಿಸಿಕೊಳ್ಳುತ್ತಾನೆ, ಹಣ ಕೊಡುತ್ತಾನೆ. ಆದುದರಿಂದ ಪ್ರೀತಿಯ ಪ್ರಶ್ನೆಯೇ ಇಲ್ಲ.
ಆದರೆ ಆಧ್ಯಾತ್ಮಿಕ ಜೀವನಕ್ಕೆ ಪ್ರೀತಿಯು ಪರಿಶುದ್ಧ ಮಟ್ಟಕ್ಕೆ ಏರಬೇಕು. ಈಗಿರುವ ಇಂದ್ರಿಯಗಳ ಮೂಲಕ ಮಾಡುವ ಪ್ರೀತಿಪೂರ್ವಕ ಸೇವೆಯ ಅಭ್ಯಾಸದಿಂದ ಪ್ರೀತಿಯ ಆ ಘಟ್ಟವನ್ನು ಸಾಧಿಸಬಹುದು. ಈ ಭಗವತ್ಪ್ರೇಮವು ಈಗ ಪ್ರತಿಯೊಬ್ಬರ ಹೃದಯದಲ್ಲಿ ಸುಪ್ತವಾಗಿದೆ. ಅಲ್ಲಿ ದೇವರ ಪ್ರೀತಿಯು ಬೇರೆ ಬೇರೆ ರೀತಿಗಳಲ್ಲಿ ಪ್ರಕಟವಾಗುತ್ತದೆ. ಆದರೆ ಐಹಿಕ ಸಂಪರ್ಕದಿಂದ ಅದು ಮಲಿನವಾಗಿದೆ. ಈಗ ಹೃದಯವನ್ನು ಐಹಿಕ ಸಂಪರ್ಕದ ಮಾಲಿನ್ಯದಿಂದ ಪರಿಶುದ್ಧಗೊಳಿಸಬೇಕು; ಸುಪ್ತವಾದ ಸಹಜವಾದ ಕೃಷ್ಣಪ್ರೇಮವನ್ನು ಪುನಶ್ಚತನಗೊಳಿಸಬೇಕು. ಇದೇ ಸಂಪೂರ್ಣ ಪ್ರಕ್ರಿಯೆ.
ಭಕ್ತಿಯೋಗದ ನಿಯಂತ್ರಕ ತತ್ವಗಳನ್ನು ಅಭ್ಯಾಸಮಾಡಲು ತಜ್ಞ ಗುರುವಿನ ಮಾರ್ಗದರ್ಶನದಲ್ಲಿ ಕೆಲವು ತತ್ವಗಳನ್ನು ಆಚರಿಸಬೇಕು. ಬೆಳಗ್ಗೆ ಬೇಗನೆ ಏಳಬೇಕು. ಸ್ನಾನ ಮಾಡಬೇಕು. ದೇವಸ್ಥಾನವನ್ನು ಪ್ರವೇಶಿಸಿ ಪ್ರಾರ್ಥನೆಯನ್ನು ಸಲ್ಲಿಸಿ ಹರೇಕೃಷ್ಣ ಸಂಕೀರ್ತನೆಯನ್ನು ಮಾಡಬೇಕು. ಹೂವುಗಳನ್ನು ಸಂಗ್ರಹಿಸಿ ವಿಗ್ರಹಕ್ಕೆ ಅರ್ಪಿಸಬೇಕು. ವಿಗ್ರಹಕ್ಕೆ ನೈವೇದ್ಯ ಮಾಡಲು ಅಡುಗೆ ಮಾಡಬೇಕು; ಪ್ರಸಾದವನ್ನು ತೆಗೆದುಕೊಳ್ಳಬೇಕು ಇತ್ಯಾದಿ. ಮನುಷ್ಯನು ಅನುಸರಿಸಬೇಕಾದ ಹಲವಾರು ನಿಯಮ ನಿಬಂಧನೆಗಳಿವೆ. ಪರಿಶುದ್ಧ ಭಕ್ತರಿಂದ ಸದಾ ಭಗವದ್ಗೀತೆ ಮತ್ತು ಭಾಗವತಗಳನ್ನು ಕೇಳಬೇಕು. ಯಾರೇ ಆಗಲಿ ದೇವರ ಪ್ರೇಮದ ಎತ್ತರಕ್ಕೆ ಏರಲು ಈ ಸಾಧನೆಯು ನೆರವಾಗಬಲ್ಲದು. ಅನಂತರ ಭಗವಂತನ ದಿವ್ಯ ಸಾಮ್ರಾಜ್ಯದಲ್ಲಿ ಆತನ ಮುನ್ನಡೆಯು ನಿಶ್ಚಯವಾದದ್ದು. ನಿಯಮ ನಿಯಂತ್ರಣಗಳನ್ನು ಅನುಸರಿಸಿ, ಗುರುಗಳ ಮಾರ್ಗದರ್ಶನದಲ್ಲಿ ಭಕ್ತಿಯೋಗವನ್ನು ಆಚರಿಸಿದರೆ ಭಗವತ್ಪ್ರೇಮದ ಹಂತವನ್ನು ನಿಶ್ಚಿತವಾಗಿಯೂ ತಲಪಬಹುದು.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)