ಪ್ರತಿ ಕೆಲಸವನ್ನು ಶುದ್ಧ ಮನಸ್ಸಿನಿಂದ ಶ್ರೀಕೃಷ್ಣನಿಗೆ ಅರ್ಪಿಸುವವರು ಪರಿಪೂರ್ಣವಾದ ಭಕ್ತರು: ಗೀತೆಯ ಸಾರಾಂಶ ಹೀಗಿದೆ
ಕೃಷ್ಣಪ್ರಜ್ಞೆಯಲ್ಲಿ ಐಹಿಕ ಚಟುವಟಿಕೆಗಳನ್ನು ನಡೆಸುತ್ತಾ, ಪ್ರತಿಯೊಂದು ಕೆಲಸವನ್ನು ಅವನಿಗೆ ಸಮರ್ಪಿಸುವವನು ಪರಮಾತ್ಮನ ಪರಿಪೂರ್ಣ ಭಕ್ತ. ಭಗವದ್ಗೀತೆಯ ಅಧ್ಯಾಯ 12, ಭಕ್ತಿ ಸೇವೆ, ಶ್ಲೋಕ 2, 3 ಹಾಗೂ 4 ರಿಂದ ಭಕ್ತಿ ಸೇವೆಯ ನಿಜವಾದ ಅರ್ಥ ತಿಳಿಯಿರಿ.

ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 2
ಶ್ರೀಭಗವಾನುವಾಚ
ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ |
ಶ್ರದ್ಧಯಾ ಪರಯೋಪೇತಾಸ್ತೇ ಮೇ ಯುಕ್ತ ತಮಾ ಮತಾಃ || 2 ||
ಅರ್ಥ: ದೇವೋತ್ತಮ ಪರಮ ಪುರುಷನು ಹೀಗೆಂದನು - ಯಾರು ನನ್ನ ಸಾಕಾರ ರೂಪದಲ್ಲಿ ತಮ್ಮ ಮನಸ್ಸನ್ನು ನಿಲ್ಲಿಸುತ್ತಾರೋ ಮತ್ತು ಅಧಿಕವಾದ ಹಾಗೂ ಅಲೌಕಿಕವಾದ ನಿಷ್ಠೆಯಿಂದ ನನ್ನನ್ನು ಪೂಜಿಸುವುದರಲ್ಲಿ ನಿರತರಾಗಿರುತ್ತಾರೋ ಅವರನ್ನು ನಾನು ಅತ್ಯಂತ ಪರಿಪೂರ್ಣರು ಎಂದು ಭಾವಿಸುತ್ತೇನೆ.
ಭಾವಾರ್ಥ: ಅರ್ಜುನನ ಪ್ರಶ್ನೆಗೆ ಉತ್ತರವಾಗಿ ಕೃಷ್ಣನು ಈ ಮಾತನ್ನು ಸ್ಪಷ್ಟವಾಗಿ ಹೇಳುತ್ತಾನೆ ಯಾವಾತನು ಕೃಷ್ಣನ ಸಾಕಾರ ರೂಪದಲ್ಲಿ ತನ್ನ ಮನಸ್ಸನ್ನು ಕೇಂದ್ರೀಕರಿಸುತ್ತಾನೋ ಮತ್ತು ಶ್ರದ್ಧಾಭಕ್ತಿಗಳಿಂದ ಆತನನ್ನು ಪೂಜಿಸುತ್ತಾನೋ ಅವನೇ ಯೋಗದಲ್ಲಿ ಅತ್ಯಂತ ಪರಿಪೂರ್ಣನು ಎಂದು ಪರಿಗಣಿಸಬೇಕು. ಇಂತಹ ಕೃಷ್ಣಪ್ರಜ್ಞೆಯ ಸ್ಥಿತಿಯಲ್ಲಿರುವವನಿಗೆ ಐಹಿಕ ಚಟುವಟಿಕೆಗಳೇ ಇಲ್ಲ; ಏಕೆಂದರೆ ಅವನು ಮಾಡುವುದೆಲ್ಲ ಕೃಷ್ಣನಿಗಾಗಿ. ಪರಿಶುದ್ಧ ಭಕ್ತನು ಸದಾ ಕೆಲಸದಲ್ಲಿ ನಿರತನಾಗಿರುತ್ತಾನೆ. ಕೆಲವೊಮ್ಮೆ ಅವನು ಸಂಕೀರ್ತನ ಮಾಡುತ್ತಾನೆ, ಕೃಷ್ಣನ ವಿಷಯ ಕೇಳುತ್ತಾನೆ ಅಥವಾ ಪುಸ್ತಕಗಳನ್ನು ಓದುತ್ತಾನೆ. ಕೆಲವೊಮ್ಮೆ ನೈವೇದ್ಯಕ್ಕಾಗಿ ಅಡಿಗೆ ಮಾಡುತ್ತಾನೆ ಅಥವಾ ಕೃಷ್ಣನಿಗಾಗಿ ಏನನ್ನೋ ಕೊಳ್ಳಲು ಅಂಗಡಿಗೆ ಹೋಗುತ್ತಾನೆ ಅಥವಾ ಕೆಲವೊಮ್ಮೆ ದೇವಸ್ಥಾನವನ್ನು ಸ್ವಚ್ಛಮಾಡುತ್ತಾನೆ ಅಥವಾ ಪಾತ್ರೆಗಳನ್ನು ಸ್ವಚ್ಛಮಾಡುತ್ತಾನೆ. ಅವನು ಏನೇ ಮಾಡಲಿ ತನ್ನ ಚಟುವಟಿಕೆಗಳನ್ನು ಕೃಷ್ಣನಿಗೆ ಸಮರ್ಪಿಸದೆ ಒಂದು ಕ್ಷಣವನ್ನೂ ಕಳೆಯುವುದಿಲ್ಲ. ಇಂತಹ ಕ್ರಿಯೆಯು ಪೂರ್ಣ ಸಮಾಧಿಸ್ಥಿತಿಯಲ್ಲಿದೆ.
ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 3
ಯೇ ತ್ವಕ್ಷರಮನಿರ್ದೇಶ್ಯಮವ್ಯಕ್ತಂ ಪರ್ಯುಪಾಸತೇ |
ಸರ್ವತ್ರಗಮಚಿಂ ಚ ಕೂಟಸ್ಥಮಚಲಂ ಧ್ರುವಮ್ || 3 ||
ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 4
ಸನ್ನಿಯಮ್ಯೇನ್ದ್ರಿಯಗ್ರಾಮಂ ಸರ್ವತ್ರ ಸಮಬುದ್ದಯಃ |
ತೇ ಪ್ರಾಪ್ನುವನ್ತಿ ಮಾಮೇವ ಸರ್ವಭೂತಹಿತೇ ರತಾಃ || 4 ||
ಅರ್ಥ: ಅವ್ಯಕ್ತವಾದದ್ದು, ಇಂದ್ರಿಯಗಳ ಗ್ರಹಿಕೆಯನ್ನು ಮೀರಿದ್ದು, ಸರ್ವವ್ಯಾಪಿಯು, ಬದಲಾವಣೆ ಇಲ್ಲದ್ದು, ಧ್ರುವವಾದದ್ದು ಮತ್ತು ನಿಶ್ಚಲವಾದದ್ದು ಇದು ಪರಮ ಸತ್ಯದ ನಿರಾಕಾರ ಪರಿಕಲ್ಪನೆ ಇದನ್ನು ಎಲ್ಲ ಇಂದ್ರಿಯಗಳನ್ನು ನಿಯಂತ್ರಿಸಿ ಎಲ್ಲ ಜೀವಿಗಳ ಹಿತವನ್ನು ಬಯಸುತ್ತ ಸಂಪೂರ್ಣವಾಗಿ ಪೂಜಿಸುವವರು ಕಡೆಗೆ ನನ್ನನ್ನು ಸೇರುತ್ತಾರೆ.
ಭಾವಾರ್ಥ: ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನು ನೇರವಾಗಿ ಪೂಜಿಸದೆ ಅದೇ ಗುರಿಯನ್ನು ಪರೋಕ್ಷ ರೀತಿಯಲ್ಲಿ ಮುಟ್ಟಲು ಪ್ರಯತ್ನಿಸುವವರು, ಅದೇ ಗುರಿಯಾದ, ಶ್ರೀಕೃಷ್ಣನನ್ನು ಅಂತಿಮವಾಗಿ ಸೇರುವರು. "ವಾಸುದೇವನೇ ಸರ್ವಸ್ವ ಎಂದು ತಿಳಿದುಕೊಂಡು ಜ್ಞಾನಿಯು ಹಲವು ಜನ್ಮಗಳನಂತರ ನನ್ನಲ್ಲಿ ಆಶ್ರಯವನ್ನು ಅರಸುತ್ತಾನೆ." ಹಲವು ಜನ್ಮಗಳನಂತರ ಮನುಷ್ಯನಿಗೆ ಪೂರ್ಣಜ್ಞಾನವು ಬಂದಾಗ ಆತನು ಶ್ರೀಕೃಷ್ಣನಿಗೆ ಶರಣಾಗತನಾಗುತ್ತಾನೆ. ಈ ಶ್ಲೋಕದಲ್ಲಿ ಹೇಳಿರುವ ರೀತಿಯಲ್ಲಿ ಮನುಷ್ಯನು ಭಗವಂತನ ಬಳಿ ಸಾಗಿದರೆ ಆತನು ಇಂದ್ರಿಯ ನಿಗ್ರಹ ಮಾಡಬೇಕು, ಎಲ್ಲರ ಸೇವೆ ಮಾಡಬೇಕು ಮತ್ತು ಎಲ್ಲ ಜೀವಿಗಳ ಹಿತಕ್ಕಾಗಿ ಕೆಲಸ ಮಾಡಬೇಕು. ಮನುಷ್ಯನು ಪ್ರಭು ಕೃಷ್ಣನ ಬಳಿ ಸಾರಬೇಕು, ಇಲ್ಲವಾದರೆ ಪರಿಪೂರ್ಣ ಸಾಕ್ಷಾತ್ಕಾರವಿಲ್ಲ ಎನ್ನುವುದು ಇಂಗಿತಾರ್ಥ.
ಅನೇಕ ಬಾರಿ ಮನುಷ್ಯನು ಅವನಿಗೆ ಸಂಪೂರ್ಣವಾಗಿ ಶರಣಾಗುವ ಮುನ್ನ ತುಂಬ ತಪಸ್ಸನ್ನು ಮಾಡಬೇಕಾಗುತ್ತದೆ. ವ್ಯಕ್ತಿಗತ ಆತ್ಮದಲ್ಲಿ ಪರಮಾತ್ಮನನ್ನು ಕಾಣಲು ಮನುಷ್ಯನು ಕಾಣುವುದು, ಕೇಳುವುದು ಸವಿಯುವುದು, ಕೆಲಸಮಾಡುವುದು ಮೊದಲಾದ ಇಂದ್ರಿಯಕಾರ್ಯಗಳನ್ನು ನಿಲ್ಲಿಸಬೇಕಾಗುತ್ತದೆ. ಆಗ ಅವನಿಗೆ ಪರಮಾತ್ಮನು ಎಲ್ಲೆಲ್ಲೂ ಇದ್ದಾನೆ ಎಂದು ಅರ್ಥವಾಗುತ್ತದೆ. ಇದನ್ನು ಅರ್ಥಮಾಡಿಕೊಂಡ ಮನುಷ್ಯನು ಯಾವ ಜೀವಿಯ ವಿಷಯದಲ್ಲಿಯೂ ಅಸೂಯೆ ಪಡುವುದಿಲ್ಲ. ಅವನು ಹೊರಗಿನ ಆಚ್ಛಾದನೆಯನ್ನು ಮಾತ್ರ ಕಾಣದೆ ಆತ್ಮವನ್ನು ಮಾತ್ರ ಕಾಣುತ್ತಾನೆ. ಆದುದರಿಂದ ಅವನು ಮನುಷ್ಯನಿಗೂ ಪ್ರಾಣಿಗೂ ನಡುವೆ ಯಾವ ವ್ಯತ್ಯಾಸವನ್ನೂ ಕಾ ಣುವುದಿಲ್ಲ. ಆದರೆ ಈ ನಿರಾಕಾರ ಸಾಕ್ಷಾತ್ಕಾರದ ರೀತಿಯು ಸಾಮಾನ್ಯ ಮನುಷ್ಯನಿಗೆ ಬಹು ಕಷ್ಟವಾದುದು.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)