Bhagavad Gita: ಇಡೀ ವಿಶ್ವವನ್ನು ಆವರಿಸಿರುವ ಶ್ರೀಕೃಷ್ಣ ವಿಶ್ವರೂಪದಲ್ಲಿ ಹೇಗೆ ಕಾಣಿಸುತ್ತಾನೆ; ಭಗವದ್ಗೀತೆಯ ಈ ಶ್ಲೋಕಗಳ ತಾತ್ಪರ್ಯ ಇದು
Bhagavad Gita: ಪರಮಾತ್ಮ ಶ್ರೀಕೃಷ್ಣನು ಇಡೀ ವಿಶ್ವವನ್ನೇ ಆವರಿಸಿದ್ದಾನೆ. ಹೀಗಿರುವಾಗ ಪರಮಾತ್ಮನು ವಿಶ್ವರೂಪದಲ್ಲಿ ಹೇಗೆಲ್ಲಾ ಕಾಣಿಸುತ್ತಾನೆ? ಭಗವದ್ಗೀತೆಯ ಅಧ್ಯಾಯ 11 ವಿಶ್ವರೂಪ, ಶ್ಲೋಕ 1, 2 ಮತ್ತು 3 ರಲ್ಲಿ ಅರ್ಜನನ ಕೋರಿಕೆ ಹೀಗಿದೆ.

ಅಧ್ಯಾಯ – 11: ವಿಶ್ವರೂಪ – ಶ್ಲೋಕ – 1
ಅರ್ಜುನ ಉವಾಚ
ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮ ಸಂಜ್ಞತಮ್ |
ಯತ್ತ್ವಯೋಕ್ತಂ ವಚಸ್ತೇನ ಮೋಹೋSಯಂ ವಿಗತೋ ಮಮ || 1 ||
ಅರ್ಥ: ಅರ್ಜುನನು ಹೀಗೆ ಹೇಳಿದನು – ನೀನು ಅನುಗ್ರಹ ಮಾಡಿ ಈ ರಹಸ್ಯವಾದ ಆಧ್ಯಾತ್ಮಿಕ ವಿಷಯಗಳನ್ನು ಕುರಿತು ಉಪದೇಶ ಮಾಡಿದೆ. ಇದರಿಂದ ನನ್ನ ಮೋಹವು ನಾಶವಾಗಿದೆ.
ಭಾವಾರ್ಥ: ಕೃಷ್ಣನು ಎಲ್ಲ ಕಾರಣಗಳ ಕಾರಣ ಎನ್ನುವುದನ್ನು ಈ ಅಧ್ಯಾಯವು ತೋರಿಸುತ್ತದೆ. ಭೌತಿಕ ಲೋಕಗಳು ಮಹಾ ವಿಷ್ಣುವಿನಿಂದ ಹೊರಸೂಸುತ್ತವೆ; ಮಹಾವಿಷ್ಣುವಿಗೆ ಸಹ ಕೃಷ್ಣನು ಕಾರಣನು. ಕೃಷ್ಣನು ಒಂದು ಅವತಾರವಲ್ಲ; ಅವನು ಎಲ್ಲ ಅವತಾರಗಳ ಮೂಲ. ಹಿಂದಿನ ಅಧ್ಯಾಯದಲ್ಲಿ ಇದನ್ನು ಸಂಪೂರ್ಣವಾಗಿ ವಿವರಿಸಿದೆ. ಈಗ ಅರ್ಜುನನ ಮಟ್ಟಿಗೆ ಅವನು ತನ್ನ ಮೋಹವು ಕೊನೆಗಂಡಿತು ಎಂದು ಹೇಳುತ್ತಾನೆ. ಎಂದರೆ ಈಗ ಅರ್ಜುನನು ಕೃಷ್ಣನು ಕೇವಲ ಒಬ್ಬ ಮನುಷ್ಯ, ತನ್ನ ಸ್ನೇಹಿತ ಎಂದು ಯೋಚಿಸುವುದಿಲ್ಲ; ಅವನು ಎಲ್ಲ ವಸ್ತುಗಳ ಮೂಲ ಎಂದು ಕಾಣುತ್ತಾನೆ. ಅರ್ಜುನನಿಗೆ ಬಹುಮಟ್ಟಿಗೆ ಜ್ಞಾನೋದಯವಾಗಿದೆ. ತನಗೆ ಕೃಷ್ಣನಂತಹ ಮಹಾನ್ ಸ್ನೇಹಿತನಿದ್ದಾನೆ ಎಂದು ಅವನಿಗೆ ಸಂತೋಷ, ಆದರೆ ತಾನು ಕೃಷ್ಣನನ್ನು ಎಲ್ಲ ವಸ್ತುಗಳ ಮೂಲ ಎಂದು ಒಪ್ಪಿಕೊಂಡರೂ ಇತರರು ಒಪ್ಪಿಕೊಳ್ಳದೆ ಹೋಗಬಹುದು. ಆದುದರಿಂದ ಎಲ್ಲರಿಗೂ ಕೃಷ್ಣನ ದೈವತ್ವವು ಸ್ಪಷ್ಟವಾಗುವಂತೆ ಈ ಅಧ್ಯಾಯದಲ್ಲಿ ಅವನು ಕೃಷ್ಣನಿಗೆ ತನ್ನ ವಿಶ್ವರೂಪವನ್ನು ತೋರಿಸುವಂತೆ ಪ್ರಾರ್ಥಿಸುತ್ತಾನೆ. ವಾಸ್ತವವಾಗಿ ಕೃಷ್ಣನ ವಿಶ್ವರೂಪವನ್ನು ಕಂಡವನು ಅರ್ಜುನನಂತೆ ಹೆದರಿಕೊಳ್ಳುತ್ತಾನೆ. ಆದರೆ ಕೃಷ್ಣನು ಎಷ್ಟು ಕರುಣಾಳು ಎಂದರೆ ವಿಶ್ವರೂಪವನ್ನು ತೋರಿಸಿ ತನ್ನ ಮೂಲರೂಪಕ್ಕೆ ಹಿಂದಿರುಗುತ್ತಾನೆ. ಕೃಷ್ಣನು ತಾನು ಮಾತನಾಡುತ್ತಿರುವುದು ಅರ್ಜುನನ ಪ್ರಯೋಜನಕ್ಕಾಗಿ ಎಂದು ಹಲವು ಬಾರಿ ಹೇಳಿದ್ದಾನೆ; ಅರ್ಜುನನು ಇದನ್ನು ಒಪ್ಪುತ್ತಾನೆ; ತನಗೆ ಇದೆಲ್ಲ ಆಗುತ್ತಿರುವುದು ಕೃಷ್ಣನ ಕೃಪೆಯಿಂದ ಎಂದು ಅರ್ಜುನನು ಒಪ್ಪಿಕೊಳ್ಳುತ್ತಾನೆ. ಕೃಷ್ಣನು ಎಲ್ಲ ಕಾರಣಗಳ ಕಾರಣನು ಮತ್ತು ಪ್ರತಿಯೊಬ್ಬರ ಹೃದಯದಲ್ಲಿಯೂ ಪರಮಾತ್ಮನಾಗಿ ನೆಲೆಸಿದ್ದಾನೆ ಎನ್ನುವುದು ಈಗ ಅವನ ದೃಢ ನಂಬಿಕೆ.
ಅಧ್ಯಾಯ – 11: ವಿಶ್ವರೂಪ – ಶ್ಲೋಕ – 2
ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ |
ತ್ವತ್ತಃ ಕಮಲಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಮ್ || 2 ||
ಅರ್ಥ: ಕಮಲ ನೇತ್ರನೆ, ಪ್ರತಿಯೊಂದು ಜೀವಿಯ ಹುಟ್ಟು ಮತ್ತು ಸಾವಿನ ವಿಷಯವನ್ನು ನಿನ್ನಿಂದ ವಿವರವಾಗಿ ಕೇಳಿದನು. ಎಂದೂ ಕೊನೆಯಾಗದ ನಿನ್ನ ವೈಭವಗಳನ್ನು ಅರ್ಥಮಾಡಿಕೊಂಡಿದ್ದೇನೆ.
ಭಾವಾರ್ಥ: ಅರ್ಜುನನು ತನ್ನ ಸಂತೋಷದಲ್ಲಿ ಶ್ರೀಕೃಷ್ಣನನ್ನು 'ಕಮಲ ನೇತ್ರ' (ಕೃಷ್ಣನ ಕಣ್ಣುಗಳು ಕಮಲದ ದಳಗಳಂತೆ ಕಾಣುತ್ತವೆ) ಎಂದು ಕರೆಯುತ್ತಾನೆ. ಕೃಷ್ಣನು ಹಿಂದಿನ ಒಂದು ಅಧ್ಯಾಯದಲ್ಲಿ ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಲಯಸ್ತಥಾ "ಈ ಇಡೀ ಭೌತಿಕ ಅಭಿವ್ಯಕ್ತಿಯು ಕಾಣಿಸುವುದಕ್ಕೆ ಮತ್ತು ಅದೃಶ್ಯವಾಗುವುದಕ್ಕೆ ನಾನು ಮೂಲ" ಎಂದು ಭರವಸೆ ನೀಡಿದ್ದಾನೆ. ಅರ್ಜುನನು ಇದನ್ನು ಪ್ರಭುವಿನಿಂದ ವಿವರವಾಗಿ ಕೇಳಿದ್ದಾನೆ. ಕೃಷ್ಣನು ಎಲ್ಲ ವಸ್ತುಗಳು ಕಾಣಿಸಿಕೊಳ್ಳುವುದಕ್ಕೆ ಮತ್ತು ಮಾಯವಾಗುವುದಕ್ಕೆ ಮೂಲವಾದರೂ ಅವನು ಅವುಗಳಿಂದ ದೂರ ಉಳಿದಿದ್ದಾನೆ ಎಂದೂ ಅರ್ಜುನನಿಗೆ ತಿಳಿದಿದೆ. ಒಂಬತ್ತನೆಯ ಆಧ್ಯಾಯದಲ್ಲಿ ಪ್ರಭುವು ಹೇಳಿದಂತೆ ಆತನು ಸರ್ವವ್ಯಾಪಿ, ಆದರೆ ಆತನೇ ವ್ಯಕ್ತಿಶಃ ಎಲ್ಲೆಲ್ಲೂ ಇರುವುದಿಲ್ಲ. ಇದು ಕೃಷ್ಣನ ಊಹಾತೀತ ಸಂಪತ್ತು: ಇದು ತನಗೆ ಸಂಪೂರ್ಣವಾಗಿ ಅರ್ಥವಾಗಿದೆ ಎಂದು ಅರ್ಜುನನು ಒಪ್ಪಿಕೊಳ್ಳುತ್ತಾನೆ.
ಅಧ್ಯಾಯ – 11: ವಿಶ್ವರೂಪ – ಶ್ಲೋಕ – 3
ಏವಮೇತದ್ ಯಥಾತ್ಥ ತ್ವಮಾತ್ಮಾನಂ ಪರಮೇಶ್ವರ |
ದ್ರಷ್ಟುಮಿಚ್ಛಾಮಿ ತೇ ರೂಪಮೈಶ್ವರಂ ಪುರುಷೋತ್ತಮ || 3 ||
ಅರ್ಥ: ಪರಮ ಪ್ರಭುವೇ, ಪುರುಷೋತ್ತಮನೇ, ನೀನು ನಿನ್ನನ್ನು ವರ್ಣಿಸಿಕೊಂಡಂತೆ, ನಿನ್ನ ವಾಸ್ತವ ಸ್ಥಿತಿಯಲ್ಲಿ ನನ್ನ ಮುಂದೆ ಕಾಣುತ್ತಿದ್ದೇನೆ. ಆದರೂ ನೀನು ಈ ವಿಶ್ವದ ಅಭಿವ್ಯಕ್ತಿಯಲ್ಲಿ ಹೇಗೆ ಪ್ರವೇಶಿಸಿರುವೆ ಎಂದು ಕಾಣಲು ಬಯಸುತ್ತೇನೆ; ನಿನ್ನ ಆ ರೂಪವನ್ನು ನೋಡಲು ಬಯಸುತ್ತೇನೆ.
ಭಾವಾರ್ಥ: ತಾನು ಸ್ವಯಂ ಅಂಶದಿಂದ ಭೌತಿಕ ಜಗತ್ತನ್ನು ಪ್ರವೇಶಿಸಿದುದರಿಂದ ಈ ವಿಶ್ವದ ಅಭಿವ್ಯಕ್ತಿಯು ಸಾಧ್ಯವಾಗಿದೆ ಮತ್ತು ಅದು ಸಾಗುತ್ತಿದೆ ಎಂದು ಪ್ರಭುವು ಹೇಳಿದನು. ಅರ್ಜುನನ ಮಟ್ಟಿಗೆ ಕೃಷ್ಣನ ಮಾತುಗಳು ಅವನಿಗೆ ಸ್ಫೂರ್ತಿಯನ್ನು ಕೊಟ್ಟಿವೆ. ಆದರೆ ಮುಂದೆ ಕೃಷ್ಣನು ಸಾಮಾನ್ಯ ಮನುಷ್ಯ ಎಂದು ಯೋಚಿಸುವವರನ್ನು ಒಪ್ಪಿಸಲು ಅರ್ಜುನನು ಕೃಷ್ಣನ ವಿಶ್ವರೂಪವನ್ನು ನೋಡಲು ಅಪೇಕ್ಷಿಸುತ್ತಾನೆ. ಕೃಷ್ಣನು ವಿಶ್ವದಿಂದ ಬೇರೆಯಾದರೂ ಅವನು ಅದರೊಳಗಿಂದ ಹೇಗೆ ಕಾರ್ಯ ನಿರ್ವಹಿಸುತ್ತಾನೆ ಎಂದು ಕಾಣಲು ಬಯಸುತ್ತಾನೆ. ಅರ್ಜುನನು ಕೃಷ್ಣನನ್ನು ಪುರುಷೋತ್ತಮ ಎಂದು ಸಂಬೋಧಿಸುವುದು ಅರ್ಥವತ್ತಾಗಿದೆ. ಪ್ರಭುವು ದೇವೋತ್ತಮ ಪರಮ ಪುರುಷ; ಆತನು ಅರ್ಜುನನಲ್ಲಿಯೇ ಇದ್ದಾನೆ; ಆದುದರಿಂದ ಅವನಿಗೆ ಅರ್ಜುನನ ಅಪೇಕ್ಷೆಯು ತಿಳಿದಿದೆ. ಅರ್ಜುನನಿಗೆ ಕೃಷ್ಣನನ್ನು ಅವನ ಕೃಷ್ಣರೂಪದಲ್ಲಿ ಕಾಣುವುದರಲ್ಲಿಯೇ ಸಂಪೂರ್ಣ ತೃಪ್ತಿಯಿದೆ; ಆದುದರಿಂದ ಆತನ ವಿಶ್ವರೂಪವನ್ನು ನೋಡಲು ವಿಶೇಷವಾದ ಆಸೆಯಿಲ್ಲ. ಇದನ್ನು ಕೃಷ್ಣನು ತಿಳಿಯಬಲ್ಲ. ಇತರರಿಗೆ ಮನದಟ್ಟು ಮಾಡಿಕೊಡುವುದಕ್ಕಾಗಿ ಅರ್ಜುನನು ವಿಶ್ವರೂಪವನ್ನು ನೋಡಲು ಬಯಸುತ್ತಾನೆ ಎಂದು ಪ್ರಭುವಿಗೆ ಗೊತ್ತು. ಅರ್ಜುನನಿಗೆ ತನ್ನ ನಂಬಿಕೆಯು ದೃಢವಾಗಬೇಕೆಂದು ವೈಯಕ್ತಿಕ ಆಸೆಯೇನೂ ಇರಲಿಲ್ಲ. ಒಂದು ಪ್ರಮಾಣವನ್ನು ಸ್ಥಾಪಿಸಲು ಅರ್ಜುನನು ವಿಶ್ವರೂಪವನ್ನು ನೋಡಲು ಬಯಸುತ್ತಾನೆ. ಮುಂದೆಯೂ ಸಹ ತಾವು ದೇವರ ಅವತಾರಗಳೆಂದು ಹೇಳಿಕೊಳ್ಳುವ ಮೋಸಗಾರರು ಬರುತ್ತಾರೆ ಎಂದು ಕೃಷ್ಣನು ಅರ್ಥಮಾಡಿಕೊಳ್ಳಬಲ್ಲ. ಆದುದರಿಂದ ಜನರು ಎಚ್ಚರದಿಂದಿರಬೇಕು. ತಾನು ಕೃಷ್ಣ ಎಂದು ಹೇಳಿಕೊಳ್ಳುವವನು ತನ್ನ ಹೇಳಿಕೆಯನ್ನು ಜನರಿಗೆ ಮನದಟ್ಟು ಮಾಡಿಕೊಡಲು ತನ್ನ ವಿಶ್ವರೂಪವನ್ನು ತೋರಿಸಲು ಸಿದ್ಧನಾಗಿರಬೇಕು.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)


