ಪ್ರತಿ ದೇಹದಲ್ಲೂ ವ್ಯಕ್ತಿಗತ ಆತ್ಮ ಹಾಗೂ ಪರಮಾತ್ಮನೆಂಬ ಎರಡು ಆತ್ಮಗಳಿವೆ –ಭಗವದ್ಗೀತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪ್ರತಿ ದೇಹದಲ್ಲೂ ವ್ಯಕ್ತಿಗತ ಆತ್ಮ ಹಾಗೂ ಪರಮಾತ್ಮನೆಂಬ ಎರಡು ಆತ್ಮಗಳಿವೆ –ಭಗವದ್ಗೀತೆ

ಪ್ರತಿ ದೇಹದಲ್ಲೂ ವ್ಯಕ್ತಿಗತ ಆತ್ಮ ಹಾಗೂ ಪರಮಾತ್ಮನೆಂಬ ಎರಡು ಆತ್ಮಗಳಿವೆ –ಭಗವದ್ಗೀತೆ

ಎಲ್ಲಾ ದೇಹಗಳಲ್ಲಿ ಕ್ಷೇತ್ರಜ್ಞನಾಗಿ ನೆಲೆಸಿದ್ದೇನೆ ಎಂದು ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನು ಭಗವದ್ಗೀತೆ ಅಧ್ಯಾಯ 13 ರಲ್ಲಿ ಹೇಳಿದ್ದಾನೆ. ಶ್ಲೋಕಗಳಲ್ಲಿ ಈ ಅರ್ಥವನ್ನು ಇಲ್ಲಿ ವಿವರಿಸಲಾಗಿದೆ.

ಭಗವದ್ಗೀತೆ
ಭಗವದ್ಗೀತೆ

ಅಧ್ಯಾಯ - 13 : ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ – ಶ್ಲೋಕ - 3
ಕ್ಷೇತ್ರಜ್ಞಂ ಚಾಪಿ ಮಾಂ ವಿದ್ದಿ ಸರ್ವಕ್ಷೇತ್ರೇಷು ಭಾರತ |
ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ ಯತ್ತಜ್‌ಜ್ಞಾನಂ ಮತಂ ಮಮ || 3 ||

ಅರ್ಥ: ಭರತವಂಶ ಶ್ರೇಷ್ಠನಾದ ಅರ್ಜುನನೆ, ಎಲ್ಲ ದೇಹಗಳಲ್ಲಿರುವ ಕ್ಷೇತ್ರಜ್ಞನು ನಾನೇ. ಈ ದೇಹವನ್ನೂ ಅದರ ಕ್ಷೇತ್ರಜ್ಞನನ್ನೂ ತಿಳಿಯುವುದೇ ಜ್ಞಾನ ಎನ್ನುವುದನ್ನು ನೀನು ಅರ್ಥಮಾಡಿಕೊಳ್ಳಬೇಕು. ಇದೇ ನನ್ನ ಅಭಿಪ್ರಾಯ.

ಭಾವಾರ್ಥ: ದೇಹ ಮತ್ತು ಕ್ಷೇತ್ರಜ್ಞ, ಆತ್ಮ ಮತ್ತು ಪರಮಾತ್ಮ ಈ ವಿಷಯವನ್ನು ಚರ್ಚಿಸುವಾಗ ನಾವು ಅಧ್ಯಯನ ಮಾಡಬೇಕಾದ ಮೂರು ಬೇರೆ ಬೇರೆ ವಿಷಯಗಳಿವೆ ಪ್ರಭು, ಜೀವಿ ಮತ್ತು ಜಡವಸ್ತು. ಪ್ರತಿಯೊಂದು ದೇಹದಲ್ಲಿಯೂ, ಚಟುವಟಿಕೆಗಳ ಪ್ರತಿಯೊಂದು ಕ್ಷೇತ್ರದಲ್ಲಿಯೂ ಎರಡು ಆತ್ಮಗಳಿವೆ. ವ್ಯಕ್ತಿಗತ ಆತ್ಮ ಮತ್ತು ಪರಮಾತ್ಮ ಪರಮಾತ್ಮನು ದೇವೋತ್ತಮ ಪರಮ ಪುರುಷನಾದ ಕೃಷ್ಣನ ಸ್ವಾಂಶ ವಿಸ್ತರಣೆಯಾದದ್ದರಿಂದ, ಕೃಷ್ಣನು "ನಾನು ಕ್ಷೇತ್ರಜ್ಞ, ಆದರೆ ವ್ಯಕ್ತಿಗತ ಕ್ಷೇತ್ರಜ್ಞನಲ್ಲ, ಪರಮ ಕ್ಷೇತ್ರಜ್ಞ. ನಾನು ಪರಮಾತ್ಮನಾಗಿ ಪ್ರತಿಯೊಂದು ದೇಹದಲ್ಲಿಯೂ ಇದ್ದೇನೆ'' ಎಂದು ಹೇಳುತ್ತಾನೆ. ಭಗವದ್ಗೀತೆಯಲ್ಲಿ ನಿರೂಪಿಸಿರುವಂತೆ ಕ್ಷೇತ್ರ ಮತ್ತು ಕ್ಷೇತ್ರಜ್ಞರ ವಿಷಯವನ್ನು ಬಹು ಸೂಕ್ಷ್ಮವಾಗಿ ಅಧ್ಯಯನ ಮಾಡಿದವನು ಜ್ಞಾನವನ್ನು ಪಡೆಯಬಲ್ಲ.

ಪ್ರಭುವು, ''ಪ್ರತಿ ವ್ಯಕ್ತಿಗತ ದೇಹದಲ್ಲಿರುವ ಕ್ಷೇತ್ರಜ್ಞನು ನಾನು" ಎಂದು ಹೇಳುತ್ತಾ.ನೆ. ಒಬ್ಬ ವ್ಯಕ್ತಿಗೆ ತನ್ನ ದೇಹದ ವಿಷಯ ತಿಳಿದಿರಬಹುದು, ಆದರೆ ಇತರ ದೇಹಗಳ ವಿಷಯ ಅವನಿಗೇನೂ ತಿಳಿಯದು. ಪರಮಾತ್ಮನಾಗಿ ಎಲ್ಲ ದೇಹಗಳಲ್ಲಿರುವ ದೇವೋತ್ತಮ ಪರಮ ಪುರುಷನಿಗೆ ಎಲ್ಲ ದೇಹಗಳ ಎಲ್ಲ ವಿಷಯಗಳೂ ತಿಳಿದಿರುತ್ತವೆ. ಅವನಿಗೆ ವಿವಿಧ ಜೀವ ವರ್ಗಗಳ ಬೇರೆ ಬೇರೆ ದೇಹಗಳೆಲ್ಲವೂ ತಿಳಿದಿರುತ್ತವೆ. ಪೌರನೊಬ್ಬನಿಗೆ ತನ್ನ ಭೂಮಿಯ ತುಂಡಿನ ವಿಷಯ ಎಲ್ಲವೂ ತಿಳಿದಿರಬಹುದು. ಆದರೆ ರಾಜನಿಗೆ ತನ್ನ ಅರಮನೆ ಮಾತ್ರವಲ್ಲ, ವ್ಯಕ್ತಿಗತ ಪೌರರು ಹೊಂದಿರುವ ಎಲ್ಲ ಆಸ್ತಿಗಳ ವಿಷಯವೂ ತಿಳಿದಿರುತ್ತದೆ. ಹಾಗೆಯೇ ವ್ಯಕ್ತಿಯು ತನ್ನ ಶರೀರದ ಒಡೆಯನಾಗಿರಬಹುದು. ಆದರೆ ಭಗವಂತನು ಸಕಲ ಶರೀರಗಳ ಒಡೆಯನಾಗಿದ್ದಾನೆ. ರಾಜನು ರಾಜ್ಯದ ಮೂಲ ಯಜಮಾನ; ಪೌರನು ಎರಡನೆಯ ವರ್ಗದ ಯಜಮಾನ. ಇದೇ ರೀತಿಯಲ್ಲಿ ಪರಮ ಪ್ರಭುವು ಎಲ್ಲ ದೇಹಗಳ ಪರಮ ಪ್ರಭು.

ದೇಹದಲ್ಲಿ ಇಂದ್ರಿಯಗಳಿವೆ. ಪರಮ ಪ್ರಭುವು ಹೃಷೀಕೇಶ; ಹೀಗೆಂದರೆ, ''ಇಂದ್ರಿಯಗಳ ನಿಯಂತ್ರಕ" ಎಂದು ಅರ್ಥ. ರಾಜನು ರಾಜ್ಯದ ಎಲ್ಲ ಚಟುವಟಿಕೆಗಳ ಮೂಲ ನಿಯಂತ್ರಕ. ಪೌರರು ಎರಡನೆಯ ವರ್ಗದ ನಿಯಂತ್ರಕರು. ಇದೇ ರೀತಿಯಲ್ಲಿ ಪರಮ ಪ್ರಭುವು ಇಂದ್ರಿಯಗಳ ಮೂಲ ನಿಯಂತ್ರಕ. ಪರಮ ಪ್ರಭುವು, "ನಾನು ಕ್ಷೇತ್ರಜ್ಞನೂ ಹೌದು" ಎಂದು ಹೇಳುತ್ತಾನೆ. ಹೀಗೆಂದರೆ ಅವನು ಪರಮ ಜ್ಞಾನಿ ಎಂದರ್ಥ. ವ್ಯಕ್ತಿಗತ ಆತ್ಮನಿಗೆ ತನ್ನ ದೇಹದ ವಿಷಯ ಮಾತ್ರ ತಿಳಿದಿರುತ್ತದೆ. ವೇದ ಸಾಹಿತ್ಯದಲ್ಲಿ ಹೀಗೆ ಹೇಳಿದೆ – ಕ್ಷೇತ್ರಾಣಿ ಹಿ ಶರೀರಾಣಿ ಬೀಜಂ ಚಾಪಿ ಶುಭಾಶುಭೇ | ತಾನಿ ವೇತ್ತಿ ಸ ಯೋಗಾತ್ಮಾ ತತಃ ಕ್ಷೇತ್ರಜ್ಞ ಉಚ್ಯತೇ || ದೇಹವನ್ನು ಕ್ಷೇತ್ರ ಎಂದು ಕರೆದಿದೆ. ಅದರೊಳಗೆ ಕ್ಷೇತ್ರಜ್ಞನು ಮತ್ತು ದೇಹವನ್ನೂ ದೇಹದ ಒಡೆಯನನ್ನೂ ಬಲ್ಲ ಪರಮ ಪ್ರಭುವು ವಾಸಿಸುತ್ತಾನೆ. ಆದುದರಿಂದ ಆತನನ್ನು ಎಲ್ಲ ಕ್ಷೇತ್ರಗಳನ್ನು ತಿಳಿದವನು ಎಂದು ಕರೆಯುತ್ತಾರೆ. ಚಟುವಟಿಕೆಗಳ ಕ್ಷೇತ್ರ, ಕ್ಷೇತ್ರಜ್ಞ ಮತ್ತು ಪರಮ ಕ್ಷೇತ್ರಜ್ಞ – ಇವರ ನಡುವಣ ವ್ಯತ್ಯಾಸವನ್ನು ಹೀಗೆ ವರ್ಣಿಸಿದೆ.

ದೇಹದ ಸ್ವರೂಪ, ವ್ಯಕ್ತಿಗತ ಆತ್ಮದ ಸ್ವರೂಪ ಮತ್ತು ಪರಮಾತ್ಮನ ಸ್ವರೂಪ ಇವುಗಳ ಪರಿಪೂರ್ಣ ತಿಳುವಳಿಕೆಗೆ ವೇದ ಸಾಹಿತ್ಯದಲ್ಲಿ ಜ್ಞಾನ ಎಂದು ಹೆಸರು. ಅದು ಕೃಷ್ಣನ ಅಭಿಪ್ರಾಯ. ಆತ್ಮನೂ ಪರಮಾತ್ಮನೂ ಒಂದೇ ಆದರೂ ಭಿನ್ನ ಎನ್ನುವ ಅರಿವೇ ಜ್ಞಾನ. ಕ್ಷೇತ್ರ ಮತ್ತು ಕ್ಷೇತ್ರಜ್ಞನನ್ನು ಅರ್ಥಮಾಡಿಕೊಳ್ಳಲಾರದವನಿಗೆ ಪರಿಪೂರ್ಣ ಜ್ಞಾನವಿಲ್ಲ. ಪ್ರಕೃತಿ, ಪುರುಷ ಮತ್ತು ಈಶ್ವರ (ಪ್ರಕೃತಿ ಮತ್ತು ವ್ಯಕ್ತಿಗತ ಆತ್ಮ ಇವುಗಳ ಮೇಲೆ ಪ್ರಭುತ್ವ ಮಾಡುವ ಮತ್ತು ಇವುಗಳನ್ನು ನಿಯಂತ್ರಿಸುವ ಕ್ಷೇತ್ರಜ್ಞ) ಇವರ ಸ್ಥಾನವನ್ನು ತಿಳಿದುಕೊಳ್ಳಬೇಕು. ಬೇರೆ ಬೇರೆ ಪಾತ್ರಗಳಲ್ಲಿರುವ ಈ ಮೂವರ ವಿಷಯದಲ್ಲಿ ಗೊಂದಲಮಾಡಿಕೊಳ್ಳಬಾರದು. ಚಿತ್ರಗಾರ, ಚಿತ್ರ ಮತ್ತು ಚಿತ್ರಾಧಾರ ಇವುಗಳ ನಡುವೆ ಗೊಂದಲಮಾಡಿಕೊಳ್ಳಬಾರದು. ಚಟುವಟಿಕೆಗಳ ಕ್ಷೇತ್ರವಾದ ಈ ಐಹಿಕ ಜಗತ್ತು ಪ್ರಕೃತಿ; ಪ್ರಕೃತಿಯ ಭೋಕೃ ಜೀವಿ. ಇವರಿಬ್ಬರ ಮೇಲೆ ಪರಮ ನಿಯಂತ್ರಕ ದೇವೋತ್ತಮ ಪುರುಷ ವೈದಿಕ ಭಾಷೆಯಲ್ಲಿ ಶ್ವೇತಾಶ್ವತರ ಉಪನಿಷತ್‌ನಲ್ಲಿ (1.12) ಹೀಗೆ ಹೇಳಿದೆ ಭೋಕ್ತಾ ಭೋಗ್ಯಂ ಪ್ರೇರಿತಾರಂ ಚ ಮತ್ವಾ / ಸರ್ವಂ ಪ್ರೋಕ್ತಂ ತ್ರಿವಿಧಂ ಬ್ರಹ್ಮಮ್ ಏತತ್.

ದೇವೋತ್ತಮ ಪರಮ ಪುರುಷನ ಮಾತನ್ನು ವಿರೋಧಿಸಲು ಕಾರಣ

ಬ್ರಹ್ಮನ್‌ ಮೂರು ಪರಿಕಲ್ಪನೆಗಳಿವೆ - ಚಟುವಟಿಕೆಗಳ ಕ್ಷೇತ್ರವಾಗಿ ಪ್ರಕೃತಿಯು ಬ್ರಹ್ಮನ್. ಪ್ರಕೃತಿಯನ್ನು ನಿಯಂತ್ರಿಸಲು ಪ್ರಯತ್ನಿಸುವ ಜೀವಿಯು ಸಹ ಬ್ರಹ್ಮನ್; ಇವೆರಡನ್ನೂ ನಿಯಂತ್ರಿಸುವವನು ಬ್ರಹ್ಮನ್. ಆತನೇ ವಾಸ್ತವಿಕವಾಗಿ ನಿಯಂತ್ರಕ. ಈ ಅಧ್ಯಾಯದಲ್ಲಿ ಇಬ್ಬರು ಕ್ಷೇತ್ರಜ್ಞರಲ್ಲಿ ಒಬ್ಬನು ಚ್ಯುತಿ ಹೊಂದಬಹುದಾದವನು ಮತ್ತು ಇನ್ನೊಬ್ಬನು ಅಚ್ಯುತನು ಎಂದು ವಿವರಿಸಲಾಗುತ್ತದೆ. ಒಬ್ಬನು ಶ್ರೇಷ್ಠ, ಇನ್ನೊಬ್ಬನು ಅವನಿಗಿಂತ ಕೆಳಗಿನವನು. ಇಬ್ಬರು ಕ್ಷೇತ್ರಜ್ಞರೂ ಒಬ್ಬರೇ ಎಂದು ತಿಳಿದುಕೊಳ್ಳುವವನು ದೇವೋತ್ತಮ ಪರಮ ಪುರುಷನ ಮಾತನ್ನು ವಿರೋಧಿಸುತ್ತಾನೆ; "ನಾನೇ ಕ್ಷೇತ್ರಜ್ಞನು ಸಹ" ಎಂದು ದೇವೋತ್ತಮ ಪರಮ ಪುರುಷನು ಇಲ್ಲಿ ಸ್ಪಷ್ಟವಾಗಿ ಹೇಳುತ್ತಾನೆ. ಹಗ್ಗವನ್ನು ಹಾವೆಂದು ತಪ್ಪಾಗಿ ಭಾವಿಸುವವನು ಜ್ಞಾನದಲ್ಲಿಲ್ಲ. ದೇಹಗಳಲ್ಲಿ ಬೇರೆ ಬೇರೆ ರೀತಿಗಳುಂಟು; ದೇಹಗಳ ಒಡೆಯರು ಬೇರೆ ಬೇರೆಯವರು.

ಪ್ರತಿಯೊಂದು ವ್ಯಕ್ತಿಗತ ಆತ್ಮಕ್ಕೂ ಐಹಿಕ ಪ್ರಕೃತಿಯ ಮೇಲೆ ಪ್ರಭುತ್ವ ಮಾಡುವ ವಿಶಿಷ್ಟ ಶಕ್ತಿಯುಂಟು; ಆದುದರಿಂದ ಬೇರೆ ಬೇರೆ ದೇಹಗಳಿವೆ. ಆದರೆ ಪರಮ ಪ್ರಭುವು ಅವರಲ್ಲಿ ಪರಮ ನಿಯಂತ್ರಕನಾಗಿ ಇದ್ದಾನೆ. ಚ ಎನ್ನುವ ಪದವು ಅರ್ಥವತ್ತಾದದ್ದು. ಏಕೆಂದರೆ ಅದು ದೇಹಗಳ ಒಟ್ಟು ಸಂಖ್ಯೆಯನ್ನು ನಿರ್ದೇಶಿಸುತ್ತದೆ. ಇದು ಶ್ರೀ ಬಲದೇವ ವಿದ್ಯಾಭೂಷಣರ ಅಭಿಪ್ರಾಯ. ಪ್ರತಿಯೊಂದು ದೇಹದಲ್ಲಿ ವ್ಯಕ್ತಿಗತ ಆತ್ಮನಲ್ಲದೆ ಇರುವ ಪರಮಾತ್ಮನು ಕೃಷ್ಣ. ಇಲ್ಲಿ ಕೃಷ್ಣನು, ಕಾರ್ಯಕ್ಷೇತ್ರ ಮತ್ತು ಪರಿಮಿತ ಭೋಕ್ತ್ರ ಇಬ್ಬರನ್ನೂ ನಿಯಂತ್ರಿಸುವವನು ಪರಮಾತ್ಮನೇ ಎಂದು ಸ್ಪಷ್ಟವಾಗಿ ವಿವರಿಸುತ್ತಾನೆ.

(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)

HT Kannada Desk

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.