ಪರಮಾತ್ಮನನ್ನು ಕಾಣಲು ದಿವ್ಯನೇತ್ರಗಳನ್ನು ಪಡೆಯುವುದು ಹೇಗೆ; ಭಗವದ್ಗೀತೆಯ ಈ ಶ್ಲೋಕಗಳಿಂದ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪರಮಾತ್ಮನನ್ನು ಕಾಣಲು ದಿವ್ಯನೇತ್ರಗಳನ್ನು ಪಡೆಯುವುದು ಹೇಗೆ; ಭಗವದ್ಗೀತೆಯ ಈ ಶ್ಲೋಕಗಳಿಂದ ತಿಳಿಯಿರಿ

ಪರಮಾತ್ಮನನ್ನು ಕಾಣಲು ದಿವ್ಯನೇತ್ರಗಳನ್ನು ಪಡೆಯುವುದು ಹೇಗೆ; ಭಗವದ್ಗೀತೆಯ ಈ ಶ್ಲೋಕಗಳಿಂದ ತಿಳಿಯಿರಿ

ಪರಮಾತ್ಮ ಕೃಷ್ಣನನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಅದೇ ರೀತಿ ಅವನನ್ನು ಅರ್ಥಮಾಡಿಕೊಳ್ಳಲೂ ಸಾಧ್ಯವಿಲ್ಲ. ಭಗವದ್ಗೀತೆ ಅಧ್ಯಾಯ 11, ವಿಶ್ವರೂಪ, ಶ್ಲೋಕ 53 ಹಾಗೂ 54 ರಿಂದ ತಿಳಿಯಿರಿ.

ಭಗವದ್ಗೀತೆ
ಭಗವದ್ಗೀತೆ

ಅಧ್ಯಾಯ - 11: ವಿಶ್ವರೂಪ – ಶ್ಲೋಕ - 53
ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ |
ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ || 53 ||

ಅರ್ಥ: ವೇದಾಧ್ಯಯನ ಮಾತ್ರದಿಂದ ಅಥವಾ ಕಠಿಣ ತಪಸ್ಸಿನಿಂದ ಅಥವಾ ದಾನದಿಂದ ಅಥವಾ ಪೂಜೆಯಿಂದ ನೀನು ನಿನ್ನ ದಿವ್ಯನೇತ್ರಗಳಿಂದ ಕಾಣುತ್ತಿರುವ ನನ್ನ ರೂಪವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇವುಗಳಿಂದ ನಾನಿರುವಂತೆ ನನ್ನನ್ನು ಕಾಣಲು ಸಾಧ್ಯವಿಲ್ಲ.

ಭಾವಾರ್ಥ: ಕೃಷ್ಣನು ತನ್ನ ತಾಯಿತಂದೆಯರಾದ ದೇವಕಿ ಮತ್ತು ವಸುದೇವರಿಗೆ ಮೊದಲ ಬಾರಿ ಚತುರ್ಭುಜ ರೂಪದಲ್ಲಿ ಕಾಣಿಸಿಕೊಂಡ. ಅನಂತರ ಎರಡು ಕೈಗಳ ರೂಪವನ್ನು ಧರಿಸಿದ. ನಾಸ್ತಿಕರಾದವರಿಗೆ ಅಥವಾ ಭಕ್ತಿಸೇವೆ ಮಾಡದವರಿಗೆ ಈ ರಹಸ್ಯ ರೂಪವನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ. ವ್ಯಾಕರಣ ಜ್ಞಾನದಿಂದಷ್ಟೇ ವೈದಿಕ ಸಾಹಿತ್ಯವನ್ನು ಅಭ್ಯಾಸಮಾಡಿದ ಅಥವಾ ವಿದ್ವತ್ತಿನ ಅರ್ಹತೆಗಳನ್ನು ಮಾತ್ರ ಪಡೆದ ವಿದ್ವಾಂಸರು ಕೃಷ್ಣನನ್ನು ಅರ್ಥಮಾಡಿಕೊಳ್ಳಲಾರರು. ಪೂಜೆ ಸಲ್ಲಿಸುವುದಕ್ಕಾಗಿ ಅಧಿಕೃತ ರೀತಿಯಲ್ಲಿ ದೇವಸ್ಥಾನಗಳಿಗೆ ಹೋಗುವವರು ಅವನನ್ನು ಅರ್ಥಮಾಡಿಕೊಳ್ಳಲಾರರು. ಅವರು ದೇವಸ್ಥಾನಕ್ಕೆ ಭೇಟಿಕೊಡಬಹುದೇ ಹೊರತು ಕೃಷ್ಣನನ್ನು ಅವನು ಇರುವಂತೆ ಅರ್ಥಮಾಡಿಕೊಳ್ಳಲಾರರು. ಸ್ವತಃ ಕೃಷ್ಣನೇ ಮುಂದಿನ ಶ್ಲೋಕದಲ್ಲಿ ವಿವರಿಸುವಂತೆ ಭಕ್ತಿಸೇವೆಯಿಂದ ಮಾತ್ರ ಅವನನ್ನು ಅರ್ಥಮಾಡಿಕೊಳ್ಳಲು ಸಾಧ್ಯ.

ಅಧ್ಯಾಯ - 11: ವಿಶ್ವರೂಪ – ಶ್ಲೋಕ - 54
ಭಕ್ತಾ ತ್ವನನ್ಯಯಾ ಶಕ್ಯ ಅಹಮೇವಂವಿಧೋSರ್ಜುನ |
ಜ್ಞಾತುಂ ದ್ರಷ್ಟುಂ ಚ ತತ್ತೇನ ಪ್ರವೇಷ್ಟುಂ ಚ ಪರನ್ತಪ || 54 ||

ಅರ್ಥ: ನನ್ನ ಪ್ರೀತಿಯ ಅರ್ಜುನನೆ, ಏಕಚಿತ್ತದ ಭಕ್ತಿ ಸೇವೆಯಿಂದ ಮಾತ್ರ ನಿನ್ನ ಮುಂದೆ ನಿಂತಿರುವ ನನ್ನನ್ನು ನಾನಿರುವಂತೆ ಅರ್ಥಮಾಡಿಕೊಳ್ಳಲು ಸಾಧ್ಯ; ಹೀಗೆ ಮಾತ್ರ ನನ್ನನ್ನು ನೇರವಾಗಿ ನೋಡಲು ಸಾಧ್ಯ. ಈ ರೀತಿಯಲ್ಲಿ ಮಾತ್ರ ನನ್ನನ್ನು ತಿಳಿಯುವ ರಹಸ್ಯಗಳನ್ನು ನೀನು ಪ್ರವೇಶಿಸಬಲ್ಲೆ.

ಭಾವಾರ್ಥ: ಏಕಾಗ್ರಚಿತ್ತದ ಭಕ್ತಿಸೇವೆಯ ಪ್ರಕ್ರಿಯೆಯಿಂದ ಮಾತ್ರ ಕೃಷ್ಣನನ್ನು ಅರ್ಥಮಾಡಿಕೊಳ್ಳಬಹುದು. ಇದನ್ನು ಕೃಷ್ಣನು ಈ ಶ್ಲೋಕದಲ್ಲಿ ಸ್ಪಷ್ಟವಾಗಿ ವಿವರಿಸುತ್ತಾನೆ. ಬರಿಯ ಊಹಾತ್ಮಕ ಚಿಂತನೆಯ ಪ್ರಕ್ರಿಯೆಯಿಂದ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಅಧಿಕಾರವಿಲ್ಲದ ವ್ಯಾಖ್ಯಾನಕಾರರು ತಾವು ಕಾಲವನ್ನು ವ್ಯರ್ಥಮಾಡುತ್ತಿದ್ದೇವೆ ಎಂದು ತಿಳಿದುಕೊಳ್ಳಲಿ ಎನ್ನುವುದು ಇದರ ಉದ್ದೇಶ. ಕೃಷ್ಣನನ್ನು ಯಾರೂ ಅರ್ಥಮಾಡಿಕೊಳ್ಳಲಾರರು. ಅವನು ಚತುರ್ಭುಜ ರೂಪದಲ್ಲಿ ತಂದೆ ತಾಯಿಯಿಂದ ಹೇಗೆ ಬಂದ ಮತ್ತು ತಕ್ಷಣವೇ ಎರಡು ಕೈಗಳ ರೂಪವನ್ನು ಹೇಗೆ ಧರಿಸಿದ ಎನ್ನುವುದು ಯಾರಿಗೂ ಅರ್ಥವಾಗುವುದಿಲ್ಲ. ವೇದಾಧ್ಯಯನದಿಂದ ಅಥವಾ ಊಹಾತ್ಮಕಚಿಂತನೆಯಿಂದ ಈ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆದುದರಿಂದ ಯಾರೂ ಅವನನ್ನು ಕಾಣಲಾರರು ಮತ್ತು ಯಾರೂ ಈ ವಿಷಯಗಳನ್ನು ತಿಳಿದುಕೊಳ್ಳಲಾರರು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ವೇದಸಾಹಿತ್ಯದ ನುರಿತ ವಿದ್ಯಾರ್ಥಿಗಳಾದವರು ಅನೇಕ ರೀತಿಗಳಲ್ಲಿ ವೇದಸಾಹಿತ್ಯದಿಂದ ಅವನ ವಿಷಯವನ್ನು ತಿಳಿದುಕೊಳ್ಳಬಹುದು. ಅದಕ್ಕೆ ಹಲವಾರು ನಿಯಮ ನಿಬಂಧನೆಗಳಿವೆ.

ಕೃಷ್ಣನನ್ನು ಯಾರಾದರೂ ಅರ್ಥಮಾಡಿಕೊಳ್ಳಲು ಬಯಸಿದರೆ ಆತನು ಪ್ರಮಾಣಗ್ರಂಥಗಳಲ್ಲಿ ವರ್ಣಿಸುವ ನಿಯಂತ್ರಕ ತತ್ವಗಳನ್ನು ಅನುಸರಿಸಬೇಕು. ಈ ತತ್ವಗಳಿಗೆ ಅನುಗುಣವಾಗಿ ವ್ರತಗಳನ್ನು ಆಚರಿಸಬಹುದು. ಉದಾಹರಣೆಗೆ ಕಟ್ಟುನಿಟ್ಟಾದ ವ್ರತಗಳನ್ನು ನಡೆಸಲು ಕೃಷ್ಣನು ಕಾಣಿಸಿಕೊಂಡ ಜನ್ಮಾಷ್ಟಮಿಯಂದು ಮತ್ತು ಕೃಷ್ಣಪಕ್ಷ, ಶುಕ್ಲಪಕ್ಷಗಳಂದು ಏಕಾದಶಿಯ ದಿವಸ ಉಪವಾಸ ಮಾಡಬಹುದು. ದಾನದ ವಿಷಯ ಹೇಳುವುದಾದರೆ ಇಡೀ ಜಗತ್ತಿನಲ್ಲಿ ಕೃಷ್ಣ ಸಿದ್ಧಾಂತವನ್ನು ಅಥವಾ ಕೃಷ್ಣ ಪ್ರಜ್ಞೆಯನ್ನು ಹರಡಲು ಕೃಷ್ಣನ ಭಕ್ತಿಸೇವೆಯಲ್ಲಿ ನಿರತರಾದ ಅವನ ಭಕ್ತರಿಗೆ ದಾನ ಕೊಡಬೇಕು ಎನ್ನುವುದು ಸ್ಪಷ್ಟ. ಕೃಷ್ಣಪ್ರಜ್ಞೆಯು ಮಾನವ ಕುಲಕ್ಕೆ ಒಂದು ವರ. ರೂಪ ಗೋಸ್ವಾಮಿಯವರು ಚೈತನ್ಯ ಮಹಾಪ್ರಭುಗಳನ್ನು ಅತ್ಯಂತ ದಾನಶೂರರೆಂದು ಮೆಚ್ಚಿಕೊಂಡರು. ಇದಕ್ಕೆ ಕಾರಣ, ಪಡೆಯಲು ಬಹು ಕಷ್ಟವಾದ ಕೃಷ್ಣಪ್ರೇಮವನ್ನು ಚೈತನ್ಯರು ಉಚಿತವಾಗಿ ಹಂಚಿದರು. ಆದುದರಿಂದ ಕೃಷ್ಣಪ್ರಜ್ಞೆಯನ್ನು ವಿತರಣೆ ಮಾಡುವುದರಲ್ಲಿ ನಿರತರಾದವರಿಗೆ ದಾನ ನೀಡಿದರೆ ಕೃಷ್ಣ ಪ್ರಜ್ಞೆಯನ್ನು ಹರಡಲು ಕೊಟ್ಟ ಈ ದಾನವು ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ದಾನವಾಗುತ್ತದೆ.

ದೇವಾಲಯದಲ್ಲಿ ವಿಧಿಸಿರುವ ರೀತಿಯಲ್ಲಿ ಪೂಜೆಮಾಡಿದರೆ' (ಭಾರತದ ದೇವಾಲಯಗಳಲ್ಲಿ ಯಾವಾಗಲೂ ಸಾಮಾನ್ಯವಾಗಿ ವಿಷ್ಣು ಅಥವಾ ಕೃಷ್ಣನ ಒಂದು ವಿಗ್ರಹ ಇರುತ್ತದೆ) ದೇವೋತ್ತಮ ಪರಮ ಪುರುಷನಿಗೆ ಪೂಜೆ ಮತ್ತು ಗೌರವ ಸಲ್ಲಿಸುವ ಮೂಲಕ ಪ್ರಗತಿಯನ್ನು ಸಾಧಿಸಲು ಅದೊಂದು ಅವಕಾಶ. ಭಗವಂತನ ಭಕ್ತಿಸೇವೆಯನ್ನು ಪ್ರಾರಂಭಿಸುವವರಿಗೆ ದೇವಾಲಯದಲ್ಲಿ ಪೂಜೆಮಾಡುವುದು ಅಗತ್ಯ. ಇದನ್ನು ವೇದಸಾಹಿತ್ಯವು ದೃಢಪಡಿಸುತ್ತದೆ.

(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)

HT Kannada Desk

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.