Bhagavad Gita: ಶ್ರೀಕೃಷ್ಣನೇ ಈ ಜಗತ್ತಿನ ಎಲ್ಲವುಗಳ ಮೂಲ ಪುರುಷ, ಆತನೇ ಪರಮ ಪ್ರಭು: ಭಗವದ್ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಶ್ರೀಕೃಷ್ಣನೇ ಈ ಜಗತ್ತಿನ ಎಲ್ಲವುಗಳ ಮೂಲ ಪುರುಷ, ಆತನೇ ಪರಮ ಪ್ರಭು: ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita: ಶ್ರೀಕೃಷ್ಣನೇ ಈ ಜಗತ್ತಿನ ಎಲ್ಲವುಗಳ ಮೂಲ ಪುರುಷ, ಆತನೇ ಪರಮ ಪ್ರಭು: ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita: ಈ ಜಗತ್ತಿನಲ್ಲಿ ಎಲ್ಲವುಗಳಿಗೆ ಮೂಲ ಕಾರಣ ಶ್ರೀಕೃಷ್ಣ. ಅವನೇ ಮೂಲ ಪುರುಷ. ಭಗವದ್ಗೀತೆಯ 9ನೇ ಅಧ್ಯಾಯ, ಶ್ಲೋಕ 11 ರಲ್ಲಿ ಪರಮಾತ್ಮನ ಬಗ್ಗೆ ಹೀಗೆ ವಿವರಿಸಲಾಗಿದೆ.

ಭಗವದ್ಗೀತಾ
ಭಗವದ್ಗೀತಾ

ಅಧ್ಯಾಯ - 9: ರಹಸ್ಯತಮ ಜ್ಞಾನ - ಶ್ಲೋಕ -11

 

ಅವಜಾನನ್ತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್ |

ಪರಂ ಭಾವಮಜಾನನ್ತೋ ಮಮ ಭೂತಮಹೇಶ್ವರಮ್ || 11 ||

 

ಅರ್ಥ: ನಾನು ಮನುಷ್ಯರೂಪದಲ್ಲಿ ಇಳಿದು ಬಂದಾಗ ಮೂಢರು ನನ್ನನ್ನು ಅಪಹಾಸ್ಯ ಮಾಡುತ್ತಾರೆ. ಇಲ್ಲಿ ಇರುವುದೆಲ್ಲದರ ಪ್ರಭು ನಾನೇ. ನನ್ನ ಈ ದಿವ್ಯಪ್ರಕೃತಿಯು ಅವರಿಗೆ ತಿಳಿಯದು.

ಭಾವಾರ್ಥ: ಈ ಶ್ಲೋಕದಲ್ಲಿ ಪರಮಾತ್ಮನು ಮನುಷ್ಯರೂಪದಲ್ಲಿ ಕಾಣಿಸಿಕೊಂಡರೂ, ಸಾಮಾನ್ಯ ಮನುಷ್ಯನಲ್ಲ ಎನ್ನುವುದು ಸ್ಪಷ್ಟವಾಗಿದೆ. ಸಮಸ್ತ ವಿಶ್ವದ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ನಿರ್ವಹಿಸುವ ಪರಮಾತ್ಮನು ಸಾಮಾನ್ಯ ಮನುಷ್ಯನಾಗಿರಲು ಸಾಧ್ಯವಿಲ್ಲ. ಆದರೂ ಕೃಷ್ಣನು ಒಬ್ಬ ಬಲಶಾಲಿ ಮನುಷ್ಯ ಮಾತ್ರ, ಬೇರೇನೂ ಅಲ್ಲ ಎಂದು ಭಾವಿಸುವ ಅನೇಕ ಮೂಢರಿದ್ದಾರೆ. ಆದರೆ ಬ್ರಹ್ಮ ಸಂಹಿತೆಯಲ್ಲಿ ದೃಢಪಡಿಸಿರುವಂತೆ (ಈಶ್ವರಃ ಪರಮಃ ಕೃಷ್ಣ) ಆತನೇ ಮೂಲ ಪರಮ ಪುರುಷನು; ಆತನು ಪರಮ ಪ್ರಭು.

ಈ ಜಗತ್ತಿನಲ್ಲಿ ಒಬ್ಬರು ಮತ್ತೊಬ್ಬರಿಗಿಂತ ದೊಡ್ಡವರಾಗಿ ಕಾಣುತ್ತಾರೆ. ಈ ಐಹಿಕ ಜಗತ್ತಿನ ವ್ಯವಹಾರಗಳ ಸಾಮಾನ್ಯ ನಿರ್ವಹಣೆಯಲ್ಲಿ ನಾವು ಒಬ್ಬ ಅಧಿಕಾರಿಯನ್ನು ಅಥವಾ ನಿರ್ದೆಶಕನನ್ನು ಕಾಣುತ್ತೇವೆ. ಅವನ ಮೇಲೆ ಒಬ್ಬ ಕಾರ್ಯದರ್ಶಿ ಇರುತ್ತಾನೆ. ಅವನ ಮೇಲೆ ಒಬ್ಬ ಮಂತ್ರಿ ಮತ್ತು ಅವನ ಮೇಲೆ ಒಬ್ಬ ಅಧ್ಯಕ್ಷ. ಅವರಲ್ಲಿ ಪ್ರತಿಯೊಬ್ಬರೂ ನಿಯಂತ್ರಕರೇ. ಅಂದರೆ ಒಬ್ಬನು ಮತ್ತೊಬ್ಬನನ್ನು ನಿಯಂತ್ರಿಸುತ್ತಾನೆ. ಕೃಷ್ಣನು ಪರಮ ನಿಯಂತ್ರಕ ಎಂದು ಬ್ರಹ್ಮಸಂಹಿತೆಯಲ್ಲಿ ಹೇಳಿದೆ. ಐಹಿಕ ಜಗತ್ತಿನಲ್ಲಿಯೂ ಆಧ್ಯಾತ್ಮಿಕ ಜಗತ್ತಿನಲ್ಲಿಯೂ ನಿಸ್ಸಂಶಯವಾಗಿ ಅನೇಕ ನಿಯಂತ್ರಕರಿದ್ದಾರೆ. ಆದರೆ ಕೃಷ್ಣನು ಅವರೆಲ್ಲರಿಗೂ ನಿಯಂತ್ರಕನಾಗಿದ್ದಾನೆ.

ಹಿಂದಿನ ಶ್ಲೋಕಗಳಲ್ಲಿ ವರ್ಣಿಸಿರುವ ಆಶ್ಚರ್ಯಕರ ಕಾರ್ಯಗಳನ್ನು ಐಹಿಕ ದೇಹಗಳು ಮಾಡಲಾರವು. ಅವನ ದೇಹವು ಶಾಶ್ವತವಾದದ್ದು, ಆನಂದಮಯವಾದದ್ದು ಮತ್ತು ಜ್ಞಾನಪೂರ್ಣವಾದದ್ದು. ಆತನು ಸಾಮಾನ್ಯ ಮನುಷ್ಯನಲ್ಲದಿದ್ದರೂ ಮೂಢರು ಅವನನ್ನು ಅಪಹಾಸ್ಯ ಮಾಡುತ್ತಾರೆ ಮತ್ತು ಆತನನ್ನು ಸಾಮಾನ್ಯ ಮನುಷ್ಯನೆಂದು ಪರಿಗಣಿಸುತ್ತಾರೆ. ಇಲ್ಲಿ ಅವನ ದೇಹವನ್ನು ಮಾನುಷೀಮ್ ಎಂದು ಕರೆಯಲಾಗಿದೆ. ಏಕೆಂದರೆ ಅವನು ಒಬ್ಬ ಮನುಷ್ಯನಂತೆ, ಅರ್ಜುನನ ಸಖನಾಗಿ ಮತ್ತು ಕುರುಕ್ಷೇತ್ರ ಯುದ್ಧದಲ್ಲಿ ಒಳಗಾಗಿರುವ ಒಬ್ಬ ರಾಜಕಾರಣಿಯಂತೆ ವರ್ತಿಸುತ್ತಿದ್ದಾನೆ. ಅನೇಕ ರೀತಿಗಳಲ್ಲಿ ಆತನು ಸಾಮಾನ್ಯ ಮನುಷ್ಯನಂತೆ ವರ್ತಿಸುತ್ತಾನೆ. ಆದರೆ ಆತನ ದೇಹವು ಸಚ್ಚಿದಾನನ್ನ ವಿಗ್ರಹವಾಗಿದೆ. ಅಂದರೆ ಶಾಶ್ವತ ಆನಂದ ಮತ್ತು ಪರಿಪೂರ್ಣಜ್ಞಾನವನ್ನು ಹೊಂದಿದೆ. ವೇದದ ಭಾಷೆಯು ಇದನ್ನು ದೃಢಪಡಿಸುತ್ತದೆ.

ಶ್ರೀಕೃಷ್ಣನ ದೇಹಕ್ಕೆ ದಿವ್ಯ ಗುಣಗಳಿದ್ದರೂ, ಅದು ಜ್ಞಾನಾನಂದಮಯವಾದರೂ ವಿದ್ವಾಂಸರೆಂದು ಕರೆಸಿಕೊಳ್ಳುವ ಎಷ್ಟೋಮಂದಿ ಮತ್ತು ಭಗವದ್ಗೀತೆಯ ಹಲವು ವ್ಯಾಖ್ಯಾನಕಾರರು ಅವನನ್ನು ಸಾಮಾನ್ಯ ಮನುಷ್ಯನೆಂದು ತಿರಸ್ಕಾರದಿಂದ ಕಾಣುತ್ತಾರೆ. ಹಿಂದಿನ ಪುಣ್ಯಕಾರ್ಯದ ಫಲವಾಗಿ ವಿದ್ವಾಂಸನು ಅಸಾಧಾರಣ ಮನುಷ್ಯನಾಗಿ ಈಗ ಹುಟ್ಟಿರಬಹುದು. ಆದರೆ ಕೃಷ್ಣನನ್ನು ಕುರಿತ ಈ ಕಲ್ಪನೆಯು ಅಲ್ಪಜ್ಞಾನದಿಂದ ಬಂದದ್ದು. ಆದ್ದರಿಂದ ಈ ಮನುಷ್ಯನನ್ನು ಮೂಢಾ ಎಂದು ಕರೆಯಲಾಗಿದೆ. ಮೂಢರು ಮಾತ್ರ ಕೃಷ್ಣನನ್ನು ಸಾಮಾನ್ಯ ಮನುಷ್ಯ ಎಂದು ಭಾವಿಸುತ್ತಾರೆ. ಪರಮ ಪ್ರಭುವಿನ ರಹಸ್ಯ ಚಟುವಟಿಕೆಗಳನ್ನು, ಅವನ ವಿವಿಧ ಶಕ್ತಿಗಳನ್ನು, ತಿಳಿಯದಿರುವುದರಿಂದ ಮೂಢರು ಕೃಷ್ಣನನ್ನು ಸಾಮಾನ್ಯ ಮನುಷ್ಯ ಎಂದು ಭಾವಿಸುತ್ತಾರೆ. ಕೃಷ್ಣನ ದೇಹವು ಸಂಪೂರ್ಣ ಜ್ಞಾನಾನಂದಗಳ ಸಂಕೇತ; ಅಸ್ತಿತ್ವದಲ್ಲಿರುವ ಎಲ್ಲದರ ಒಡೆಯ ಅವನು; ಆತನು ಯಾರಿಗಾದರೂ ಮುಕ್ತಿಯನ್ನು ಅನುಗ್ರಹಿಸಬಲ್ಲ ಎಂಬುದನ್ನು ಅವರು ತಿಳಿಯರು. ಕೃಷ್ಣನಲ್ಲಿ ಅನೇಕ ದಿವ್ಯ ಅರ್ಹತೆಗಳು ಇವೆ ಎಂದು ಅವರಿಗೆ ತಿಳಿಯದು. ಆದುದರಿಂದ ಅವರು ಆತನನ್ನು ಅಪಹಾಸ್ಯ ಮಾಡುತ್ತಾರೆ.

ಐಹಿಕ ಜಗತ್ತಿನಲ್ಲಿ ದೇವೋತ್ತಮ ಪರಮ ಪುರುಷನ ಅವತಾರವು ಆತನ ಅಂತರಂಗ ಶಕ್ತಿಯ ಅಭಿವ್ಯಕ್ತಿ ಎಂದೂ ಅವರಿಗೆ ತಿಳಿಯದು. ಆತನು ಐಹಿಕ ಶಕ್ತಿಯ ಪ್ರಭು. ಎಲ್ಲ ಐಹಿಕ ಶಕ್ತಿಯೂ, ಅದರ ಬಲ ಎಷ್ಟೇ ಇರಲಿ, ತನ್ನ ಅಧೀನ, ಮತ್ತು ತನಗೆ ಯಾರು ಶರಣಾಗುತ್ತಾರೋ ಅವರು ಈ ಐಹಿಕ ಶಕ್ತಿಯ ನಿಯಂತ್ರಣದಿಂದ ಪಾರಾಗಬಹುದು ಎಂದು ಅವನು ಹೇಳುತ್ತಾನೆ. ಕೃಷ್ಣನಿಗೆ ಶರಣಾಗುವ ಆತ್ಮವು ಐಹಿಕ ಶಕ್ತಿಯ ಪ್ರಭಾವದಿಂದ ಪಾರಾಗಬಹುದಾದರೆ ಇಡೀ ವಿಶ್ವದ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ನಿರ್ವಹಿಸುವ ಪರಮ ಪ್ರಭುವಿಗೆ ನಮ್ಮ ದೇಹಗಳಂತಹ ಭೌತಿಕ ದೇಹವು ಇರುವುದು ಹೇಗೆ ಸಾಧ್ಯ? ಆದ್ದರಿಂದ ಕೃಷ್ಣನನ್ನು ಕುರಿತ ಈ ಕಲ್ಪನೆ ಸಂಪೂರ್ಣವಾಗಿ ದಡ್ಡತನ. ಸಾಮಾನ್ಯ ಮನುಷ್ಯನ ರೂಪದಲ್ಲಿ ಕಾಣಿಸಿಕೊಳ್ಳುವ ದೇವೋತ್ತಮ ಪರಮ ಪುರುಷನಾದ ಕೃಷ್ಣನು ಹೇಗೆ ಎಲ್ಲ ಪರಮಾಣುಗಳ ಮತ್ತು ವಿಶ್ವರೂಪದ ಬೃಹತ್ ಅಭಿವ್ಯಕ್ತಿಗಳ ನಿಯಂತ್ರಕನಾಗಬಲ್ಲ ಎಂದು ಮೂಢರು ಕಲ್ಪಿಸಿಕೊಳ್ಳಲಾರರು. ಬೃಹತ್ತಾದದ್ದು ಅವರ ಕಲ್ಪನಾಶಕ್ತಿಗೆ ಮೀರಿದ್ದು. ಆದುದರಿಂದ, ಮನುಷ್ಯನಂತಹ ರೂಪವು ಅನಂತವಾದುದನ್ನೂ ಅತ್ಯಂತ ಸೂಕ್ಷ್ಮವಾದದ್ದನ್ನೂ ನಿಯಂತ್ರಿಸಬಲ್ಲದು ಎಂದು ಅವರು ಕಲ್ಪಿಸಿಕೊಳ್ಳಲಾರರು. ವಾಸ್ತವವಾಗಿ ಆತನು ಅನಂತವನ್ನೂ ಪರಿಮಿತವನ್ನೂ ನಿಯಂತ್ರಿಸುತ್ತಿದ್ದರೂ ಆತನು ಈ ಎಲ್ಲ ಅಭಿವ್ಯಕ್ತಿಯಿಂದ ಪ್ರತ್ಯೇಕವಾಗಿದ್ದಾನೆ. ಆತನ ಯೋಗಮ್ ಐಶ್ವರಮ್ ಊಹಾತೀತ ದಿವ್ಯ ಶಕ್ತಿಯನ್ನು ಕುರಿತು ಆತನು ಏಕಕಾಲದಲ್ಲಿ ಅನಂತವಾದುದನ್ನು ಪರಿಮಿತವಾದುದನ್ನು ನಿಯಂತ್ರಿಸಬಲ್ಲ, ಹಾಗೆಯೇ ಅವುಗಳಿಂದ ಪ್ರತ್ಯೇಕವಾಗಿ ಇರಬಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಮನುಷ್ಯನಂತೆಯೇ ಕಾಣುವ ಕೃಷ್ಣನು ಅನಂತವನ್ನು, ಪರಿಮಿತವನನ್ನು ಹೇಗೆ ನಿಯಂತ್ರಿಸಬಲ್ಲ ಎಂದು ಮೂಢರು ಕಲ್ಪಿಸಿಕೊಳ್ಳಲಾರರು. ಆದರೆ ಪರಿಶುದ್ಧ ಭಕ್ತರು ಇದನ್ನು ಒಪ್ಪಿಕೊಳ್ಳುತ್ತಾರೆ. ಏಕೆಂದರೆ ಕೃಷ್ಣನು ದೇವೋತ್ತಮ ಪರಮ ಪುರುಷ ಎಂದು ಅವರಿಗೆ ಗೊತ್ತು. ಆದುದರಿಂದ ಅವರು ಆತನಿಗೆ ಸಂಪೂರ್ಣವಾಗಿ ಶರಣಾಗುತ್ತಾರೆ ಮತ್ತು ಕೃಷ್ಣ ಪ್ರಜ್ಞೆಯಲ್ಲಿ, ಪ್ರಭುವಿನ ಭಕ್ತಿಸೇವೆಯಲ್ಲಿ ನಿರತರಾಗುತ್ತಾರೆ.

(ಗಮನಿಸಿ: ಈ ಬರಹವು ಗೀತೋಪನಿಷದ್‌ ಭಗವದ್ಗೀತಾ ಯಥಾರೂಪ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.