ಜಗತ್ತಿನ ಎಲ್ಲಾ ಜೀವಿಗಳ ಪಾಲಕನಾಗಿರುವ ಪರಮಾತ್ಮನೇ ಕಾಲಕಾಲಕ್ಕೆ ಎಲ್ಲರನ್ನು ನಾಶಮಾಡುತ್ತಾನೆ: ಭಗವದ್ಗೀತೆ
ಜಗತ್ತಿನ ಪ್ರತಿಯೊಂದು ಜೀವಿಗಳ ಉಗಮಕ್ಕೆ ಕಾರಣನಾದ ಪರಮಾತ್ಮನೇ ಸಮಯ ಬಂದಾಗ ಆ ಜೀವಿಗಳ ನಾಶಕ್ಕೂ ಕಾರಣನಾಗಿದ್ದಾನೆ. ಭಗವದ್ಗೀತೆ ಅಧ್ಯಾಯ 13 ರಿಂದ ತಿಳಿಯಿರಿ.

ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 16
ಬಹಿರನ್ತಶ್ಚ ಭೂತಾನಾಮಚರಂ ಚರಮೇವ ಚ |
ಸೂಕ್ಷ್ಮತ್ತ್ವಾತ್ತದವಿಜ್ಞೇಯಂ ದೂರಸ್ಥಂ ಚಾನ್ತಿಕೇ ಚ ತತ್ || 16 ||
ಅರ್ಥ: ಪರಮ ಸತ್ಯನು ಎಲ್ಲ ಜೀವಿಗಳ ಮತ್ತು ಚರಾಚರಗಳ ಒಳಗೂ ಹೊರಗೂ ಇದ್ದಾನೆ. ಆತನು ಸೂಕ್ಷ್ಮನಾದದ್ದರಿಂದ ಐಹಿಕ ಇಂದ್ರಿಯಗಳು ಅವನನ್ನು ನೋಡಲಾರವು ಮತ್ತು ತಿಳಿಯಲಾರವು. ಬಹುದೂರದಲ್ಲಿದ್ದರೂ ಅವನು ಎಲ್ಲರಿಗೂ ಸಮೀಪದಲ್ಲಿದ್ದಾನೆ.
ಭಾವಾರ್ಥ: ಪರಮ ಪುರುಷನಾದ ನಾರಾಯಣನು ಪ್ರತಿಯೊಂದು ಜೀವಿಯ ಒಳಗೂ ಹೊರಗೂ ವಾಸಮಾಡುತ್ತಾನೆ ಎಂದು ವೇದಸಾಹಿತ್ಯದಿಂದ ನಮಗೆ ತಿಳಿದುಬರುತ್ತದೆ. ಅವನು ಆಧ್ಯಾತ್ಮಿಕ ಮತ್ತು ಐಹಿಕ ಜಗತ್ತುಗಳೆರಡರಲ್ಲಿಯೂ ಇದ್ದಾನೆ. ಅವನು ಬಹುದೂರದಲ್ಲಿದ್ದರೂ ನಮ್ಮ ಹತ್ತಿರವಿದ್ದಾನೆ. ಹೀಗೆಂದು ವೇದಸಾಹಿತ್ಯ ಹೇಳುತ್ತದೆ. ಆಸೀನೋ ದೂರಂ ವ್ರಜತಿ ಶಯಾನೋ ಯಾತಿ ಸರ್ವತಃ (ಕಠ ಉಪನಿಷತ್ತು 1.2.21). ಸದಾ ದಿವ್ಯಾನಂದದಲ್ಲಿರುವುದರಿಂದ ಅವನು ತನ್ನ ಪೂರ್ಣಸಿರಿಯನ್ನು ಹೇಗೆ ಸವಿಯುತ್ತಾನೆ ಎನ್ನುವುದು ನಮಗೆ ಅರ್ಥವಾಗುವುದಿಲ್ಲ. ನಮ್ಮ ಐಹಿಕ ಇಂದ್ರಿಯಗಳಿಂದ ನೋಡುವುದಾಗಲೀ ಅರ್ಥಮಾಡಿಕೊಳ್ಳುವುದಾಗಲೀ ಸಾಧ್ಯವಿಲ್ಲ. ಆದುದರಿಂದ ಅವನನ್ನು ಅರ್ಥಮಾಡಿಕೊಳ್ಳಲು ನಮ್ಮ ಐಹಿಕ ಮನಸ್ಸು ಮತ್ತು ಇಂದ್ರಿಯಗಳು ಕೆಲಸಮಾಡಲಾರವು ಎಂದು ವೈದಿಕ ಭಾಷೆಯಲ್ಲಿ ಹೇಳಿದೆ. ಆದರೆ ಭಕ್ತಿಸೇವೆಯಲ್ಲಿ ಕೃಷ್ಣಪ್ರಜ್ಞೆಯನ್ನು ಅಭ್ಯಾಸಮಾಡಿಕೊಂಡು ತನ್ನ ಮನಸ್ಸನ್ನೂ ಇಂದ್ರಿಯಗಳನ್ನೂ ಶುದ್ಧಗೊಳಿಸಿಕೊಂಡಿರುವವನು ಸದಾ ಅವನನ್ನು ನೋಡಬಲ್ಲ. ಪರಮ ಪ್ರಭುವಿನಲ್ಲಿ ಪ್ರೀತಿಯನ್ನು ಬೆಳೆಸಿಕೊಂಡ ಭಕ್ತನು ಅವಿಚ್ಛಿನ್ನವಾಗಿ ನಿರಂತರವೂ ಅವನನ್ನು ಕಾಣಬಲ್ಲ ಎಂದು ಬ್ರಹ್ಮಸಂಹಿತೆಯು ದೃಢಪಡಿಸಿದೆ. ಭಕ್ತಿಸೇವೆಯಿಂದ ಮಾತ್ರ ಅವನನ್ನು ಕಂಡು ಅರ್ಥಮಾಡಿಕೊಳ್ಳುವುದು ಸಾಧ್ಯ. ಭಕ್ತ್ಯಾತ್ವನನ್ಯಯಾ ಶಕ್ಯಃ ಎಂದು ಭಗವದ್ಗೀತೆಯಲ್ಲಿ (11.54) ದೃಢಪಡಿಸಿದೆ.
ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 17
ಅವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಮ್ |
ಭೂತಭರ್ತೃ ಚ ತಜ್ಜ್ಞೇಯಂ ಗ್ರಸಿಷ್ಣು ಪ್ರಭವಿಷ್ಣು ಚ || 17 ||
ಅರ್ಥ: ಪರಮಾತ್ಮನು ಎಲ್ಲ ಪ್ರಾಣಿಗಳಲ್ಲಿ ಹಂಚಿರುವಂತೆ ಕಂಡರೂ ಅವನು ವಿಭಾಗವಾಗುವುದಿಲ್ಲ; ಅವನು ಏಕವಾಗಿ ಸ್ಥಿತನಾಗಿರುತ್ತಾನೆ. ಪ್ರತಿಯೊಂದು ಜೀವಿಯ ಪಾಲಕನಾದರೂ ಅವನು ಎಲ್ಲರನ್ನೂ ತಿಂದುಹಾಕುತ್ತಾನೆ ಮತ್ತು ಎಲ್ಲರನ್ನೂ ಬೆಳೆಸುತ್ತಾನೆ ಎಂದು ಅರ್ಥಮಾಡಿಕೊಳ್ಳಬೇಕು.
ಭಾವಾರ್ಥ: ಪರಮಾತ್ಮನಾಗಿ ಪ್ರಭುವು ಎಲ್ಲರ ಹೃದಯಗಳಲ್ಲಿಯೂ ಇದ್ದಾನೆ. ಹೇಗೆಂದರೆ ಅವನು ವಿಭಾಗವಾಗಿದ್ದಾನೆ ಎಂದು ಅರ್ಥವೆ? ಇಲ್ಲ. ವಾಸ್ತವವಾಗಿ ಅವನು ಏಕ. ಸೂರ್ಯನ ಉದಾಹರಣೆಯನ್ನು ಸಾಮಾನ್ಯವಾಗಿ ಕೊಡುತ್ತಾರೆ. ಅವನು ಮಧ್ಯಾಹ್ನ ರೇಖೆಯಲ್ಲಿರುವಾಗ ತನ್ನ ಸ್ಥಾನದಲ್ಲಿರುತ್ತಾನೆ. ಆದರೆ ಯಾರಾದರೂ ಎಲ್ಲ ದಿಕ್ಕುಗಳಲ್ಲಿ ಐದು ಸಾವಿರ ಮೈಲಿ ಹೋಗಿ, 'ಸೂರ್ಯನೆಲ್ಲಿ?' ಎಂದು ಕೇಳಿದರೆ ಎಲ್ಲರೂ ಆತನಿಗೆ ಸೂರ್ಯನು ಅವನ ನೆತ್ತಿಯ ಮೇಲೆಯೇ ಪ್ರಕಾಶಿಸುತ್ತಿದ್ದಾನೆ ಎಂದು ಹೇಳುತ್ತಾರೆ. ಪರಮಾತ್ಮನು ಭಾಗವಾಗದಿದ್ದರೂ ಭಾಗವಾದಂತೆ ನೆಲೆಸಿರುತ್ತಾನೆ ಎಂದು ತೋರಿಸಲು ವೇದಸಾಹಿತ್ಯದಲ್ಲಿ ಈ ಉದಾಹರಣೆಯನ್ನು ಕೊಡುತ್ತಾರೆ. ಅಲ್ಲದೆ, ಹಲವಾರು ಸ್ಥಳಗಳಲ್ಲಿ ಸೂರ್ಯನು ಹಲವಾರು ಮಂದಿಗೆ ಗೋಚರನಾಗುವಂತೆ ಒಬ್ಬ ವಿಷ್ಣುವು ತನ್ನ ಸರ್ವಶಕ್ತಿಯಿಂದ ಎಲ್ಲೆಲ್ಲೂ ಇದ್ದಾನೆ ಎಂದು ವೇದಸಾಹಿತ್ಯದಲ್ಲಿ ಹೇಳಿದೆ. ಪರಮ ಪ್ರಭುವು ಎಲ್ಲ ಜೀವಿಗಳ ಪಾಲಕನಾದರೂ, ಪ್ರಳಯಕಾಲದಲ್ಲಿ ಎಲ್ಲರನ್ನೂ ನುಂಗಿ ಹಾಕುತ್ತಾನೆ. ಹನ್ನೊಂದನೆಯ ಅಧ್ಯಾಯದಲ್ಲಿ ಪ್ರಭುವು ತಾನು ಕುರುಕ್ಷೇತ್ರದಲ್ಲಿ ನೆರೆದಿದ್ದ ಎಲ್ಲ ಯೋಧರನ್ನು ತಿನ್ನಲು ಬಂದಿದ್ದೇನೆ ಎಂದು ಹೇಳಿದಾಗ ಇದು ದೃಢಪಟ್ಟಿತು. ಕಾಲದ ರೂಪದಲ್ಲಿಯೂ ತಾನು ಭಕ್ಷಿಸುವುದಾಗಿ ಅವನು ಹೇಳಿದ. ಅವನು ಲಯಕಾರಿ, ಸರ್ವವಿನಾಶಕ. ಸೃಷ್ಟಿಯಾಗುವಾಗ ಅವನು ಎಲ್ಲರನ್ನೂ ಅವರ ಮೂಲ ಸ್ಥಿತಿಯಿಂದ ಬೆಳೆಸುತ್ತಾನೆ. ಪ್ರಳಯಕಾಲದಲ್ಲಿ ಅವರನ್ನು ಭಕ್ಷಿಸುತ್ತಾನೆ. ಎಲ್ಲ ಜೀವಿಗಳ ಮೂಲನೂ ಅವನೇ, ಶಾಂತಿತಾಣವೂ ಅವನೇ ಎಂದು ವೇದಗಳ ಸ್ತೋತ್ರಗಳು ದೃಢಪಡಿಸುತ್ತವೆ. ಸೃಷ್ಟಿಯನಂತರ ಎಲ್ಲಕ್ಕೂ ಅವನ ಸರ್ವಶಕ್ತಿಯೇ ಆಧಾರ. ಪ್ರಳಯದನಂತರ ಎಲ್ಲವೂ ಅವನಲ್ಲಿ ವಿರಮಿಸಲು ಹಿಂದಿರುಗುತ್ತವೆ. ವೇದಗಳ ಸ್ತೋತ್ರಗಳು ಹೀಗೆ ದೃಢಪಡಿಸುತ್ತವೆ. ಯತೋ ವಾ ಇಮಾನಿ ಭೂತಾನಿ ಜಾಯನ್ತೇ ಯೇನ ಜಾತಾನಿ ಜೀವನ್ತಿ ಯತ್ ಪ್ರಯನ್ತಿ ಅಭಿಸಂವಿಶನ್ತಿ ತದ್ ಬ್ರಹ್ಮ ತದ್ ವಿಜಿಜ್ಞಾಸಸ್ವ (ತೈತ್ತಿರೀಯ ಉಪನಿಷತ್ತು 3.1).
(ಗಮನಿಸಿ: ಈ ಬರಹವು ‘ಗೀತೋಪನಿಷದ್ ಭಗವದ್ಗೀತಾ ಯಥಾರೂಪ’ ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)