ಐಹಿಕ ಜಗತ್ತಿನ ಕರ್ಮಗಳನ್ನು ಮಾಡಿಸುವವನು ಪರಮಾತ್ಮ ಎಂದು ತಿಳಿದಾಗ ಮಾತ್ರ ಕೃಷ್ಣನನ್ನು ಕಾಣಲು ಸಾಧ್ಯ: ಭಗವದ್ಗೀತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಐಹಿಕ ಜಗತ್ತಿನ ಕರ್ಮಗಳನ್ನು ಮಾಡಿಸುವವನು ಪರಮಾತ್ಮ ಎಂದು ತಿಳಿದಾಗ ಮಾತ್ರ ಕೃಷ್ಣನನ್ನು ಕಾಣಲು ಸಾಧ್ಯ: ಭಗವದ್ಗೀತೆ

ಐಹಿಕ ಜಗತ್ತಿನ ಕರ್ಮಗಳನ್ನು ಮಾಡಿಸುವವನು ಪರಮಾತ್ಮ ಎಂದು ತಿಳಿದಾಗ ಮಾತ್ರ ಕೃಷ್ಣನನ್ನು ಕಾಣಲು ಸಾಧ್ಯ: ಭಗವದ್ಗೀತೆ

ಪ್ರತಿಯೊಂದು ಜೀವಿಯಲ್ಲೂ ಪರಮಾತ್ಮ ನೆಲೆಸಿದ್ದಾನೆ. ಅವನ ಮಾರ್ಗದರ್ಶನದ ಮೂಲಕ ಜೀವಿಗಳು ಪೂರ್ವ ನಿಯೋಜಿತ ಕರ್ಮಗಳನ್ನು ಮಾಡುತ್ತಾರೆ. ಭಗವದ್ಗೀತೆ ಅಧ್ಯಾಯ 13 ರ ಶ್ಲೋಕ 29 ಮತ್ತು 30 ಓದಿ.

ಭಗವದ್ಗೀತೆ
ಭಗವದ್ಗೀತೆ

ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 29
ಸಮಂ ಪಶ್ಯನ್ ಹಿ ಸರ್ವತ್ರ ಸಮವಸ್ಥಿತಮೀಶ್ವರಮ್ |
ನ ಹಿನಾಸ್ತ್ಯಾತ್ಮನಾತ್ಮಾನಂ ತತೋ ಯಾತಿ ಪರಾಂ ಗತಿಮ್ || 29 ||

ಅರ್ಥ: ಎಲ್ಲೆಲ್ಲಿಯೂ, ಪ್ರತಿಯೊಂದು ಜೀವಂತ ಪ್ರಾಣಿಯಲ್ಲಿಯೂ ಒಂದೇ ಸಮನಾಗಿ ಪರಮಾತ್ಮನು ಇರುವುದನ್ನು ಕಾಣಬಲ್ಲವನು ತನ್ನ ಮನಸ್ಸಿನಿಂದ ತನ್ನನ್ನು ಹೀನಸ್ಥಿತಿಗೆ ತಂದುಕೊಳ್ಳುವುದಿಲ್ಲ. ಹೀಗೆ ಅವನು ಪರಮ ಗತಿಯನ್ನು ಸೇರುತ್ತಾನೆ.

ಭಾವಾರ್ಥ: ಐಹಿಕ ಅಸ್ತಿತ್ವವನ್ನು ಒಪ್ಪಿಕೊಂಡು ಜೀವಿಯು ತನ್ನ ಆಧ್ಯಾತ್ಮಿಕ ಸ್ಥಿತಿಯಿಂದ ಬೇರೆ ಸ್ಥಿತಿಗೆ ಬಂದಿದ್ದಾನೆ. ಆದರೆ ಪರಮ ಪ್ರಭುವು ತನ್ನ ಪರಮಾತ್ಮ ಅಭಿವ್ಯಕ್ತಿಯಿಂದ ಎಲ್ಲೆಲ್ಲಿಯೂ ಇದ್ದಾನೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಎಂದರೆ, ಪ್ರತಿಯೊಂದು ಜೀವಂತ ಪ್ರಾಣಿಯಲ್ಲಿಯೂ ದೇವೋತ್ತಮ ಪರಮ ಪುರುಷನು ಇರುವುದನ್ನು ಕಾಣಬೇಕು; ಆಗ ಮನುಷ್ಯನು ವಿನಾಶಕರ ಮನೋಧರ್ಮದಿಂದ ತನ್ನನ್ನು ಹೀನಸ್ಥಿತಿಗೆ ತಂದುಕೊಳ್ಳುವುದಿಲ್ಲ. ಆ ಮೂಲಕ ಅವನು ಕ್ರಮೇಣ ಆಧ್ಯಾತ್ಮಿಕ ಜಗತ್ತಿನ ಬಳಿಗೆ ಹೋಗುತ್ತಾನೆ. ಸಾಮಾನ್ಯವಾಗಿ ಮನಸ್ಸು ಇಂದ್ರಿಯತೃಪ್ತಿಯ ಪ್ರಕ್ರಿಯೆಗಳಿಗೆ ಅಂಟಿಕೊಂಡಿರುತ್ತದೆ; ಅದು ಪರಮಾತ್ಮನ ಕಡೆ ತಿರುಗಿದಾಗ ಮನುಷ್ಯನು ಆಧ್ಯಾತ್ಮಿಕ ತಿಳುವಳಿಕೆಯಲ್ಲಿ ಪ್ರಗತಿಯನ್ನು ಸಾಧಿಸುತ್ತಾನೆ.

ಅಧ್ಯಾಯ 13, ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ ಶ್ಲೋಕ - 30
ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ |
ಯಃ ಪಶ್ಯತಿ ತಥಾತ್ಮಾನಮಕರ್ತಾರಂ ಸ ಪಶ್ಯತಿ || 30 ||

ಅರ್ಥ: ದೇಹವು ಎಲ್ಲ ಕರ್ಮಗಳನ್ನೂ ಮಾಡುತ್ತದೆ. ಅದು ಐಹಿಕ ಪ್ರಕೃತಿಯಿಂದ ಆಗಿದೆ. ತಾನು ಏನನ್ನೂ ಮಾಡುವುದಿಲ್ಲ ಎಂದು ಯಾರು ನೋಡಬಲ್ಲರೋ ಅವರೇ ನಿಜವಾಗಿ ನೋಡುತ್ತಾರೆ.

ಭಾವಾರ್ಥ: ಪರಮಾತ್ಮನ ಮಾರ್ಗದರ್ಶನದಲ್ಲಿ ಐಹಿಕ ಪ್ರಕೃತಿಯು ದೇಹವನ್ನು ಮಾಡುತ್ತದೆ; ದೇಹಕ್ಕೆ ಸಂಬಂಧಿಸಿ ಆಗುವ ಕರ್ಮಗಳನ್ನು ಪರಮಾತ್ಮನು ಮಾಡುವುದಿಲ್ಲ. ಸುಖಕ್ಕಾಗಲೀ ದುಃಖಕ್ಕಾಗಲೀ ಮನುಷ್ಯನು ಮಾಡುತ್ತಾನೆಂದು ನಾವು ಭಾವಿಸಬಹುದಾದ್ದನ್ನೆಲ್ಲ ಮನುಷ್ಯನು ತನ್ನ ದೇಹದ ಸ್ವರೂಪದಿಂದಾಗಿ ಮಾಡಲೇಬೇಕಾಗುತ್ತದೆ. ಆದರೆ ಆತ್ಮನು ದೇಹದ ಕರ್ಮಗಳಿಂದ ಹೊರಗಿದ್ದಾನೆ. ಮನುಷ್ಯನ ಹಿಂದಿನ ಬಯಕೆಗಳಿಗೆ ಅನುಗುಣವಾಗಿ ಈಗ ಈ ದೇಹವು ಬಂದಿದೆ. ಬಯಕೆಗಳನ್ನು ಪೂರೈಸಿಕೊಳ್ಳಲು ಮನುಷ್ಯನಿಗೆ ಈ ದೇಹವನ್ನು ಕೊಟ್ಟಿದೆ. ಅದಕ್ಕೆ ಅನುಗುಣವಾಗಿ ಅವನು ಕರ್ಮಗಳನ್ನು ಮಾಡುತ್ತಾನೆ. ವಾಸ್ತವವಾಗಿ ಹೇಳುವುದಾದರೆ ದೇಹವೊಂದು ಯಂತ್ರ; ಬಯಕೆಗಳ ತೃಪ್ತಿಗಾಗಿ ಪರಮ ಪ್ರಭುವು ಇದನ್ನು ರೂಪಿಸಿದ್ದಾನೆ. ಬಯಕೆಗಳಿಂದಾಗಿ ಮನುಷ್ಯನನ್ನು ಕಷ್ಟಪಡುವ ಅಥವಾ ಸುಖಪಡುವ ಪರಿಸ್ಥಿತಿಗಳಲ್ಲಿ ಇಡಲಾಗುತ್ತದೆ. ಜೀವಿಯು ಈ ದಿವ್ಯದರ್ಶನವನ್ನು ಬೆಳೆಸಿಕೊಂಡರೆ ಅದು ಅವನನ್ನು ದೇಹದ ಕರ್ಮಗಳಿಂದ ಬೇರೆ ಮಾಡುತ್ತದೆ. ಇಂತಹ ದರ್ಶನವಿರುವವನು ವಾಸ್ತವವಾಗಿ ದ್ರಷ್ಟಾರನು.

(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)

ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.