ಸೂರ್ಯನು ನಾಲ್ಕೂ ದಿಕ್ಕುಗಳನ್ನು ಬೆಳಗುವಂತೆ ಪರಮಾತ್ಮನೂ ಎಲ್ಲಾ ಕಡೆಗಳಲ್ಲಿಯೂ ನೆಲೆಸಿದ್ದಾನೆ –ಭಗವದ್ಗೀತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸೂರ್ಯನು ನಾಲ್ಕೂ ದಿಕ್ಕುಗಳನ್ನು ಬೆಳಗುವಂತೆ ಪರಮಾತ್ಮನೂ ಎಲ್ಲಾ ಕಡೆಗಳಲ್ಲಿಯೂ ನೆಲೆಸಿದ್ದಾನೆ –ಭಗವದ್ಗೀತೆ

ಸೂರ್ಯನು ನಾಲ್ಕೂ ದಿಕ್ಕುಗಳನ್ನು ಬೆಳಗುವಂತೆ ಪರಮಾತ್ಮನೂ ಎಲ್ಲಾ ಕಡೆಗಳಲ್ಲಿಯೂ ನೆಲೆಸಿದ್ದಾನೆ –ಭಗವದ್ಗೀತೆ

ದೇವೋತ್ತಮ ಪರಮ ಪುರುಷನು ಈ ಜಗತ್ತಿನ ತುಂಬೆಲ್ಲಾ ನೆಲೆಸಿದ್ದಾನೆ. ಪರಮಾತ್ಮನ್ನು ಸರಿಯಾಗಿ ತಿಳಿದುಕೊಳ್ಳುವುದರಿಂದ ಮನುಷ್ಯನು ಜೀವನದಲ್ಲಿ ಅಮೃತವನ್ನು ಸವಿಯಬಹುದು. ಭಗವದ್ಗೀತೆ ಅಧ್ಯಾಯ 13 ರಲ್ಲಿರುವ ಶ್ಲೋಕಗಳ ಅರ್ಥವನ್ನು ತಿಳಿಯಿರಿ.

ಭಗವದ್ಗೀತೆ
ಭಗವದ್ಗೀತೆ

ಅಧ್ಯಾಯ - 13 : ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ – ಶ್ಲೋಕ - 13
ಜ್ಞೇಯಂ ಯತ್ತತ್ಪ್ರವಕ್ಷ್ಯಾಮಿ ಯಜ್‌ಜ್ಞಾತ್ವಾಮೃತಮಶ್ನುತೇ |
ಅನಾದಿ ಮತ್ಪರಂ ಬ್ರಹ್ಮ ನ ಸತ್ತನ್ನಾಸದುಚ್ಯತೇ || 13 ||

ಅರ್ಥ: ಯಾವ ಜ್ಞಾನವನ್ನು ತಿಳಿದುಕೊಂಡು ನೀನು ಅಮೃತತ್ವವನ್ನು ಸವಿಯುವೆಯೋ ಆ ಜ್ಞೇಯವಾದುದನ್ನು ವಿವರಿಸುತ್ತೇನೆ. ಅನಾದಿಯಾದ ಮತ್ತು ನನಗೆ ಅಧೀನವಾದ ಬ್ರಹ್ಮನ್ ಈ ಐಹಿಕ ಜಗತ್ತಿನ ಕಾರ್ಯ-ಕಾರಣದಾಚೆ ಇದೆ.

ಭಾವಾರ್ಥ: ಪ್ರಭುವು ಕ್ಷೇತ್ರವನ್ನೂ ಕ್ಷೇತ್ರಜ್ಞನನ್ನೂ ವಿವರಿಸಿದ್ದಾನೆ. ಕ್ಷೇತ್ರಜ್ಞನನ್ನು ತಿಳಿದುಕೊಳ್ಳಲು ಪ್ರಕ್ರಿಯೆಯನ್ನೂ ಅವನು ವಿವರಿಸಿದ್ದಾನೆ. ಈಗ ಅವನು ಜ್ಞೇಯವನ್ನು, ಎಂದರೆ ತಿಳಿದುಕೊಳ್ಳಲು ಸಾಧ್ಯವಿರುವುದನ್ನು, ವಿವರಿಸಲು ಪ್ರಾರಂಭಿಸುತ್ತಾನೆ. ಮೊದಲು ಆತ್ಮನನ್ನು ಅನಂತರ ಪರಮಾತ್ಮನನ್ನು ವಿವರಿಸುತ್ತಾನೆ. ಕ್ಷೇತ್ರಜ್ಞ, ಆತ್ಮ ಮತ್ತು ಪರಮಾತ್ಮ ಇವುಗಳನ್ನು ತಿಳಿದುಕೊಂಡು ಮನುಷ್ಯನು ಜೀವನದ ಅಮೃತವನ್ನು ಸವಿಯಬಹುದು. ಎರಡನೆಯ ಅಧ್ಯಾಯದಲ್ಲಿ ವಿವರಿಸಿದಂತೆ ಜೀವಿಯು ನಿತ್ಯನು, ಶಾಶ್ವತನು. ಇದನ್ನೂ ಇಲ್ಲಿ ದೃಢಪಡಿಸಿದೆ. ಜೀವಿಯು ಹುಟ್ಟಿದ ನಿಶ್ಚಿತ ದಿನವಿಲ್ಲ. ಪರಮ ಪ್ರಭುವಿನಿಂದ ಅಭಿವ್ಯಕ್ತಿ ಪಡೆದ ಜೀವಾತ್ಮನ ಇತಿಹಾಸವನ್ನು ಗುರುತಿಸಲು ಯಾರಿಗೂ ಸಾಧ್ಯವಿಲ್ಲ. ಆದುದರಿಂದ ಅದು ಅನಾದಿ. ವೇದ ಸಾಹಿತ್ಯವು ಇದನ್ನು ದೃಢಪಡಿಸುತ್ತದೆ - ನ ಜಾಯತೇ ಮ್ರಿಯತೇ ವಾ ವಿಪಶ್ಚಿತ್ (ಕಠ ಉಪನಿಷತ್ತು 1.2.18) ಕ್ಷೇತ್ರಜ್ಞನು ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ. ಅವನು ಜ್ಞಾನದಿಂದ ತುಂಬಿದ್ದಾನೆ.

ವೈದಿಕ ಸಾಹಿತ್ಯದಲ್ಲಿ (ಶ್ವೇತಾಶ್ವತರ ಉಪನಿಷತ್ತು 6.16) ಪರಮ ಪ್ರಭುವು ಪರಮಾತ್ಮನಾಗಿ ಪ್ರಧಾನ ಕ್ಷೇತ್ರಜ್ಞ ಪತಿರ್ ಗುಣೇಶಃ ಎಂದು ಹೇಳಿದೆ. ಹೀಗೆಂದರೆ ಅವನು ಪ್ರಧಾನ ಕ್ಷೇತ್ರಜ್ಞ ಮತ್ತು ಐಹಿಕ ಪ್ರಕೃತಿಯ ತ್ರಿಗುಣಗಳ ಒಡೆಯ. ಸ್ಮೃತಿಯಲ್ಲಿ ಹೀಗೆ ಹೇಳಿದೆ ದಾಸ ಭೂತೋ ಹರೇರ್ ಏವ ನಾನ್ಯಸ್ಯೈವ ಕದಾಚನ ಜೀವಿಗಳು ಪರಮ ಪ್ರಭುವಿನ ನಿರಂತರ ದಾಸರು. ಇದನ್ನು ಚೈತನ್ಯ ಮಹಾಪ್ರಭುಗಳು ತಮ್ಮ ಉಪದೇಶಗಳಲ್ಲಿ ದೃಢಪಡಿಸಿದ್ದಾರೆ. ಆದುದರಿಂದ ಈ ಶ್ಲೋಕದಲ್ಲಿ ಪ್ರಸ್ತಾಪಿಸಿರುವ ಬ್ರಹ್ಮನ್ ವರ್ಣನೆಯು ವ್ಯಕ್ತಿಗತ ಆತ್ಮಕ್ಕೆ ಸಂಬಂಧಿಸಿದ್ದು; ಬ್ರಹ್ಮ ಎನ್ನುವ ಪದವನ್ನು ಜೀವಿಗೆ ಅನ್ವಯಿಸಿದಾಗ ಅವನು ಆನಂದ ಬ್ರಹ್ಮನ್‌ಗೆ ವೃತಿರಿಕ್ತನಾದ ವಿಜ್ಞಾನ ಬ್ರಹ್ಮನ್ ಎಂದು ಅರ್ಥಮಾಡಿಕೊಳ್ಳಬೇಕು. ಆನಂದ ಬ್ರಹ್ಮವು ದೇವೋತ್ತಮ ಪರಮ ಪುರುಷ ಅಥವಾ ಪರಬ್ರಹ್ಮನ್.

ಅಧ್ಯಾಯ - 13 : ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ – ಶ್ಲೋಕ - 14
ಸರ್ವತಃ ಪಾಣಿಪಾದಂ ತತ್ ಸರ್ವತೋSಕ್ಷಿಶಿರೋಮುಖಮ್ |
ಸರ್ವತಃ ಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ || 14 ||

ಅರ್ಥ: ಅವನ ಕೈಗಳು ಮತ್ತು ಕಾಲುಗಳು, ಅವನ ಕಣ್ಣುಗಳು, ತಲೆಗಳು ಮತ್ತು ಮುಖಗಳು ಎಲ್ಲೆಲ್ಲೂ ಇವೆ; ಅವನಿಗೆ ಎಲ್ಲೆಲ್ಲೂ ಕಿವಿಗಳುಂಟು. ಹೀಗೆ ಪರಮಾತ್ಮನು ಸರ್ವವ್ಯಾಪಿಯಾಗಿ ಇದ್ದಾನೆ.

ಭಾವಾರ್ಥ: ತನ್ನ ಅಮಿತಕಿರಣಗಳನ್ನು ಪಸರಿಸುತ್ತ ಸೂರ್ಯನು ಇರುವಂತೆ ಪರಮಾತ್ಮನು ಅಥವಾ ದೇವೋತ್ತಮ ಪರಮ ಪುರುಷನು ಇದ್ದಾನೆ. ಅವನು ತನ್ನ ಸರ್ವವ್ಯಾಪಿ ರೂಪದಲ್ಲಿ ಇದ್ದಾನೆ. ಪ್ರಥಮ ಮಹಾಗುರು ಬ್ರಹ್ಮನಿಂದ ಪ್ರಾರಂಭಿಸಿ ಸಣ್ಣ ಇರುವೆಗಳವರೆಗೆ ಎಲ್ಲ ವ್ಯಕ್ತಿಗತ ಜೀವಿಗಳು ಅವನಲ್ಲಿ ಇವೆ. ತಲೆಗಳು, ಕೈಗಳು, ಕಾಲುಗಳು ಮತ್ತು ಕಣ್ಣುಗಳಿಗೆ ಹಾಗೂ ಜೀವಿಗಳಿಗೆ ಮಿತಿಯಿಲ್ಲ. ಎಲ್ಲರೂ ಪರಮಾತ್ಮನಲ್ಲಿದ್ದಾರೆ ಮತ್ತು ಅವನನ್ನು ಅವಲಂಬಿಸಿದ್ದಾರೆ. ಆದುದರಿಂದ ಪರಮಾತ್ಮ ಸರ್ವವ್ಯಾಪಿ. ಆದರೆ ವ್ಯಕ್ತಿಗತ ಆತ್ಮವು ತನ್ನ ಕೈಗಳು, ಕಾಲುಗಳು ಮತ್ತು ಕಣ್ಣುಗಳು ಎಲ್ಲೆಲ್ಲಿಯೂ ಇವೆ ಎಂದು ಹೇಳಲು ಸಾಧ್ಯವಿಲ್ಲ. ತನ್ನ ಕೈಗಳು ಮತ್ತು ಕಾಲುಗಳು ಎಲ್ಲೆಲ್ಲಿಯೂ ಇವೆ ಎನ್ನುವುದು ಅಜ್ಞಾನದಿಂದ ತನಗೆ ಅರಿವಾಗಿಲ್ಲ, ಆದರೆ ಯೋಗ್ಯವಾದ ಜ್ಞಾನವನ್ನು ಪಡೆದಾಗ ತಾನು ಆ ಘಟ್ಟಕ್ಕೆ ಬರುತ್ತೇನೆ ಎಂದು ಅವನು ಯೋಚಿಸಿದರೆ ಅವನ ಯೋಚನೆಯಲ್ಲಿ ವಿರೋಧಾಭಾಸವಿದೆ.

ಐಹಿಕ ಪ್ರಕೃತಿಯಿಂದ ಬದ್ದವಾದ ವ್ಯಕ್ತಿಗತ ಆತ್ಮವು ಪರಮೋನ್ನತನಲ್ಲ ಎಂದು ಇದರ ಅರ್ಥ. ಪರಮೋನ್ನತವು ವ್ಯಕ್ತಿಗತ ಆತ್ಮಕ್ಕಿಂತ ಭಿನ್ನ. ಪರಮ ಪ್ರಭುವು ಮಿತಿಯಿಲ್ಲದಂತೆ ತನ್ನ ಕೈಯನ್ನು ಚಾಚಬಲ್ಲ; ವ್ಯಕ್ತಿಗತ ಆತ್ಮನು ಇದನ್ನು ಮಾಡಲಾರ. ಭಗವದ್ಗೀತೆಯಲ್ಲಿ ಪ್ರಭುವು ಯಾರಾದರೂ ತನಗೆ ಒಂದು ಹೂವನ್ನೋ ಅಥವಾ ಹಣ್ಣನ್ನೋ ಅಥವಾ ಒಂದಿಷ್ಟು ನೀರನ್ನೋ ಅರ್ಪಿಸಿದರೆ ಅವನ್ನು ಸ್ವೀಕರಿಸುತ್ತೇನೆ ಎಂದು ಹೇಳಿದ್ದಾನೆ. ಪ್ರಭುವು ಬಹುದೂರದಲ್ಲಿದ್ದರೆ ಅವನು ಈ ವಸ್ತುಗಳನ್ನು ಸ್ವೀಕರಿಸಲು ಹೇಗೆ ಸಾಧ್ಯ? ಇದು ಪ್ರಭುವಿನ ಸರ್ವಶಕ್ತಿ ಭೂಮಿಯಿಂದ ಬಹುದೂರ ಇರುವ ತನ್ನ ನಿವಾಸದಲ್ಲಿಯೇ ಆತನು ಇದ್ದರೂ ಯಾರಾದರೂ ಅರ್ಪಿಸಿದುದನ್ನು ಸ್ವೀಕರಿಸಲು ಅವನು ತನ್ನ ಕೈಯನ್ನು ಚಾಚಬಲ್ಲ; ಇದು ಅವನ ಶಕ್ತಿ. ಬ್ರಹ್ಮ ಸಂಹಿತೆಯಲ್ಲಿ (5.37) ಹೀಗೆ ಹೇಳಿದೆ ಗೋಲೋಕ ಏವ ನಿವಸತಿ ಅಖಿಲಾತ್ಮ ಭೂತಃ – ತನ್ನ ದಿವ್ಯಲೋಕದಲ್ಲಿ ಸದಾ ಲೀಲೆಗಳಲ್ಲಿ ಮಗ್ನನಾಗಿದ್ದರೂ ಅವನು ಎಲ್ಲೆಲ್ಲಿಯೂ ಇದ್ದಾನೆ. ವ್ಯಕ್ತಿಗತ ಆತ್ಮವು ತಾನು ಎಲ್ಲೆಲ್ಲಿಯೂ ಇದ್ದೇನೆ ಎಂದು ಹೇಳಿಕೊಳ್ಳಲಾರದು. ಆದುದರಿಂದ ಈ ಶ್ಲೋಕವು ಪರಮಾತ್ಮನನ್ನು, ದೇವೋತ್ತಮ ಪರಮ ಪುರುಷನನ್ನು ವರ್ಣಿಸುತ್ತದೆ, ವ್ಯಕ್ತಿಗತ ಆತ್ಮವನ್ನಲ್ಲ.

(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.