Bhagavad Gita: ಶ್ರೀಕೃಷ್ಣನ ಅನಂತ ಅಲೌಕಿಕ ರೂಪ; ಭಗವದ್ಗೀತೆಯ ಈ ಶ್ಲೋಕದಲ್ಲಿದೆ ಪರಮಾತ್ಮನ ವಿಶ್ವರೂಪ ದರ್ಶನ
Bhagavad Gita: ಅರ್ಜುನನ ಕೋರಿಕೆ ಮೇರೆಗೆ ಶ್ರೀಕೃಷ್ಣನು ತನ್ನ ಅನಂತವಾದ ಅಲೌಕಿಕ ವಿಶ್ವರೂಪವನ್ನು ತೋರಿಸಲು ಮುಂದಾದನು. ಭಗವದ್ಗೀತೆಯ ಅಧ್ಯಾಯ 11 ವಿಶ್ವರೂಪ, ಶ್ಲೋಕ 4, 5 ಮತ್ತು 6 ರ ತಾತ್ಪರ್ಯ ಹೀಗಿದೆ.

ಅಧ್ಯಾಯ – 11: ವಿಶ್ವರೂಪ – ಶ್ಲೋಕ – 4
ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ |
ಯೋಗೇಶ್ವರ ತತೋ ಮೇ ತ್ವಂ ದರ್ಶಯಾತ್ಮಾನಮವ್ಯಯಮ್ || 4 ||
ಅರ್ಥ: ಓ ಪ್ರಭುವೆ, ಯೋಗೀಶ್ವರನೆ, ನಿನ್ನ ವಿಶ್ವರೂಪವನ್ನು ನಾನು ನೋಡಬಲ್ಲೆ ಎಂದು ನೀನು ಭಾವಿಸುವೆಯಾದರೆ ಆ ನಿನ್ನ ಅಪರಿಮಿತ ವಿಶ್ವರೂಪವನ್ನು ತೋರಿಸು.
ಭಾವಾರ್ಥ: ಪರಮಪ್ರಭುವಾದ ಕೃಷ್ಣನನ್ನು ಐಹಿಕ ಇಂದ್ರಿಯಗಳಿಂದ ನೋಡಲು, ಕಾಣಲು, ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಆದರೆ ಯಾರು ಪ್ರಾರಂಭದಿಂದಲೂ ಕೃಷ್ಣನ ಪ್ರೇಮಪೂರ್ವಕ ದಿವ್ಯ ಸೇವೆಯಲ್ಲಿ ನಿರತರಾಗಿರುತ್ತಾರೋ ಅವರಿಗೆ ಕೃಷ್ಣನು ತನ್ನನ್ನು ತೋರಿಸಿಕೊಳ್ಳುತ್ತಾನೆ. ಪ್ರತಿಯೊಂದು ಜೀವಿಯೂ ಒಂದು ಆಧ್ಯಾತ್ಮಿಕ ಕಿಡಿ ಮಾತ್ರ. ಆದುದರಿಂದ ಪರಮ ಪ್ರಭುವನ್ನು ನೋಡುವುದಾಗಲೀ, ಅರ್ಥ ಮಾಡಿಕೊಳ್ಳುವುದಾಗಲೀ ಸಾಧ್ಯವಿಲ್ಲ. ಭಕ್ತನಾದ ಅರ್ಜುನನು ತನ್ನ ಊಹಾಪೋಹಗಳ ಶಕ್ತಿಯನ್ನು ನೆಚ್ಚುವುದಿಲ್ಲ. ಅದರ ಬದಲು ಅವನು ಜೀವಿಯಾಗಿ ತನ್ನ ಮಿತಿಗಳನ್ನು ಒಪ್ಪಿಕೊಳ್ಳುತ್ತಾನೆ. ಕೃಷ್ಣನ ಸ್ಥಾನವು ಅಳತೆಗೆ ಮೀರಿದ್ದು, ಇದನ್ನು ಅರ್ಜುನನು ಒಪ್ಪಿಕೊಳ್ಳುತ್ತಾನೆ. ಜೀವಿಗೆ ಅನಂತವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂದು ಅರ್ಜುನನು ತಿಳಿಯಬಲ್ಲ.
ಅನಂತನಾದವನು ತನ್ನನ್ನು ತೋರಿಸಿಕೊಂಡರೆ ಆಗ ಅನಂತನ ಕೃಪೆಯಿಂದ ಅನಂತನ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯ. ಇಲ್ಲಿ ಯೋಗೇಶ್ವರ ಎನ್ನುವ ಶಬ್ದವು ಬಹಳ ಮಹತ್ವದ್ದು. ಏಕೆಂದರೆ ಪ್ರಭುವಿನ ಶಕ್ತಿಯು ಕಲ್ಪನಾತೀತ. ಆದುದರಿಂದ ಅರ್ಜುನನು ಕೃಷ್ಣನ ಕಲ್ಪನಾತೀತ ಕೃಪೆಗಾಗಿ ಬೇಡುತ್ತಾನೆ. ಅವನು ಕೃಷ್ಣನಿಗೆ ಅಪ್ಪಣೆಮಾಡುವುದಿಲ್ಲ. ಕೃಷ್ಣಪ್ರಜ್ಞೆಯಲ್ಲಿ ಮನುಷ್ಯನು ತನ್ನನ್ನು ಪೂರ್ಣವಾಗಿ ಅರ್ಪಿಸಿಕೊಳ್ಳದಿದ್ದರೆ ಮತ್ತು ಭಕ್ತಿಸೇವೆಯಲ್ಲಿ ನಿರತನಾಗದಿದ್ದರೆ ಕೃಷ್ಣನು ತನ್ನನ್ನು ತೋರಿಸಿಕೊಳ್ಳಬೇಕಾಗಿಲ್ಲ. ಕೇವಲ ತಮ್ಮ ಊಹಾತ್ಮಕ ಚಿಂತನೆಯ ಶಕ್ತಿಯನ್ನು ನೆಚ್ಚಿದವರಿಗೆ ಕೃಷ್ಣನನ್ನು ನೋಡಲು ಸಾಧ್ಯವಾಗುವುದಿಲ್ಲ.
ಅಧ್ಯಾಯ – 11: ವಿಶ್ವರೂಪ – ಶ್ಲೋಕ – 5
ಶ್ರೀ ಭಗವಾನುವಾಚ
ಪಶ್ಯ ಮೇ ಪಾರ್ಥ ರೂಪಾಣಿ ಶತಶೋsಥ ಸಹಸ್ರಶಃ |
ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ || 5 ||
ಅರ್ಥ: ದೇವೋತ್ತಮ ಪರಮ ಪುರುಷನು ಹೇಳಿದನು- ಪೃಥೆಯ ಮಗನಾದ ನನ್ನ ಪ್ರೀತಿಯ ಅರ್ಜುನ, ನನ್ನ ಸಿರಿಗಳನ್ನು, ನಾನಾ ವಿಧವಾದ ದಿವ್ಯ ವರ್ಣಗಳ ನನ್ನ ಕೋಟ್ಯಂತರ ರೂಪಗಳನ್ನು ನೋಡು.
ಭಾವಾರ್ಥ: ಕೃಷ್ಣನ ವಿಶ್ವರೂಪವು ಒಂದು ಅಲೌಕಿಕ ರೂಪ. ಆದರೂ ಅದು ವಿಶ್ವದ ಅಭಿವ್ಯಕ್ತಿಗಾಗಿಯೇ ಪ್ರಕಟವಾಗಿದೆ. ಆದುದರಿಂದ ಅದು ಈ ಭೌತಿಕ ಪ್ರಕೃತಿಯ ಅನಿತ್ಯ ಕಾಲಕ್ಕೆ ಒಳಪಟ್ಟಿದೆ. ಅರ್ಜುನನು ಈ ವಿಶ್ವರೂಪವನ್ನು ನೋಡಲು ಬಯಸುತ್ತಾನೆ. ಭೌತಿಕ ಪ್ರಕೃತಿಯು ಪ್ರಕಟಿತವೂ ಮತ್ತು ಅಪ್ರಕಟಿತವೂ ಆಗಿರುವಂತೆ ಕೃಷ್ಣನ ಈ ವಿಶ್ವರೂಪವು ಪ್ರಕಟಿತ ಮತ್ತು ಅಪ್ರಕಟಿತ. ಅದು ಕೃಷ್ಣನ ಇತರ ಸ್ವರೂಪಗಳಂತೆ ಆಧ್ಯಾತ್ಮಿಕ ಗಗನದಲ್ಲಿ ಶಾಶ್ವತವಾಗಿ ನೆಲೆಸಿರುವುದಿಲ್ಲ. ಭಕ್ತನ ಮಟ್ಟಿಗೆ ಹೇಳುವುದಾದರೆ ಅವನು ವಿಶ್ವರೂಪವನ್ನು ನೋಡಲು ಕಾತರನಾಗಿರುವುದಿಲ್ಲ. ಆದರೆ ಅರ್ಜುನನು ಕೃಷ್ಣನನ್ನು ಈ ರೀತಿಯಲ್ಲಿ ಕಾಣಲು ಬಯಸಿದುದರಿಂದ ಕೃಷ್ಣನು ಈ ರೂಪವನ್ನು ತೋರುತ್ತಾನೆ. ಸಾಮಾನ್ಯ ಮನುಷ್ಯನು ಈ ವಿಶ್ವರೂಪವನ್ನು ನೋಡಲಾರ. ನೋಡುವ ಶಕ್ತಿಯನ್ನು ಕೃಷ್ಣನೇ ಕೊಡಬೇಕು.
ಅಧ್ಯಾಯ – 11: ವಿಶ್ವರೂಪ – ಶ್ಲೋಕ – 6
ಪಶ್ಯಾದಿತ್ಯಾನ್ ವಸೂನ್ ರುದ್ರಾನಶ್ವಿನೌ ಮರುತಸ್ತಥಾ |
ಬಹೂನ್ಯದೃಷ್ಟ ಪೂರ್ವಾಣಿ ಪಶ್ಯಾಶ್ಚರ್ಯಾಣಿ ಭಾರತ || 6 ||
ಅರ್ಥ: ಭರತ ವಂಶದವರಲ್ಲಿ ಶ್ರೇಷ್ಠನೆ, ಆದಿತ್ಯರು, ವಸುಗಳು, ರುದ್ರರು, ಅಶ್ವಿನಿ ಕುಮಾರರು ಮತ್ತು ಇತರ ಎಲ್ಲ ದೇವತೆಗಳ ವಿವಿಧ ಅಭಿವ್ಯಕ್ತಿಗಳನ್ನು ನೋಡು. ಈವರೆಗೆ ಯಾರೂ ನೋಡದಿರುವ ಮತ್ತು ಕೇಳದಿರುವ ಆಶ್ಚರ್ಯಗಳನ್ನು ನೋಡು.
ಭಾವಾರ್ಥ: ಅರ್ಜುನನು ಕೃಷ್ಣನ ಆತ್ಮೀಯ ಸ್ನೇಹಿತನಾಗಿ, ವಿದ್ವಾಂಸರಲ್ಲಿ ಬಹು ಮುಂದುವರಿದವನಾದರೂ ಅವನಿಗೆ ಕೃಷ್ಣನ ವಿಷಯವಾಗಿ ಎಲ್ಲವನ್ನೂ ತಿಳಿಯಲು ಸಾಧ್ಯವಾಗಿರಲಿಲ್ಲ. ಮನುಷ್ಯರು ಈ ಎಲ್ಲ ರೂಪಗಳನ್ನು ಮತ್ತು ಅಭಿವ್ಯಕ್ತಿಗಳನ್ನು ಕೇಳಿಲ್ಲ ಕಂಡಿಲ್ಲ ಎಂದು ಇಲ್ಲಿ ಹೇಳಿದೆ. ಈಗ ಕೃಷ್ಣನು ಈ ಆಶ್ಚರ್ಯಕರ ರೂಪಗಳನ್ನು ತೋರಿಸುತ್ತಾನೆ.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)
