Bhagavad Gita: ವಿಶ್ವರೂಪದಲ್ಲಿ ಕೃಷ್ಣನ ತೇಜಸ್ಸು ಸಹಸ್ರಾರು ಸೂರ್ಯರ ಪ್ರಭೆಗೆ ಸಮಾನ: ಭಗವದ್ಗೀತೆಯ ಈ ಶ್ಲೋಕಗಳ ಅರ್ಥ ಹೀಗಿದೆ
Bhagavad Gita: ಶ್ರೀಕೃಷ್ಣನು ಅರ್ಜುನನಿಗೆ ತೋರಿಸಿದ ವಿಶ್ವರೂಪದಲ್ಲಿ ಪರಮಾತ್ಮನು ಸಹಸ್ರಾರು ಕಣ್ಣು, ಬಾಯಿಗಳನ್ನು ಹೊಂದಿದ್ದನು. ಭಗವದ್ಗೀತೆಯ ಅಧ್ಯಾಯ 11 ವಿಶ್ವರೂಪದ, ಶ್ಲೋಕ 9 ರಿಂದ 12ರವರೆಗಿನ ಅರ್ಥ ಹೀಗಿದೆ.

ಅಧ್ಯಾಯ – 11: ವಿಶ್ವರೂಪ – ಶ್ಲೋಕ – 9
ಸಂಜಯ ಉವಾಚ
ಏವಮುಕ್ತ್ವಾ ತತೋ ರಾಜನ್ ಮಹಾಯೋಗೇಶ್ವರೋ ಹರಿಃ |
ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಮ್ || 9 ||
ಅರ್ಥ: ಸಂಜಯನು ಹೇಳಿದನು - ರಾಜನೇ! ಮಹಾ ಯೋಗೀಶ್ವರನು, ದೇವೋತ್ತಮ ಪುರುಷನು, ಹೀಗೆ ಹೇಳಿ ಅರ್ಜುನನಿಗೆ ತನ್ನ ವಿಶ್ವರೂಪವನ್ನು ತೋರಿಸಿದನು.
ಅಧ್ಯಾಯ – 11: ವಿಶ್ವರೂಪ – ಶ್ಲೋಕ – 10 ಮತ್ತು 11
ಅನೇಕವಕ್ತ್ರನಯನಮನೇಕಾದ್ಭುತದರ್ಶನಮ್ |
ಅನೇಕದಿವ್ಯಾಭರಣಂ ದಿವ್ಯಾನೇಕೋತಾಯುಧಮ್ || 10 ||
ದಿವ್ಯಮಾಲ್ಯಾಮ್ಬರಧರಂ ದಿವ್ಯಗಂಧಾನುಲೇಪನಮ್ |
ಸರ್ವಾಶ್ಚರ್ಯಮಯಂ ದೇವಮನನ್ತಂವಿಶ್ವತೋಮುಖಮ್ || 11 ||
ಅರ್ಥ: ಅರ್ಜುನನು ಆ ವಿಶ್ವರೂಪದಲ್ಲಿ ಅಸಂಖ್ಯಾತವಾದ ಬಾಯಿಗಳನ್ನೂ, ಅಸಂಖ್ಯಾತವಾದ ಕಣ್ಣುಗಳನ್ನೂ, ಅಸಂಖ್ಯಾತವಾದ ಅದ್ಭುತ ದರ್ಶನಗಳನ್ನೂ ಕಂಡನು. ಆತನು ದಿವ್ಯಮಾಲೆಗಳನ್ನೂ ವಸ್ತ್ರಗಳನ್ನೂ ಧರಿಸಿದ್ದನು. ಹಲವು ದಿವ್ಯ ಗಂಧಗಳನ್ನು ಲೇಪಿಸಿಕೊಂಡಿದ್ದನು. ಎಲ್ಲವೂ ಆಶ್ಚರ್ಯಮಯವಾಗಿದ್ದಿತು, ಉಜ್ವಲವಾಗಿದ್ದಿತು, ಅನಂತವಾಗಿತ್ತು, ವಿಶ್ವತೋ ಮುಖವಾಗಿತ್ತು.
ಭಾವಾರ್ಥ: ಈ ಎರಡು ಶ್ಲೋಕಗಳಲ್ಲಿ ಅನೇಕ ಎನ್ನುವ ಪದವನ್ನು ಮತ್ತೆ ಮತ್ತೆ ಬಳಸಿರುವುದು ಅರ್ಜುನನು ನೋಡುತ್ತಿದ್ದ ಕೈಗಳು, ಬಾಯಿಗಳು, ಕಾಲುಗಳು ಮತ್ತು ಇತರ ಅಭಿವ್ಯಕ್ತಿಗಳ ಸಂಖ್ಯೆಗೆ ಮಿತಿಯೇ ಇರಲಿಲ್ಲ ಎನ್ನುವುದನ್ನು ತೋರಿಸುತ್ತದೆ. ಒಂದು ಸ್ಥಳದಲ್ಲಿ ಕುಳಿತು ಅವೆಲ್ಲವನ್ನೂ ನೋಡಲು ಅರ್ಜುನನಿಗೆ ಸಾಧ್ಯವಾಯಿತು. ಇದು ಕೃಷ್ಣನ ಕಲ್ಪನಾತೀತ ಶಕ್ತಿಯಿಂದ ಸಾಧ್ಯವಾಯಿತು.
ಅಧ್ಯಾಯ – 11: ವಿಶ್ವರೂಪ – ಶ್ಲೋಕ – 12
ದಿವಿ ಸೂರ್ಯಸಹಸ್ರಸ್ಯ ಭವೇದ್ಯುಗಪದುತ್ಥಿತಾ |
ಯದಿ ಭಾಃ ಸದೃಶೀ ಸಾ ಸ್ಯಾದ್ ಭಾಸಸ್ತಸ್ಯ ಮಹಾತ್ಮನಃ || 12 ||
ಅರ್ಥ: ಲಕ್ಷಾಂತರ ಸೂರ್ಯರು ಒಟ್ಟಿಗೆ ಆಕಾಶದಲ್ಲಿ ಉದಯಿಸಿದ್ದರೆ ಅವರ ಪ್ರಭೆಯು ಆ ವಿಶ್ವರೂಪದಲ್ಲಿದ್ದ ಪರಮ ಪುರುಷನ ತೇಜಸ್ಸನ್ನು ಹೋಲಬಹುದಾಗಿತ್ತು.
ಭಾವಾರ್ಥ: ಅರ್ಜುನನು ಕಂಡದ್ದು ವರ್ಣನೆಗೆ ನಿಲುಕದ್ದು. ಆದರೂ ಸಂಜಯನು ಧೃತರಾಷ್ಟ್ರನಿಗೆ ಆ ಮಹಾರೂಪದ ಒಂದು ಮಾನಸಿಕ ಚಿತ್ರವನ್ನು ಕೊಡಲು ಪ್ರಯತ್ನಿಸುತ್ತಾನೆ. ಸಂಜಯನಾಗಲೀ ಧೃತರಾಷ್ಟ್ರನಾಗಲೀ ಅಲ್ಲಿರಲಿಲ್ಲ. ಆದರೆ ವ್ಯಾಸರ ಕೃಪೆಯಿಂದ ಸಂಜಯನಿಗೆ ಅಲ್ಲಿ ನಡೆದದ್ದೆಲ್ಲವನ್ನೂ ಕಾಣಲು ಸಾಧ್ಯವಾಯಿತು. ಹೀಗೆ ಅವನು ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದ ಮಟ್ಟಿಗೂ ಆ ಸನ್ನಿವೇಶವನ್ನು ಕಲ್ಪಿಸಿಕೊಳ್ಳಬಹುದಾದ ಒಂದು ಘಟನೆಗೆ (ಎಂದರೆ ಸಹಸ್ರಾರು ಸೂರ್ಯರಿಗೆ) ಹೋಲಿಸುತ್ತಾನೆ.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)
