ಭಯ, ಆತಂಕ, ಉದ್ವೇಗಗೊಳ್ಳುವುದನ್ನು ತ್ಯಜಿಸಿ ಶಾಂತ ಮನಸ್ಸಿನಿಂದ ಪರಮಾತ್ಮನ ಸೇವೆ ಮಾಡಬೇಕು: ಭಗವದ್ಗೀತೆ
ಜಗತ್ತಿನ ಪ್ರತಿಯೊಂದು ಜೀವಗಳ ಮೇಲೂ ದಯೆ, ಕರುಣೆ ಹೊಂದಿರುವ, ಯಾವುದೇ ಕಾರಣಕ್ಕೂ ಬೇರಯವರಿಗೆ ಆತಂಕವನ್ನುಂಟು ಮಾಡದಿರುವ ಭಕ್ತ ಪರಮಾತ್ಮನ ಕೃಪೆಗೆ ಕಾರಣನಾಗುತ್ತಾನೆ.ಭಗವದ್ಗೀತೆಯಲ್ಲಿನ ಅರ್ಥವನ್ನು ತಿಳಿಯಿರಿ.

ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 15
ಯಸ್ಮಾನ್ನೋದ್ವಿಜತೇ ಲೋಕೋ ಲೋಕಾನ್ನೋದ್ವಿಜತೇ ಚ ಯಃ |ಹರ್ಷಾಮರ್ಷಭಯೋದ್ವೇಗೈರ್ಮುಕ್ತೋ ಯಃ ಸ ಚ ಮೇ ಪ್ರಿಯಃ || 15 ||
ಅರ್ಥ: ಯಾವ ವ್ಯಕ್ತಿಯಿಂದ ಯಾರೂ ಉದ್ವೇಗವನ್ನು ಪಡುವುದಿಲ್ಲವೋ, ಮತ್ತು ಆ ವ್ಯಕ್ತಿಯು ಯಾರಿಂದಲೂ ಉದ್ವೇಗವನ್ನು ಅನುಭವಿಸುವುದಿಲ್ಲವೋ, ಸುಖ ಮತ್ತು ದುಃಖಗಳಲ್ಲಿ ಭಯ ಮತ್ತು ಆತಂಕಗಳಲ್ಲಿ ಸಮಚಿತ್ತನಾಗಿರುತ್ತಾನೋ ಆತನು ನನಗೆ ಬಹು ಪ್ರಿಯನಾಗುತ್ತಾನೆ.
ಭಾವಾರ್ಥ: ಭಕ್ತನ ಇನ್ನೂ ಕೆಲವು ಅರ್ಹತೆಗಳನ್ನು ಇಲ್ಲಿ ವರ್ಣಿಸಿದೆ. ಇಂತಹ ಭಕ್ತನಿಂದ ಯಾರಿಗೂ ಕಷ್ಟ, ಆತಂಕ, ಭಯ ಅಥವಾ ಅತೃಪ್ತಿ ಉಂಟಾಗುವುದಿಲ್ಲ. ಭಕ್ತನು ಎಲ್ಲರ ವಿಷಯದಲ್ಲಿಯೂ ದಯೆಯಿಂದ ನಡೆದುಕೊಳ್ಳುವುದರಿಂದ ಇತರರಿಗೆ ಆತಂಕವನ್ನುಂಟುಮಾಡುವಂತೆ ಅವನು ನಡೆದುಕೊಳ್ಳುವುದಿಲ್ಲ. ಆದರೆ ಇತರರು ಭಕ್ತನಿಗೆ ಆತಂಕವನ್ನುಂಟುಮಾಡಲು ಯತ್ನಿಸಿದರೆ ಆತನು ಕ್ಷೋಭೆಗೆ ಒಳಗಾಗುವುದಿಲ್ಲ. ಹೊರಗಿನ ಯಾವುದೇ ಶೋಭೆಯಿಂದ ಅವನು ಪ್ರಕ್ಷುಬ್ಧನಾಗದಿರುವಂತೆ ಸಾಧನೆ ಮಾಡಿರುವುದಕ್ಕೆ ಪ್ರಭುವಿನ ಕೃಪೆಯೇ ಕಾರಣ. ವಾಸ್ತವವಾಗಿ, ಭಕ್ತನು ಸದಾ ಕೃಷ್ಣಪ್ರಜ್ಞೆಯಲ್ಲಿ ತನ್ಮಯನಾಗಿದ್ದು ಭಕ್ತಿಸೇವೆಯಲ್ಲಿ ನಿರತನಾಗಿರುವುದರಿಂದ ಇಂತಹ ಐಹಿಕ ಸನ್ನಿವೇಶಗಳಿಂದ ಅವನ ಮನಸ್ಸು ವಿಚಲಿತವಾಗುವುದಿಲ್ಲ.
ಸಾಮಾನ್ಯವಾಗಿ ಪ್ರಾಪಂಚಿಕ ಸ್ವಭಾವದ ಮನುಷ್ಯನ ಇಂದ್ರಿಯ ತೃಪ್ತಿಗೆ ಮತ್ತು ದೇಹಕ್ಕೆ ಏನಾದರೂ ದೊರೆತಾಗ ಅವನಿಗೆ ಸಂತೋಷವಾಗುತ್ತದೆ. ಇತರರಿಗೆ ಇಂದ್ರಿಯ ತೃಪ್ತಿಗೆ ಏನೋ ದೊರೆತಿದೆ, ತನಗೆ ದೊರೆತಿಲ್ಲ ಎನ್ನುವುದನ್ನು ಕಂಡಾಗ ಅವನಿಗೆ ದುಃಖವಾಗುತ್ತದೆ, ಅಸೂಯೆಯಾಗುತ್ತದೆ. ವ್ಯಕ್ತಿಯು ಶತ್ರುವಿನಿಂದ ಪ್ರತೀಕಾರವನ್ನು ನಿರೀಕ್ಷಿಸುತ್ತಿರುವಾಗ ಭಯದ ಮನಸ್ಥಿತಿಯಲ್ಲಿರುತ್ತಾನೆ. ಏನನ್ನಾದರೂ ಯಶಸ್ವಿಯಾಗಿ ಕಾರ್ಯಗತ ಮಾಡಲು ಸಾಧ್ಯವಾಗದಿದ್ದಾಗ ಬೇಸರ ಪಡುತ್ತಾನೆ. ಈ ಎಲ್ಲ ಶೋಭೆಯನ್ನೂ ಮೀರಿದ ಭಕ್ತನು ಯಾವಾಗಲೂ ಕೃಷ್ಣನಿಗೆ ಬಹು ಪ್ರಿಯನಾದವನು.
ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 16
ಅನಪೇಕ್ಷ: ಶುಚಿರ್ದಕ್ಷ ಉದಾಸೀನೋ ಗತವ್ಯಥಃ |
ಸರ್ವಾರಮ್ಭಪರಿತ್ಯಾಗೀ ಯೋ ಮದ್ಭಕ್ತಃ ಸ ಮೇ ಪ್ರಿಯಃ || 16 ||
ಅರ್ಥ: ಚಟುವಟಿಕೆಗಳ ಸಾಮಾನ್ಯ ನಡೆಯನ್ನು ಅವಲಂಬಿಸದಿರುವ, ಪರಿಶುದ್ದನಾದ, ದಕ್ಷನಾದ, ಚಿಂತೆ ಇಲ್ಲದ, ಎಲ್ಲ ನೋವುಗಳಿಂದ ಮುಕ್ತನಾದ, ಯಾವ ಫಲಕ್ಕಾಗಿಯೂ ಶ್ರಮಪಡದ ಭಕ್ತನು ನನಗೆ ಬಹು ಪ್ರಿಯನಾದವನು.
ಭಾವಾರ್ಥ: ಭಕ್ತನಿಗೆ ಹಣವನ್ನು ನೀಡಲು ಯಾರಾದರೂ ಮುಂದೆ ಬರಬಹುದು. ಆದರೆ ಅವನು ಹಣಸಂಪಾದನೆಗಾಗಿ ಪ್ರಯತ್ನಪಡಬಾರದು. ಪರಮೋತ್ತಮನ ಕೃಪೆಯಿಂದ ತಾನಾಗಿಯೇ ಹಣವು ಒದಗಿ ಬಂದರೆ ಅವನ ಮನಸ್ಸು ಕದಡುವುದಿಲ್ಲ. ಸಹಜವಾಗಿ ಭಕ್ತನು ದಿನಕ್ಕೆ ಎರಡು ಬಾರಿ ಸ್ನಾನ ಮಾಡುತ್ತಾನೆ ಮತ್ತು ಭಕ್ತಿಸೇವೆಗಾಗಿ ಬೆಳಗ್ಗೆ ಬೇಗನೆ ಏಳುತ್ತಾನೆ. ಹೀಗೆ ಅವನು ಸಹಜವಾಗಿ ಅಂತರಂಗದಲ್ಲಿಯೂ ಬಹಿರಂಗದಲ್ಲಿಯೂ ಶುಚಿಯಾಗಿರುತ್ತಾನೆ. ಭಕ್ತನು ಯಾವಾಗಲೂ ದಕ್ಷ. ಏಕೆಂದರೆ ಅವನಿಗೆ ಬದುಕಿನ ಎಲ್ಲ ಕಾರ್ಯಗಳ ತಿರುಳು ತಿಳಿದಿರುತ್ತದೆ ಮತ್ತು ಪ್ರಮಾಣ ಶಾಸ್ತ್ರ ಗ್ರಂಥಗಳಲ್ಲಿ ಪೂರ್ಣ ನಂಬಿಕೆ ಇರುತ್ತದೆ. ಭಕ್ತನು ಯಾರ ಪಕ್ಷವನ್ನೂ ವಹಿಸುವುದಿಲ್ಲ; ಆದುದರಿಂದ ಆತ ನಿರಾತಂಕವಾಗಿರುತ್ತಾನೆ.
ಅವನಿಗೆ ನೋವೆಂಬುದಿಲ್ಲ. ಏಕೆಂದರೆ ಅವನು ಎಲ್ಲ ಉಪಾಧಿಗಳಿಂದ ಮುಕ್ತ; ದೇಹ ಬರಿಯ ಉಪಾಧಿಯಷ್ಟೇ ಎಂದು ಅವನಿಗೆ ಗೊತ್ತು, ಆದುದರಿಂದ ದೇಹಕ್ಕೆ ನೋವಾದರೂ ಅವನು ಮುಕ್ತ. ಪರಿಶುದ್ಧ ಭಕ್ತನು ಭಕ್ತಿಸೇವೆಯ ತತ್ವಗಳಿಗೆ ವಿರುದ್ಧವಾದುದೇನನ್ನೂ ಮಾಡಲು ಪ್ರಯತ್ನಿಸುವುದಿಲ್ಲ. ಉದಾಹರಣೆಗೆ, ಒಂದು ದೊಡ್ಡ ಕಟ್ಟಡದ ನಿರ್ಮಾಣಕ್ಕೆ ಹೆಚ್ಚಿನ ಶಕ್ತಿ ಅಗತ್ಯ; ಹೀಗೆ ಕಟ್ಟಡವನ್ನು ನಿರ್ಮಿಸುವುದು ತನ್ನ ಭಕ್ತಿಸೇವೆಯ ಮುನ್ನಡೆಗೆ ನೆರವಾಗಿ ತನಗೆ ಪ್ರಯೋಜನ ಆಗದಿದ್ದರೆ ಅವನು ಇಂತಹ ಕೆಲಸಕ್ಕೆ ಕೈಹಾಕುವುದಿಲ್ಲ. ಪ್ರಭುವಿಗಾಗಿ ಅವನು ಒಂದು ದೇವಸ್ಥಾನವನ್ನು ಕಟ್ಟಬಹುದು; ಅದಕ್ಕಾಗಿ ಎಲ್ಲ ಬಗೆಯ ಆತಂಕವನ್ನು ಪಡಬಹುದು; ಆದರೆ ತನ್ನ ನೆಂಟರಿಗಾಗಿ ಅವನು ದೊಡ್ಡ ಮನೆಯನ್ನು ಕಟ್ಟುವುದಿಲ್ಲ.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)