ಪರಮಾತ್ಮನ ಭಕ್ತಿಸೇವೆಯಲ್ಲಿ ನಿರತರಾದವರನ್ನು ಭಕ್ತಿಯೋಗಿಗಳು ಎಂದು ಕರೆಯುತ್ತಾರೆ; ಭಗವದ್ಗೀತೆಯ ಈ ಶ್ಲೋಕದ ಅರ್ಥ ಹೀಗಿದೆ
ಪರಮಾತ್ಮನ ಬಳಿಗೆ ನೇರವಾಗಿ ಸಾಗಲು ಭಕ್ತರಿಗೆ ಯಾವುದೇ ಕಷ್ಟವಲ್ಲ. ಆದರೆ ಅಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ನಿರಾಕಾರ ಮಾರ್ಗವನ್ನು ಅನುಸರಿಸುವವರಿಗೆ ಪರಮಾತ್ಮನ ಬಳಿ ಸಾಗಲು ಕಷ್ಟವಾಗುತ್ತದೆ. ಭಗವದ್ಗೀತೆಯ ಈ ಶ್ಲೋಕದ ಅರ್ಥ ತಿಳಿಯಿರಿ.

ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 5
ಕ್ಲೇಶೋSಧಿಕತರಸ್ತೇಷಾಮವ್ಯಕ್ತಾಸಕ್ತ ಚೇತಸಾಮ್ |
ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ || 5 ||
ಅರ್ಥ: ಪರಮ ಪ್ರಭುವಿನ ಅವ್ಯಕ್ತವಾದ ಮತ್ತು ನಿರಾಕಾರವಾದ ರೂಪವನ್ನು ಪ್ರೀತಿಸುವ ಮನಸ್ಸಿನವರಿಗೆ ಪ್ರಗತಿಯು ತುಂಬಾ ಕ್ಷೇಶಕರವಾದದ್ದು. ಆ ಶಿಸ್ತಿನಲ್ಲಿ ಮುಂದುವರಿಯುವುದು ದೇಹಧಾರಿಗಳಿಗೆ ಬಹು ಕಷ್ಟ.
ಭಾವಾರ್ಥ: ಪರಮ ಪ್ರಭುವಿನ ಅಚಿಂತ್ಯವೂ, ಅವ್ಯಕ್ತವೂ, ನಿರಾಕಾರವೂ ಆದ ರೂಪದ ಮಾರ್ಗವನ್ನು ಅನುಸರಿಸುವ ಅಲೌಕಿಕವಾದಿಗಳನ್ನು ಜ್ಞಾನಯೋಗಿಗಳೆಂದು ಕರೆಯುತ್ತಾರೆ. ಸಂಪೂರ್ಣ ಕೃಷ್ಣಪ್ರಜ್ಞೆಯಲ್ಲಿದ್ದು ಪರಮ ಪ್ರಭುವಿನ ಭಕ್ತಿಸೇವೆಯಲ್ಲಿ ನಿರತರಾದವರನ್ನು ಭಕ್ತಿಯೋಗಿಗಳೆಂದು ಕರೆಯುತ್ತಾರೆ. ಇಲ್ಲಿ ಜ್ಞಾನಯೋಗ ಮತ್ತು ಭಕ್ತಿಯೋಗಗಳ ನಡುವಣ ವ್ಯತ್ಯಾಸವನ್ನು ಖಚಿತವಾಗಿ ವಿವರಿಸಿದೆ. ಕಡೆಗೆ ಮನುಷ್ಯನನ್ನು ಅದೇ ಗುರಿಗೆ ಕೊಂಡೊಯ್ದರೂ ಜ್ಞಾನಯೋಗದ ಪ್ರಕ್ರಿಯೆಯು ತುಂಬಾ ಕ್ಷೇಶಕರವಾದದ್ದು. ಆದರೆ ದೇವೋತ್ತಮ ಪರಮ ಪುರುಷನ ನೇರಸೇವೆಯ ಭಕ್ತಿಯೋಗದ ಮಾರ್ಗವು ಇನ್ನೂ ಸುಲಭವಾದದ್ದು ಮತ್ತು ದೇಹಧಾರಿಯಾದ ಆತ್ಮಕ್ಕೆ ಸಹಜವಾದದ್ದು. ಅನಾದಿಕಾಲದಿಂದ ವ್ಯಕ್ತಿಗತ ಆತ್ಮವು ದೇಹದಲ್ಲಿ ವಾಸವಾಗಿದೆ. ತಾನು ದೇಹವಲ್ಲ ಎನ್ನುವುದನ್ನು ತಾತ್ವಿಕವಾಗಿ ತಿಳಿಯುವುದು ಆತನಿಗೆ ಬಹುಕಷ್ಟ. ಆದುದರಿಂದ ಭಕ್ತಿಯೋಗವು ಕೃಷ್ಣವಿಗ್ರಹವನ್ನು ಪೂಜಾರ್ಹ ಎಂದು ಸ್ವೀಕರಿಸುತ್ತದೆ. ಏಕೆಂದರೆ ಮನಸ್ಸಿನಲ್ಲಿ ಸ್ಥಿರವಾಗಿರುವ ದೈಹಿಕ ಪರಿಕಲ್ಪನೆಯನ್ನು ಹೀಗೆ ಅನ್ವಯಿಸುವುದು ಸಾಧ್ಯವಾಗುತ್ತದೆ. ದೇವಾಲಯದಲ್ಲಿ, ದೇವೋತ್ತಮ ಪರಮ ಪುರುಷನನ್ನು ಅವನ ರೂಪದಲ್ಲಿ ಪೂಜಿಸುವುದು ಮಿಥ್ಯ ಕಾಲ್ಪನಿಕ ಪ್ರತಿಮೆಯ ಆರಾಧನೆಯಲ್ಲ.
ಪೂಜೆಯು ಪರಮ ಪ್ರಭುವು ಗುಣಗಳನ್ನು ಹೊಂದಿರುವ ಅಥವಾ ಹೊಂದಿರದ ಎಂದರೆ ಸಗುಣ ಮತ್ತು ನಿರ್ಗುಣ ರೀತಿಗಳಲ್ಲಿ ಯಾವುದಾದರೂ ಆಗಿರಬಹುದು ಎನ್ನುವುದಕ್ಕೆ ವೇದ ಸಾಹಿತ್ಯದಲ್ಲಿ ಸಾಕ್ಷ್ಯವಿದೆ. ದೇವಸ್ಥಾನದಲ್ಲಿ ವಿಗ್ರಹವನ್ನು ಪೂಜಿಸುವುದು ಸಗುಣ ಪೂಜೆ. ಏಕೆಂದರೆ ಭೌತಿಕ ಗುಣಗಳು ಭಗವಂತನನ್ನು ಚಿತ್ರಿಸುತ್ತವೆ. ಆದರೆ ಕಲ್ಲು, ಮರ ಅಥವಾ ತೈಲಚಿತ್ರ ಮೊದಲಾದ ಭೌತಿಕ ಗುಣಗಳು ಪ್ರಭುವನ್ನು ಚಿತ್ರಿಸಿದರೂ ವಾಸ್ತವವಾಗಿ ಪ್ರಭುವು ಭೌತಿಕನಲ್ಲ. ಪರಮ ಪ್ರಭುವಿನ ಪರಿಪೂರ್ಣ ಸ್ವಭಾವ ಇದು. ಇಲ್ಲಿ ಒಂದು ಸ್ಥೂಲವಾದ ಉದಾಹರಣೆಯನ್ನು ಕೊಡಬಹುದು. ರಸ್ತೆಯಲ್ಲಿ ನಾವು ಕೆಲವು ಅಂಚೆಪೆಟ್ಟಿಗೆಗಳನ್ನು ಕಾಣಬಹುದು.
ಅರ್ಚಾವಿಗ್ರಹವು ಪರಮ ಪ್ರಭುವಿನ ಅವತಾರ
ನಾವು ನಮ್ಮ ಪತ್ರಗಳನ್ನು ಆ ಪೆಟ್ಟಿಗೆಗಳಲ್ಲಿ ಹಾಕಿದರೆ ಅವು ಕಷ್ಟವಿಲ್ಲದೆ ಸಹಜವಾಗಿ ತಮ್ಮ ಗುರಿಯನ್ನು ಮುಟ್ಟುತ್ತವೆ. ಅಂಚೆಕಛೇರಿಯು ಅಧಿಕೃತವಾಗಿ ಪರಿಗಣಿಸದಿರುವ ಎಲ್ಲೋ ಕಾಣುವ ಅನುಕರಣೆಯ ಪೆಟ್ಟಿಗೆ ಅಥವಾ ಯಾವುದೋ ಹಳೆಯ ಪೆಟ್ಟಿಗೆಯು ಈ ಕೆಲಸವನ್ನು ಮಾಡಲಾರದು. ಹಾಗೆಯೇ ಭಗವಂತನಿಗೆ ವಿಗ್ರಹ ರೂಪದಲ್ಲಿ ಒಂದು ಅಧಿಕೃತ ಚಿತ್ರಣವಿದೆ; ಇದಕ್ಕೆ ಅರ್ಚಾವಿಗ್ರಹ ಎಂದು ಹೆಸರು. ಈ ಅರ್ಚಾವಿಗ್ರಹವು ಪರಮ ಪ್ರಭುವಿನ ಅವತಾರ. ಆ ರೂಪದ ಮೂಲಕ ಭಗವಂತನು ಸೇವೆಯನ್ನು ಸ್ವೀಕರಿಸುತ್ತಾನೆ. ಪ್ರಭುವು ಸರ್ವಶಕ್ತ, ಆದುದರಿಂದ ಅರ್ಚಾವಿಗ್ರಹದ ಅವತಾರದ ಮೂಲಕ, ಭಕ್ತನಿಗೆ ಬದ್ಧ ಬದುಕಿನಲ್ಲಿ ಅನುಕೂಲ ಮಾಡಿಕೊಡುವುದಕ್ಕಾಗಿ ಆತನ ಸೇವೆಯನ್ನು ಭಗವಂತನು ಸ್ವೀಕರಿಸುತ್ತಾನೆ.
ಆದುದರಿಂದ ಪರಮವನ್ನು ಕೂಡಲೇ ಮತ್ತು ನೇರವಾಗಿ ಬಳಿ ಸಾರಲು ಭಕ್ತರಿಗೆ ಯಾವ ಕಷ್ಟವೂ ಇಲ್ಲ. ಆದರೆ ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ನಿರಾಕಾರ ಮಾರ್ಗವನ್ನು ಅನುಸರಿಸುವವರಿಗೆ ಕಷ್ಟವಾಗುತ್ತದೆ. ಉಪನಿಷತ್ತುಗಳಂತಹ ವೇದ ಸಾಹಿತ್ಯದ ಮೂಲಕ ಅವರು ಪರಮ ಪ್ರಭುವಿನ ಅವ್ಯಕ್ತ ಲಕ್ಷಣವನ್ನು ಅರ್ಥಮಾಡಿಕೊಳ್ಳಬೇಕು.
ನಿರಾಕಾರವಾದಿಗಳು ಯಾವುದನ್ನು ಅನಗತ್ಯವಾಗಿ ಅನುಸರಿಸುತ್ತಿದ್ದಾರೆ
ಅವರು ಭಾಷೆಯನ್ನೂ ಕಲ್ಪನೆಗೆ ನಿಲುಕದ ಭಾವಗಳನ್ನೂ ಅರ್ಥಮಾಡಿಕೊಳ್ಳಬೇಕು ಮತ್ತು ಎಲ್ಲ ಪ್ರಕ್ರಿಯೆಗಳನ್ನೂ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಸಾಮಾನ್ಯ ಮನುಷ್ಯನಿಗೆ ಇದು ಸುಲಭವಲ್ಲ. ಭಕ್ತಿಸೇವೆಯಲ್ಲಿ ನಿರತನಾಗಿರುವ ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನು ಯೋಗ್ಯಗುರುವಿನ ಮಾರ್ಗದರ್ಶನ ಮಾತ್ರದಿಂದಲೇ, ವಿಗ್ರಹಕ್ಕೆ ವಿಧಿಪೂರ್ವಕ ಪ್ರಣಾಮಗಳನ್ನು ಅರ್ಪಿಸುವ ಮಾತ್ರದಿಂದಲೇ, ಪ್ರಭುವಿನ ಮಹಿಮೆಯನ್ನು ಕೇಳುವುದರಿಂದಲೇ ಮತ್ತು ಪ್ರಭುವಿನ ಪ್ರಸಾದದ ಶೇಷಭಾಗವನ್ನು ತಿನ್ನುವುದರಿಂದಲೇ ಬಹು ಸುಲಭವಾಗಿ ದೇವೋತ್ತಮ ಪರಮ ಪುರುಷನನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ಕಡೆಯಲ್ಲಿ ಪರಮ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಳ್ಳದೆ ಹೋಗುವ ಅಪಾಯವೂ ಇರುವ ಬಹುಕಷ್ಟಕರವಾದ ಮಾರ್ಗವನ್ನು ನಿರಾಕಾರವಾದಿಗಳು ಅನಗತ್ಯವಾಗಿ ಅನುಸರಿಸುತ್ತಿದ್ದಾರೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಸಾಕಾರವಾದಿಯು ಯಾವುದೇ ಅಪಾಯ, ತೊಂದರೆ ಅಥವಾ ಕಷ್ಟವಿಲ್ಲದೆ ನೇರವಾಗಿ ಪರಮ ಪುರುಷನ ಬಳಿ ಸಾರುತ್ತಾನೆ. ಇಂತಹದೇ ಒಂದು ಭಾಗವು ಶ್ರೀಮದ್ಭಾಗವತದಲ್ಲಿ ಕಾಣುತ್ತದೆ.
ಕಟ್ಟಕಡೆಗೆ ದೇವೋತ್ತಮ ಪರಮ ಪುರುಷನಿಗೆ ಮನುಷ್ಯನು ಶರಣಾಗತನಾಗಬೇಕು (ಈ ಶರಣಾಗತಿಗೆ ಭಕ್ತಿ ಎಂದು ಹೆಸರು). ಅದರ ಬದಲು ಆತನು ಯಾವುದು ಬ್ರಹ್ಮನ್ ಮತ್ತು ಯಾವುದು ಬ್ರಹ್ಮನ್ ಅಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಲು ತೊಂದರೆ ತೆಗೆದುಕೊಂಡು ತನ್ನ ಇಡೀ ಜೀವಮಾನವನ್ನು ಅದರಲ್ಲಿ ಕಳೆದರೆ ಪರಿಣಾಮವು ಬರೀ ಕೇಶವಷ್ಟೇ ಎಂದು ಭಾಗವತದಲ್ಲಿ ಹೇಳಿದೆ. ಆದುದರಿಂದ ಮನುಷ್ಯನು ಆತ್ಮಸಾಕ್ಷಾತ್ಕಾರದ ಈ ಕಷ್ಟದ ಮಾರ್ಗವನ್ನು ಹಿಡಿಯಬಾರದು. ಏಕೆಂದರೆ ಕಡೆಗೆ ಪರಿಣಾಮವು ಅನಿಶ್ಚಯ ಎಂದು ಇಲ್ಲಿ ಹೇಳಿದೆ.
ಜೀವಿಯು ನಿರಂತರವಾಗಿ ಒಂದು ವ್ಯಕ್ತಿಗತ ಆತ್ಮ. ಆಧ್ಯಾತ್ಮಿಕ ಸಮಗ್ರತೆಯೊಡನೆ ಒಂದಾಗಲು ಬಯಸಿದರೆ ಆತನು ತನ್ನ ನಿಜಸ್ವರೂಪದ, ನಿತ್ಯವಾದ ಮತ್ತು ಗ್ರಹಿಸಬಹುದಾದ ಅಂಶಗಳ ಸಾಕ್ಷಾತ್ಕಾರವನ್ನು ಸಾಧಿಸಬಹುದು. ಆದರೆ ಆನಂದ ಭಾಗದ ಸಾಕ್ಷಾತ್ಕಾರ ಆಗುವುದಿಲ್ಲ. ಜ್ಞಾನಯೋಗದಲ್ಲಿ ಪ್ರಗಲ್ಪ ಪಾಂಡಿತ್ಯವನ್ನು ಪಡೆದ ಅಂತಹ ಅಧ್ಯಾತ್ಮವಾದಿಯು ಭಕ್ತನೊಬ್ಬನ ಕೃಪೆಯಿಂದ ಭಕ್ತಿಯೋಗದ ಬಿಂದುವನ್ನು ಮುಟ್ಟಬಹುದು. ಅಂತಹ ಕಾಲದಲ್ಲಿ ನಿರಾಕಾರತ್ವದ ದೀರ್ಘಸಾಧನೆಯು ತೊಂದರೆಗೆ ಒಂದು ಕಾರಣವಾಗಬಹುದು. ಏಕೆಂದರೆ ಆತ್ಮನು ಆ ವಿಚಾರವನ್ನು ಬಿಡಲಾರ. ಆದುದರಿಂದ ದೇಹಧಾರಿಯಾದ ಆತ್ಮನು ಸಾಧನೆಯ ಕಾಲದಲ್ಲಿಯೂ, ಸಾಕ್ಷಾತ್ಕಾರದ ಕಾಲದಲ್ಲಿಯೂ ಅವ್ಯಕ್ತದ ವಿಷಯದಲ್ಲಿ ಯಾವಾಗಲೂ ಕಷ್ಟದಲ್ಲಿರುತ್ತಾನೆ. ಪ್ರತಿಯೊಬ್ಬ ಜೀವಾತ್ಮನೂ ಭಾಗಶಃ ಸ್ವತಂತ್ರನು; ಈ ಅವ್ಯಕ್ತ ಸಾಕ್ಷಾತ್ಕಾರವು ಜೀವಾತ್ಮದ ಆಧ್ಯಾತ್ಮಿಕ ಆನಂದಕ್ಕೆ ವಿರುದ್ಧವಾದದ್ದು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.
ಈ ಪ್ರಕ್ರಿಯೆಯನ್ನು ಆರಿಸಿಕೊಳ್ಳಬಾರದು. ಕೃಷ್ಣಪ್ರಜ್ಞೆಯ ಪ್ರಕ್ರಿಯೆಯೆಂದರೆ ಭಕ್ತಿಸೇವೆಯಲ್ಲಿ ಸಂಪೂರ್ಣವಾಗಿ ತೊಡಗುವುದು. ಪ್ರತಿಯೊಂದು ವ್ಯಕ್ತಿಗತ ಜೀವಾತ್ಮಕ್ಕೂ ಇದೇ ಅತ್ಯುತ್ತಮ ಮಾರ್ಗ. ಈ ಭಕ್ತಿಸೇವೆಯನ್ನು ಅಲಕ್ಷಿಸಲು ಬಯಸಿದರೆ ಮನುಷ್ಯನು ನಾಸ್ತಿಕತೆಗೆ ವಾಲುವ ಅಪಾಯವುಂಟು. ಈ ಶ್ಲೋಕದಲ್ಲಿ ಆಗಲೇ ಹೇಳಿರುವಂತೆ ಅವ್ಯಕ್ತವಾದದ್ದನ್ನು, ಅನೂಹ್ಯವಾದದ್ದನ್ನು ಇಂದ್ರಿಯಗಳು ಬಳಿಸಾರಲಾರವು. ಆದುದರಿಂದ ಅವ್ಯಕ್ತವೂ, ಅನೂಹ್ಯವೂ ಆದದ್ದರಲ್ಲಿ ಗಮನವನ್ನು ಕೇಂದ್ರೀಕರಿಸುವ ಪ್ರಕ್ರಿಯೆಯನ್ನು ಯಾವಾಗಲೂ ಪ್ರೋತ್ಸಾಹಿಸಬಾರದು. ಈ ಯುಗದಲ್ಲಂತೂ ಪ್ರೋತ್ಸಾಹಿಸಲೇ ಬಾರದು. ಹೀಗೆ ಮಾಡಬೇಕೆಂದು ಕೃಷ್ಣನು ಹೇಳುವುದಿಲ್ಲ.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)