ಕೃಷ್ಣ ಪ್ರಜ್ಞೆಯ ಪ್ರಸಾರದಲ್ಲಿ ನಿರತರಾದವರೂ ಕೂಡಾ ಪರಮಾತ್ಮನ ಬಳಿಗೆ ಸಾಗಲು ಸಾಧ್ಯ; ಭಗವದ್ಗೀತೆ
ಪರಿಪುರ್ಣವಾಗಿ ಪರಮಾತ್ಮನ ಬಳಿಗೆ ಸಾಗಲು ಭಕ್ತಿಯೋಗದ ನಿಯಮಗಳನ್ನು ಅಭ್ಯಾಸ ಮಾಡಿಕೊಳ್ಳಬೇಕು. ಆದರೆ ಹಾಗೆ ಮಾಡಲು ಸಾಧ್ಯವಾಗದಿದ್ದವರು ಏನು ಮಾಡಬೇಕು? ಭಗವದ್ಗೀತೆಯ 12ನೇ ಅಧ್ಯಾಯದಲ್ಲಿ ತಿಳಿಯಿರಿ.

ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 10
ಅಭ್ಯಾಸೇsಪ್ಯಸಮರ್ಥೋsಸಿ ಮತ್ಕರ್ಮಪರಮೋ ಭವ |
ಮದರ್ಥಮಪಿ ಕರ್ಮಾಣಿ ಕುರ್ವನ್ ಸಿದ್ದಿಮವಾಪ್ಸ್ಯಸಿ || 10 ||
ಅರ್ಥ: ಭಕ್ತಿಯೋಗದ ನಿಯಮಗಳನ್ನು ಅಭ್ಯಾಸ ಮಾಡಲು ನಿನಗೆ ಸಾಧ್ಯವಾಗದಿದ್ದರೆ ನನಗಾಗಿ ಕೆಲಸ ಮಾಡಲು ಪ್ರಯತ್ನಿಸು. ಏಕೆಂದರೆ ನನಗಾಗಿ ಕೆಲಸ ಮಾಡುವುದರಿಂದಲೂ ನೀನು ಪರಿಪೂರ್ಣಸ್ಥಿತಿಗೆ ಬರುವೆ.
ಭಾವಾರ್ಥ: ಗುರುವಿನ ಮಾರ್ಗದರ್ಶನದಲ್ಲಿ ಭಕ್ತಿಯೋಗದ ನಿಯಂತ್ರಕ ತತ್ವಗಳನ್ನು ಆಚರಿಸಲಾರದವನು ಕೂಡಾ ಪರಮ ಪ್ರಭುವಿಗಾಗಿ ಕೆಲಸ ಮಾಡುವ ಮೂಲಕ ಈ ಪರಿಪೂರ್ಣ ಘಟ್ಟಕ್ಕೆ ಸೆಳೆದುಕೊಳ್ಳಲ್ಪಡಬಹುದು. ಈ ಕೆಲಸವನ್ನು ಮಾಡುವುದು ಹೇಗೆ ಎನ್ನುವುದನ್ನು ಹನ್ನೊಂದನೆಯ ಅಧ್ಯಾಯದ ಐವತ್ತೈದನೆಯ ಶ್ಲೋಕದಲ್ಲಿ ಹೇಳಿದೆ. ಕೃಷ್ಣಪ್ರಜ್ಞೆಯ ಪ್ರಸಾರದ ಪರವಾಗಿರಬೇಕು. ಕೃಷ್ಣಪ್ರಜ್ಞೆಯ ಪ್ರಸಾರದ ಕಾರ್ಯದಲ್ಲಿ ನಿರತರಾಗಿರುವ ಭಕ್ತರು ಎಷ್ಟೋ ಮಂದಿ ಇದ್ದಾರೆ. ಅವರಿಗೆ ಸಹಾಯವು ಅಗತ್ಯ. ಆದುದರಿಂದ ಭಕ್ತಿಯೋಗದ ನಿಯಂತ್ರಕ ತತ್ವಗಳನ್ನು ನೇರವಾಗಿ ಅಭ್ಯಾಸಮಾಡಲಾರದವನೂ ಇಂತಹ ಕಾರ್ಯದಲ್ಲಿ ನೆರವಾಗಬಹುದು. ಎಲ್ಲ ಪ್ರಯತ್ನಕ್ಕೂ ಭೂಮಿ, ಬಂಡವಾಳ, ವ್ಯವಸ್ಥೆ ಮತ್ತು ಶ್ರಮಗಳು ಅಗತ್ಯ.
ವಾಣಿಜ್ಯ ವ್ಯವಹಾರದಲ್ಲಿ ಮನುಷ್ಯನಿಗೆ ವಾಸಿಸಲು ಒಂದು ಸ್ಥಳ, ಬಳಸಲು ಒಂದಿಷ್ಟು ಬಂಡವಾಳ, ಶ್ರಮ ಮತ್ತು ವಿಸ್ತರಿಸಲು ಸಂಘ ಹೇಗೆ ಅಗತ್ಯವೋ ಹಾಗೆಯೇ ಕೃಷ್ಣನ ಸೇವೆಯಲ್ಲಿ ಇವು ಅಗತ್ಯ. ಇರುವ ಒಂದೇ ವ್ಯತ್ಯಾಸ ಎಂದರೆ ಪ್ರಾಪಂಚಿಕತೆಯಲ್ಲಿ ಮನುಷ್ಯನು ಇಂದ್ರಿಯ ತೃಪ್ತಿಗಾಗಿ ಕೆಲಸ ಮಾಡುತ್ತಾನೆ. ಇದೇ ಕೆಲಸವನ್ನು ಕೃಷ್ಣನ ತೃಪ್ತಿಗಾಗಿ ಮಾಡಬಹುದು. ಅದು ಆಧ್ಯಾತ್ಮಿಕ ಚಟುವಟಿಕೆಯಾಗುತ್ತದೆ. ತಕ್ಕಷ್ಟು ಹಣವಿರುವ ಮನುಷ್ಯನು ಕೃಷ್ಣಪ್ರಜ್ಞೆಯ ಪ್ರಸಾರಕ್ಕಾಗಿ ಒಂದು ಕಛೇರಿಯನ್ನು ಕಟ್ಟಬಹುದು ಅಥವಾ ದೇವಸ್ಥಾನವನ್ನು ಕಟ್ಟಬಹುದು ಇಲ್ಲವೇ ಪ್ರಕಟಣೆಗಳಿಗೆ ನೆರವಾಗಬಹುದು. ಹೀಗೆ ನಾನಾ ಕಾರ್ಯಕ್ಷೇತ್ರಗಳಿವೆ. ಯಾವುದಾದರೂ ಒಂದು ಕಾರ್ಯಕ್ಷೇತ್ರದಲ್ಲಿ ಆಸಕ್ತನಾಗಬೇಕು. ಕರ್ಮಫಲವನ್ನು ತ್ಯಾಗ ಮಾಡಲಾರದವನು ಅದರ ಒಂದು ಭಾಗವನ್ನು, ಕೃಷ್ಣಪ್ರಜ್ಞೆಯನ್ನು ಪ್ರಸಾರಮಾಡಲು ತ್ಯಾಗಮಾಡಬಹುದು. ಕೃಷ್ಣಪ್ರಜ್ಞೆಗಾಗಿ ಸ್ವಯಂಪ್ರೇರಣೆಯಿಂದ ಮಾಡುವ ಈ ಕಾರ್ಯವು ಮನುಷ್ಯನು ಭಗವತ್ಪ್ರೇಮದಲ್ಲಿ ಇನ್ನೂ ಮೇಲಿನ ಸ್ಥಿತಿಗೆ ಏರಲು ನೆರವಾಗುತ್ತದೆ. ಇದರಿಂದ ಆತನು ಪರಿಪೂರ್ಣನಾಗುತ್ತಾನೆ.
ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 11
ಅಥೈತದಪ್ಯಶಕ್ತೋSಸಿ ಕರ್ತುಂ ಮದ್ಯೋಗಮಾಶ್ರಿತಃ |
ಸರ್ವಕರ್ಮಫಲತ್ಯಾಗಂ ತತಃ ಕುರು ಯತಾತ್ಮವಾನ್ || 11 ||
ಅರ್ಥ: ನನ್ನ ಪ್ರಜ್ಞೆಯಲ್ಲಿ ಕೆಲಸ ಮಾಡಲು ನಿನಗೆ ಸಾಧ್ಯವಿಲ್ಲದಿದ್ದರೆ ನಿನ್ನ ಎಲ್ಲ ಕರ್ಮಫಲವನ್ನು ತ್ಯಾಗಮಾಡಿ ಆತ್ಮಸ್ಥಿತನಾಗಿರಲು ಪ್ರಯತ್ನಿಸು.
ಭಾವಾರ್ಥ: ಸಾಮಾಜಿಕ, ಕೌಟುಂಬಿಕ ಅಥವಾ ಧಾರ್ಮಿಕ ಕಾರಣಗಳಿಂದಾಗಿ ಅಥವಾ ಬೇರೆ ಅಡ್ಡಿಗಳಿಂದಾಗಿ ಮನುಷ್ಯನಿಗೆ ಕೃಷ್ಣಪ್ರಜ್ಞೆಯ ಚಟುವಟಿಕೆಗಳಲ್ಲಿ ಸಹಾನುಭೂತಿಯನ್ನು ತೋರುವುದಕ್ಕೂ ಸಾಧ್ಯವಾಗದೆ ಹೋಗಬಹುದು. ಕೃಷ್ಣಪ್ರಜ್ಞೆಯ ಕೆಲಸಕಾರ್ಯಗಳಲ್ಲಿ ನೇರವಾಗಿ ಆಸಕ್ತಿಯನ್ನು ತೋರಿದರೆ ಕುಟುಂಬದವರು ಆಕ್ಷೇಪಿಸಬಹುದು ಅಥವಾ ಬೇರೆ ಎಷ್ಟೋ ತೊಂದರೆಗಳಿರಬಹುದು. ಇಂತಹ ಸಮಸ್ಯೆ ಇರುವವನಿಗೆ, ತನ್ನ ಚಟುವಟಿಕೆಗಳಿಂದ ಸಂಗ್ರಹವಾದ ಫಲವನ್ನು ಒಂದು ಒಳ್ಳೆಯ ಕಾರ್ಯಕ್ಕಾಗಿ ತ್ಯಾಗಮಾಡಬೇಕೆಂದು ಬುದ್ದಿವಾದ ಹೇಳಿದೆ. ಇಂತಹ ವಿಧಿಯನ್ನು ವೇದಗಳ ನಿಯಮಗಳಲ್ಲಿ ವರ್ಣಿಸಿದೆ. ಯಜ್ಞಗಳಲ್ಲಿ ಅಥವಾ ವಿಶೇಷ ಪುಣ್ಯಕಾರ್ಯಗಳಲ್ಲಿ ಒಬ್ಬನ ಹಿಂದಿನ ಕರ್ಮದ ಫಲವನ್ನು ಹೇಗೆ ಉಪಯೋಗಿಸಬಹುದು ಎನ್ನುವುದಕ್ಕೆ ವೈದಿಕ ಶಾಸ್ತ್ರಗಳಲ್ಲಿ ಅನೇಕ ವರ್ಣನೆಗಳಿವೆ. ಹೀಗೆ ಮನುಷ್ಯನು ಕ್ರಮೇಣ ಜ್ಞಾನದ ಸ್ಥಿತಿಗೆ ಏರಬಹುದು.
ಕೃಷ್ಣಪ್ರಜ್ಞೆಯ ಕೆಲಸಕಾರ್ಯಗಳಲ್ಲಿ ಆಸಕ್ತಿ ಇಲ್ಲದವನು ಒಂದು ಆಸ್ಪತ್ರೆಗಾಗಿ ಅಥವಾ ಬೇರೆಯಾವುದಾದರೂ ಸಾಮಾಜಿಕ ಸಂಸ್ಥೆಗೆ ದಾನಮಾಡುತ್ತಾನೆ ಎಂಬುದನ್ನು ಕಾಣುತ್ತೇವೆ. ಹೀಗೆ ಮಾಡುವುದರಿಂದ ಅವನು ತನ್ನ ಅತೀವ ಶ್ರಮದ ಫಲಗಳನ್ನು ತ್ಯಾಗಮಾಡುತ್ತಾನೆ. ಅದನ್ನು ಇಲ್ಲಿ ಸಮರ್ಥಿಸಿ ಸಲಹೆಮಾಡಿದೆ. ಏಕೆಂದರೆ ಕರ್ಮಫಲವನ್ನು ತ್ಯಾಗಮಾಡಲು ಅಭ್ಯಾಸ ಮಾಡಿದವನು ಕ್ರಮೇಣ ತನ್ನ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳಲು ಸಮರ್ಥನಾಗುತ್ತಾನೆ. ಆ ಪರಿಶುದ್ಧವಾದ ಮನಸ್ಸಿನ ಸ್ಥಿತಿಯಲ್ಲಿ ಕೃಷ್ಣ ಪ್ರಜ್ಞೆಯನ್ನು ಅರ್ಥಮಾಡಿಕೊಳ್ಳಲು ಸಮರ್ಥನಾಗುತ್ತಾನೆ. ನಿಜ, ಕೃಷ್ಣಪ್ರಜ್ಞೆಯು ಬೇರಾವ ಅನುಭವವನ್ನೂ ಅವಲಂಬಿಸಿಲ್ಲ. ಏಕೆಂದರೆ ಕೃಷ್ಣಪ್ರಜ್ಞೆಯೇ ಮನುಷ್ಯನ ಮನಸ್ಸನ್ನು ಪರಿಶುದ್ಧಗೊಳಿಸಬಲ್ಲದು. ಆದರೆ ಕೃಷ್ಣ ಪ್ರಜ್ಞೆಯನ್ನು ಸ್ವೀಕರಿಸಲು ಬೇರೆ ಅಡ್ಡಿಗಳಿದ್ದಲ್ಲಿ ಮನುಷ್ಯನು ತನ್ನ ಕರ್ಮಗಳ ಫಲವನ್ನು ತ್ಯಾಗಮಾಡಲು ಪ್ರಯತ್ನಿಸಬಹುದು.
ಈ ಕಾರಣಕ್ಕಾಗಿ ಸಾಮಾಜಿಕ ಸೇವೆ, ಸಮುದಾಯ ಸೇವೆ, ರಾಷ್ಟ್ರ ಸೇವೆ, ದೇಶಕ್ಕಾಗಿ ತ್ಯಾಗ ಮೊದಲಾದುವನ್ನು ಒಪ್ಪಿಕೊಳ್ಳಬಹುದು. ಇದರಿಂದ ಮನುಷ್ಯನು ಎಂದಾದರೂ ಒಂದು ದಿನ ಪರಮ ಪ್ರಭುವಿನ ಪರಿಶುದ್ಧ ಭಕ್ತಿಸೇವೆಯ ಘಟ್ಟಕ್ಕೆ ಬರಬಹುದು. ಭಗವದ್ಗೀತೆಯಲ್ಲಿ (18.46) ಯಥಾ ಪ್ರವೃತ್ತಿರ್ ಭೂತಾನಾಮ್ ಎಂದು ಹೇಳಿದೆ – ಎಂದರೆ ಪರಮ ಆದರ್ಶವು ಕೃಷ್ಣನೇ ಎಂದು ತಿಳಿಯದಿದ್ದರೂ ಪರಮ ಆದರ್ಶಕ್ಕಾಗಿ ತ್ಯಾಗ ಮಾಡಲು ಮನುಷ್ಯನು ನಿರ್ಧರಿಸಿದರೆ, ಅವನು ಕೃಷ್ಣನೇ ಪರಮ ಆದರ್ಶ ಎನ್ನುವುದನ್ನು ತ್ಯಾಗಮಾರ್ಗದಿಂದ ಕ್ರಮೇಣ ತಿಳಿದುಕೊಳ್ಳುತ್ತಾನೆ.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)