ಪ್ರಾಪಂಚಿಕ ಲಾಭ, ನಷ್ಟಗಳಿಂದ ದುಃಖಪಡದೇ ಎಲ್ಲಾ ಶುಭ–ಅಶುಭಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಲು ಸಿದ್ಧನಾಗಿರಬೇಕು: ಭಗವದ್ಗೀತೆ
ಪರಮಾತ್ಮನ ನಿಜವಾದ ಭಕ್ತನು ಯಾವಾಗಲೂ ಕೆಟ್ಟ ಸಹವಾಸದಿಂದ ದೂರ ಇರುತ್ತಾನೆ. ಹೊಗಳಿಕೆ, ತೆಗಳಿಕೆಗಳಂತಹ ಮನುಷ್ಯ ಸಹಜ ಸ್ವಭಾವ ಹಾಗೂ ಕೀರ್ತಿ, ಅಪಕೀರ್ತಿ, ಸುಖ ದುಃಖಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾನೆ ಎಂದು ಭಗವದ್ಗೀತೆ ಹೇಳುತ್ತೆ.

ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 17
ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾನ್ಕ್ಷತಿ |
ಶುಭಾಶುಭಪರಿತ್ಯಾಗೀ ಭಕ್ತಿಮಾನ್ ಯಃ ಸ ಮೇ ಪ್ರಿಯಃ || 17 ||
ಅರ್ಥ: ಯಾರು ಹರ್ಷಪಡುವುದಿಲ್ಲವೋ ದುಃಖಪಡುವುದಿಲ್ಲವೋ, ಯಾರು ಶೋಕಿಸುವುದಿಲ್ಲವೋ ಬಯಸುವುದಿಲ್ಲವೋ, ಯಾರು ಶುಭಾಶುಭಗಳನ್ನು ಪರಿತ್ಯಾಗ ಮಾಡುತ್ತಾರೆಯೋ ಅಂತಹ ಭಕ್ತನು ನನಗೆ ಬಹು ಪ್ರಿಯನಾದವನು.
ಭಾವಾರ್ಥ: ಭಕ್ತನಾದವನಿಗೆ ಪ್ರಾಪಂಚಿಕ ಲಾಭದಿಂದ ಹರ್ಷವಿಲ್ಲ; ನಷ್ಟದಿಂದ ದುಃಖವಿಲ್ಲ. ಮಗನನ್ನೋ ಶಿಷ್ಯನನ್ನೋ ಪಡೆಯಬೇಕೆಂಬ ಬಲವಾದ ಆಕಾಂಕ್ಷೆ ಇಲ್ಲ. ಅವರನ್ನು ಪಡೆಯದಿದ್ದರೆ ದುಃಖವಿಲ್ಲ. ತನಗೆ ಪ್ರಿಯವಾದುದನ್ನು ಕಳೆದುಕೊಂಡರೆ ಆತನು ಶೋಕಿಸುವುದಿಲ್ಲ. ಹಾಗೆಯೇ ತಾನು ಬಯಸಿದ್ದನ್ನು ಪಡೆಯದಿದ್ದರೆ ಅವನಿಗೆ ಸಂಕಟವಿಲ್ಲ. ಎಲ್ಲ ಬಗೆಯ ಶುಭಾಶುಭಗಳು, ಪಾಪಕಾರ್ಯಗಳು ಎದುರಾದಾಗ ಅವನು ಅವನ್ನು ಮೀರುತ್ತಾನೆ. ಪರಮ ಪ್ರಭುವಿನ ತೃಪ್ತಿಗಾಗಿ ಅವನು ಎಲ್ಲ ಬಗೆಯ ಅಪಾಯಗಳನ್ನು ಸ್ವೀಕರಿಸಲು ಸಿದ್ದನಾಗಿರುತ್ತಾನೆ. ಅವನ ಭಕ್ತಿಸೇವೆಗೆ ಅಡ್ಡಿ ಎನ್ನುವುದೇ ಇಲ್ಲ. ಇಂತಹ ಭಕ್ತನು ಕೃಷ್ಣನಿಗೆ ಬಹು ಪ್ರಿಯನಾದವನು.
ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 18
ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋಃ |
ಶೀತೋಷ್ಣಸುಖದುಃಖೇಷು ಸಮಃ ಸಣ್ಣ ವಿವರ್ಜಿತಃ || 18 ||
ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 19
ತುಲ್ಯನಿನ್ದಾಸ್ತುತಿರ್ಮೌನೀ ಸನ್ತುಷ್ಟೋ ಯೇನ ಕೇನಚಿತ್ |
ಅನಿಕೇತಃ ಸ್ಥಿರಮತಿರ್ಭಕ್ತಿಮಾನ್ಮೇ ಪ್ರಿಯೋ ನರಃ || 19 ||
ಅರ್ಥ: ಮಿತ್ರರು ಶತ್ರುಗಳ ವಿಷಯದಲ್ಲಿ ಒಂದೇ ರೀತಿ ಇರುವವನೂ, ಮಾನಾಪಮಾನಗಳಲ್ಲಿ, ಶೀತೋಷ್ಣಗಳಲ್ಲಿ, ಕೀರ್ತಿ ಅಪಕೀರ್ತಿಗಳಲ್ಲಿ ಸಮಚಿತ್ತನಾಗಿರುವವನೂ, ಕಲ್ಮಷವನ್ನುಂಟುಮಾಡುವ ಎಲ್ಲ ಸಹವಾಸಗಳಿಂದ ಮುಕ್ತನೂ, ಸದಾ ಮೌನಿಯಾಗಿದ್ದು ಅಲ್ಪ ತೃಪ್ತನೂ, ವಾಸಸ್ಥಳದಲ್ಲಿ ಆಸಕ್ತಿ ಇಲ್ಲದವನೂ, ಸ್ಥಿರಮತಿಯೂ, ಭಕ್ತಿಸೇವೆಯಲ್ಲಿ ನಿರತನೂ ಆದವನು ನನಗೆ ಬಹು ಪ್ರಿಯನಾದವನು.
ಭಾವಾರ್ಥ: ಭಕ್ತನು ಯಾವಾಗಲೂ ಕೆಟ್ಟ ಸಹವಾಸದಿಂದ ದೂರ ಇರುತ್ತಾನೆ. ಒಮ್ಮೊಮ್ಮೆ ಜನ ಹೊಗಳುತ್ತಾರೆ; ಒಮ್ಮೊಮ್ಮೆ ತೆಗಳುತ್ತಾರೆ. ಮನುಷ್ಯ ಸಹಜದ ಸ್ವಭಾವವೇ ಹಾಗೆ. ಆದರೆ ಭಕ್ತನು ಯಾವಾಗಲೂ ಕೃತಕವಾದ ಕೀರ್ತಿ ಅಪಕೀರ್ತಿ, ಸುಖದುಃಖಗಳನ್ನು ಮೀರಿರುತ್ತಾನೆ. ಅವನಿಗೆ ಬಹು ತಾಳ್ಮೆ. ಆತನು ಕೃಷ್ಣನಿಗೆ ಸಂಬಂಧಿಸಿದ ವಿಷಯಗಳನ್ನು ಬಿಟ್ಟು ಬೇರೇನೂ ಮಾತನಾಡುವುದಿಲ್ಲ; ಆದುದರಿಂದ ಅವನನ್ನು ಮೌನಿ ಎಂದು ಕರೆದಿದೆ. ಮೌನಿ ಎಂದರೆ ಮನುಷ್ಯ ಮಾತನಾಡಲೇಬಾರದು ಎಂದು ಅರ್ಥವಲ್ಲ; ಮೌನಿ ಎಂದರೆ ಮನುಷ್ಯ ಅಸಂಬದ್ದವಾಗಿ ಮಾತನಾಡಬಾರದು ಎಂದು ಅರ್ಥ. ಮುಖ್ಯವಾದ ಸಂಗತಿಗಳನ್ನು ಕುರಿತು ಮಾತ್ರ ಮಾತನಾಡಬೇಕು; ಭಕ್ತನ ಬಹು ಮುಖ್ಯ ಮಾತೆಂದರೆ ಪರಮ ಪ್ರಭುವಿಗಾಗಿ. ಎಲ್ಲ ಸ್ಥಿತಿಗಳಲ್ಲಿಯೂ ಭಕ್ತನು ಸಂತೋಷವಾಗಿರುತ್ತಾನೆ.
ಒಮ್ಮೆ ಬಹು ರುಚಿಯಾದ ಭಕ್ಷ್ಯಗಳು ದೊರೆಯಬಹುದು; ಒಮ್ಮೊಮ್ಮೆ ದೊರೆಯದೆ ಹೋಗಬಹುದು. ಆದರೆ ಅವನು ತೃಪ್ತನೇ. ವಾಸಸ್ಥಳದ ವಿಷಯಕ್ಕೆ ಆತ ಗಮನ ಕೊಡುವುದಿಲ್ಲ. ಕೆಲವೊಮ್ಮೆ ಆತ ಒಂದು ಮರದ ಕೆಳಗೆ ವಾಸಿಸಬಹುದು. ಕೆಲಮೊಮ್ಮೆ ಅರಮನೆಯಂತಹ ಕಟ್ಟಡದಲ್ಲಿ ವಾಸಿಸಬಹುದು; ಅವನಿಗೆ ಎರಡರಲ್ಲಿಯೂ ಆಕರ್ಷಣೆ ಇಲ್ಲ. ಆತನನ್ನು ಸ್ಥಿರ ಎಂದು ಕರೆದಿದೆ. ಏಕೆಂದರೆ ಆತನು ಸಂಕಲ್ಪದಲ್ಲಿ ಮತ್ತು ಜ್ಞಾನದಲ್ಲಿ ನಿಶ್ಚಲ. ಭಕ್ತನ ಅರ್ಹತೆಗಳ ವರ್ಣನೆಯಲ್ಲಿ ಸ್ವಲ್ಪಮಟ್ಟಿನ ಪುನರಾವೃತ್ತಿಯನ್ನು ನಾವು ಕಾಣಬಹುದು. ಆದರೆ ಇದರ ಉದ್ದೇಶ ಭಕ್ತನು ಈ ಎಲ್ಲ ಅರ್ಹತೆಗಳನ್ನು ಪಡೆದುಕೊಳ್ಳಬೇಕೆಂದು ಒತ್ತಿ ಹೇಳುವುದು. ಸರಿಯಾದ ಅರ್ಹತೆಗಳಿಲ್ಲದ ಮನುಷ್ಯನು ಪರಿಶುದ್ಧ ಭಕ್ತನಾಗಲಾರ.
ಹರಾವಭಕ್ತಸ್ಯ ಕುತೋ ಮಹದ್ಗುಣಾಃ ಭಕ್ತನಲ್ಲದವನಿಗೆ ಒಳ್ಳೆಯ ಅರ್ಹತೆ ಇರುವುದಿಲ್ಲ. ಭಕ್ತನೆಂದು ಗುರುತಿಸಲ್ಪಡಬೇಕೆಂದು ಬಯಸುವವನು ಒಳ್ಳೆಯ ಅರ್ಹತೆಗಳನ್ನು ಬೆಳೆಸಿಕೊಳ್ಳಬೇಕು. ಈ ಅರ್ಹತೆಗಳನ್ನು ಗಳಿಸಿಕೊಳ್ಳಲು ಅವನು ಪ್ರತ್ಯೇಕವಾಗಿ ಶ್ರಮಿಸುವುದಿಲ್ಲ; ಆದರೆ ಕೃಷ್ಣ ಪ್ರಜ್ಞೆಯಲ್ಲಿ ನಿರತನಾಗಿರುವುದು ಮತ್ತು ಭಕ್ತಿಸೇವೆ ಇವು ಸಹಜವಾಗಿ ಅವನು ಆ ಅರ್ಹತೆಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತವೆ.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)