Bhagavad Gita: ಕೃಷ್ಣನ ಸೇವೆಯಲ್ಲಿ ನಿರತರಾದವರು ಮಹಾತ್ಮರು; ಪರಮಾತ್ಮನನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಭಗವದ್ಗೀತೆಯ ಈ ಶ್ಲೋಕ ತಿಳಿಯಿರಿ
Bhagavad Gita: ಪರಮಾತ್ಮ ಕೃಷ್ಣನ ಧ್ಯಾನ ಹಾಗೂ ಸೇವೆಯನ್ನು ಮಾಡುವವರು ಯಾರು? ಅದರಿಂದ ಸಿಗುವ ಫಲಗಳೇನು? ಭಗವದ್ಗೀತೆಯ 9ನೇ ಅಧ್ಯಾಯ, ಶ್ಲೋಕ 12 ಮತ್ತು 13 ರಲ್ಲಿ ಪರಮಾತ್ಮನ ಭಕ್ತಿಸೇವೆಯ ಬಗ್ಗೆ ಹೀಗೆ ವಿವರಿಸಲಾಗಿದೆ.

ಅಧ್ಯಾಯ - 9: ರಹಸ್ಯತಮ ಜ್ಞಾನ - ಶ್ಲೋಕ - 12
ಮೋಘಾಶಾ ಮೋಘಕರ್ಮಾಣೋ ಮೋಘಜ್ಞಾನಾ ವಿಚೇತಸಃ |
ರಾಕ್ಷಸೀಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ || 12 ||
ಅರ್ಥ: ಹೀಗೆ ದಿಗ್ಭ್ರಮೆಯಾದವರನ್ನು ರಾಕ್ಷಸೀ ಮತ್ತು ನಾಸ್ತಿಕ ಅಭಿಪ್ರಾಯಗಳು ಆಕರ್ಷಿಸುತ್ತವೆ. ಈ ಭ್ರಾಂತಿಯ ಸ್ಥಿತಿಯಲ್ಲಿ ಅವರ ಮುಕ್ತಿಯ ಭರವಸೆಗಳು, ಅವರ ಫಲಾಪೇಕ್ಷಿತ ಕರ್ಮಗಳು ಮತ್ತು ಅವರ ಜ್ಞಾನ ಸಂಸ್ಕಾರ ಎಲ್ಲ ಸೋತು ಹೋಗುತ್ತವೆ.
ಭಾವಾರ್ಥ: ತಾವು ಕೃಷ್ಣನ ಧ್ಯಾನದಲ್ಲಿದ್ದೇವೆ ಮತ್ತು ಭಕ್ತಿಸೇವೆಯಲ್ಲಿ ತೊಡಗಿದ್ದೇವೆ ಎಂದು ಭಾವಿಸಿಕೊಳ್ಳುವ ಅನೇಕ ಭಕ್ತರು ಪರಮಾತ್ಮ ಕೃಷ್ಣನೇ ಪರಿಪೂರ್ಣವಾದ ಸತ್ಯ ಎಂದು ಸ್ವೀಕರಿಸುವುದಿಲ್ಲ.
ಭಗವಂತನ ಸೇವೆಯಲ್ಲಿಯೇ ನಿರತರಾಗುವುದಿಲ್ಲ. ಹಲವರು ಪುಣ್ಯಕಾರ್ಯಗಳಲ್ಲಿ ತೊಡಗಿಸಿಕೊಂಡು, ಐಹಿಕ ಬಂಧನದಿಂದ ಕಟ್ಟಕಡೆಗೆ ಬಿಡುಗಡೆಯಾಗುತ್ತೇವೆ ಎಂಬ ಭರವಸೆಯ ಫಲಾಪೇಕ್ಷೆಯುಳ್ಳ ಕಾರ್ಯಗಳನ್ನೇ ಮಾಡುತ್ತಾರೆ. ಅವರೂ ಯಶಸ್ವಿಗಳಾಗುವುದಿಲ್ಲ. ಏಕೆಂದರೆ ಅವರು ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನು ತೆಗಳುತ್ತಾರೆ. ಅಂದರೆ ಅವರು ಕೃಷ್ಣನನ್ನು ಅಪಹಾಸ್ಯ ಮಾಡುವವರು ರಾಕ್ಷಸ ಸ್ವಭಾವದವರು ಅಥವಾ ನಾಸ್ತಿಕರು ಆಗಿರುತ್ತಾರೆ. ಭಗವದ್ಗೀತೆಯ ಏಳನೆಯ ಅಧ್ಯಾಯದಲ್ಲಿ ವರ್ಣಿಸಿರುವಂತೆ ಈ ರಾಕ್ಷಸೀ ದುಷ್ಕರ್ಮಿಗಳು ಎಂದಿಗೂ ಕೃಷ್ಣನಿಗೆ ಶರಣಾಗತರಾಗುವುದಿಲ್ಲ.
ಅವರು ಪರಿಪೂರ್ಣ ಸತ್ಯವನ್ನು ಮುಟ್ಟಲು ಊಹಾತ್ಮಕ ಚಿಂತನೆಗಳಲ್ಲಿ ತೊಡಗುತ್ತಾರೆ. ಇದರಿಂದ ಸಾಮಾನ್ಯ ಜೀವಿಯೂ ಕೃಷ್ಣನೂ ಒಂದೇ ಎನ್ನುವ ನಿರ್ಣಯಕ್ಕೆ ಬರುತ್ತಾರೆ. ಇಂತಹ ಸುಳ್ಳು ನಂಬಿಕೆಯಿಂದ ಅವರು ಹೀಗೆ ಯೋಚಿಸುತ್ತಾರೆ. ಪ್ರತಿಯೊಬ್ಬ ಮನುಷ್ಯನ ದೇಹವು ಈಗ ಐಹಿಕ ಪ್ರಕೃತಿಯು ಮುಚ್ಚಿದೆ. ಮನುಷ್ಯನು ಈ ಐಹಿಕ ದೇಹದಿಂದ ಬಿಡುಗಡೆಯಾಗುತ್ತಲೇ ದೇವರಿಗೂ ಅವನಿಗೂ ವ್ಯತ್ಯಾಸವೇ ಇಲ್ಲ. ಕೃಷ್ಣನೊಡನೆ ಒಂದಾಗುವ ಈ ಪ್ರಯತ್ನವು ಭ್ರಾಂತಿಯ ದೆಸೆಯಿಂದ ಗೊಂದಲಕ್ಕೆ ಈಡಾಗುತ್ತದೆ. ಇಂತಹ ನಾಸ್ತಿಕ ಮತ್ತು ರಾಕ್ಷಸೀ ಮನಸ್ಸು ಯಾವಾಗಲೂ ನಿರರ್ಥಕ. ಇದೇ ಈ ಶ್ಲೋಕದ ಅರ್ಥ.
ಇಂತಹ ಜನರಿಗೆ ವೇದಾಂತ ಸೂತ್ರ ಮತ್ತು ಉಪನಿಷತ್ತುಗಳಂತಹ ವೈದಿಕ ಸಾಹಿತ್ಯದ ಜ್ಞಾನವು ಸದಾ ಗೊಂದಲವಾಗಿಯೇ ಕಾಣಿಸುತ್ತದೆ. ಆದುದರಿಂದ ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನು ಸಾಮಾನ್ಯ ಮನುಷ್ಯ ಎಂದು ಭಾವಿಸುವುದು ದೊಡ್ಡ ಅಪರಾಧ. ಹೀಗೆ ಮಾಡುವವರಿಗೆ ನಿಶ್ಚಯವಾಗಿಯೂ ಭ್ರಾಂತಿ ಸಂಭವಿಸುತ್ತದೆ. ಏಕೆಂದರೆ ಅವರು ಕೃಷ್ಣನ ನಿತ್ಯ ರೂಪವನ್ನು ಅರ್ಥಮಾಡಿಕೊಳ್ಳಲಾರರು. ಇದನ್ನು ಸ್ಪಷ್ಟವಾಗಿ ಬೃಹದ್ ವಿಷ್ಣು ಸ್ಮೃತಿಯು ಹೇಳಿದೆ.
ಅಧ್ಯಾಯ - 9: ರಹಸ್ಯತಮ ಜ್ಞಾನ - ಶ್ಲೋಕ - 13
ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ |
ಭಜನ್ತ್ಯನನ್ಯಮನಸೋ ಜ್ಞಾತ್ವಾ ಭೂತಾದಿಮವ್ಯಯಮ್ || 13 ||
ಅರ್ಥ: ಪಾರ್ಥನೇ, ಭ್ರಾಂತಿಗೆ ಸಿಲುಕದ ಮಹಾತ್ಮರು ದೈವೀ ಪ್ರಕೃತಿಯ ರಕ್ಷಣೆಯಲ್ಲಿ ಇರುತ್ತಾರೆ. ಅವರಿಗೆ ನಾನು ಮೂಲನೂ ಅವ್ಯಯನೂ ಆದ ದೇವೋತ್ತಮ ಪರಮ ಪುರುಷನು ಎಂದು ಗೊತ್ತು. ಆದುದರಿಂದ ಅವರು ಭಕ್ತಿ ಸೇವೆಯಲ್ಲಿ ಸಂಪೂರ್ಣವಾಗಿ ನಿರತರಾಗಿರುತ್ತಾರೆ.
ಭಾವಾರ್ಥ: ಈ ಶ್ಲೋಕದಲ್ಲಿ ಪರಮಾತ್ಮನನ್ನು ಸ್ಪಷ್ಟವಾಗಿ ವರ್ಣಿಸಲಾಗಿದೆ. ಮಹಾತ್ಮನ ಮೊದಲನೆಯ ಲಕ್ಷಣವೆಂದರೆ ಆತನು ಆಗಲೇ ದೈವೀ ಪ್ರಕೃತಿಯಲ್ಲಿ ನೆಲೆಸಿದ್ದಾನೆ. ಆತನು ಐಹಿಕ ಪ್ರಕೃತಿಯ ನಿಯಂತ್ರಣದಲ್ಲಿ ಇಲ್ಲ. ಪರಮಾತ್ಮ ಶ್ರೀಕೃಷ್ಣನಿಗೆ ಶರಣಾಗತನಾದವನು ಕೂಡಲೇ ಐಹಿಕ ಪ್ರಕೃತಿಯ ನಿಯಂತ್ರಣದಿಂದ ಬಿಡುಗಡೆ ಹೊಂದುತ್ತಾನೆ. ಅದೇ ಅರ್ಹತೆ. ಮನುಷ್ಯನು ತನ್ನ ಆತ್ಮವನ್ನು ಪರಮಾತ್ಮ ಶ್ರೀಕೃಷ್ಣನಿಗೆ ಒಪ್ಪಿಸುತ್ತಲೇ ಆತನು ಐಹಿಕ ಪ್ರಕೃತಿಯ ನಿಯಂತ್ರಣದಿಂದ ಬಿಡುಗಡೆಯಾಗುತ್ತಾನೆ. ಇದು ಜಗತ್ತಿನ ಮೂಲ ಸೂತ್ರ. ಜೀವಿಯು ತಟಸ್ಥ ಶಕ್ತಿಯಾದ್ದರಿಂದ ಐಹಿಕ ಪ್ರಕೃತಿಯ ನಿಯಂತ್ರಣದಿಂದ ಬಿಡುಗಡೆ ಹೊಂದುತ್ತಲೇ ಅವನನ್ನು ಆಧ್ಯಾತ್ಮಿಕ ಪ್ರಕೃತಿಯ ಮಾರ್ಗದರ್ಶನಕ್ಕೆ ಒಳಪಡಿಸಲಾಗುತ್ತದೆ. ಆಧ್ಯಾತ್ಮಿಕ ಪ್ರಕೃತಿಯ ಮಾರ್ಗದರ್ಶನಕ್ಕೆ ದೈವೀಪ್ರಕೃತಿ ಎಂದು ಹೆಸರು. ಆದುದರಿಂದ ದೇವೋತ್ತಮ ಪರಮ ಪುರುಷನಿಗೆ ಶರಣಾಗುವುದರ ಮೂಲಕ ಐಹಿಕ ಬಂಧನದಿಂದ ಮುಕ್ತಿ ಹೊಂದಿದಾಗ ಮನುಷ್ಯನು ಮಹಾತ್ಮ ಹಂತವನ್ನು ಸಾಧಿಸುತ್ತಾನೆ.
ಮಹಾತ್ಮನಾದವನು ಕೃಷ್ಣನನ್ನು ಹೊರತುಪಡಿಸಿ ಯಾವುದಕ್ಕೂ ಗಮನ ಕೊಡುವುದಿಲ್ಲ. ಏಕೆಂದರೆ ಕೃಷ್ಣನು ಮೂಲ ಆದಿಪುರುಷ. ಎಲ್ಲ ಕಾರಣಗಳ ಕಾರಣಿಕರ್ತ ಎಂದು ಅವನ ಬಹಳ ಚೆನ್ನಾಗಿ ತಿಳಿದಿರುತ್ತಾನೆ. ಈ ವಿಷಯದಲ್ಲಿ ಸಂದೇಹವೇ ಇಲ್ಲ. ಇಂತಹ ಮಹಾತ್ಮನು ಇತರ ಪರಿಶುದ್ಧ ಭಕ್ತರಾದ ಮಹಾತ್ಮರ ಸಹವಾಸದಿಂದ ಬೆಳೆಯುತ್ತಾನೆ. ಪರಿಶುದ್ಧ ಭಕ್ತರಿಗೆ ಚತುರ್ಭುಜನಾದ ಮಹಾವಿಷ್ಣುವಿನಂತಹ ಕೃಷ್ಣನ ಇತರ ಸ್ವರೂಪಗಳ ಆಕರ್ಷಣೆಯೇ ಇಲ್ಲ. ಅವರಿಗೆ ಎರಡು ತೋಳುಗಳ ಕೃಷ್ಣನ ರೂಪವೇ ಆಕರ್ಷಕ. ಅವರಿಗೆ ಕೃಷ್ಣನ ಇತರ ರೂಪ ಲಕ್ಷಣಗಳ ಬಗ್ಗೆ ಆಕರ್ಷಣೆಯಿಲ್ಲ; ಯಾವುದೇ ದೇವತೆಯ ಅಥವಾ ಮನುಷ್ಯನ ಯಾವ ರೂಪದಲ್ಲಿಯೂ ಅವರಿಗೆ ಆಸಕ್ತಿಯಿಲ್ಲ. ಕೃಷ್ಣನ ಬಗ್ಗೆ ಯೋಚಿಸುವವರು ಕೃಷ್ಣನನ್ನು ಕುರಿತು ಮಾತ್ರ ಧ್ಯಾನ ಮಾಡುತ್ತಾರೆ. ಅವರು ಸದಾ ಕೃಷ್ಣಪ್ರಜ್ಞೆಯಲ್ಲಿ ಹಾಗೂ ಕೃಷ್ಣನ ಅಚಲ ಸೇವೆಯಲ್ಲಿ ನಿರತರಾಗಿರುತ್ತಾರೆ.
(ಗಮನಿಸಿ: ಈ ಬರಹವು ‘ಗೀತೋಪನಿಷದ್ ಭಗವದ್ಗೀತಾ ಯಥಾರೂಪ’ ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಸಾಮಾನ್ಯ ಮಾಹಿತಿಗಾಗಿ ಪ್ರಕಟಿಸಲಾಗಿದೆ)
