ಯಾವುದು ಜ್ಞಾನ, ಯಾವುದು ಅಜ್ಞಾನ; ಈ ಸತ್ಯದ ಅನ್ವೇಷಣೆಗೆ ಇರುವ ಮಾರ್ಗ ಯಾವುದು –ಭಗವದ್ಗೀತೆ
ಮನುಷ್ಯ, ನಿಜವಾದ ಜ್ಞಾನ ಪಡೆದುಕೊಳ್ಳಲು ಏನು ಮಾಡಬೇಕು? ಯಾವ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಯಾವ ಗುಣಗಳನ್ನು ಬಿಡಬೇಕು. ಭಗವದ್ಗೀತೆ ಅಧ್ಯಾಯ 13 ರಿಂದ ವಿವರವಾಗಿ ತಿಳಿಯಿರಿ.

ಅಧ್ಯಾಯ - 13 : ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ – ಶ್ಲೋಕ - 8–12
ಅಮಾನಿತ್ವಮದಮ್ಭಿತ್ವಮಹಿಂಸಾ ಕ್ಷಾನ್ತಿರಾರ್ಜವಮ್ |
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ || 8 ||
ಇನ್ದ್ರಿಯಾರ್ಥೇಷು ವೈರಾಗ್ಯಮನಹತ್ಕಾರ ಏವ ಚ |
ಜನ್ಮಮೃತ್ಯುಜರಾವ್ಯಾಧಿದುಃಖದೋಷಾನುದರ್ಶನಮ್ || 9 ||
ಅಸಕ್ತಿರನಭಿಷ್ಟಂಗಃ ಪುತ್ರದಾರಗೃಹಾದಿಷು |
ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೋಪಪತ್ತಿಷು || 10 ||
ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ |
ವಿವಿಕ್ತದೇಶಸೇವಿತ್ವಮರತಿರ್ಜನಸಂಸದಿ || 11 ||
ಅಧ್ಯಾತ್ಮ ಜ್ಞಾನನಿತ್ಯತ್ವಂ ತತ್ತ್ವ ಜ್ಞಾನಾರ್ಥದರ್ಶನಮ್ |
ಏತಜ್ಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋsನ್ಯಥಾ || 12 ||
ಅರ್ಥ: ನಮ್ರತೆ; ಜಂಬವಿಲ್ಲದಿರುವುದು; ಅಹಿಂಸೆ; ತಾಳ್ಮೆ; ಸರಳತೆ; ನಿಜವಾದ ಗುರುವಿನ ಬಳಿಗೆ ಹೋಗುವುದು; ಶೌಚ; ಸೂರ್ಯ; ಆತ್ಮಸಂಯಮ; ಇಂದ್ರಿಯ ತೃಪ್ತಿಯ ವಸ್ತುಗಳಲ್ಲಿ ವೈರಾಗ್ಯ; ಅಹಂಕಾರವಿಲ್ಲದಿರುವುದು; ಜನ್ಮ, ಸಾವು, ಮುಪ್ಪು ಮತ್ತು ರೋಗಗಳ ಕೆಡುಕನ್ನು ಗ್ರಹಿಸುವುದು; ಅನಾಸಕ್ತಿ; ಮಕ್ಕಳು, ಹೆಂಡತಿ, ಮನೆ ಮತ್ತಿತರ ವಿಷಯಗಳಲ್ಲಿ ಸಿಕ್ಕಿಕೊಳ್ಳದೆ ಮುಕ್ತವಾಗಿರುವುದು; ಇಷ್ಟಾನಿಷ್ಟಗಳ ಮಧ್ಯೆ ಸಮಚಿತ್ತತೆ; ನನ್ನಲ್ಲಿ ನಿರಂತರವಾದ ಮತ್ತು ಪರಿಶುದ್ಧವಾದ ಭಕ್ತಿ; ಏಕಾಂತ ಪ್ರದೇಶದಲ್ಲಿ ವಾಸಮಾಡುವ ಅಭಿಲಾಷೆ; ಜನಸಮೂಹದಲ್ಲಿ ಆಸಕ್ತಿಯಿಲ್ಲದಿರುವುದು; ಆತ್ಮಸಾಕ್ಷಾತ್ಕಾರದ ಮಹತ್ವವನ್ನು ಒಪ್ಪಿಕೊಳ್ಳುವುದು; ಪರಿಪೂರ್ಣ ಸತ್ಯದ ತತ್ವಜ್ಞಾನಾರ್ಥ ಅನ್ವೇಷಣೆ - ಇವೆಲ್ಲ ಜ್ಞಾನ ಎಂದು ನಾನು ಘೋಷಿಸುತ್ತೇನೆ; ಇದಲ್ಲದೆ ಇರುವುದೆಲ್ಲ ಅಜ್ಞಾನ.
ಭಾವಾರ್ಥ: ಹೆಚ್ಚು ಬುದ್ದಿಯಿಲ್ಲದಿರುವವರು ಜ್ಞಾನದ ಪ್ರಕ್ರಿಯೆಯನ್ನು ಕಾರ್ಯಕ್ಷೇತ್ರದಲ್ಲಿನ ಪರಸ್ಪರ ಕ್ರಿಯೆ ಎಂದು ಕೆಲವೊಮ್ಮೆ ತಪ್ಪಾಗಿ ತಿಳಿದುಕೊಳ್ಳುತ್ತಾರೆ. ವಾಸ್ತವವಾಗಿ ಇದೇ ಜ್ಞಾನದ ನಿಜವಾದ ಪ್ರಕ್ರಿಯೆ. ಈ ಪ್ರಕ್ರಿಯೆಯನ್ನು ಒಪ್ಪಿಕೊಂಡರೆ ಪರಿಪೂರ್ಣ ಸತ್ಯವನ್ನು ಸೇರುವ ಸಾಧ್ಯತೆ ಉಂಟು. ಹಿಂದೆ ವರ್ಣಿಸಿದಂತೆ ಇಪ್ಪತ್ನಾಲ್ಕು ಘಟಕಾಂಶಗಳ ಪರಸ್ಪರ ಪ್ರತಿಕ್ರಿಯೆ ಇದಲ್ಲ. ವಾಸ್ತವವಾಗಿ ಆ ಘಟಕಗಳ ತೊಡಕಿನಿಂದ ಪಾರಾಗುವ ಮಾರ್ಗ ಇದು. ದೇಹವು ಇಪ್ಪತ್ನಾಲ್ಕು ಘಟಕಗಳಿಂದ ಮಾಡಿದ ಕೋಶ; ದೇಹಧಾರಿ ಆತ್ಮವು ದೇಹದಲ್ಲಿ ಸಿಕ್ಕಿಬಿದ್ದಿದೆ. ಇಲ್ಲಿ ವರ್ಣಿಸಿದ ಜ್ಞಾನದ ಪ್ರಕ್ರಿಯೆಯು ಅದರಿಂದ ಹೊರಬರುವ ಮಾರ್ಗ. ಜ್ಞಾನ ಪ್ರಕ್ರಿಯೆಯ ಎಲ್ಲ ವರ್ಣನೆಗಳಲ್ಲಿ ಅತಿಮುಖ್ಯವಾದದ್ದು ಹನ್ನೊಂದನೆಯ ಶ್ಲೋಕದ ಮೊದಲನೆಯ ಪಂಕ್ತಿ ಮಯಿ ಚಾನನ್ಯ ಯೋಗೇನ ಭಕ್ತಿರವ್ಯಭಿಚಾರಿಣೀ – ಜ್ಞಾನದ ಪ್ರಕ್ರಿಯೆಯು ಪ್ರಭುವಿನ ಪರಿಶುದ್ಧ ಭಕ್ತಿಸೇವೆಯಲ್ಲಿ ಮುಕ್ತಾಯವಾಗುತ್ತದೆ. ಆದುದರಿಂದ ಪ್ರಭುವಿನ ದಿವ್ಯಸೇವೆಯ ಬಳಿಸಾರದೆ ಅಥವಾ ಬಳಿಸಾರಲು ಸಾಧ್ಯವಾಗದೆ ಇರುವವನಿಗೆ ಉಳಿದ ಹತ್ತೊಂಬತ್ತು ಅಂಶಗಳು ಲೆಕ್ಕಕ್ಕೆ ಬರುವುದಿಲ್ಲ. ಆದರೆ ಸಂಪೂರ್ಣ ಕೃಷ್ಣಪ್ರಜ್ಞೆಯಲ್ಲಿ ಭಕ್ತಿಸೇವೆಯಲ್ಲಿ ತೊಡಗಿದರೆ ಉಳಿದ ಹತ್ತೊಂಬತ್ತು ಅಂಶಗಳು ಅವನಲ್ಲಿ ತಂತಾವೇ ಬೆಳೆಯುತ್ತವೆ.
ಶ್ರೀಮದ್ಭಾಗವತದಲ್ಲಿ ಹೇಳಿರುವಂತೆ (5.18.12) ಯಸ್ಯಾಸ್ತಿ ಭಕ್ತಿರ್ ಭಗವತಿ ಅಕಿಂಚನಾ ಸರ್ವೈರ್ ಗುಣೈಸ್ತತ್ರ ಸಮಾಸತೇ ಸುರಾಃ ಭಕ್ತಿಸೇವೆಯ ಹಂತವನ್ನು ತಲಪಿದವನಲ್ಲಿ ಜ್ಞಾನದ ಎಲ್ಲ ಸದ್ಗುಣಗಳೂ ಬೆಳೆಯುತ್ತವೆ. ಎಂಟನೆಯ ಶ್ಲೋಕದಲ್ಲಿ ಹೇಳಿರುವಂತೆ ಒಬ್ಬ ಗುರುವನ್ನು ಸ್ವೀಕರಿಸುವ ತತ್ವವು ಬಹುಮುಖ್ಯವಾದದ್ದು. ಭಕ್ತಿಸೇವೆಯನ್ನು ಸ್ವೀಕರಿಸಿದವರಿಗೂ ಸಹ ಇದು ಅತ್ಯಂತ ಮುಖ್ಯ. ಮನುಷ್ಯನು ಯೋಗ್ಯಗುರುವನ್ನು ಸ್ವೀಕರಿಸಿದಾಗ ದಿವ್ಯಜೀವನವು ಪ್ರಾರಂಭವಾಗುತ್ತದೆ. ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನು ಜ್ಞಾನದ ಈ ಪ್ರಕ್ರಿಯೆಯೇ ವಾಸ್ತವವಾದ ಮಾರ್ಗ ಎಂದು ಇಲ್ಲಿ ಸ್ಪಷ್ಟವಾಗಿ ಹೇಳುತ್ತಾನೆ. ಇದರಾಚೆ ಊಹಿಸಿದ್ದೆಲ್ಲ ಅಸಂಬದ್ಧವಾದದ್ದು.
ಇಲ್ಲಿ ರೂಪರೇಖೆ ಪಡೆದಿರುವ ಜ್ಞಾನದ ವಿಷಯ ಹೇಳುವುದಾದರೆ ಅಂಶಗಳ ವಿಷಯಗಳನ್ನು ಹೀಗೆ ವಿಶ್ಲೇಷಿಸಬಹುದು. ನಮ್ರತೆ ಎಂದರೆ ಇತರರಿಂದ ಗೌರವ ಪಡೆಯುವ ತೃಪ್ತಿಗಾಗಿ ಮನುಷ್ಯನು ಕಾತರನಾಗಿರದಿರುವುದು. ಬದುಕಿನ ಐಹಿಕ ಪರಿಕಲ್ಪನೆಯಿಂದಾಗಿ ನಾವು ಇತರರಿಂದ ಗೌರವವನ್ನು ಪಡೆಯಲು ಬಹು ಕಾತರರಾಗಿರುತ್ತೇವೆ. ಆದರೆ ತಾನು ಈ ದೇಹವಲ್ಲ ಎಂದು ತಿಳಿದಿರುವ, ಪರಿಪೂರ್ಣ ಜ್ಞಾನವಿರುವ ಮನುಷ್ಯನ ದೃಷ್ಟಿಯಲ್ಲಿ ಗೌರವವಾಗಲೀ ಅಗೌರವವಾಗಲೀ ಈ ದೇಹಕ್ಕೆ ಸಂಬಂಧಿಸಿದ್ದರೆ ನಿಷ್ಟ್ರಯೋಜಕ. ಈ ಲೌಕಿಕ ಮೋಸಕ್ಕಾಗಿ ಮನುಷ್ಯನು ತವಕಪಡಬಾರದು. ತಮ್ಮ ಧಾರ್ಮಿಕತೆಗಾಗಿ ಕೀರ್ತಿವಂತರಾಗಬೇಕೆಂದು ಜನರಿಗೆ ಬಹು ಕಾತರ. ಇದರ ಪರಿಣಾಮವಾಗಿ ಕೆಲವೊಮ್ಮೆ ನಾವು ಕಾಣುವುದು ಇದು ಧರ್ಮದ ತತ್ವಗಳನ್ನು ಅರ್ಥಮಾಡಿಕೊಳ್ಳದೆ ಕೆಲವೊಮ್ಮೆ ಮನುಷ್ಯನು ವಾಸ್ತವವಾಗಿ ಧಾರ್ಮಿಕ ತತ್ವಗಳನ್ನು ಅನುಸರಿಸದಿರುವ ಯಾವುದೋ ಗುಂಪನ್ನು ಪ್ರವೇಶಿಸುತ್ತಾನೆ. ಅನಂತರ ತಾನೊಬ್ಬ ಧಾರ್ಮಿಕ ಮಾರ್ಗದರ್ಶಿ ಎಂದು ಜಾಹೀರಾತು ಮಾಡಿಕೊಳ್ಳಲು ಬಯಸುತ್ತಾನೆ. ಆಧ್ಯಾತ್ಮಿಕ ವಿಜ್ಞಾನದ ಬಗ್ಗೆ ಹೇಳುವುದಾದರೆ ಮನುಷ್ಯನು ತಾನು ಎಷ್ಟು ದೂರ ಪ್ರಗತಿ ಹೊಂದಿದ್ದೇನೆ ಎಂದು ನೋಡಿಕೊಳ್ಳಲು ಒಂದು ಪರೀಕ್ಷೆಯನ್ನು ಇಟ್ಟುಕೊಳ್ಳಬೇಕು. ಈ ಅಂಶಗಳಿಂದ ಅವನು ತೀರ್ಮಾನಿಸಿಕೊಳ್ಳಬಹುದು.
ಭಗವದ್ಗೀತೆಯ ಪ್ರಕಾರ ಅಹಿಂಸೆ ಎಂದರೇನು
ಅಹಿಂಸೆಯೆಂದರೆ ದೇಹವನ್ನು ಕೊಲ್ಲದಿರುವುದು ಅಥವಾ ನಾಶ ಮಾಡದಿರುವುದು ಎಂದು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ಅಹಿಂಸೆ ಎಂದರೆ ಇತರರಿಗೆ ನೋವನ್ನುಂಟುಮಾಡದಿರುವುದು. ಸಾಮಾನ್ಯವಾಗಿ ಜನರು ಅಜ್ಞಾನದಿಂದ ಬದುಕಿನ ಐಹಿಕ ಪರಿಕಲ್ಪನೆಯಲ್ಲಿ ಸಿಕ್ಕಿಬೀಳುತ್ತಾರೆ ಮತ್ತು ಅವರು ನಿರಂತರವಾಗಿ ಐಹಿಕ ನೋವುಗಳನ್ನು ಅನುಭವಿಸುತ್ತಾರೆ. ಆದುದರಿಂದ ಜನರನ್ನು ಆಧ್ಯಾತ್ಮಿಕ ಜ್ಞಾನಕ್ಕೆ ಏರಿಸದಿದ್ದರೆ ಮನುಷ್ಯನು ಹಿಂಸೆಯನ್ನು ಆಚರಿಸುತ್ತಿರುತ್ತಾನೆ. ಜನರಿಗೆ ಜ್ಞಾನೋದಯವಾಗಿ ಅವರು ಈ ಐಹಿಕ ತೊಡಕನ್ನು ಬಿಡಲು ಸಾಧ್ಯವಾಗುವಂತೆ ಅವರಿಗೆ ನಿಜವಾದ ಜ್ಞಾನವನ್ನು ಹಂಚಿಕೊಡಲು ಮನುಷ್ಯನು ಸಾಧ್ಯವಾದಷ್ಟು ಪ್ರಯತ್ನಿಸಬೇಕು. ಇದು ಅಹಿಂಸೆ.
ತಾಳ್ಮೆ ಎಂದರೆ ಅಪಮಾನವನ್ನು ಅಗೌರವವನ್ನು ತಡೆದುಕೊಳ್ಳುವುದನ್ನು ಅಭ್ಯಾಸಮಾಡುವುದು. ಆಧ್ಯಾತ್ಮಿಕ ಜ್ಞಾನದಲ್ಲಿ ಮುಂದುವರಿಯುವುದರಲ್ಲಿ ನಿರತನಾದವನಿಗೆ ಇತರರಿಂದ ಎಷ್ಟೋ ಅಪಮಾನಗಳು ಅಗೌರವವೂ ಆಗುತ್ತದೆ. ಐಹಿಕ ಪ್ರಕೃತಿಯ ರಚನೆಯೇ ಇಂತಹುದು. ಆದುದರಿಂದ ಇದು ನಿರೀಕ್ಷಿಸಬೇಕಾದದ್ದೇ. ಐದೇ ವರ್ಷ ವಯಸ್ಸಿನ ಹುಡುಗ ಪ್ರಹ್ಲಾದನು ಆಧ್ಯಾತ್ಮಿಕ ಜ್ಞಾನವನ್ನು ಬೆಳೆಸಿಕೊಳ್ಳುವುದರಲ್ಲಿ ತೊಡಗಿದ್ದ; ಅವನ ತಂದೆಯು ಅವನ ಭಕ್ತಿಗೆ ವಿರೋಧಿಯಾದಾಗ ಹುಡುಗನಿಗೆ ಅಪಾಯವಾಯಿತು. ಅವನ ತಂದೆಯು ಅವನನ್ನು ಕೊಲ್ಲಲು ಅನೇಕ ರೀತಿಗಳಲ್ಲಿ ಪ್ರಯತ್ನಿಸಿದ. ಆದರೆ ಪ್ರಹ್ಲಾದನು ಅದನ್ನು ಸಹಿಸಿಕೊಂಡ. ಹೀಗೆ ಆಧ್ಯಾತ್ಮಿಕ ಜ್ಞಾನದಲ್ಲಿನ ಪ್ರಗತಿಗೆ ಎಷ್ಟೋ ಅಡ್ಡಿಗಳಿರಬಹುದು. ಆದರೆ ನಾವು ಸಹನೆಯಿಂದಿರಬೇಕು ಮತ್ತು ದೃಢಸಂಕಲ್ಪದಿಂದ ನಮ್ಮ ಪ್ರಗತಿಯನ್ನು ಮುಂದುವರಿಸಬೇಕು.
ಸರಳತೆ ಎಂದರೆ ಮನುಷ್ಯನು ಲೌಕಿಕ ಚಾಣಾಕ್ಷತನವಿಲ್ಲದೆ ಶತ್ರುವಿಗೂ ಸತ್ಯವನ್ನು ಹೇಳಿಬಿಡುವಷ್ಟು ನೇರವಾದ ನಡತೆ. ವ್ಯಕ್ತಿಯು ಗುರುವನ್ನು ಸ್ವೀಕರಿಸುವುದು ಅತ್ಯಗತ್ಯ. ಏಕೆಂದರೆ ಒಬ್ಬ ಸದ್ಗುರುವಿನ ಉಪದೇಶವಿಲ್ಲದೆ ಮನುಷ್ಯನು ಆಧ್ಯಾತ್ಮಿಕ ವಿಜ್ಞಾನದಲ್ಲಿ ಮುಂದುವರಿಯಲಾರ. ಅತ್ಯಂತ ನಮ್ರತೆಯಿಂದ ಗುರುವಿನ ಬಳಿಗೆ ಹೋಗಬೇಕು ಮತ್ತು ಎಲ್ಲ ರೀತಿಗಳಲ್ಲಿ ಅವನ ಸೇವೆಯನ್ನು ಮಾಡಬೇಕು; ಇದರಿಂದ ಆತನು ಶಿಷ್ಯನಿಗೆ ಆಶೀಗ್ವಾದವನ್ನು ಅನುಗ್ರಹಿಸುತ್ತಾನೆ. ಸದ್ಗುರುವು ಕೃಷ್ಣನ ಪ್ರತಿನಿಧಿ. ಆದುದರಿಂದ ಆತನು ಶಿಷ್ಯನಿಗೆ ಅಶೀಗ್ವಾದವನ್ನು ಮಾಡಿದರೆ, ಶಿಷ್ಯನು ನಿಯಂತ್ರಕ ತತ್ವಗಳನ್ನು ಪರಿಪಾಲಿಸದೆಯೇ ಕೂಡಲೇ ಪ್ರಗತಿಯನ್ನು ಸಾಧಿಸುತ್ತಾನೆ. ಅಥವಾ, ಯಾವುದೇ ಹಿಂಜರಿಕೆಯಿಲ್ಲದೆ ಗುರುವಿನ ಸೇವೆ ಮಾಡಿದವನಿಗೆ ನಿಯಂತ್ರಕ ತತ್ವಗಳು ಇನ್ನೂ ಸುಲಭವಾಗುತ್ತವೆ.
ಆಧ್ಯಾತ್ಮಿಕ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಶುಚಿತ್ವವು ಅಗತ್ಯ. ಶುಚಿತ್ವದಲ್ಲಿ ಎರಡು ಬಗೆಗಳು ಬಹಿರಂಗ ಮತ್ತು ಅಂತರಂಗ, ಬಹಿರಂಗ ಶುಚಿತ್ವ ಎಂದರೆ ಸ್ನಾನ ಮಾಡುವುದು. ಆದರೆ ಅಂತರಂಗ ಶುಚಿತ್ವಕ್ಕೆ ಮನುಷ್ಯನು ಸದಾ ಕೃಷ್ಣನನ್ನು ಕುರಿತು ಚಿಂತಿಸಬೇಕು ಮತ್ತು ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಎಂದು ಸಂಕೀರ್ತನೆ ಮಾಡಬೇಕು. ಇದು ಸಂಚಿತವಾದ ಹಿಂದಿನ ಕರ್ಮವನ್ನು ಮನಸ್ಸಿನಿಂದ ತೊಡೆದು ಹಾಕಿ ಸ್ವಚ್ಛಗೊಳಿಸುತ್ತದೆ.
ನಿಯಂತ್ರಿಸಲು ಸಾಧ್ಯವಿಲ್ಲದ ಇಂದ್ರಿಯ ನಾಲಿಗೆ
ಧೈರ್ಯವೆಂದರೆ ಮನುಷ್ಯನು ಆಧ್ಯಾತ್ಮಿಕ ಬದುಕಿನಲ್ಲಿ ಮುಂದುವರಿಯಲು ಮಾಡಬೇಕಾದ ದೃಢಮನಸ್ಸು. ದೃಢಮಸ್ಸಿಲ್ಲದೆ ಮನುಷ್ಯನು ವಾಸ್ತವವಾದ ಪ್ರಗತಿಯನ್ನು ಸಾಧಿಸಲಾರ. ಆತ್ಮ ಸಂಯಮವೆಂದರೆ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗುವ ಏನನ್ನೂ ಮನುಷ್ಯನು ಒಪ್ಪಿಕೊಳ್ಳಬಾರದು. ಇದನ್ನು ಅಭ್ಯಾಸಮಾಡಿಕೊಳ್ಳಬೇಕು ಮತ್ತು ಆಧ್ಯಾತ್ಮಿಕ ಪ್ರಗತಿಗೆ ವಿರುದ್ಧವಾದದ್ದು ಏನೇ ಆಗಲಿ ಅದನ್ನು ತಿರಸ್ಕರಿಸಬೇಕು. ಇದು ನಿಜವಾದ ಸನ್ಯಾಸ. ಇಂದ್ರಿಯಗಳ ಬಲ ಎಷ್ಟೆಂದರೆ ಅವು ಯಾವಾಗಲೂ ಇಂದ್ರಿಯತೃಪ್ತಿಗಾಗಿ ಕಾತರವಾಗಿರುತ್ತವೆ. ಅನಗತ್ಯವಾದ ಈ ಬಯಕೆಗಳನ್ನು ತೃಪ್ತಿಪಡಿಸಬಾರದು. ಮನುಷ್ಯನು ಆಧ್ಯಾತ್ಮಿಕ ಬದುಕಿನಲ್ಲಿ ಮುಂದುವರಿಯಲು ತನ್ನ ಕರ್ತವ್ಯವನ್ನು ಮಾಡಲು ಸಾಧ್ಯವಾಗುವಂತೆ ದೇಹವನ್ನು ಯೋಗ್ಯಸ್ಥಿತಿಯಲ್ಲಿಡುವುದರಲ್ಲಿ ಇಂದ್ರಿಯಗಳ ತೃಪ್ತಿಯನ್ನು ಕಂಡುಕೊಳ್ಳಬೇಕು. ಬಹು ಮುಖ್ಯವಾದ ಮತ್ತು ನಿಯಂತ್ರಿಸಲು ಸಾಧ್ಯವಿಲ್ಲದ ಇಂದ್ರಿಯ ನಾಲಿಗೆ. ನಾಲಿಗೆಯನ್ನು ನಿಯಂತ್ರಿಸಲು ಸಾಧ್ಯವಾದರೆ ಉಳಿದ ಇಂದ್ರಿಯಗಳನ್ನು ನಿಯಂತ್ರಿಸುವ ಎಲ್ಲ ಸಾಧ್ಯತೆಯಿರುತ್ತದೆ.
ಮಿಥ್ಯಾಹಂಕಾರ ಎಂದರೆ ಈ ದೇಹವೇ ತಾನು ಎಂದು ಒಪ್ಪಿಕೊಳ್ಳುವುದು. ಮನುಷ್ಯನಿಗೆ ತಾನು ದೇಹವಲ್ಲ ಆತ್ಮ ಎಂದು ಅರ್ಥವಾದಾಗ ನಿಜವಾದ ಅಹಂಭಾವಕ್ಕೆ ಬರುತ್ತಾನೆ. ಅಹಮ್ ಎನ್ನುವುದು ಇದೆ. ಮಿಥ್ಯವಾದ ಅಹಂಭಾವವನ್ನು ಖಂಡಿಸಿದೆ. ನಿಜವಾದ ಅಹಂಭಾವವನ್ನಲ್ಲ.
ಜನನ, ಮರಣ, ಮುಪ್ಪು ಮತ್ತು ರೋಗಗಳನ್ನು ಒಪ್ಪಿಕೊಳ್ಳುವುದರಿಂದ ಆಗುವ ಯಾತನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ವಿವಿಧ ವೇದ ಸಾಹಿತ್ಯದಲ್ಲಿ ಜನನದ ವರ್ಣನೆಗಳಿವೆ. ಇನ್ನೂ ಹುಟ್ಟದಿರುವ ಮಗುವಿನ ಜಗತ್ತು, ತಾಯಿಯ ಗರ್ಭದಲ್ಲಿ ಮಗುವಿನ ವಾಸ, ಅದರ ನೋವು ಎಲ್ಲವನ್ನೂ ಶ್ರೀಮದ್ಭಾಗವತದಲ್ಲಿ ಬಹು ವಿವರವಾಗಿ ವರ್ಣಿಸಿದೆ.
ಕೃಷ್ಣಪ್ರಜ್ಞೆಯಿಂದ ಮನೆಯಲ್ಲಿ ಸಂತೋಷ ವಾತಾವರಣ ತರಲು ಸಾಧ್ಯವಾಗುತ್ತೆ
ಮಕ್ಕಳು, ಹೆಂಡತಿ ಮತ್ತು ಮನೆಗಳ ವಿಷಯದಲ್ಲಿ ಆಸಕ್ತಿ ಇರಬಾರದು ಎಂದರೆ ಅವುಗಳ ವಿಷಯದಲ್ಲಿ ಮನುಷ್ಯನಿಗೆ ಯಾವ ಭಾವನೆಯೂ ಇರಬಾರದು ಎಂದರ್ಥವಲ್ಲ. ಅವುಗಳಲ್ಲಿ ಸಹಜವಾಗಿಯೇ ಪ್ರೀತಿಯುಂಟಾಗುತ್ತದೆ. ಆದರೆ ಆಧ್ಯಾತ್ಮಿಕ ಪ್ರಗತಿಗೆ ಅವು ಅನುಕೂಲಕರವಾಗಿಲ್ಲದಿದ್ದಾಗ ಅವುಗಳಲ್ಲಿ ಆಸಕ್ತಿಯನ್ನಿಟ್ಟುಕೊಂಡಿರಬಾರದು. ಮನೆಯನ್ನು ಸಂತೋಷಕರವಾಗಿ ಮಾಡುವುದಕ್ಕೆ ಅತ್ಯುತ್ತಮ ಪ್ರಕ್ರಿಯೆಯೆಂದರೆ ಕೃಷ್ಣಪ್ರಜ್ಞೆ. ಸಂಪೂರ್ಣ ಕೃಷ್ಣಪ್ರಜ್ಞೆಯಲ್ಲಿರುವಾತನು ತನ್ನ ಮನೆಯನ್ನು ಬಹು ಸುಖಕರವಾಗಿ ಮಾಡಬಲ್ಲ.
ಸುಖ ದುಃಖಗಳು ಐಹಿಕ ಬಾಳಿನಲ್ಲಿ ಹಾಸುಹೊಕ್ಕಾಗಿರುವ ಅಂಶಗಳು. ಭಗವದ್ಗೀತೆಯಲ್ಲಿ ಉಪದೇಶ ಮಾಡಿದಂತೆ ಮನುಷ್ಯನು ಸಹನೆಯನ್ನು ಕಲಿಯಬೇಕು. ಸುಖ ಮತ್ತು ಸಂಕಟಗಳು ಬರುವುದನ್ನೂ ಹೋಗುವುದನ್ನೂ ಮನುಷ್ಯನು ನಿಯಂತ್ರಿಸಲಾರ. ಆದುದರಿಂದ ಪ್ರಾಪಂಚಿಕ ಬದುಕಿನ ರೀತಿಯಲ್ಲಿ ನಿರ್ಲಿಪ್ತನಾಗಿರಬೇಕು ಮತ್ತು ಸುಖದುಃಖಗಳೆರಡರಲ್ಲಿಯೂ ಸಮಚಿತ್ತನಾಗಿರಬೇಕು.
ಆತ್ಮಸಾಕ್ಷಾತ್ಕಾರದ ವಿಷಯ ಹೇಳುವುದಾದರೆ ಭಕ್ತಿಯೋಗವು ವಿಶೇಷವಾಗಿ ಕಾರ್ಯಸಾಧ್ಯವಾದದ್ದು ಎಂದೇ ಸ್ಪಷ್ಟವಾಗಿ ಹೇಳಿದೆ. ಭಕ್ತಿಯ ಪ್ರಶ್ನೆ ಬಂದಾಗ ಪರಮಾತ್ಮ ಮತ್ತು ವ್ಯಕ್ತಿಗತ ಆತ್ಮಗಳ ಸಂಬಂಧವನ್ನು ಪರೀಶೀಲಿಸಬೇಕು. ವ್ಯಕ್ತಿಗತ ಆತ್ಮವೂ ಪರಮಾತ್ಮನೂ ಒಂದಾಗಲು ಸಾಧ್ಯವಿಲ್ಲ. ಭಕ್ತಿ ಪರಿಕಲ್ಪನೆಯಲ್ಲಂತೂ ಸಾಧ್ಯವೇ ಇಲ್ಲ. ಸ್ಪಷ್ಟವಾಗಿ ಹೇಳಿರುವಂತೆ ವ್ಯಕ್ತಿಗತ ಆತ್ಮವು ಪರಮಾತ್ಮನಿಗೆ ಸಲ್ಲಿಸುವ ಸೇವೆ ನಿತ್ಯವಾದದ್ದು, ನಿರಂತರವಾದದ್ದು. ಆದುದರಿಂದ ಭಕ್ತಿಯು ಶಾಶ್ವತವಾದದ್ದು. ಈ ತತ್ವಶಾಸ್ತ್ರದ ದೃಢನಂಬಿಕೆಯಲ್ಲಿ ಮನುಷ್ಯನು ಸ್ಥಿರವಾಗಿರಬೇಕು.
ಯಾರಾದರೂ ದೇವರೊಡನೆ ಸ್ಪರ್ಧೆಹೂಡಿದರೆ ಅಧ್ಯಾತ್ಮಿಕ ಜ್ಞಾನದಲ್ಲಿ ಸೋಲುತ್ತಾರೆ
ನಮ್ರತೆಯ ಅಭ್ಯಾಸದಿಂದ ಪ್ರಾರಂಭಿಸಿ ಪರಮ ಸತ್ಯನಾದ ದೇವೋತ್ತಮ ಪರಮ ಪುರುಷನ ಸಾಕ್ಷಾತ್ಕಾರದವರೆಗೆ ಈ ಪ್ರಕ್ರಿಯೆಯು ನೆಲದ ಅಂತಸ್ತಿನಿಂದ ಪ್ರಾರಂಭಿಸಿ ಮೇಲಿನ ಅಂತಸ್ತಿನವರೆಗೆ ಹೋಗುವ ಮೆಟ್ಟಿಲು ಶ್ರೇಣಿಯಂತೆ. ಈ ಮೆಟ್ಟಿಲುಗಳ ಶ್ರೇಣಿಯಲ್ಲಿ ಮೊದಲನೆಯ, ಎರಡನೆಯ ಅಥವಾ ಮೂರನೆಯ ಅಂತಸ್ತನ್ನು ತಲಪಿದವರಿದ್ದಾರೆ. ಆದರೆ ಅತ್ಯಂತ ಮೇಲಿನ ಅಂತಸ್ತನ್ನು ಮನುಷ್ಯ ಮುಟ್ಟದಿದ್ದರೆ ಆತನು ಜ್ಞಾನದ ಕೆಳಹಂತದಲ್ಲಿಯೇ ಇರುತ್ತಾನೆ; ಕೃಷ್ಣನ ಅರಿವೇ ಈ ಅತ್ಯಂತ ಮೇಲಿನ ಅಂತಸ್ತು. ಯಾರಾದರೂ ದೇವರೊಡನೆ ಸ್ಪರ್ಧೆಹೂಡಿ ಅದೇ ಸಮಯದಲ್ಲಿಯೇ ಆಧ್ಯಾತ್ಮಿಕ ಜ್ಞಾನದಲ್ಲಿ ಮುನ್ನಡೆಯಲು ಬಯಸಿದರೆ ಆತನು ವಿಫಲನಾಗುತ್ತಾನೆ. ನಮ್ರತೆಯಿಲ್ಲದೆ ಅರಿವನ್ನು ಪಡೆಯುವುದು ನಿಜವಾಗಿಯೂ ಸಾಧ್ಯವಿಲ್ಲ ಎಂದು ಹೇಳಿದೆ. ತಾನೇ ದೇವರು ಎಂದು ಬೀಗುವುದು ಅಹಂಕಾರದ ಪರಮಾವಧಿ. ಐಹಿಕ ಪ್ರಕೃತಿಯ ಕಟ್ಟುನಿಟ್ಟಾದ ನಿಯಮಗಳು ಜೀವಿಯನ್ನು ಸದಾ ಒದೆಯುತ್ತಿದ್ದರೂ, ಅವನು ಅಜ್ಞಾನದಿಂದ 'ನಾನೇ ದೇವರು' ಎಂದು ಯೋಚಿಸುತ್ತಾನೆ. ಜ್ಞಾನದ ಪ್ರಾರಂಭವು ಅಮಾನಿತ್ವ, ನಮ್ರತೆ. ಮನುಷ್ಯನು ನಮ್ರನಾಗಿರಬೇಕು ಮತ್ತು ತಾನು ಪರಮ ಪ್ರಭುವಿಗೆ ಅಧೀನ ಎಂದು ತಿಳಿದುಕೊಳ್ಳಬೇಕು. ಪರಮ ಪ್ರಭುವಿಗೆ ವಿರುದ್ಧವಾಗಿ ದಂಗೆ ಎದ್ದರೆ ಮನುಷ್ಯನು ಐಹಿಕ ಪ್ರಕೃತಿಗೆ ಅಧೀನನಾಗುತ್ತಾನೆ. ಈ ಸತ್ಯವನ್ನು ತಿಳಿದುಕೊಂಡು ಅದನ್ನು ದೃಢವಾಗಿ ನಂಬಬೇಕು.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)