ಮನುಷ್ಯನ ದೇಹ ರಚನೆ ಹೇಗಿದೆ, ಯಾವ ವಸ್ತುಗಳಿಂದ ಮಾಡಿದೆ, ಹೇಗೆ ಕೆಲಸ ಮಾಡುತ್ತದೆ, ಯಾರ ನಿಯಂತ್ರಣದಲ್ಲಿದೆ: ಭಗವದ್ಗೀತೆ
ಪರಮಾತ್ಮನಿಂದ ಸೃಷ್ಟಿಸಲ್ಟಟ್ಟ ಜೀವಿಗಳು ಹೇಗೆಲ್ಲಾ ಕಾರ್ಯ ನಿರ್ವಹಿಸುತ್ತವೆ. ಅದರಲ್ಲಾಗುವ ಬದಲಾವಣೆಗಳಿಗೆ ಮೂಲ ಯಾವುದು ಮತ್ತು ಕಾರಣಗಳೇನು? ಭಗವದ್ಗೀತೆಯ ಅಧ್ಯಾಯಗಳಿಂದ ಈ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ಅಧ್ಯಾಯ - 13 : ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ – ಶ್ಲೋಕ - 4
ತತ್ ಕ್ಷೇತ್ರಂ ಯಚ್ಚ ಯಾದೃಕ್ ಚ ಯದ್ವಿಕಾರಿ ಯತಶ್ಚ ಯತ್ |
ಸ ಚ ಯೋ ಯತ್ಪ್ರಭಾವಶ್ಚ ತತ್ ಸಮಾಸೇನ ಮೇ ಶೃಣು || 4 ||
ಅರ್ಥ: ಈ ಕಾರ್ಯಕ್ಷೇತ್ರ ಮತ್ತು ಅದರ ಸ್ವರೂಪ, ಅದರಲ್ಲಿ ಆಗುವ ಬದಲಾವಣೆಗಳು, ಅದು ಹೇಗೆ ಉತ್ಪತ್ತಿಯಾಯಿತು? ಕಾರ್ಯಕ್ಷೇತ್ರವನ್ನು ಬಲ್ಲವನು ಯಾರು ಮತ್ತು ಅವನ ಪ್ರಭಾವಗಳು ಯಾವುವು ಎನ್ನುವುದನ್ನು ಕುರಿತು ನನ್ನ ಸಂಕ್ಷಿಪ್ತವಾದ ವಿವರಣೆಯನ್ನು ಕೇಳು.
ಭಾವಾರ್ಥ: ಕಾರ್ಯಕ್ಷೇತ್ರ ಮತ್ತು ಕಾರ್ಯಕ್ಷೇತ್ರವನ್ನು ತಿಳಿದವನು ಇವುಗಳ ಸಹಜ ಸ್ವರೂಪವನ್ನು ಇಲ್ಲಿ ಪ್ರಭುವು ವರ್ಣಿಸುತ್ತಿದ್ದಾನೆ. ಈ ದೇಹದ ರಚನೆ ಎಂತಹುದು, ಅದನ್ನು ಯಾವ ವಸ್ತುಗಳಿಂದ ಮಾಡಿದೆ, ಯಾರ ನಿಯಂತ್ರಣದಲ್ಲಿ ಈ ದೇಹವು ಕೆಲಸ ಮಾಡುತ್ತಿದೆ, ಬದಲಾವಣೆಗಳು ಹೇಗೆ ಆಗುತ್ತವೆ, ಬದಲಾವಣೆಗಳ ಮೂಲ ಯಾವುದು, ಅವುಗಳ ಕಾರಣಗಳೇನು, ವ್ಯಕ್ತಿಗತ ಆತ್ಮನ ಪರಮಗುರಿ ಯಾವುದು ಮತ್ತು ವ್ಯಕ್ತಿಗತ ಆತ್ಮದ ವಾಸ್ತವಿಕ ರೂಪವೇನು ಇವುಗಳನ್ನು ತಿಳಿದುಕೊಳ್ಳಬೇಕು. ವ್ಯಕ್ತಿಗತ ಆತ್ಮ ಮತ್ತು ಪರಮಾತ್ಮನ ನಡುವಣ ವ್ಯತ್ಯಾಸ, ಅವರ ಭಿನ್ನ ಪ್ರಭಾವಗಳು, ಅವರ ಸುಪ್ತಶಕ್ತಿಗಳು ಇವನ್ನೂ ತಿಳಿದುಕೊಳ್ಳಬೇಕು. ದೇವೋತ್ತಮ ಪರಮ ಪುರುಷನು ಕೊಟ್ಟಿರುವ ವರ್ಣನೆಯಿಂದ ಭಗವದ್ಗೀತೆಯನ್ನು ನೇರವಾಗಿ ಅರ್ಥಮಾಡಿಕೊಳ್ಳಬೇಕು. ಆಗ ಇದೆಲ್ಲ ಸ್ಪಷ್ಟವಾಗುತ್ತದೆ. ಆದರೆ ಪ್ರತಿಯೊಂದು ದೇಹದಲ್ಲಿರುವ ದೇವೋತ್ತಮ ಪರಮ ಪುರುಷನೂ, ಜೀವಿಯೂ ಒಂದೇ ಎಂದು ಭಾವಿಸದಂತೆ ಎಚ್ಚರಿಕೆ ವಹಿಸಬೇಕು. ಇದು ವೀರ್ಯವತ್ತಾದವನನ್ನೂ, ಷಂಡನನ್ನೂ ಒಂದೇ ಎಂದು ಭಾವಿಸಿದಂತೆ ಆಗುತ್ತದೆ.
ಅಧ್ಯಾಯ - 13 : ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ – ಶ್ಲೋಕ - 5
ಋಷಿಭಿರ್ಬಹುಧಾ ಗೀತಂ ಛನ್ದೋಭಿರ್ವಿವಿಧೈಃ ಪೃಥಕ್ |
ಬ್ರಹ್ಮಸೂತ್ರಪದೈಶ್ಚೈವ ಹೇತುಮದ್ಭರ್ವಿನಿಶ್ಚಿತೈಃ || 5 ||
ಅರ್ಥ: ಕ್ಷೇತ್ರ ಮತ್ತು ಕ್ಷೇತ್ರಜ್ಞನ ಜ್ಞಾನವನ್ನು ಅನೇಕ ಋಷಿಗಳು ಬೇರೆ ಬೇರೆ ವೈದಿಕ ಬರೆಹಗಳಲ್ಲಿ ವರ್ಣಿಸಿದ್ದಾರೆ. ವಿಶೇಷವಾಗಿ ವೇದಾಂತಸೂತ್ರದಲ್ಲಿ ಕಾರ್ಯ ಕಾರಣದ ತರ್ಕದೊಂದಿಗೆ ಅದನ್ನು ನಿರೂಪಿಸಿದೆ.
ಭಾವಾರ್ಥ: ಈ ಜ್ಞಾನವನ್ನು ವಿವರಿಸುವುದರಲ್ಲಿ ದೇವೋತ್ತಮ ಪರಮ ಪುರುಷನಾದ ಕೃಷ್ಣನೇ ಅತ್ಯುನ್ನತ ಅಧಿಕಾರಿ. ಆದರೂ ವಿದ್ವಾಂಸರೂ, ಪ್ರಮಾಣಭೂತ ಆಚಾರ್ಯರೂ, ಯಾವಾಗಲೂ ಹಿಂದಿನ ಆಚಾರ್ಯರಿಂದ ಸಾಕ್ಷ್ಯವನ್ನು ಕೊಡುತ್ತಾರೆ. ಆತ್ಮ ಮತ್ತು ಪರಮಾತ್ಮಗಳ ದೈತ – ಅದೈತಗಳನ್ನು ಕುರಿತ ಅತ್ಯಂತ ವಿವಾದಾಸ್ಪದವಾದ ಈ ಅಂಶವನ್ನು, ಪ್ರಮಾಣವೆಂದು ಸ್ವೀಕೃತವಾಗಿರುವ ಶಾಸ್ತ್ರಗ್ರಂಥವಾದ ವೇದಾಂತವನ್ನು ಪ್ರಸ್ತಾಪಿಸಿ ಕೃಷ್ಣನು ವಿವರಿಸುತ್ತಾನೆ. ಮೊದಲು ಆತನು, "ಇದು ಬೇರೆ ಬೇರೆ ಋಷಿಗಳ ಅಭಿಪ್ರಾಯಕ್ಕೆ ಅನುಗುಣವಾಗಿ" ಎಂದು ಹೇಳುತ್ತಾನೆ. ಋಷಿಗಳ ವಿಷಯ ಹೇಳುವುದಾದರೆ, ಸ್ವತಃ ಕೃಷ್ಣನಲ್ಲದೆ, (ವೇದಾಂತಸೂತ್ರವನ್ನು ರಚಿಸಿದ) ವೇದವ್ಯಾಸರು ಒಬ್ಬ ಮಹರ್ಷಿಗಳು; ವೇದಾಂತಸೂತ್ರದಲ್ಲಿ ರೈತವನ್ನು ಪರಿಪೂರ್ಣವಾಗಿ ವಿವರಿಸಿದೆ.
ವ್ಯಾಸದೇವರ ತಂದೆ ಪರಾಶರರೂ ಮಹರ್ಷಿಗಳು, ಅವರು ತಮ್ಮ ಧಾರ್ಮಿಕ ಗ್ರಂಥಗಳ ಅಹಂ ತ್ವಂ ಚ ತಥಾನ್ಯೇ.. ಎಂದಿದ್ದಾರೆ. ನಾವು, ನೀವು, ನಾನು ಮತ್ತು ಬೇರೆ ಬೇರೆ ಜೀವಿಗಳು ಎಲ್ಲರೂ, ಐಹಿಕ ದೇಹಗಳಲ್ಲಿದ್ದರೂ ದಿವ್ಯರು. ಈಗ ನಾವು ನಮ್ಮ ಬೇರೆ ಬೇರೆ ಕರ್ಮಗಳಿಗನುಗುಣವಾಗಿ ತ್ರಿಗುಣಗಳ ಅಧೀನದಲ್ಲಿದ್ದೇವೆ. ಇದರಿಂದ ಕೆಲವರು ಮೇಲಿನ ಮಟ್ಟಗಳಲ್ಲಿ ಇದ್ದಾರೆ; ಕೆಲವರು ಕೆಳಮಟ್ಟದ ಪ್ರಕೃತಿಯಲ್ಲಿದ್ದಾರೆ. ಮೇಲ್ಮಟ್ಟದ ಮತ್ತು ಕೆಳಮಟ್ಟದ ಪ್ರಕೃತಿಗಳಿಗೆ ಅಜ್ಞಾನವೇ ಕಾರಣ. ಇವು ಅಸಂಖ್ಯಾತ ಜೀವಿಗಳಲ್ಲಿ ಪ್ರಕಟವಾಗುತ್ತವೆ. ಆದರೆ ಅಚ್ಯುತನಾದ ಪರಮಾತ್ಮನಿಗೆ ಪ್ರಕೃತಿಯ ಮೂರು ಗುಣಗಳ ಸೋಂಕಿಲ್ಲ. ಅವನು ದಿವ್ಯನಾದವನು. ಹೀಗೆಯೇ ಮೂಲ ವೇದಗಳಲ್ಲಿ ಮುಖ್ಯವಾಗಿ ಕಠ ಉಪನಿಷತ್ತಿನಲ್ಲಿ ಆತ್ಮ, ಪರಮಾತ್ಮ ಮತ್ತು ದೇಹಗಳ ನಡುವೆ ವ್ಯತ್ಯಾಸಗಳನ್ನು ಗುರುತಿಸಿದೆ. ಇದನ್ನೂ ಅನೇಕ ಮಂದಿ ಮಹರ್ಷಿಗಳು ಗುರುತಿಸಿದ್ದಾರೆ. ಇವರಲ್ಲಿ ಪರಾಶರರನ್ನು ಪ್ರಮುಖರೆಂದು ಪರಿಗಣಿಸಲಾಗಿದೆ.
ಛನ್ಧೋಭಿಃ ಎನ್ನುವ ಶಬ್ದವು ವಿವಿಧ ವೇದಸಾಹಿತ್ಯವನ್ನು ಸೂಚಿಸುತ್ತದೆ. ಉದಾಹರಣೆಗೆ, ಯಜುರ್ವೇದದ ಒಂದು ಶಾಖೆಯಾದ ತೈತ್ತಿರೀಯ ಉಪನಿಷತ್ತು ಪ್ರಕೃತಿ, ಜೀವಿ ಮತ್ತು ದೇವೋತ್ತಮ ಪರಮ ಪುರುಷನನ್ನು ವರ್ಣಿಸುತ್ತದೆ.
ವಿಜ್ಞಾನಮಯ ಎಂದು ಯಾವುದಕ್ಕೆ ಕರೆಯಲಾಗುತ್ತೆ
ಮೊದಲೇ ಹೇಳಿದಂತೆ, ಕ್ಷೇತ್ರವು ಇದೆ ಮತ್ತು ಕ್ಷೇತ್ರಜ್ಞರಲ್ಲಿ ಎರಡು ವಿಧಗಳಿವೆ. ಜೀವಿ ಮತ್ತು ಪರಮಾತ್ಮ, ತೈತ್ತಿರೀಯ ಉಪನಿಷತ್ತಿನಲ್ಲಿ ಹೇಳಿದಂತೆ (2.2), ಬ್ರಹ್ಮ ಪುಚ್ಛಂ ಪ್ರತಿಷ್ಠಾ ಪರಮ ಪ್ರಭುವಿನ ಒಂದು ಅಭಿವ್ಯಕ್ತಿಗೆ ಅನ್ನಮಯ, ಬದುಕುವುದಕ್ಕಾಗಿ ಅನ್ನದ ಆಧಾರ, ಎಂದು ಹೆಸರು. ಇದು ಪರಮೋನ್ನತನ ಒಂದು ಐಹಿಕ ಸಾಕ್ಷಾತ್ಕಾರ. ಅನಂತರ, ಪ್ರಾಣಮಯದಲ್ಲಿ, ಪರಮ ಪರಿಪೂರ್ಣ ಸತ್ಯವನ್ನು ಆಹಾರದಲ್ಲಿ ಸಾಕ್ಷಾತ್ಕರಿಸಿಕೊಂಡು, ಪರಮಸತ್ಯವನ್ನು ಜೀವ ಲಕ್ಷಣಗಳಲ್ಲಿ ಅಥವಾ ಜೀವ ರೂಪಗಳಲ್ಲಿ ಸಾಕ್ಷಾತ್ಕರಿಸಿಕೊಳ್ಳಬಹುದು. ಜ್ಞಾನಮಯದಲ್ಲಿ ಸಾಕ್ಷಾತ್ಕಾರವು ಜೀವ ಲಕ್ಷಣಗಳಾಚೆ ಯೋಚನೆ, ಭಾವಾನುಭವ ಮತ್ತು ಸಂಕಲ್ಪಗಳಿಗೆ ವಿಸ್ತರಿಸುತ್ತದೆ. ಅನಂತರ ಬ್ರಹ್ಮನ್ ಸಾಕ್ಷಾತ್ಕಾರ. ಇದಕ್ಕೆ ವಿಜ್ಞಾನಮಯ ಎಂದು ಹೆಸರು. ಈ ಸ್ಥಿತಿಯಲ್ಲಿ ಜೀವಿಯ ಮನಸ್ಸು ಮತ್ತು ಜೀವ ಲಕ್ಷಣಗಳನ್ನು ಜೀವಿಯಿಂದಲೇ ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ.
ಇದರ ಅನಂತರದ ಮತ್ತು ಅತ್ಯುನ್ನತ ಹಂತವು ಆನನ್ದಮಯ. ಇದು ಸಂಪೂರ್ಣ ಆನಂದಮಯ ಸ್ವಭಾವದ ಸಾಕ್ಷಾತ್ಕಾರ. ಹೀಗೆ ಬ್ರಹ್ಮನ್ ಸಾಕ್ಷಾತ್ಕಾರದಲ್ಲಿ ಐದು ಹಂತಗಳಿವೆ. ಇವಕ್ಕೆ ಬ್ರಹ್ಮ ಪುಚ್ಛಮ್ ಎಂದು ಹೆಸರು. ಇವುಗಳಲ್ಲಿ ಮೊದಲ ಮೂರು ಅನ್ನಮಯ, ಪ್ರಾಣಮಯ ಮತ್ತು ಜ್ಞಾನಮಯ ಜೀವಿಗಳ ಕಾರ್ಯಕ್ಷೇತ್ರಗಳನ್ನು ಒಳಗೊಂಡಿರುತ್ತವೆ. ಈ ಎಲ್ಲ ಕಾರ್ಯಕ್ಷೇತ್ರಗಳನ್ನೂ ಪರಮ ಪ್ರಭುವು ಮೀರಿರುತ್ತಾನೆ; ಅವನಿಗೆ ಆನಂದಮಯ ಎಂದು ಹೆಸರು. ವೇದಾಂತಸೂತ್ರವೂ ಪರಮೋನ್ನತನನ್ನು ಆನನ್ದಮಯೋSಭ್ಯಾಸಾತ್ ದೇವೋತ್ತಮ ಪರಮ ಪುರುಷನು ಸ್ವಭಾವತಃ ಆನಂದಮಯನು ಎಂದು ವರ್ಣಿಸುತ್ತದೆ. ಅವನ ದಿವ್ಯಾನಂದವನ್ನು ಅನುಭವಿಸಲು ಆತನು ವಿಜ್ಞಾನಮಯ, ಪ್ರಾಣಮಯ, ಜ್ಞಾನಮಯ ಮತ್ತು ಅನ್ನಮಯಗಳಿಗೆ ವಿಸ್ತರಿಸಿಕೊಳ್ಳುತ್ತಾನೆ. ಕಾರ್ಯಕ್ಷೇತ್ರದಲ್ಲಿ ಜೀವಿಯನ್ನೇ ಭೋ ಎಂದು ಪರಿಗಣಿಸಲಾಗುತ್ತದೆ.
ಆನಂದಮಯನು ಅವನಿಗಿಂತ ಭಿನ್ನ. ಹೀಗೆಂದರೆ, ಜೀವಿಯು ಆನಂದಮಯನಲ್ಲಿ ಹೊಂದಿಕೊಂಡು ಸವಿಯಲು ನಿಶ್ಚಯಿಸಿದರೆ ಅವನು ಪರಿಪೂರ್ಣನಾಗುತ್ತಾನೆ ಎಂದು ಅರ್ಥ. ಪರಮ ಪ್ರಭುವು ಪರಮ ಕ್ಷೇತ್ರಜ್ಞ, ಜೀವಿಯು ಅಧೀನ ಕ್ಷೇತ್ರಜ್ಞ, ಕ್ಷೇತ್ರದ ಸ್ವರೂಪ – ಇವುಗಳ ಯಥಾರ್ಥ ಚಿತ್ರ ಇದು. ಈ ಸತ್ಯವನ್ನು ವೇದಾಂತಸೂತ್ರ ಅಥವಾ ಬ್ರಹ್ಮಸೂತ್ರದಲ್ಲಿ ಹುಡುಕಿಕೊಳ್ಳಬೇಕಾಗುತ್ತದೆ.
ಬ್ರಹ್ಮಸೂತ್ರಗಳನ್ನು ಕಾರ್ಯ ಕಾರಣಕ್ಕೆ ಅನುಗುಣವಾಗಿ ಬಹು ಸೊಗಸಾಗಿ ಜೋಡಿಸಿದೆ ಎಂದು ಇಲ್ಲಿ ಹೇಳಿದೆ. ಕೆಲವು ಸೂತ್ರಗಳು ಹೀಗಿವೆ ನ ವಿಯದ್ ಅಶ್ರುತೇಃ (2.3.2), ನಾತ್ಮಾ ಶ್ರುತೇಃ (2.3.18) ಮತ್ತು ಪರಾತ್ ತು ತಚ್ಛ್ರುತೇಃ (2.3.40) ಮೊದಲನೆಯ ಸೂತ್ರವು ಕಾರ್ಯಕ್ಷೇತ್ರವನ್ನು ಸೂಚಿಸುತ್ತದೆ. ಎರಡನೆಯದು ಜೀವಿಯನ್ನು ಸೂಚಿಸುತ್ತದೆ. ಮೂರನೆಯದು ವಿವಿಧ ಅಸ್ತಿತ್ವಗಳ ಅಭಿವ್ಯಕ್ತಿಗಳಲ್ಲಿ ಪರಮ ಒಳಿತಾದ ಪರಮ ಪ್ರಭುವನ್ನು ಸೂಚಿಸುತ್ತದೆ.
(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)