ನಿರಹಂಕಾರಿ, ಸುಖ ದುಃಖಗಳಲ್ಲಿ ಸಮಚಿತ್ತ, ಕ್ಷಮಾಶೀಲ, ದೃಢಚಿತ್ತ ಹೊಂದಿರುವವನು ಪರಮಾತ್ಮನಿಗೆ ಪ್ರಿಯನು: ಭಗವದ್ಗೀತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿರಹಂಕಾರಿ, ಸುಖ ದುಃಖಗಳಲ್ಲಿ ಸಮಚಿತ್ತ, ಕ್ಷಮಾಶೀಲ, ದೃಢಚಿತ್ತ ಹೊಂದಿರುವವನು ಪರಮಾತ್ಮನಿಗೆ ಪ್ರಿಯನು: ಭಗವದ್ಗೀತೆ

ನಿರಹಂಕಾರಿ, ಸುಖ ದುಃಖಗಳಲ್ಲಿ ಸಮಚಿತ್ತ, ಕ್ಷಮಾಶೀಲ, ದೃಢಚಿತ್ತ ಹೊಂದಿರುವವನು ಪರಮಾತ್ಮನಿಗೆ ಪ್ರಿಯನು: ಭಗವದ್ಗೀತೆ

ಯಾರಿಗೆ ಅಸೂಯೆ ಇಲ್ಲವೋ, ಎಲ್ಲಾ ಜೀವಿಗಳನ್ನು ಸಮಾನವಾಗಿ ಕಾಣುವವನು, ನಿರಹಂಕಾರನು, ಸುಖ ದುಃಖಗಳಲ್ಲಿ ಸಮಚಿತ್ತದಿಂದ ವರ್ತಿಸುವವನು ಪರಮಾತ್ಮನಿಗೆ ಅತ್ಯಂತ ಪ್ರಿಯನು. ಭಗವದ್ಗೀತೆಯಲ್ಲಿನ ಅರ್ಥವನ್ನು ತಿಳಿಯೋಣ.

ಭಗವದ್ಗೀತೆ
ಭಗವದ್ಗೀತೆ

ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 12
ಶ್ರೇಯೋ ಹಿ ಜ್ಞಾನಮಭ್ಯಾಸಾಜ್‌ಜ್ಞಾನಾಧ್ಧ್ಯಾನಂ ವಿಶಿಷ್ಯತೇ |ಧ್ಯಾನಾತ್ಕರ್ಮಫಲತ್ಯಾಗಸ್ತ್ಯಾಗಾಚ್ಛಾಂತಿರನನ್ತರಮ್ || 12 ||

ಅರ್ಥ: ಈ ಅಭ್ಯಾಸವು ನಿನಗೆ ಸಾಧ್ಯವಾಗದೆ ಹೋದರೆ ಜ್ಞಾನಸಾಧನೆಯಲ್ಲಿ ತೊಡಗು. ಆದರೆ ಜ್ಞಾನಕ್ಕಿಂತ ಧ್ಯಾನವು ಉತ್ತಮ, ಧ್ಯಾನಕ್ಕಿಂತ ಕರ್ಮಫಲತ್ಯಾಗವು ಉತ್ತಮ. ಏಕೆಂದರೆ ಇಂತಹ ತ್ಯಾಗದಿಂದ ಮನಶ್ಯಾಂತಿಯನ್ನು ಪಡೆಯಬಹುದು.

ಭಾವಾರ್ಥ: ಹಿಂದಿನ ಶ್ಲೋಕಗಳಲ್ಲಿ ಹೇಳಿದಂತೆ ಭಕ್ತಿಸೇವೆಯಲ್ಲಿ ಎರಡು ವಿಧ. ನಿಯಂತ್ರಕ ತತ್ವಗಳ ರೀತಿ ಒಂದು. ಭಗವತ್ಪ್ರೇಮದಲ್ಲಿ ಪೂರ್ಣ ಆಸಕ್ತಿಯ ಮಾರ್ಗ ಮತ್ತೊಂದು. ಕೃಷ್ಣಪ್ರಜ್ಞೆಯ ತತ್ವಗಳನ್ನು ಅನುಸರಿಸಲು ಸಾಧ್ಯವಾಗದೆ ಹೋದವರು ಜ್ಞಾನವನ್ನು ಬೆಳೆಸಿಕೊಳ್ಳುವುದು ಉತ್ತಮ. ಏಕೆಂದರೆ ಜ್ಞಾನದಿಂದ ಮನುಷ್ಯನು ತನ್ನ ನಿಜವಾದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲ. ಕ್ರಮೇಣ ದೇವೋತ್ತಮ ಪರಮ ಪುರುಷನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮನುಷ್ಯನು ತಾನೇ ಪರಮನು ಎಂಬ ಅರಿವನ್ನು ತಂದುಕೊಡುವ ಪ್ರಕ್ರಿಯೆಗಳಿವೆ. ಭಕ್ತಿಸೇವೆಯಲ್ಲಿ ನಿರತನಾಗಲು ಸಾಧ್ಯವಾಗದೇ ಹೋದವನಿಗೆ ಇಂತಹ ಧ್ಯಾನವೇ ಉತ್ತಮ. ಈ ರೀತಿ ಧ್ಯಾನಮಾಡಲಾರದವನಿಗೆ, ವೇದಸಾಹಿತ್ಯದಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರಿಗೆ ನಿಗದಿಯಾದ ಕರ್ತವ್ಯಗಳನ್ನು ವಿಧಿಸಲಾಗಿದೆ. ಇವನ್ನು ಭಗವದ್ಗೀತೆಯ ಕಡೆಯ ಅಧ್ಯಾಯದಲ್ಲಿ ನಾವು ಕಾಣುತ್ತೇವೆ. ಏನೇ ಆಗಲಿ, ಮನುಷ್ಯನು ಕರ್ಮಫಲವನ್ನು ತ್ಯಾಗಮಾಡಬೇಕು. ಹೀಗೆಂದರೆ ಕರ್ಮಫಲವನ್ನು ಒಂದು ಒಳ್ಳೆಯ ಕಾರ್ಯಕ್ಕಾಗಿ ಬಳಸುವುದು ಎಂದು ಅರ್ಥ.

ಸಾರಾಂಶವೆಂದರೆ, ಅತ್ಯುನ್ನತ ಗುರಿಯಾದ ದೇವೋತ್ತಮ ಪರಮ ಪುರುಷನನ್ನು ಸೇರಲು ಎರಡು ಪ್ರಕ್ರಿಯೆಗಳಿವೆ. ಒಂದು ಪ್ರಕ್ರಿಯೆ, ಕ್ರಮಕ್ರಮವಾದ ಬೆಳವಣಿಗೆ. ಮತ್ತೊಂದು ನೇರವಾದದ್ದು. ಕೃಷ್ಣಪ್ರಜ್ಞೆಯಲ್ಲಿ ಭಕ್ತಿಸೇವೆಯನ್ನು ಮಾಡುವುದು ನೇರ ಮಾರ್ಗ; ಇನ್ನೊಂದು, ತನ್ನ ಕರ್ಮಗಳ ಫಲವನ್ನು ತ್ಯಜಿಸುವುದು. ಆಗ ಮನುಷ್ಯನು ಜ್ಞಾನದ ಹಂತಕ್ಕೆ, ಅನಂತರ ಧ್ಯಾನದ ಹಂತಕ್ಕೆ, ಅನಂತರ ಪರಮಾತ್ಮನ ಅರಿವಿನ ಹಂತಕ್ಕೆ, ಅನಂತರ ದೇವೋತ್ತಮ ಪರಮ ಪುರುಷನ ಹಂತಕ್ಕೆ ಬರಬಹುದು. ಮೆಟ್ಟಲು ಮೆಟ್ಟಲಾಗಿ ಏರುವ ಪ್ರಕ್ರಿಯೆಯನ್ನಾಗಲಿ ನೇರವಾದ ಮಾರ್ಗವನ್ನಾಗಲಿ ಮನುಷ್ಯ ಆರಿಸಿಕೊಳ್ಳಬಹುದು.

ಪ್ರತಿಯೊಬ್ಬರಿಗೂ ನೇರವಾದ ಪ್ರಕ್ರಿಯೆ ಸಾಧ್ಯವಿಲ್ಲ; ಆದುದರಿಂದ ಪರೋಕ್ಷ ಪ್ರಕ್ರಿಯೆಯೂ ಒಳ್ಳೆಯದೇ. ಆದರೆ ಇದನ್ನು ಅರ್ಥಮಾಡಿಕೊಳ್ಳಬೇಕು. ಅರ್ಜುನನು ಆಗಲೇ ಪರಮ ಪ್ರಭುವಿನ ಭಕ್ತಿಸೇವೆಯ ಹಂತದಲ್ಲಿದ್ದಾನೆ. ಆದುದರಿಂದ ಪರೋಕ್ಷ ಪ್ರಕ್ರಿಯೆಯನ್ನು ಅವನಿಗೆ ಸಲಹೆ ಮಾಡುತ್ತಿಲ್ಲ. ಈ ಹಂತದಲ್ಲಿ ಇಲ್ಲದವರಿಗೆ ಪರೋಕ್ಷ ಪ್ರಕ್ರಿಯೆ. ಅವರು ವೈರಾಗ್ಯ, ಜ್ಞಾನ, ಧ್ಯಾನ ಮತ್ತು ಸಾಕ್ಷಾತ್ಕಾರದ ಕ್ರಮಕ್ರಮವಾದ ಪ್ರಕ್ರಿಯೆಯನ್ನು ಅನುಸರಿಸಬೇಕು. ಭಗವದ್ಗೀತೆಗೆ ಸಂಬಂಧಿಸಿದಂತೆ ನೇರಮಾರ್ಗಕ್ಕೆ ಮಹತ್ವವನ್ನು ನೀಡಲಾಗಿದೆ. ನೇರವಾದ ರೀತಿಯನ್ನು ಅನುಸರಿಸಿ ದೇವೋತ್ತಮ ಪರಮ ಪುರುಷನಾದ ಕೃಷ್ಣನಿಗೆ ಶರಣಾಗತರಾಗುವಂತೆ ಪ್ರತಿಯೊಬ್ಬರಿಗೂ ಉಪದೇಶ ಮಾಡಲಾಗಿದೆ.

ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 13
ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ |
ನಿರ್ಮಮೋ ನಿರಹನ್ಕಾರಃ ಸಮದುಃಖಸುಖಃ ಕ್ಷಮೀ || 13 ||

ಅಧ್ಯಾಯ - 12: ಭಕ್ತಿಸೇವೆ – ಶ್ಲೋಕ - 14
ಸನ್ತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ |ಮಯ್ಯರ್ಪಿತಮನೋಬುದ್ಧಿರ್ಯೋಮದ್ಭಕ್ತಃ ಸ ಮೇ ಪ್ರಿಯಃ || 14 ||

ಅರ್ಥ: ಯಾರಿಗೆ ಅಸೂಯೆ ಇಲ್ಲವೋ, ಯಾರು ಎಲ್ಲ ಜೀವಿಗಳಿಗೆ ಸ್ನೇಹಿತನೋ, ತಾನು ಒಡೆಯನೆಂಬ ಭಾವನೆ ಇಲ್ಲದೆ ನಿರಹಂಕಾರನೋ, ಸುಖ ದುಃಖಗಳಲ್ಲಿ ಸಮಚಿತ್ತನೋ, ಕ್ಷಮಾಶೀಲನೋ, ಸದಾತೃಪ್ತನೋ, ಸಂತುಷ್ಟನೋ, ಆತ್ಮಸಂಯಮಿಯೋ, ದೃಢಚಿತ್ತದಿಂದ ಭಕ್ತಿಸೇವೆಯಲ್ಲಿ ನಿರತನೋ, ತನ್ನ ಮನಸ್ಸನ್ನೂ ಬುದ್ದಿಯನ್ನೂ ನನ್ನಲ್ಲಿ ನಿಲ್ಲಿಸಿರುವನೋ ಅಂತಹ ಭಕ್ತನು ನನಗೆ ಬಹಳ ಪ್ರಿಯನಾದವನು.

ಭಾವಾರ್ಥ: ಶುದ್ಧ ಭಕ್ತಿಸೇವೆಯ ವಿಷಯಕ್ಕೆ ಮತ್ತೆ ಬಂದು ಪ್ರಭುವು ಈ ಎರಡು ಶ್ಲೋಕಗಳಲ್ಲಿ ಪರಿಶುದ್ಧ ಭಕ್ತನ ಆಧ್ಯಾತ್ಮಿಕ ಅರ್ಹತೆಗಳನ್ನು ವರ್ಣಿಸುತ್ತಿದ್ದಾನೆ. ಪರಿಶುದ್ಧ ಭಕ್ತನು ಯಾವುದೇ ಸನ್ನಿವೇಶದಲ್ಲಿ ಪ್ರಕ್ಷುಬ್ಧನಾಗುವುದಿಲ್ಲ. ಅವನಿಗೆ ಯಾರ ವಿಷಯದಲ್ಲಿಯೂ ಅಸೂಯೆ ಇಲ್ಲ. ಅವನು ತನ್ನ ಶತ್ರುವಿನ ಶತ್ರುವೂ ಅಲ್ಲ; "ನನ್ನ ಹಿಂದಿನ ಪಾಪಗಳಿಂದಲೇ ಈ ಮನುಷ್ಯನು ನನ್ನ ಶತ್ರುವಾಗಿ ನಡೆದುಕೊಳ್ಳುತ್ತಾನೆ. ಆದುದರಿಂದ ಪ್ರತಿಭಟಿಸುವುದಕ್ಕಿಂತ ಅನುಭವಿಸುವುದೇ ಉತ್ತಮ" ಎಂದು ಯೋಚಿಸುತ್ತಾನೆ. ಶ್ರೀಮದ್ಭಾಗವತದಲ್ಲಿ, (10.14.8) ಹೀಗೆ ಹೇಳಿದೆ ತತ್ ತೇನುಕಂಪಾಂ ಸುಸಮೀಕ್ಷಮಾಣೋ ಭುಂಜಾನ ಏವಾತ್ಮಕೃತಂ ವಿಪಾಕಮ್ ಭಕ್ತನು ಸಂಕಟದಲ್ಲಿ ಅಥವಾ ಕಷ್ಟದಲ್ಲಿ ಇರುವಾಗಲೆಲ್ಲ ಅದು ತನ್ನ ಮೇಲೆ ಭಗವಂತನ ಕರುಣೆ ಎಂದು ಭಾವಿಸುತ್ತಾನೆ.

''ನಾನು ಹಿಂದೆ ಮಾಡಿದ ಪಾಪಕರ್ಮಗಳ ದೆಸೆಯಿಂದ ಈಗ ಅನುಭವಿಸುತ್ತಿರುವುದಕ್ಕಿಂತ ಇನ್ನೂ ಬಹುವಾಗಿ ನಾನು ಸಂಕಟಪಡಬೇಕು. ನನಗೆ ಆಗಬೇಕಾದ ಶಿಕ್ಷೆ ಎಲ್ಲ ಆಗದಿರುವುದಕ್ಕೆ ಪರಮ ಪ್ರಭುವಿನ ಕರುಣೆಯೇ ಕಾರಣ. ದೇವೋತ್ತಮ ಪರಮ ಪುರುಷನ ದಯೆಯಿಂದ ನನಗೆ ಸ್ವಲ್ಪ ಮಾತ್ರ ಶಿಕ್ಷೆಯಾಗಿದೆ" ಎಂದು ಯೋಚಿಸುತ್ತಾನೆ. ಆದುದರಿಂದ ಎಷ್ಟೇ ಸಂಕಟಮಯ ಸನ್ನಿವೇಶದಲ್ಲಿಯೂ ಅವನು ಶಾಂತನಾಗಿ, ನಿಶ್ಚಿಂತನಾಗಿ, ತಾಳ್ಮೆಯಿಂದ ಇರುತ್ತಾನೆ. ಭಕ್ತನು ಎಲ್ಲರ ವಿಷಯದಲ್ಲಿಯೂ ಶತ್ರುವಿನ ವಿಷಯದಲ್ಲಿ ಸಹ ದಯೆಯಿಂದ ನಡೆದುಕೊಳ್ಳುತ್ತಾನೆ. ನಿರ್ಮಮ ಎಂದರೆ ಭಕ್ತನು ದೇಹಕ್ಕೆ ಸಂಬಂಧಿಸಿದ ನೋವು ಮತ್ತು ಕಷ್ಟಗಳಿಗೆ ಹೆಚ್ಚು ಗಮನವನ್ನು ಕೊಡುವುದಿಲ್ಲ. ಇದಕ್ಕೆ ತಾನು ದೇಹವಲ್ಲ ಎಂದು ಅವನಿಗೆ ಸಂಪೂರ್ಣವಾಗಿ ತಿಳಿದಿದೆ ಎಂದರ್ಥ.

ದೇಹದೊಡನೆ ಆತನು ತನ್ನನ್ನು ಗುರುತಿಸಿಕೊಳ್ಳುವುದಿಲ್ಲ; ಆದುದರಿಂದ ಅವನು ಅಹಂಕಾರದ ಕಲ್ಪನೆಯಿಂದ ಮುಕ್ತನಾಗಿರುತ್ತಾನೆ ಮತ್ತು ಸುಖದುಃಖಗಳಲ್ಲಿ ಸಮಚಿತ್ತನಾಗಿರುತ್ತಾನೆ. ಆತನು ಸಹಿಷ್ಣುವಾಗಿರುತ್ತಾನೆ. ಪರಮ ಪ್ರಭುವಿನ ಕೃಪೆಯಿಂದ ಲಭ್ಯವಾದುದರಲ್ಲಿ ತೃಪ್ತಿಪಡೆದುಕೊಂಡಿರುತ್ತಾನೆ. ಬಹು ಕಷ್ಟದಿಂದ ಏನನ್ನಾದರೂ ಸಾಧಿಸಲು ಅವನು ಬಹಳ ಪ್ರಯತ್ನವನ್ನು ಮಾಡುವುದಿಲ್ಲ; ಆದುದರಿಂದ ಅವನು ಯಾವಾಗಲೂ ಸಂತೋಷಚಿತ್ತನಾಗಿರುತ್ತಾನೆ. ಅವನು ಪರಿಪೂರ್ಣಯೋಗಿ. ಏಕೆಂದರೆ ಅವನು ತನ್ನ ಗುರುವು ನೀಡಿದ ಆದೇಶಕ್ಕೆ ನಿಶ್ಚಲವಾಗಿ ನಿಷ್ಠನಾಗಿರುತ್ತಾನೆ, ಮತ್ತು ಅವನಿಗೆ ಇಂದ್ರಿಯ ಸಂಯಮವಿರುವುದರಿಂದ ಅವನು ದೃಢಚಿತ್ತದವನು. ಹುಸಿವಾದಗಳು ಅವನ ಮೇಲೆ ಯಾವುದೇ ಪ್ರಭಾವವನ್ನು ಬೀರಲಾರವು. ಏಕೆಂದರೆ ಭಕ್ತಿಸೇವೆಯ ನಿಶ್ಚಲ ದೃಢತೆಯಿಂದ ಯಾರೂ ಅವನನ್ನು ಕದಲಿಸಲಾರರು.

ಕೃಷ್ಣನೇ ಶಾಶ್ವತ ಪ್ರಭು ಎಂದು ಅವನಿಗೆ ಸಂಪೂರ್ಣ ಅರಿವಿದೆ; ಆದುದರಿಂದ ಯಾರೂ ಅವನ ಮನಸ್ಸನ್ನು ಕಲಕಲಾರರು. ಈ ಎಲ್ಲ ಅರ್ಹತೆಗಳಿಂದ ಅವನಿಗೆ ತನ್ನ ಮನಸ್ಸು ಮತ್ತು ಬುದ್ದಿಗಳೆರಡನ್ನೂ ಸಂಪೂರ್ಣವಾಗಿ ಪರಮ ಪ್ರಭುವಿನಲ್ಲಿ ನಿಲ್ಲಿಸಲು ಸಾಧ್ಯವಾಗುತ್ತದೆ. ಇಂತಹ ಭಕ್ತಿಸೇವೆಯ ಮಟ್ಟ ಬಹು ವಿರಳ ಎನ್ನುವುದು ನಿಜ. ಆದರೆ ಭಕ್ತನು ಭಕ್ತಿಸೇವೆಯ ನಿಯಂತ್ರಕ ತತ್ವಗಳನ್ನು ಅನುಸರಿಸುವುದರಿಂದ ಈ ಹಂತದಲ್ಲಿ ನೆಲೆಗೊಳ್ಳುತ್ತಾನೆ. ಅಲ್ಲದೆ, ಇಂತಹ ಭಕ್ತನು ತನಗೆ ಬಹು ಪ್ರಿಯನಾದವನು ಎಂದು ಪ್ರಭುವು ಹೇಳುತ್ತಾನೆ. ಏಕೆಂದರೆ ಸಂಪೂರ್ಣ ಕೃಷ್ಣಪ್ರಜ್ಞೆಯಲ್ಲಿ ಆತನು ನಡೆಸುವ ಕಾರ್ಯಗಳಿಂದ ಪ್ರಭುವು ಯಾವಾಗಲೂ ಸುಪ್ರೀತನಾಗುತ್ತಾನೆ.

(ಗಮನಿಸಿ: ಈ ಬರಹವು 'ಗೀತೋಪನಿಷದ್ ಭಗವದ್ಗೀತಾ ಯಥಾರೂಪ' ಪುಸ್ತಕದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸಮಕಾಲೀನ ವಿಚಾರಗಳಿಗೆ ಅನ್ವಯಿಸಲು ಅರ್ಥದಲ್ಲಿ ತುಸು ವಿವರ ನೀಡಲಾಗಿದೆ. ಸಂದಿಗ್ಧ ಬಂದರೆ ಓದುಗರು ಮೂಲ ಪುಸ್ತಕವನ್ನೇ ಆಧರಿಸಿ, ಅನ್ವಯಿಸಿಕೊಳ್ಳಬೇಕು.)

HT Kannada Desk

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.