ಗಾಯತ್ರಿ ಜಯಂತಿ: ವೇದಮಾತೆ ಗಾಯತ್ರಿ ಮಂತ್ರಗಳಿಂದಾಗುವ ಪ್ರಯೋಜನಗಳು ಒಂದೆರಡಲ್ಲ, ಆಸಕ್ತಿಕರ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗಾಯತ್ರಿ ಜಯಂತಿ: ವೇದಮಾತೆ ಗಾಯತ್ರಿ ಮಂತ್ರಗಳಿಂದಾಗುವ ಪ್ರಯೋಜನಗಳು ಒಂದೆರಡಲ್ಲ, ಆಸಕ್ತಿಕರ ಮಾಹಿತಿ ಇಲ್ಲಿದೆ

ಗಾಯತ್ರಿ ಜಯಂತಿ: ವೇದಮಾತೆ ಗಾಯತ್ರಿ ಮಂತ್ರಗಳಿಂದಾಗುವ ಪ್ರಯೋಜನಗಳು ಒಂದೆರಡಲ್ಲ, ಆಸಕ್ತಿಕರ ಮಾಹಿತಿ ಇಲ್ಲಿದೆ

ಗಾಯತ್ರಿ ಮಂತ್ರಗಳನ್ನು ಪಠಿಸುವುದರಿಂದ ಸಂತಾನ ಪ್ರಾಪ್ತಿ ಸೇರಿದಂತೆ ಹಲವು ಪ್ರಯೋಜನಗಳಿವೆ ಎಂಬುದು ಭಕ್ತರ ನಂಬಿಕೆಯಾಗಿದೆ. ಗಾಯತ್ರಿ ಜಯಂತಿ ಹಿನ್ನೆಲೆಯಲ್ಲಿ ಗಾಯತ್ರಿ ಮಂತ್ರಗಳ ಪ್ರಯೋಜನಗಳನ್ನು ತಿಳಿಯೋಣ. (ಬರಹ: ಎಚ್ ಸತೀಶ್, ಜ್ಯೋತಿಷಿ)

ಗಾಯತ್ರಿ ಜಯಂತಿಯನ್ನು 2025ರ ಮೇ 2 ರಂದು ಆಚರಿಸಲಾಗುತ್ತದೆ. ಗಾಯತ್ರಿ ಮಂತ್ರಗಳ ಪ್ರಯೋಜನಗಳನ್ನು ತಿಳಿಯಿರಿ
ಗಾಯತ್ರಿ ಜಯಂತಿಯನ್ನು 2025ರ ಮೇ 2 ರಂದು ಆಚರಿಸಲಾಗುತ್ತದೆ. ಗಾಯತ್ರಿ ಮಂತ್ರಗಳ ಪ್ರಯೋಜನಗಳನ್ನು ತಿಳಿಯಿರಿ

ಆದಿಗುರು ಗಾಯತ್ರಿ ಜಯಂತಿಯನ್ನು 2025 ಮೇ 2 ರಂದು ಆಚರಿಸಲಾಗುತ್ತದೆ. ಗಾಯತ್ರಿಮಾತೆಯನ್ನು ವೇದಮಾತೆ ಎಂದೇ ಕರೆಯಲಾಗುತ್ತದೆ. ಕೇವಲ ಗಾಯಿಂತ್ರಿ ಮಂತ್ರವನ್ನು ಜಪಿಸುವುದರಿಂದ ಜನ್ಮ ಜನ್ಮಾಂತರದ ಪಾಪಕರ್ಮಗಳು ದೂರವಾಗುತ್ತದೆ. ಇಂದಿನ ದಿನಗಳಲ್ಲಿ ಜಾತಿ ಬೇಧವಿಲ್ಲದೆ ಎಲ್ಲರೂ ಈ ಮಂತ್ರವನ್ನು ಜಪಿಸುತ್ತಾರೆ. ಈ ಮಂತ್ರ ಜಪದಿಂದ ಮೊಗದಲ್ಲಿ ಹೊಸ ವರ್ಚಸ್ಸು ಮೂಡುತ್ತದೆ. ಗಾಯತ್ರಿ ಮಂತ್ರವು ಮೊದಲು ಋಗ್ವೇದದಲ್ಲಿ ಕಂಡುಬಂದಿತು ಎಂದು ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಋಗ್ವೇದದಲ್ಲಿ ಪ್ರತಿಯೊಂದು ಮಂತ್ರಗಳಿಗೂ ಛಂದಸ್ಸು ಇರುತ್ತದೆ. ಛಂದಸ್ಸಿನ ಮೂಲಕವೇ ಮಂತ್ರವನ್ನು ಜಪಿಸಬೇಕು. ಇಲ್ಲವಾದಲ್ಲಿ ಯಾವುದೇ ಮಂತ್ರಗಳಿಂದ ನಿರ್ದಿಷ್ಟ ಫಲಗಳನ್ನು ಪಡೆಯಲುಸಾಧ್ಯವಾಗದು. ಗಾಯತ್ರಿ ಛಂದಸ್ಸು 24 ಅಕ್ಷರಗಳಿಂದಾದ ತ್ರಿಪದಿಯಾಗಿದೆ. ಗಾಯತ್ರಿ ಛಂದಸ್ಸಿನಲ್ಲಿ ಬರೆದ ಬೇರೆ ಬೇರೆ ದೇವಾನು ದೇವತೆಗಳ ಮಂತ್ರವನ್ನು ಆಯಾ ದೇವರ ಗಾಯತ್ರಿ ಮಂತ್ರ ಎಂದೇ ಕರೆಯಲಾಗುತ್ತದೆ. ವೇದಮಾತೆಯಾದ ಗಾಯತ್ರಿಯನ್ನು ವೇದಮಾತೆ ಮತ್ತು ಸರಸ್ವತಿ ಮಾತೆಯ ಮತ್ತೊಂದು ಸ್ವರೂಪ ಎಂದು ಕರೆಯಲಾಗುತ್ತದೆ.

ಗಾಯತ್ರಿ ಛಂದಸ್ಸಿನಲ್ಲಿ ಪ್ರತಿಸಾಲಿಗೆ 8 ಅಕ್ಷರದಂತೆ ಒಟ್ಟು 24 ಅಕ್ಷರಗಳಿವೆ. ಇದು ತ್ರಿಪದಿ ರೂಪದಲ್ಲಿ ಇವೆ. ಋಗ್ವೇದದ ಬಹುತೇಕ ಶ್ಲೋಕಗಳು ಇದೇ ಛಂದಸ್ಸಿನಲ್ಲಿ ನಮಗೆ ದೊರೆಯುತ್ತವೆ. ಗಾಯತ್ರಿ ದೇವಿಯನ್ನು ಸಾವಿತ್ರಿ ಎಂದೂ ಕರೆಯಲಾಗುತ್ತದೆ. ಇದರಿಂದಾಗಿ ಗಾಯತ್ರಿ ಮಂತ್ರವನ್ನು ಸಾವಿತ್ರ ಮಂತ್ರ ಎಂದೂ ಕರೆಯುತ್ತಾರೆ. ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲಿ ಇದು ಮೊದಲ ಸ್ಥಾನ ಪಡೆಯುತ್ತದೆ. ಈ ಮಂತ್ರದಲ್ಲಿ ಸವಿತೃ ದೇವನನ್ನು ಆವಾಹನೆ ಮಾಡುತ್ತಾರೆ. ಈ ಕಾರಣದಿಂದ, ಈ ಮಂತ್ರವನ್ನು ಸಾವಿತ್ರ ಮಂತ್ರ ಎಂದು ಕೂಡ ಕರೆಯುತ್ತಾರೆ.

ಗಾಯತ್ರಿ ಮಂತ್ರ ಬ್ರಹ್ಮರ್ಷಿ ವಿಶ್ವಾಮಿತ್ರರು ರಚಿಸಿದರೆಂದು ಕೆಲವೊಂದು ಧಾರ್ಮಿಕ ಗ್ರಂಥಗಳಿಂದ ತಿಳಿಯಬಹುದು. ಆದರೆ ಗಾಯತ್ರಿ ಮಂತ್ರ ಇರುವ ಋಗ್ವೇದವೂ ಸೇರಿದಂತೆ, ವೇದಗಳೆಲ್ಲ ಬ್ರಹ್ಮನಿಂದ ಸೃಷ್ಟಿಯಾದವು ಎಂಬುದರ ಬಗ್ಗೆ ಪ್ರರಾಣ ಕಥೆಯೂ ನಮಗೆ ಲಭ್ಯವಿದೆ. ಈ ವೇದಗಳನ್ನು ರಾಕ್ಷಸರು ಅಪಹರಿಸಿದಾಗ ಹಯಗ್ರೀವರು ಯುದ್ದಮಾಡಿ ಮತ್ತೊಮ್ಮೆ ಈ ವೇದಗಳನ್ನು ಬ್ರಹ್ಮದೇವನಿಗೆ ಮರಳಿಸುತ್ತಾರೆ. ಆದ್ದರಿಂದ ವೇದಾಧ್ಯಯನಕ್ಕೆ ಹಯಗ್ರೀವರ ಆರಾಧನೆಯೂ ಮುಖ್ಯವಾಗುತ್ತದೆ. ಕೇವಲ ಬ್ರಾಹ್ಮಣರಲ್ಲದೆ ಇತರೆ ಸಮುದಾಯದವರೂ ಗಾಯತ್ರಿಯನ್ನು ಆರಾಧಿಸುತ್ತಾರೆ.

ದಶಮಿ ಮತ್ತು ಪಂಚಮಿ ತಿಥಿಗಳು ಗಾಯತ್ರಿ ಮಂತ್ರೋಪದೇಶಕ್ಕೆ ಸೂಕ್ತ

ಕೇವಲ ಉಪನಯನ ಸಂಸ್ಕಾರದಿಂದ ಮಾತ್ರ ವಟುವಿಗೆ ಗಾಯತ್ರಿ ಮಂತ್ರವನ್ನು ಕಲಿಯುವ ಅಧಿಕಾರ ದೊರೆಯುತ್ತದೆ. ಇದನ್ನು ತಂದೆಯು ಉಪದೇಶಿಸುವುದು ನಮ್ಮ ಸಂಪ್ರದಾಯವಾಗಿದೆ. ಕೆಲವು ಪಂಗಡಗಳಲ್ಲಿ ಪುರೋಹಿತರು ಗಾಯಿತ್ರಿಮಂತ್ರವನ್ನು ಬೋಧಿಸುತ್ತಾರೆ. ಬ್ರಹ್ಮೋಪದೇಶ ರೂಪವಾದ ಈ ಮಂತ್ರದಿಂದ ಶುಭ ಮತ್ತು ಅಶುಭ ಕಾರ್ಯಗಳನ್ನು ನೆರವೇರಿಸುವ ಅಧಿಕಾರ ಪ್ರಾಪ್ತಿಯಾಗುತ್ತದೆ. ದಶಮಿ ಮತ್ತು ಪಂಚಮಿ ತಿಥಿಗಳು ಗಾಯತ್ರಿ ಮಂತ್ರೋಪದೇಶಕ್ಕೆ ಸೂಕ್ತ ಎಂದು ತಿಳಿದುಬರುತ್ತದೆ. ಧಾರ್ಮಿಕ ಗ್ರಂಥಗಳಲ್ಲಿ ತಿಳಿಸಿರುವಂತೆ ಗಾಯತ್ರಿ ಸಕಲ ವೇದಗಳ ಸಾರವಾದುದು, ಪರಬ್ರಹ್ಮ ಸ್ವರೂಪವುಳ್ಳದ್ದು. ಓಂಕಾರಪೂರ್ವಕ ಸಂಧ್ಯಾಕಾಲಗಳಲ್ಲಿ ವೇದಮಾತೃವಾದ ಈ ಮಂತ್ರವನ್ನು ಜಪಿಸುವುದರಿಂದ ವೇದಪಠನ ಪುಣ್ಯ ಲಭಿಸುತ್ತದೆ, ಮಹಾಪಾತಕಗಳು ನಶಿಸುತ್ತವೆ.

ಭೂತ ಪ್ರೇತಗಳ ಉಪಟಳದಿಂದಲೂ ಪಾರಗಲು ಗಾಯತ್ರಿ ಮಂತ್ರ ಜಪ

ವೇದಗಳ ಕಾಲದಿಂದಲೂ ಗಾಯತ್ರಿ ಮಂತ್ರವು ಯಾವುದೆ ವರ್ಗ, ಜಾತಿ ಅಥವಾ ಲಿಂಗಕ್ಕೆ ಸೀಮಿತವಾಗಿಲ್ಲ. ಕೆಲವೆಡೆ ಕೇವಲ ಗಂಡು ಮಕ್ಕಳಿಗಲ್ಲದೆ ಹೆಣ್ಣು ಮಕ್ಕಳಿಗೂ ಉಪನಯನವನ್ನು ಮಾಡುತ್ತಾರೆ. ಗಾಯಿತ್ರಿ ಮಂತ್ರದ ಸತತ ಜಪದಿಂದ ಭೂತ ಪ್ರೇತಗಳ ಉಪಟಳದಿಂದಲೂ ಪಾರಗಬಹುದು. ಒಂದು ಲಕ್ಷ ಗಾಯತ್ರಿಮಂತ್ರದೊಡನೆ ತಿಲಹೋಮ ಮಾಡಿದರೆ ಸರ್ವಪಾಪಗಳೂ ನಶಿಸುತ್ತವೆ. ತುಪ್ಪದಿಂದ ಹೋಮ ಮಾಡಿದರೆ ಅರೋಗ್ಯದಲ್ಲಿ ಸುಧಾರಣೆ ಕಂಡುಬಂದು ಆಯಸ್ಸು ಹೆಚ್ಚುತ್ತದೆ. ಜೇನುತುಪ್ಪದಿಂದ ಹೋಮ ಮಾಡಿದರೆ ಜನ್ಮ ಕುಂಡಲಿಯಲ್ಲಿನ ಸಂತಾನದೋಷವು ಪರಿಹಾರವಾಗಿ ಸಂತಾನ ಪ್ರಾಪ್ತಿಯಾಗುತ್ತದೆ. ಈ ಮಂತ್ರವನ್ನು ಜಪಿಸಿದವರಿಗೆ ಯಾವ ವಿಧವಾದ ಭಯವೂ ಇರುವುದಿಲ್ಲ ಮತ್ತು ಆತ್ಮ ವಿಶ್ವಾಸವು ಹೆಚ್ಚುತ್ತದೆ. (ಬರಹ: ಎಚ್ ಸತೀಶ್, ಜ್ಯೋತಿಷಿ)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.