ಆಷಾಢ ಮಾಸದಲ್ಲಿ ಲಕ್ಷ್ಮೀ ಪೂಜೆಯ ಮಹತ್ವವೇನು? ದೇವಿಯನ್ನು ಆರಾಧಿಸುವ ಉದ್ದೇಶ, ಪೂಜಾ ಕ್ರಮದ ಬಗ್ಗೆ ಇಲ್ಲಿದೆ ಮಾಹಿತಿ
ಆಷಾಢ ಮಾಸದಲ್ಲಿ ಸಾಮಾನ್ಯವಾಗಿ ಶುಭಕಾರ್ಯಗಳು ನಡೆಯುವುದಿಲ್ಲ. ಆದರೆ ಈ ತಿಂಗಳಲ್ಲಿ ಲಕ್ಷ್ಮೀ ಪೂಜೆಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಲಕ್ಷ್ಮೀದೇವಿಯನ್ನು ಆರಾಧಿಸುವ ಹಿಂದೆ ಒಂದು ಮಹತ್ವ ಉದ್ದೇಶವಿದೆ. ಈ ತಿಂಗಳಲ್ಲಿ ದೇವಿ ಪೂಜೆ ಮಾಡುವುದರ ವಿಶೇಷವೇನು, ಇದರಿಂದ ಸಿಗುವ ಲಾಭವೇನು, ಪೂಜಾಕ್ರಮ ಹೇಗಿರಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.

ಹಿಂದೂ ಧರ್ಮದಲ್ಲಿ ಆಷಾಢ ಮಾಸಕ್ಕೆ ವಿಶೇಷ ಪ್ರಾಮುಖ್ಯವಿದೆ. ಆದರೆ ಈ ತಿಂಗಳಿನಲ್ಲಿ ಶುಭಕಾರ್ಯಗಳು ನಡೆಯುವುದು ಕಡಿಮೆ. ಆದರೂ ಆಷಾಢ ಮಾಸದಲ್ಲಿ ಬರುವ ಶುಕ್ರವಾರಗಳು ವಿಶೇಷ. ಆಷಾಢ ಶುಕ್ರವಾರದಲ್ಲಿ ಲಕ್ಷ್ಮೀ ಪೂಜೆ ಮಾಡುವುದರಿಂದ ಸಕಲ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಆಷಾಢ ಮಾಸದಲ್ಲಿ ದೇವಿಯರನ್ನು ಪೂಜಿಸುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆಯೂ ಇದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಆಷಾಢದಲ್ಲಿ ಲಕ್ಷ್ಮೀ ವ್ರತ ಮಾಡುವ ಕ್ರಮವೂ ಇದೆ. ಈ ವರ್ಷ ಆಷಾಢ ಮಾಸವು ಜುಲೈ 6ಕ್ಕೆ ಆರಂಭವಾಗಿ ಆಗಸ್ಟ್ 4ಕ್ಕೆ ಮುಕ್ತಾಯವಾಗುತ್ತದೆ.
ಮೊದಲೇ ಹೇಳಿದಂತೆ ಈ ತಿಂಗಳಲ್ಲಿ ಮದುವೆ, ಗೃಹಪ್ರವೇಶದಂತಹ ವಿಶೇಷ ಕಾರ್ಯಕ್ರಮಗಳು ನಡೆಯುವುದಿಲ್ಲ. ಆದರೆ ಈ ತಿಂಗಳಲ್ಲಿ ಚಾರ್ತುಮಾಸ್ಯ ಆರಂಭವಾಗುತ್ತದೆ. ಆಷಾಢ ಮಾಸದ ಕೊನೆಯ ದಿನವನ್ನು ಭೀಮನ ಅಮಾವಾಸ್ಯೆ ಎಂದೂ ಆಚರಿಸಲಾಗುತ್ತದೆ. ಆಷಾಢ ಮಾಸವು ಗಂಗೆಯು ಧರೆಗಳಿದ ತಿಂಗಳಾದ ಕಾರಣ ಈ ಮಾಸದಲ್ಲಿ ಲಕ್ಷ್ಮೀಪೂಜೆ ಮಾಡುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಈ ತಿಂಗಳಲ್ಲಿ ಜುಲೈ 12, ಜುಲೈ 19, ಜುಲೈ 26 ಹಾಗೂ ಆಗಸ್ಟ್ 2ರ ಶುಕ್ರವಾರ ಮಹಾಲಕ್ಷ್ಮೀ ಪೂಜೆಗೆ ವಿಶೇಷ ಎಂದು ಪರಿಗಣಿಸಲಾಗಿದೆ.
ಆಷಾಢ ಮಾಸದಲ್ಲಿ ಆಚರಿಸುವ ವ್ರತಕ್ಕೆ ಶಕಾ ವ್ರತ ಎಂದೂ ಕರೆಯುತ್ತಾರೆ. ಈ ಮೇಲಿನ ತಿಳಿಸಿದ ದಿನಗಳಲ್ಲಿ ಲಕ್ಷ್ಮೀ ಆರಾಧನೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬಲಾಗುತ್ತದೆ.
ಆಷಾಢದಲ್ಲಿ ಲಕ್ಷ್ಮೀ ಪೂಜೆಯ ಮಾಡುವ ವಿಧಾನ
* ಪೂಜೆಗೆ ಮಹಾಲಕ್ಷ್ಮೀ ಫೋಟೊ ಹಾಗೂ ವಿಗ್ರಹ ಎರಡನ್ನೂ ಬಳಸಬಹುದು. ಇದನ್ನು ದೇವರ ಕೋಣೆಯಲ್ಲಿ ಪ್ರತಿಷ್ಠಾಪಿಸಿ.
* ಸಂಕಲ್ಪ ಮಾಡಿ.
* ಫೋಟೊ ಅಥವಾ ವಿಗ್ರಹವನ್ನು ಹೂಗಳಿಂದ ಅಲಂಕರಿಸಿ. ಅರಿಸಿನ, ಕುಂಕುಮ ಹಾಗೂ ಮಂತ್ರಾಕ್ಷತೆ ಇಡಿ.
* ಮಹಾಲಕ್ಷ್ಮೀ ಸಹಸ್ರನಾಮ ಪಠಿಸಿ.
* ಲಕ್ಷ್ಮೀಗೀತೆಗಳನ್ನು ಪಠಿಸಿ.
* ದೇವನಾಮ ಪಠಿಸಿ.
* ನೈವೇದ್ಯ ಮಾಡಿ
* ಕೊನೆಯಲ್ಲಿ ಮಂಗಳಾರತಿ ಮಾಡಿ.
ಆಷಾಢ ಮಾಸದಲ್ಲಿ ಬೆಳಿಗ್ಗೆ ಪೂಜೆ ಮಾಡಬಹುದು. ಸಂಜೆ ಸಮಯ ಅಂದರೆ ಸೂರ್ಯಾಸ್ತದ ಹೊತ್ತಿನಲ್ಲಿ ಪೂಜೆ ಮಾಡುವುದರಿಂದ ವಿಶೇಷ ಫಲ ಸಿಗುತ್ತದೆ. ಆಷಾಢ ಮಾಸದಲ್ಲಿ ಪ್ರತಿ ಶುಕ್ರವಾರ ತಪ್ಪದೇ ಲಕ್ಷ್ಮೀ ಪೂಜೆ ಮಾಡಿ. ಶ್ರೀ ಮಹಾಲಕ್ಷ್ಮಿ ಸಹಸ್ರನಾಮ ಪಠಿಸಲು ಸಾಧ್ಯವಾಗದೇ ಇದ್ದರೆ ಕನಿಷ್ಟ 108 ನಾಮಗಳ ಅಷ್ಟೋತ್ತರವನ್ನೂ ಪಠಿಸಬಹುದು. ಆಷಾಢ ಮಾಸದಲ್ಲಿ ಮನೆಯ ಅಕ್ಕಪಕ್ಕದ ಗೃಹಿಣಿಯರನ್ನು ಕರೆಸಿ ತಾಂಬೂಲ ನೀಡುವ ಪದ್ಧತಿಯೂ ಕೆಲವು ಕಡೆ ಇದೆ.
ಆಷಾಢ ಮಾಸದಲ್ಲಿ ಲಕ್ಷ್ಮೀದೇವಿ ಪೂಜೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ದೂರಾಗುತ್ತವೆ. ಸಾಲದ ಸುಳಿಯಲ್ಲಿ ಸಿಲುಕಿದವರು ಆಷಾಢ ಮಾಸದ ಶುಕ್ರವಾರಗಳಂದು ಲಕ್ಷ್ಮೀ ಪೂಜೆ ಮಾಡಬೇಕು. ಆಷಾಢ ಮಾಸದ ಪೂಜೆಯು ಮನೆಯಲ್ಲಿ ಸಂಪತ್ತು ವೃದ್ಧಿಯಾಗಲು ನೆರವಾಗುತ್ತದೆ.