ಜ್ಞಾನ ಕಾರ್ಯಕ್ಕೆ ಮೊದಲ ಆದ್ಯತೆ, ಭಂಡಾರ ಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅಭಿಮತ; ಉಡುಪಿಯಲ್ಲಿ ಶ್ರೀಗಳ 45ನೇ ಚಾತುರ್ಮಾಸ ವ್ರತ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜ್ಞಾನ ಕಾರ್ಯಕ್ಕೆ ಮೊದಲ ಆದ್ಯತೆ, ಭಂಡಾರ ಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅಭಿಮತ; ಉಡುಪಿಯಲ್ಲಿ ಶ್ರೀಗಳ 45ನೇ ಚಾತುರ್ಮಾಸ ವ್ರತ

ಜ್ಞಾನ ಕಾರ್ಯಕ್ಕೆ ಮೊದಲ ಆದ್ಯತೆ, ಭಂಡಾರ ಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅಭಿಮತ; ಉಡುಪಿಯಲ್ಲಿ ಶ್ರೀಗಳ 45ನೇ ಚಾತುರ್ಮಾಸ ವ್ರತ

ಭಂಡಾರ ಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಉಡುಪಿಯಲ್ಲಿ 45ನೇ ಚಾತುರ್ಮಾಸ ವ್ರತ ಸಂಕಲ್ಪ ನೆರವೇರಿಸಿದ್ದಾರೆ. ಇದೇ ವೇಳೆ ಅವರು, ಮನೆ ಮನೆಗೆ ಭಾಗವತ ನೀರಾಜನ ಉತ್ಸವದ ವಿಚಾರ ಪ್ರಸ್ತಾಪಿಸಿದರಲ್ಲದೆ, ಜ್ಞಾನ ಕಾರ್ಯಕ್ಕೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದರು.

ಉಡುಪಿಯ ರಥ ಬೀದಿಯಲ್ಲಿರುವ ಶ್ರೀ ಭಂಡಾರ ಕೇರಿ ಮಠದಲ್ಲಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅವರು 45ನೇ ಚಾತುರ್ಮಾಸ್ಯ ವ್ರತ ಧಾರಣೆ ಮಾಡಿ ಸಂಸ್ಥಾನ ಪ್ರತಿಮೆಗಳಿಗೆ ವಿಶೇಷ ಪೂಜೆ ನೆರವೇರಿಸಿದರು
ಉಡುಪಿಯ ರಥ ಬೀದಿಯಲ್ಲಿರುವ ಶ್ರೀ ಭಂಡಾರ ಕೇರಿ ಮಠದಲ್ಲಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅವರು 45ನೇ ಚಾತುರ್ಮಾಸ್ಯ ವ್ರತ ಧಾರಣೆ ಮಾಡಿ ಸಂಸ್ಥಾನ ಪ್ರತಿಮೆಗಳಿಗೆ ವಿಶೇಷ ಪೂಜೆ ನೆರವೇರಿಸಿದರು

ಉಡುಪಿ: ಜ್ಞಾನ ಕಾರ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಉಡುಪಿ ಶ್ರೀ ಭಂಡಾರ ಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಮಹಾ ಸ್ವಾಮೀಜಿ ಹೇಳಿದರು ಅವರು ಉಡುಪಿಯ ರಥಬೀದಿಯಲ್ಲಿರುವ ಶ್ರೀ ಭಂಡಾರ ಕೇರಿ ಮಠದಲ್ಲಿ 45ನೇ ಚಾತುರ್ಮಾಸ ವ್ರತದ ಸಂಕಲ್ಪವನ್ನು ಗುರುವಾರ ಬೆಳಗ್ಗೆ ಕೈಗೊಂಡು ಆಶೀರ್ವಚನ ನೀಡಿದರು.

ದಕ್ಷಿಣಾಯಣ ಪುಣ್ಯಕಾಲದಲ್ಲಿ ಭಗವಂತ ನಿದ್ರೆಗೆ ಜಾರುತ್ತಾನೆ ಎಂಬುದು ಸನಾತನ ಪರಂಪರೆಯ ನಂಬಿಕೆ. ಇಂತಹ ಸಂದರ್ಭಗಳಲ್ಲಿ ನಾವು ಮಾಡುವ ದಾನ , ಧರ್ಮ, ಭಾಗವತಾದಿ ಮಹಾನ್ ಗ್ರಂಥಗಳ ಶ್ರವಣ ಮುಂತಾದ ಕಾರ್ಯಗಳನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ನೆರವೇರಿದಾಗ ಅನಂತ ಫಲ ಲಭಿಸುತ್ತದೆ.

ಇದೇ ಸಂದರ್ಭದಲ್ಲಿ ಬರುವ ಚಾತುರ್ಮಾಸ್ಯ ವ್ರತವನ್ನು ಧಾರಣೆ ಮಾಡುವುದು, ಲೋಕದ ಹಿತಕ್ಕಾಗಿ ಒಂದೆಡೆ ಕುಳಿತು ಅನನ್ಯವಾಗಿ ಭಗವಂತನನ್ನು ಆರಾಧಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಧರ್ಮ , ದೇಶ ಮತ್ತು ಸನಾತನ ಸಂಸ್ಕೃತಿಯ ರಕ್ಷಣೆಗಾಗಿ ನಾವು ಮಾಡಲೇಬೇಕಾದಂತಹ ಸತ್ಕಾರ್ಯಗಳನ್ನು ಚಾಚೂ ತಪ್ಪದೆ (ಭಗವಾನ್ ಶ್ರೀ ವೇದವ್ಯಾಸರ ಸಂಪ್ರೀತಿಗಾಗಿ ) ನೆರವೇರಿಸಿದಾಗ ಮಾತ್ರ ಸಾರ್ಥಕತೆ ಪಡೆಯುತ್ತದೆ ಎಂದರು.

ಭಾಗವತ ನೀರಾಜನ ಉತ್ಸವ: ಉಡುಪಿ ಕ್ಷೇತ್ರದಲ್ಲಿ ಶ್ರೀ ಕೃಷ್ಣನ ಪರಮ ಪಾವನ ಸನ್ನಿಧಿಯಲ್ಲಿ ಚಾತುರ್ಮಾಸ್ಯ ವ್ರತವನ್ನು ಧಾರಣೆ ಮಾಡಿದ್ದು, ಶ್ರೀ ಕೃಷ್ಣನ ನಗರಿಯ ಭಕ್ತರ ಮನೆ ಮನೆಗೆ ತೆರಳಿ ಪ್ರತಿನಿತ್ಯವೂ ದೀಪವನ್ನು ಬೆಳಗಿ, ಭಾಗವತ ಪ್ರವಚನ ಮಾಡುವ ವಿಶೇಷ ಅಭಿಯಾನ " ಭಾಗವತ ನೀರಾಜನ ಉತ್ಸವ "ವನ್ನು ಚಾತುರ್ಮಾಸ್ಯ ಪರ್ಯಂತ ಮಾಡಲಾಗುತ್ತದೆ . ಸಾತ್ವಿಕರು ಮತ್ತು ಭಕ್ತರು ಇನ್ನಷ್ಟು ಧರ್ಮ ಕಾರ್ಯದಲ್ಲಿ, ಸಂಸ್ಕೃತಿ ಪಾಲನೆ ಕೈಂಕರ್ಯದಲ್ಲಿ ತೊಡಗುವಂತೆ ಮಾಡುವುದು ನಮ್ಮ ಸಂಕಲ್ಪ ಎಂದು ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.

ಶ್ರೀ ಜಯತೀರ್ಥರ ಆರಾಧನೆ; ಜ್ಞಾನ ಪ್ರಪಂಚಕ್ಕೆ ಅವರ ಕೊಡುಗೆ ಅಪಾರ

ಇದೇ ಸಂದರ್ಭದಲ್ಲಿ ಗುರುವಾರ ಮಳಖೇಡ ಶ್ರೀ ಜಯತೀರ್ಥರ (ಟೀಕಾರಾಯರ) ಆರಾಧನಾ ಮಹೋತ್ಸವವನ್ನು ಗುರುಗಳು ನೆರವೇರಿಸಿದ್ದು, "ಜ್ಞಾನ ಪ್ರಪಂಚಕ್ಕೆ ಜಯತೀರ್ಥರ ಕೊಡುಗೆ ಅಪಾರ "ಎಂದು ಹೇಳಿದರು.

ಆಚಾರ್ಯ ಮಧ್ವರ ಸಮಗ್ರ ಶಾಸ್ತ್ರವನ್ನು ಸೂಕ್ತವಾಗಿ ಅನುವಾದ ಮಾಡಿ ಅದಕ್ಕೆ ತಕ್ಕನಾದ ಟೀಕೆ, ಟಿಪ್ಪಣಿಗಳನ್ನು ಬರೆದು ಲೋಕಕ್ಕೆ ಸಮಗ್ರ ಮಾಧ್ವ ತತ್ತ್ವ ರಸಾಮೃತವನ್ನು ಕೊಡುಗೆಯಾಗಿ ನೀಡಿದ್ದಾರೆ . ಅವರ ಸ್ಮರಣೆ ಧನ್ಯತೆಯ ಸಂಕೇತವಾಗಿದೆ ಎಂದು ಹೇಳಿದರು. ಆಚಾರ್ಯ ಮಧ್ವರ ಪರಮ ಕಾರುಣ್ಯದಿಂದಲೇ ಶ್ರೀ ಜಯತೀರ್ಥರು ಸನ್ಯಾಸ ಪೀಠದಲ್ಲಿ ವಿರಾಜಮಾನ ರಾಗಿ ಜೀವಿತದ ಬಹು ಭಾಗವನ್ನು ಶಾಸ್ತ್ರ ಗ್ರಂಥಗಳ ಅಧ್ಯಯನ , ಅಧ್ಯಾಪನ ಮತ್ತು ಕೃತಿ ರಚನೆಗಾಗಿಯೇ ಮೀಸಲಿಟ್ಟ ಮಹಾನುಭಾವರು . ಲೋಕಕ್ಕೆ ಅವರ ಉಪಕಾರ , ಮಧ್ವ ಶಾಸ್ತ್ರಕ್ಕೆ ಅವರ ಕೊಡುಗೆ ಅನನ್ಯವಾಗಿದೆ ಎಂದು ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜರ ಮನೆತನದಲ್ಲಿ ಜನಿಸಿದ ರಘುನಾಥ ಎಂಬ ಯುವಕನಿಗೆ ಶ್ರೀ ಅಕ್ಶೋಭ್ಯ ತೀರ್ಥರು ಸನ್ಯಾಸ ದೀಕ್ಷೆಯನ್ನು ಕೊಟ್ಟು ಶ್ರೀ ಜಯತೀರ್ಥ ಎಂದು ನಾಮಕರಣ ಮಾಡಿದರು . ಜಯ ಎಂದರೆ ಮಹಾಭಾರತ ಎಂಬ ಅರ್ಥವಿದೆ . ಸಂಸಾರವೆಂಬ ದೊಡ್ಡ ಶತ್ರುವನ್ನು ಸಂಹಾರ ಮಾಡುವ, ಪರಮ ಆನಂದ ನೀಡುವ, ಇಹ- ಪರ ಲೋಕದಲ್ಲೂ ಸಂತೋಷ ತಂದುಕೊಡುವ ಶಾಸ್ತ್ರ ಗ್ರಂಥಗಳನ್ನು ರಚಿಸಿ ಅದರ ಮೇಲೆ "ಜಯ" ಸಾಧಿಸಿದವರು ಜಯತೀರ್ಥರು. ಹಾಗಾಗಿ ಜಯ ತೀರ್ಥ ಎಂಬ ನಾಮಧೇಯ ಅವರಿಗೆ ಅನ್ವರ್ಥವಾಗಿದೆ ಎಂದು ಸ್ವಾಮೀಜಿ ಹೇಳಿದರು.

ಪುತ್ತಿಗೆ ಶ್ರೀಗಳ ಆಹ್ವಾನದ ಮೇರೆಗೆ ಉಡುಪಿಯಲ್ಲಿ ಚಾತುರ್ಮಾಸ್ಯ ವ್ರತ

ಉಡುಪಿಯ ಪರ್ಯಾಯ ಪೀಠದಲ್ಲಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಅಭಿಮಾನ ಮತ್ತು ವಿಶ್ವಾಸದ ಆಮಂತ್ರಣಕ್ಕೆ ಗೌರವ ನೀಡಿ, ತಾವು ಉಡುಪಿಯಲ್ಲಿ 45ನೇ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿದ್ದು, ಭಕ್ತರು ಧರ್ಮಕಾರ್ಯಗಳಲ್ಲಿ ಹೆಚ್ಚು ಹೆಚ್ಚು ಸಹಕಾರವನ್ನು ನೀಡುವ ಮೂಲಕ ಧನ್ಯತೆಯನ್ನು ಸಮರ್ಪಿಸಬೇಕು ಎಂದು ಸ್ವಾಮೀಜಿ ನುಡಿದರು.

ಇದೇ ಸಂದರ್ಭದಲ್ಲಿ ಶ್ರೀ ಸೀತಾ ಲಕ್ಷ್ಮಣ ಸಮೇತ ಶ್ರೀ ಕೋದಂಡ ರಾಮದೇವರ ಮೂರ್ತಿಗಳಿಗೆ ಹಾಗೂ ಸಂಸ್ಥಾನದ ಎಲ್ಲಾ ಪ್ರತಿಮೆಗಳಿಗೆ ಸ್ವಾಮೀಜಿ ಮಹಾಪೂಜೆಯನ್ನು ನೆರವೇರಿಸಿದರು. ಶ್ರೀಮಠದ ಭಕ್ತರು ಇದಕ್ಕೆ ಸಾಕ್ಷಿಯಾದರು.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್‌.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.