ಮಕರವಿಳಕ್ಕು ಹಬ್ಬಕ್ಕಾಗಿ ಮತ್ತೆ ತೆರೆದ ಶಬರಿಮಲೆ ದೇವಸ್ಥಾನ; ಡಿಸೆಂಬರ್ 30 ರಿಂದ ಅಯ್ಯಪ್ಪ ದರ್ಶನ ಪುನಾರಂಭ
ಶಬರಿಮಲೆಯಲ್ಲಿ ನಡೆಯಲಿರುವ ಮಕರವಿಳಕ್ಕು ಹಬ್ಬಕ್ಕಾಗಿ ಡಿಸೆಂಬರ್ 30ರ ಸೋಮವಾರ ಅಯ್ಯಪ್ಪನ ದೇವಾಲಯವನ್ನು ಮತ್ತೆ ತೆರೆಯಲಾಗಿದೆ. ಸಾವಿರಾರು ಮಂದಿ ಭಕ್ತರ ದೇವರ ದರ್ಶನ ಪಡೆಯುತ್ತಿದ್ದಾರೆ. ಮಕರವಿಳಕ್ಕುವನ್ನು ಕರ್ಪೂರದಾರತಿ ಅಂತಲೂ ಕರೆಯಲಾಗುತ್ತದೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಪ್ರಸಿದ್ಧ ಶಬರಿಮಲೆ ದೇವಾಲಯದ ಬಾಗಿಲನ್ನು ಮತ್ತೆ ತೆರೆಯಲಾಗಿದೆ. ಮಕರವಿಳಕ್ಕು (ಕರ್ಪೂರದಾರತಿ) ಹಬ್ಬಕ್ಕಾಗಿ ಡಿಸೆಂಬರ್ 30 ಸೋಮವಾರ ಸಂಜೆ 4 ಗಂಟೆಗೆ ಅರ್ಚಕರಾದ ಕಂಠರಾರು ರಾಜೀವಾರು ಅವರ ಉಪಸ್ಥಿತಿ ಹಾಗೂ ಪ್ರಧಾನ ಅರ್ಚಕರಾದ ಎಸ್ ಅರುಣ್ ಕುಮಾರ್ ನಂಬೂತಿರಿ ಅವರ ಸಮ್ಮುಖದಲ್ಲಿ ಬಾಗಿಲಲ್ಲಿ ಕರ್ಪೂರ ಹಚ್ಚಿದ ಬಳಿಕ ದೇವಾಲಯವನ್ನು ತೆರೆಯಲಾಯಿತು. ಸಾವಿರಾರು ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಘೋಷಣೆಗಳನ್ನು ಕೂಗುತ್ತ ದೇವರ ದರ್ಶನ ಪಡೆಯುತ್ತಿದ್ದಾರೆ.
41 ದಿನಗಳ ಮಂಡಲ ಮಹೋತ್ಸವ ಮುಗಿಯುತ್ತಿದ್ದಂತೆ 2024ರ ಡಿಸೆಂಬರ್ 26ರ ಗುರುವಾರ ರಾತ್ರಿ 10 ಗಂಟೆಗೆ ಶಬರಿಮಲೆ ದೇವಾಲಯದ ಬಾಗಿಲು ಮುಚ್ಚಲಾಗಿತ್ತು. ಮೂರು ದಿನಗಳ ಬಿಡುವಿನ ಬಳಿಕ ಮಕರ ಜ್ಯೋತಿ ಪೂಜೆಗಾಗಿ ಮತ್ತೆ ತೆರೆಯಲಾಗಿದೆ.
18 ಮೆಟ್ಟಿಲ ಬಳಿಯ ಕುಂಡಕ್ಕೆ ಅಗ್ನಿ ಸ್ಪರ್ಶದ ಬಳಿಕ ಅಯ್ಯಪ್ಪ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಿದ್ದಂತೆ ಸಾವಿರಾರು ಅಯ್ಯಪ್ಪ ಮಾಲಾಧಾರಿಗಳು ದೇವಾಲಯದತ್ತ ಆಗಮಿಸುತ್ತಿದ್ದಾರೆ. ಮೊದಲ ದಿನ ಯಾವುದೇ ರೀತಿಯ ಪೂಜೆಗಳು ಇರಲಿಲ್ಲ. ಆದರೆ ಇಂದು (ಡಿಸೆಂಬರ್ 31, ಮಂಗಳವಾರ) ಮುಂಜಾನೆ 3 ಗಂಟೆಯಿಂದ ಮಕರ ಜ್ಯೋತಿ ಪೂಜೆ ಆರಂಭವಾಗಿದೆ.
ವಾರ್ಷಿಕ ಮಂಡಲ ಮಹೋತ್ಸವ ಆರಂಭವಾದಗಿನಿಂದ ಲಕ್ಷಾಂತರ ಮಂದಿ ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆಗೆ ಬಂದು ದೇವರ ದರ್ಶನ ಪಡೆದಿದ್ದರು. ಇದೀಗ ಮಕರ ಜ್ಯೋತಿ ದರ್ಶನಕ್ಕೂ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಿದ್ದಾರೆ. ಮಕರ ಸಂಕ್ರಮಣದಲ್ಲಿ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಬರುವಾಗ ಪೊನ್ನಂಬಲಮೇಡಿನಲ್ಲಿ ಮಾಡುವ ಕರ್ಪೂರ ಪೂಜೆಯೇ ಮಕರವಿಳಕ್ಕು ಹಬ್ಬವಾಗಿದೆ. ಇದನ್ನು ಮಕರ ದೀಪ ಅಥವಾ ಮಕರ ಜ್ಯೋತಿ ಅಂತಲೂ ಕರೆಯಲಾಗುತ್ತದೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.