ಸಿಂಹಾಚಲ ಯಾವುದಕ್ಕೆ ಹೆಸರುವಾಸಿ; ಭಕ್ತರನ್ನು ಸೆಳೆಯುವ ಧಾರ್ಮಿಕ ಕ್ಷೇತ್ರದ ಆಸಕ್ತಿಕರ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಿಂಹಾಚಲ ಯಾವುದಕ್ಕೆ ಹೆಸರುವಾಸಿ; ಭಕ್ತರನ್ನು ಸೆಳೆಯುವ ಧಾರ್ಮಿಕ ಕ್ಷೇತ್ರದ ಆಸಕ್ತಿಕರ ಮಾಹಿತಿ ಇಲ್ಲಿದೆ

ಸಿಂಹಾಚಲ ಯಾವುದಕ್ಕೆ ಹೆಸರುವಾಸಿ; ಭಕ್ತರನ್ನು ಸೆಳೆಯುವ ಧಾರ್ಮಿಕ ಕ್ಷೇತ್ರದ ಆಸಕ್ತಿಕರ ಮಾಹಿತಿ ಇಲ್ಲಿದೆ

ಆಂಧ್ರ ಪ್ರದೇಶದ ಸಿಂಹಾಚಲ ಏಕೆ ಹೆಸರುವಾಸಿಯಾಗಿದೆ. ಅಕ್ಷಯ ತೃತೀಯ ದಿನದಂದು ಇಲ್ಲಿಗೆ ಹೆಚ್ಚು ಭಕ್ತರು ಬರಲು ಕಾರಣವೇನು ಎಂಬುದು ಸೇರಿದಂತೆ ದೇವಾಲಯದ ಕುರಿತ ಆಸಕ್ತಿಕರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಲ್ಲಿರುವ ಸಿಂಹಾಚಲ ಕ್ಷೇತ್ರದ ಕುರಿತ ಆಸಕ್ತಿಕರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ
ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಲ್ಲಿರುವ ಸಿಂಹಾಚಲ ಕ್ಷೇತ್ರದ ಕುರಿತ ಆಸಕ್ತಿಕರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ

ಭಾರತದಲ್ಲಿ ಪ್ರಮುಖ ದೇವಾಲಯಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿರುವ ಆಂಧ್ರ ಪ್ರದೇಶದಲ್ಲಿ ಬರೋಬ್ಬರಿ 32 ನರಸಿಂಹಸ್ವಾಮಿ ದೇವಾಲಯಗಳಿವೆ. ಆದರೆ ಈ ಪೈಕಿ ವಿಶಾಖಪಟ್ಟಣ ಜಿಲ್ಲೆಯ ಸಿಂಹಾಚಲದಲ್ಲಿರುವ ವರಾಹ ಲಕ್ಷ್ಮಿ ನರಸಿಂಹ ದೇವಾಲಯವು ತುಂಬಾ ಜನಪ್ರಿಯವಾಗಿದೆ. ಈ ದೇವಾಲಯ ವಿಷ್ಣುವಿಗೆ ಸಮರ್ಪಿತವಾಗಿದ್ದು, ವರಾಹ ನರಸಿಂಹ ಎಂಬ ಹೆಸರಿನಲ್ಲಿ ಇಲ್ಲಿ ಪೂಜೆಗಳು ನಡೆಯುತ್ತವೆ. ಇದನ್ನು ಸಿಂಹಾಚಲಂ ದೇವಾಲಯ ಅಂತಲೇ ಕರೆಯಲಾಗುತ್ತದೆ. ಈ ಪ್ರಮುಖ ಧಾರ್ಮಿಕ ಕ್ಷೇತ್ರವು ಪೂರ್ವ ಘಟ್ಟಗಳ ಪಶ್ಚಿಮ ಭಾಗದಲ್ಲಿ ನೆಲೆಸಿದ್ದು, ಕೈಲಾಸ ಬೆಟ್ಟ ಅಂತಲೂ ಕರೆಯಲ್ಪಡುತ್ತದೆ. ಸಿಂಹಾಚಲಂ ಎಂಬ ಪದದ ಅರ್ಥ ಸಿಂಹದ ಬೆಟ್ಟ ಎಂದು ಹೇಳಲಾಗುತ್ತದೆ.

ದೇವಾಲಯದ ಇತಿಹಾಸವನ್ನು ನೋಡುವುದಾದರೆ, ಶಾಸನಗಳ ಪ್ರಕಾರ, ದೇವಾಲಯವು ಚಾಲುಕ್ಯ ಚೋಳ ದೊರೆ ಕುಲೋತ್ತುಂಗ-1 ಕ್ರಿ.ಶ 1098ಕ್ಕೂ ಹಿಂದಿನದು. ಗಂಗಾ ರಾಜವಂಶದ ದೊರೆ ನರಸಿಂಹ ದೇವರು 13ನೇ ಶತಮಾನದಲ್ಲಿ ದೇವಾಲಯವನ್ನು ಸಂಪೂರ್ಣವಾಗಿ ನವೀಕರಿಸಿದ್ದಾನೆ ಎಂದು ದಾಖಲೆಗಳು ಹೇಳುತ್ತವೆ. ದಂತಕಥೆಗಳ ಪ್ರಕಾರ, ತನ್ನ ಭಕ್ತ ಪ್ರಹ್ಲಾದನನ್ನು ಅವನ ತಂದೆ ಹಿರಣ್ಯಕಶಿಪು ಕೊಲೆಗೆ ಪ್ರಯತ್ನಿಸುತ್ತಿದ್ದಾಗ ಆತನನ್ನು ರಕ್ಷಿಸಿದ ನಂತರ ವಿಷ್ಣು ಈ ರೂಪದಲ್ಲಿ ಅಂದರೆ ಸಿಂಹದ ತಲೆ ಮತ್ತು ಮಾನವನ ದೇಹದ ರೂಪದಲ್ಲಿ ಕಾಣಿಸಿಕೊಂಡನು. ಈ ದೇವಾಲಯದಲ್ಲಿ ಲಿಂಗ, ನರಸಿಂಹ ಹಾಗೂ ವರಾಹ ನಡುವೆ ನಿಕಟ ಸಂಬಂಧವಿದೆ. ಅಕ್ಷಯ ತೃತೀಯ ದಿನವನ್ನು ಹೊರತುಪಡಿಸಿ, ವರಾಹ ನರಸಿಂಹ ವಿಗ್ರಹವನ್ನು ವರ್ಷಪೂರ್ತಿ ಸಂಪೂರ್ಣವಾಗಿ ಚಂದನದಿಂದ ಮುಚ್ಚಲಾಗುತ್ತದೆ. ಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ.

ಇಂದು (ಏಪ್ರಿಲ್ 30, ಬುಧವಾರ) ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಈ ದಿನ ವರಾಹ ನರಸಿಂಹ ಮೂರ್ತಿಯನ್ನು ಕಣ್ತುಂಬಿಕೊಳ್ಳಬಹುದು. ಹೀಗಾಗಿ ಈ ದಿನ ಸಾವಿರಾರು ಭಕ್ತರು ದೇವರ ದರ್ಶನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ವರ್ಷದಲ್ಲಿ ಎರಡು ಪ್ರಮುಖ ಉತ್ಸವಗಳು ನಡೆಯುತ್ತವೆ. ಒಂದು ಕಲ್ಯಾಣೋತ್ಸವ ಮತ್ತೊಂದು ಚಂದನೋತ್ಸವ. ನರಸಿಂಹ ಜಯಂತಿ, ನವರಾತ್ರಿ ಉತ್ಸವ, ಕಾಮ ದಹನ ಹಾಗೂ ಚಂದನೋತ್ಸವದ ದಿನ ಮಾತ್ರ ಇಲ್ಲಿ ನರಸಿಂಹ ಮೂರ್ತಿಯನ್ನು ವೀಕ್ಷಿಸಬಹುದಾಗಿದೆ.

ಆಂಧ್ರ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಎರಡನೇ ದೇವಸ್ಥಾನ

ಸಿಂಹಾಚಲ ವರಾಹ ಲಕ್ಷ್ಮಿ ನರಸಿಂಹ ದೇವಾಲಯವು ಆಂಧ್ರ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ದೇವಾಲಯಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ತಿರುಪತಿಯ ತಿರುಮಲ ಮೊದಲ ಸ್ಥಾನದಲ್ಲಿದೆ. ಭಕ್ತರನ್ನು ಸೆಳೆಯುವ ಪ್ರಮುಖ ದೇವಾಲಯ ಎನಿಸಿರುವ ಆಂಧ್ರದ ಸಿಂಹಾಚಲದ ವರಾಹ ನರಸಿಂಹ ದೇವಾಲಯಕ್ಕೆ ನಿತ್ಯ ನೂರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಅಕ್ಷಯ ತೃತೀಯದಂತಹ ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ.

ಈ ದೇವಾಲಯದ ವಾಸ್ತುಶಿಲ್ಪವು ತುಂಬಾ ವಿಶಿಷ್ಟವಾಗಿದೆ. ಹೊರಗಿನಿಂದ ನೋಡಿದರೆ ಕೋಟೆಯನ್ನು ಹೋಲುತ್ತದೆ. ಮೂರು ಅಂಗಳಗಳು ಹಾಗೂ 5 ದ್ವಾರಗಳನ್ನು ಹೊಂದಿದೆ. ನಾಗರ ಶೈಲಿ ಎಂದು ಕರೆಯಲಾಗುವ ಒಡಿಶಾ ಮತ್ತು ದ್ರಾವಿಡ ಶೈಲಿಯ ಸಂಪ್ರಾದಯವನ್ನು ಪ್ರತಿಬಿಂಬಿಸುತ್ತದೆ. ಇನ್ನ ಮುಖ್ಯ ದೇವಾಲಯದ ಬಗ್ಗೆ ಹೇಳುವುದಾದರೆ ಆಸ್ಥಾನ ಮಂಟಪ, ಗರ್ಭಗುಡಿ, ಮುಖಮಂಟಪ, ಕಲ್ಲಿನ ರಥ ಹಾಗೂ ದೇವಾಲಯವು ಪೂರ್ವಕ್ಕೆ ಬದಲಾಗಿ ಪಶ್ಚಿಮಕ್ಕೆ ಮುಖ ಮಾಡಿವೆ. ಇದು ವಿಜಯದ ಸಂಕೇತ ಎಂದು ಹೇಳಲಾಗುತ್ತದೆ.

ಸಿಂಹಾಚಲಂನಲ್ಲಿ ಗೋಡೆ ಕುಸಿದು 7 ಮಂದಿ ಸಾವು, ಹಲವರಿಗೆ ಗಾಯ

ಸಿಂಹಾಚಲಂ ದೇವಾಲಯದ ಅಪ್ಪಣ್ಣ ಸ್ವಾಮಿ ಚಂದನೋತ್ಸವ ವೇಳೆ ಭಾರಿ ದುರಂತ ಸಂಭವಿಸಿದೆ. ಭಗವಂತನ ನಿಜವಾದ ರೂಪವನ್ನು ನೋಡಲು ಬಂದ ಭಕ್ತರ ಮೇಲೆ ತಡೆಗೋಡೆ ಕುಸಿದು ಬಿದ್ದ ಪರಿಣಾಮ 7 ಭಕ್ತರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವಾರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಮಧ್ಯರಾತ್ರಿಯ ನಂತರ ಸಿಂಹಾಚಲಂನಲ್ಲಿ ಭಾರಿ ಮಳೆಯಾಗಿದೆ. ಪರಿಣಾಮವಾಗಿ ಸಿಂಹಾಚಲಂನ ಸಿಂಹಗಿರಿ ಬಸ್ ನಿಲ್ದಾಣದಿಂದ ಹೋಗುವ ದಾರಿಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ದೇವಾಲಯದ ತಡೆಗೋಡೆಯ ಭಾಗವಾಗಿ ನಿರ್ಮಿಸಲಾದ ಸಿಮೆಂಟ್ ಗೋಡೆ ಕುಸಿದು ಬಿದ್ದಿದೆ. ದೇವಾಲಯಕ್ಕೆ ಹೋಗುವ ಈ ಮಾರ್ಗದಲ್ಲಿ 300 ರೂಪಾಯಿಗಳ ಟಿಕೆಟ್ ಪಡೆದಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು.

ಗೋಡೆ ಕುಸಿದು ಬೀಳುತ್ತಿದ್ದಂತೆ ಕೆಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಗೋಡೆಯ ಜೊತೆಗೆ ಮಣ್ಣಿನ ಚಿಪ್ಪುಗಳು ಭಕ್ತರ ಮೇಲೆ ಬಿದ್ದಿದ್ದರಿಂದ 7 ಮಂದಿ ಭಕ್ತರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ದುರಂತದ ಮಾಹಿತಿ ತಿಳಿದ ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಎನ್ ಡಿಆರ್ ಎಫ್ ಪಡೆಗಳನ್ನು ರವಾನಿಸಲಾಗಿದೆ. ಗೃಹ ಸಚಿವ ವಂಗಲಪುಡಿ ಅನಿತಾ, ವಿಶಾಖಪಟ್ಟಣಂ ಕಲೆಕ್ಟರ್ ಹರೇಂದ್ರ ಪ್ರಸಾದ್ ಹಾಗೂ ಸಿಪಿ ಶಂಖಬ್ರತಾ ಬಾಗ್ಚಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು. ಕಳಪೆ ಗುಣಮಟ್ಟದ ಕಾಮಗಾರಿಯೇ ದುರಂತಕ್ಕೆ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.