ವೃಷಭ ರಾಶಿಯಲ್ಲಿ ಸೂರ್ಯ ಸಂಕ್ರಮಣ; ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಷ್ಟೊಂದು ಶುಭಫಲಗಳಿವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೃಷಭ ರಾಶಿಯಲ್ಲಿ ಸೂರ್ಯ ಸಂಕ್ರಮಣ; ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಷ್ಟೊಂದು ಶುಭಫಲಗಳಿವೆ

ವೃಷಭ ರಾಶಿಯಲ್ಲಿ ಸೂರ್ಯ ಸಂಕ್ರಮಣ; ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಷ್ಟೊಂದು ಶುಭಫಲಗಳಿವೆ

ಸೂರ್ಯ 9 ಗ್ರಹಗಳ ಅಧಿಪತಿ. ತಿಂಗಳಿಗೊಮ್ಮೆ ತನ್ನ ಸ್ಥಾನ ಬದಲಾಯಿಸುತ್ತಾನೆ. ಮೇ 14 ರಂದು ವೃಷಭ ರಾಶಿಯಲ್ಲಿ ಸೂರ್ಯನ ಸಂಚಾರವು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಶುಭಫಲಗಳು ಇಲ್ಲಿವೆ.

ವೃಷಭ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಇರುವ ಶುಭಫಲಗಳ ವಿವರ ಇಲ್ಲಿ ನೀಡಲಾಗಿದೆ
ವೃಷಭ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಇರುವ ಶುಭಫಲಗಳ ವಿವರ ಇಲ್ಲಿ ನೀಡಲಾಗಿದೆ

ರವಿ ಅಥವಾ ಸೂರ್ಯ ಮೇ 14 ರ ಬುಧವಾರದಂದು ವೃಷಭರಾಶಿಯನ್ನು ಪ್ರವೇಶಿಸುತ್ತಾನೆ. ಜೂನ್ ತಿಂಗಳ 15 ರ ಭಾನುವಾರದವರೆಗು ಇದೇ ರಾಶಿಯಲ್ಲಿ ಸಂಚರಿಸುತ್ತಾನೆ. ವೃಷಭ ರಾಶಿಯು ಹಣಕಾಸಿನ ವ್ಯವಹಾರವನ್ನು ಸೂಚಿಸುತ್ತದೆ. ಕುಟುಂಬದ ಹಿರಿಯರನ್ನು ಸೂಚಿಸುತ್ತದೆ. ಅಲ್ಲದೆ ಪತ್ನಿಯಿಂದ ಪತಿಗೆ ದೊರೆಯಬಹುದಾದ ಸಹಾಯವನ್ನು ಸೂಚಿಸುತ್ತದೆ. ಜನ್ಮ ಕುಂಡಲಿಯಲ್ಲಿ ರವಿ ಮತ್ತು ಶುಕ್ರರು ಶುಭವಾಗಿದ್ದಲ್ಲಿ ಶುಭಫಲಗಳು ಹೆಚ್ಚಿನ ಮಟ್ಟದಲ್ಲಿ ದೊರೆಯುತ್ತದೆ. ಸಾಮಾಜಿಕ ರಂಗದಲ್ಲಿ ಹಣಕಾಸಿನ ವಿಚಾರದಲ್ಲಿ ಸಕಾರಾತ್ಮಕ ಬದಲಾವಣೆಗಳು ದೊರೆಯುತ್ತವೆ. ವೃಷಭ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ಇಲ್ಲಿ ತಿಳಿಯಿರಿ.

ಮೇಷ ರಾಶಿ

ಮೌನ ತೊರೆದು ಮಾತನಾಡಿದರೆ ದೊರೆಯಬೇಕಾದ ಅನುಕೂಲತೆಗಳು ದೊರೆಯುತ್ತವೆ. ಮುಖ್ಯವಾಗಿ ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ಆತ್ಮೀಯರ ಸಹಾಯ ಸಹಕಾರವನ್ನು ಪಡೆಯುತ್ತಾರೆ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಆತುರಪಡದೆ ಆತ್ಮವಿಶ್ವಾಸದಿಂದ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ. ಅವಿರತ ಶ್ರಮದಿಂದ ನಿಮ್ಮ ಪಾಲಿನ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಹಣಕಾಸಿನ ತೊಂದರೆ ಕಂಡು ಬರುವುದಿಲ್ಲ. ವಿದ್ಯಾರ್ಥಿಗಳು ಉನ್ನತ ಹಂತಕ್ಕೆ ತಲುಪುತ್ತಾರೆ. ಆಡುವ ಮಾತಿನಲ್ಲಿ ವಿಶ್ವಾಸವು ಮನೆ ಮಾಡಿರುತ್ತದೆ. ನಿಮಗೆ ಗೌರವವಿತ ಸ್ಥಾನವನ್ನು ಉಳಿಸಿಕೊಳ್ಳುವಿರಿ.

ಉದ್ಯೋಗ ಕ್ಷೇತ್ರದಲ್ಲಿ ಎಲ್ಲರೂ ನಿಮಗೆ ಅಧೀನವಾಗುತ್ತಾರೆ. ನಿಮ್ಮ ಸ್ವತಂತ್ರ ನೀತಿ ನಿಯಮಗಳನ್ನು ಒಪ್ಪುವ ಸಂದರ್ಭಗಳು ಎದುರಾಗಲಿವೆ. ಬೇಗನೆ ಕೋಪ ಬಂದರು ಬಹುಕಾಲ ಉಳಿಯುವುದಿಲ್ಲ. ಮನದಲ್ಲಿ ಇರುವ ಮಾತುಗಳನ್ನೇ ಆಡುವಿರಿ. ನಿರೀಕ್ಷೆಗೂ ಹೆಚ್ಚಿದ ಆದಾಯವಿರುತ್ತದೆ. ನೆರೆಹೊರೆಯವರಿಗೆ ಮತ್ತು ಸ್ನೇಹಿತರಿಗೆ ಸಹಾಯ ಮಾಡುವಿರಿ. ಆದರೆ ಬಂಧು ಬಳಗದವರಿಂದ ದೂರ ಉಳಿಯುವಿರಿ. ಮನದಲ್ಲಿ ಆಸೆ ಇದ್ದರೂ ಪ್ರಯಾಣ ಮಾಡುವುದು ಕಷ್ಟವಾಗುತ್ತದೆ. ಹೊಂದಿಕೊಂಡು ಬಾಳುವ ಗುಣ ನಿಮ್ಮಲ್ಲಿ ಇರುತ್ತದೆ. ವಯಸ್ಸಿಗೂ ಮೀರಿದ ಜವಾಬ್ದಾರಿಗಳು ನಿಮ್ಮ ಪಾಲಾಗುತ್ತದೆ. ಹಠ ಸ್ವಭಾವದ ಕಾರಣ ಜೀವನದಲ್ಲಿ ಸೋಲದೆ ಗೆಲುವಿನ ಹಾದಿಯಲ್ಲಿ ಸಾಗುವಿರಿ.

ವೃಷಭ ರಾಶಿ

ಸಮಾಜದಲ್ಲಿ ಗೌರವಾನ್ವಿತ ಸ್ಥಾನವು ನಿಮಗಿರುತ್ತದೆ. ಬೇಗನೆ ಕೋಪ ಬಂದರು ಯಾವುದೇ ತಪ್ಪನ್ನು ಮಾಡುವುದಿಲ್ಲ. ನೀವು ತೆಗೆದುಕೊಳ್ಳುವ ತೀರ್ಮಾನಗಳು ಕೇವಲ ನಿಮಗೆಲ್ಲದೆ ಇತರರಿಗೂ ಅನುಕೂಲಕರವಾಗುತ್ತದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸುವಿರಿ. ಯಾವುದೇ ಭಯವಿಲ್ಲದೆ ಬೇರೆಯವರ ತಪ್ಪನ್ನು ಖಂಡಿಸಿ ಮಾತನಾಡುವಿರಿ. ಮಾಡುವ ತಪ್ಪನ್ನು ಸರಿಪಡಿಸಿಕೊಂಡು ಜೀವನದಲ್ಲಿ ಮುಂದುವರೆಯುವುದು ನಿಮ್ಮ ಹವ್ಯಾಸ. ಹಣಕಾಸಿನ ತೊಂದರೆ ಕಂಡು ಬರುವುದಿಲ್ಲ. ತಾನಾಗಿಯೇ ದೊರೆಯುವ ಸಹಾಯವನ್ನು ತಿರಸ್ಕರಿಸುವಿರಿ. ಬಂಧು-ಬಳಗದವರ ಜೊತೆಯಲ್ಲಿ ಉತ್ತಮ ಅನುಬಂಧ ಇರುವುದಿಲ್ಲ.

ಶಾಂತಿ ಸಮಾಧಾನದ ಮಾತಿನಿಂದ ಎಲ್ಲರ ಮನ ಗೆಲ್ಲುವಿರಿ. ಮನಸ್ಸಿಲ್ಲದೆ ಹೋದರು ದೊಡ್ಡ ಪ್ರಮಾಣದ ಜವಾಬ್ದಾರಿಗಳು ನಿಮ್ಮ ಪಾಲಾಗುತ್ತದೆ. ಕಣ್ಣಿನ ತೊಂದರೆ ಇರುತ್ತದೆ. ಹೃದಯದ ಸಮಸ್ಯೆ ಇದ್ದವರು ಎಚ್ಚರಿಕೆಯಿಂದ ಇರಬೇಕು. ಪ್ರಯಾಣದ ವೇಳೆ ನಿಮಗೆ ಇಷ್ಟವಾದ ವಸ್ತು ಕಳುವಾಗಬಹುದು ಎಚ್ಚರಿಕೆ ಇರಲಿ. ದಂಪತಿಗಳ ನಡುವೆ ಅನಾವಶ್ಯಕ ವಾದ ವಿವಾದಗಳಿರುತ್ತವೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಉತ್ತಮ ಲಾಭಾಂಶ ದೊರೆಯುತ್ತದೆ.

ಮಿಥುನ ರಾಶಿ

ನಿಮ್ಮಲ್ಲಿ ಯಾವುದೇ ಅಂಜಿಕೆ ಇರುವುದಿಲ್ಲ. ಉತ್ಸಾಹದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವಿರಿ. ಆದರೆ ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಬಹುಕಾಲ ಉಳಿಸಿಕೊಳ್ಳುವುದಿಲ್ಲ. ಸೋಲನ್ನು ಒಪ್ಪದೆ ಸ್ವಂತ ಪ್ರಯತ್ನದಲ್ಲಿ ಸದಾ ನಂಬಿಕೆಯನ್ನು ಹೊಂದಿರುವಿರಿ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವಿರಿ. ಒಂದೇ ರೀತಿಯಲ್ಲಿ ಜೀವನವು ಸಾಗುವುದಿಲ್ಲ. ಎದುರಾಗುವ ಏರುಪೇರುಗಳನ್ನು ಮತ್ತು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವಿರಿ. ಇದರಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಆತ್ಮೀಯರ ಸಹಾಯ ಸಹಕಾರ ದೊರೆಯುವ ಕಾರಣ ಕಠಿಣ ಸವಾಲುಗಳನ್ನು ಗೆಲ್ಲುವಿರಿ.

ದುಡುಕುತನದಿಂದ ತಪ್ಪನ್ನು ಮಾಡಿ ನಂತರ ಪಶ್ಚಾತಾಪ ಪಡುವಿರಿ. ಮಾತಿನಿಂದ ಎಲ್ಲರ ಮನಸ್ಸನ್ನು ಗೆಲ್ಲಬಲ್ಲಿರಿ. ನೀವು ಇರುವೆಡೆ ಸಂತೋಷ ನೆಲೆಸಿರುತ್ತದೆ. ಆತುರದಿಂದ ಕೆಲಸ ಕಾರ್ಯಗಳನ್ನು ಮಾಡಿದರೆ ಸೋಲನ್ನು ಅನುಭವಿಸಬೇಕಾಗುತ್ತದೆ. ದೈಹಿಕವಾಗಿ ದುರ್ಬಲರಾಗುವಿರಿ. ಆದಾಯಕ್ಕೂ ಮೀರಿದ ಖರ್ಚು ವೆಚ್ಚಗಳಿರುತ್ತವೆ. ಹಣದ ಕೊರತೆ ಉಂಟಾಗಲಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಬೇರೆಯವರನ್ನು ಮೊದಲು ತಪ್ಪು ತಿಳಿದುಕೊಂಡು ನಂತರ ನಿಮ್ಮ ಮನಸ್ಸನ್ನು ಸರಿಪಡಿಸಿಕೊಳ್ಳುವಿರಿ.

ಕಟಕ ರಾಶಿ

ದೇಹದ ತೂಕದಿಂದ ಹೆಚ್ಚಾಗಿ ತೊಂದರೆ ಅನುಭವಿಸುವಿರಿ. ಆರೋಗ್ಯದ ಬಗ್ಗೆ ಗಮನವಿರಲಿ. ಆತ್ಮೀಯರನ್ನೂ ತಪ್ಪಾಗಿ ತಿಳಿದುಕೊಳ್ಳುವಿರಿ. ಸಮಯ ಸಂದರ್ಭಕ್ಕೆ ತಕ್ಕಂತೆ ಮಾತನಾಡುವಿರಿ. ಬರವಣಿಗೆಯಲ್ಲಿ ಆಸಕ್ತಿ ಮೂಡುತ್ತದೆ. ನಿಮ್ಮ ಯಶಸ್ಸನ್ನು ಕಂಡು ವಿರೋಧಿಗಳು ಹೆಚ್ಚುತ್ತಾರೆ. ನಿಮ್ಮದಲ್ಲದ ತಪ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಬಂಧು ಬಳಗದಿಂದ ದೂರ ಉಳಿಯುವಿರಿ. ತಂದೆ ತಾಯಿಯ ಬಗ್ಗೆ ವಿಶೇಷ ಗೌರವ ಮೂಡುತ್ತದೆ. ಕುಟುಂಬದ ಮುಖ್ಯ ಜವಾಬ್ದಾರಿಗಳನ್ನು ಒಪ್ಪಿಕೊಳ್ಳುವಿರಿ. ಪರಸ್ಥಿತಿಯ ಒತ್ತಡದ ನಡುವೆಯೂ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ವಿವಾಹದ ವೇಳೆ ವಿವಾದವನ್ನು ಎದುರಿಸಬೇಕಾಗುತ್ತದೆ.

ಪ್ರಕೃತಿಯನ್ನು ಆಸ್ವಾದಿಸಲು ದೀರ್ಘಕಾಲದ ಪ್ರವಾಸಕ್ಕೆ ತೆರಳುವಿರಿ. ನಿಮ್ಮಲ್ಲಿನ ವಿಶೇಷವಾದ ವ್ಯಕ್ತಿತ್ವದಿಂದ ಜನಮನ ಗೆಲ್ಲುವಿರಿ. ಸಮಾಜ ಸ್ನೇಹಿ ಕೆಲಸಗಳನ್ನು ಮಾಡುವಿರಿ. ಕೇವಲ ಕುಟುಂಬದಲ್ಲಿ ಮಾತ್ರವಲ್ಲದೆ ಸಮಾಜದಲ್ಲಿಯೂ ಉನ್ನತ ಗೌರವ ಗಳಿಸುವಿರಿ. ವ್ಯಾಪಾರ ವ್ಯವಹಾರಗಳ ಬಗ್ಗೆ ಎಚ್ಚರಿಕೆ ಇರಲಿ. ಉತ್ತಮ ಆದಾಯವಿದ್ದರೂ ಅನಾವಶ್ಯಕ ಖರ್ಚು ವೆಚ್ಚಗಳಿಂದ ಹಣದ ಕೊರತೆ ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಉಂಟಾಗುತ್ತದೆ.

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಭವಿಷ್ಯವನ್ನು ಹೇಳಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.